• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಉದ್ದನೆ ದಾಡಿ, ಪೈಜಾಮ ಮತ್ತು ಮಾಧ್ಯಮಗಳ ʼಇಸ್ಲಾಮೋಫೋಬಿಯಾʼ!

by
April 2, 2020
in ದೇಶ
0
ಉದ್ದನೆ ದಾಡಿ
Share on WhatsAppShare on FacebookShare on Telegram

ʼಅನಿಷ್ಟಕ್ಕೆಲ್ಲಾ ಶನೀಶ್ವರ ಕಾರಣʼ ಅನ್ನೋ ಹಾಗೆ ಸದ್ಯ ದೇಶದಲ್ಲಿ ಹರಡುತ್ತಿರುವ ಕರೋನಾ ಸೋಂಕಿನ ಬಗ್ಗೆಯೂ ಇಲ್ಲಿನ ಸರಕಾರ, ಮಾಧ್ಯಮಗಳು ʼತಬ್ಲೀಗ್‌ ಜಮಾಅತ್‌ʼ ವಿರುದ್ಧ ಆರೋಪ ಹೊರಿಸುತ್ತಿದೆ. ಅದ್ಯಾವ ದಿನಕ್ಕೆ ಏರ್‌ ಪೋರ್ಟ್‌ ಮುಚ್ಚಬೇಕಿತ್ತೋ, ರಾಜ್ಯ-ಜಿಲ್ಲಾ ಗಡಿಗಳನ್ನು ಬಂದ್‌ ಮಾಡಬೇಕಿತ್ತೋ ಅದನ್ನ ಮಾಡದೇ ಹೋದ ಸರಕಾರಕ್ಕೆ ತಬ್ಲೀಗ್‌ ಜಮಾಅತ್‌ ಸದ್ಯ ಸುಲಭ ತುತ್ತಾಗಿದೆ. ಹಾಗಾಗಿ ದೆಹಲಿ ನಿಝಾಮುದ್ದೀನ್‌ ನಲ್ಲಿರುವ ತಬ್ಲೀಗ್‌ ಜಮಾಅತ್‌ ಮರ್ಕಝ್‌ (ಕೇಂದ್ರ) ದೇಶದ ಗಮನಸೆಳೆಯುತ್ತಿದೆ. ಸದ್ಯ ಇಲ್ಲಿದ್ದ ಒಂದೂವರೆ ಸಾವಿರ ಮಂದಿಯನ್ನು ಕ್ವಾರೆಂಟೈನ್‌ ನಲ್ಲಿ ಇಡಲಾಗಿದೆ. ಅಲ್ಲದೇ ಮಾರ್ಚ್‌ 13 ರಿಂದ 15 ರವರೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ 391 ಮಂದಿಯನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ ಅಂತಾ ಸಿಎಂ ಬಿಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಚೀನಾದಲ್ಲಿ ಆರಂಭವಾದ ಕರೋನಾ ಸೋಂಕು ಭಾರತಕ್ಕೆ ಬಂದು ತಿಂಗಳ ನಂತರ ಧರ್ಮದ ಬಣ್ಣ ಲೇಪಿಸಿಕೊಂಡಿದೆ.

ADVERTISEMENT

ಮೊದಲೇ ಕೇಂದ್ರ ಸರಕಾರ ಹಾಗೂ ಬಿಜೆಪಿ ಪರವಾದ ಧೋರಣೆ ಹೊಂದಿರುವ ರಾಷ್ಟ್ರೀಯ ಹಾಗೂ ರಾಜ್ಯ ಮಾಧ್ಯಮಗಳಲ್ಲಿ ಸಿಕ್ಕಿದ್ದೇ ಅವಕಾಶ ಎಂದು ಭಾವಿಸಿಕೊಂಡ ಮಾಧ್ಯಮಗಳು ಒಂದೇ ಸಮನೆ ಹೌಹಾರಿ ಬಿದ್ದಿದ್ದಾವೆ. ʼಕರೋನಾ ಜಿಹಾದ್‌ʼ, ʼಜಮಾತ್ ಕಾ ಆಘಾತ್‌ʼ‌, ʼಕರೋನಾ ಕೆ ಜಿಹಾದ್‌ ಸೆ ದೇಶ್‌ ಬಚಾವೋʼ, ‘ನಿಜಾಮುದ್ದೀನ್‌ ನಂಜುʼ, ಹೀಗೆ ಹತ್ತು ಹಲವು ಟೈಟಲ್‌ ಮೂಲಕ ಮಾಧ್ಯಮಗಳು ತಬ್ಲೀಗ್‌ ಜಮಾಅತ್‌ ಹೆಸರನ್ನು ಮುಂದಿಟ್ಟು ಮುಸ್ಲಿಮರ ವಿರುದ್ಧ ಪರೋಕ್ಷವಾಗಿ ಹರಿಹಾಯಲು ಆರಂಭಿಸಿದರು. ಇಡೀ ದೇಶದಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ತಗುಲಿದ ಕೋವಿಡ್-19‌ ಗೆ ತಬ್ಲೀಗ್‌ ಜಮಾಅತ್‌ ಸದಸ್ಯರೇ ಕಾರಣ ಅಂತಾ ಪುಂಖಾನುಪುಂಖ ಊದಲಾಯಿತು. ವಾಸ್ತವದಲ್ಲಿ ಕರೋನಾ ವೈರಸ್‌ ವಿರುದ್ಧ ಹೋರಾಡಲು ಬೇಕಾದ ಸೂಕ್ತ ರಕ್ಷಣಾ ಸಾಧನದ ಮತ್ತು ವೈದ್ಯಕೀಯ ಸಿಬ್ಬಂದಿಗಳ ಕೊರತೆಯಾಗಲೀ, ಕೂಲಿ ಕಾರ್ಮಿಕರ ಸಾವಿನ ವಿಚಾರವಾಗಲೀ ಇವೆಲ್ಲವೂ ʼತಬ್ಲೀಗ್‌ ಜಮಾಅತ್‌ʼ ಹೆಸರಲ್ಲಿ ಸುಲಭವಾಗಿ ಮರೆಮಾಚುವಂತಾಯಿತು.

ಮೊದಲೇ ಉದ್ದನೆ ದಾಡಿ, ಪೈಜಾಮ ಹಾಕೋ ಇವರು ಈ ಪೂರ್ವಾಗ್ರಹ ಪೀಡಿತ ಮಾಧ್ಯಮಗಳಿಗೆ ಸಹಜವಾಗಿಯೇ ಅದ್ಯಾವುದೋ ಶಂಕಿತ ಉಗ್ರರಂತೆ ಕಂಡಿರುತ್ತಾರೆ. ಆದರೆ ವಾಸ್ತವದಲ್ಲಿ ಈ ʼತಬ್ಲೀಗ್‌ ಜಮಾಅತ್‌ʼ ಇಸ್ಲಾಮಿಕ್‌ ಕಟ್ಟರ್‌ ಪಂಥೀಯರಾದರೂ ಎಲ್ಲೂ ಹಿಂಸೆ ಬಯಸುವವರಲ್ಲ. ಒಂದೇ ಸಮನೆ ಗುಳೆ ಹೊರಡೋ ಇವರಿಗೆ ದೇಶದ ಯಾವುದಾದರೂ ಮಸೀದಿಯಲ್ಲಿ ಹಲವು ದಿನಗಳ ಕಾಲ ತಂಗುವ ಹವ್ಯಾಸವೂ ಇದೆ. ಮತ ಪ್ರಚಾರಕ್ಕಾಗಿ ಇವರು ಸಾಮಾನು ಸರಂಜಾಮುಗಳ ಜೊತೆಗೆ ತೆರಳಬೇಕಾದರೆ ಅದೆಷ್ಟೋ ಬಾರಿ ಸಾರ್ವಜನಿಕರು ಹಾಗೂ ಪೊಲೀಸರ ಕಣ್ಣಿಗೆ ಬಿದ್ದು ವಿಚಾರಣೆ ಎದುರಿಸಿದ್ದೂ ಇದೆ. ರಾಜ್ಯದ ಕರಾವಳಿಯಲ್ಲೂ ಒಂದೆರಡು ಬಾರಿ ಇಂತಹ ಕಹಿ ಅನುಭವ ಈ ತಬ್ಲೀಗ್‌ ಜಮಾಅತ್‌ ಸದಸ್ಯರಿಗೆ ಆಗಿತ್ತು.

ಅತಿಯಾದ ಇಸ್ಲಾಮಿಕ್ ಜ್ಞಾನ,‌ ಅತಿಯಾದ ಸ್ವಚ್ಛತೆ ಇವರಲ್ಲಿ ಕಾಣಬಹುದು. ಹಾಗಂತ ಮುಸ್ಲಿಮರಲ್ಲಿ ಎಲ್ಲ ಪಂಥಿಯರು ಇವರನ್ನು ಒಪ್ಪುವುದೂ ಇಲ್ಲ. ಅದೆಷ್ಟೋ ಸುನ್ನೀ ಪಂಥದ ಅನುಯಾಯಿಗಳು ಇವರ ಹಿಂದೆ ನಿಂತು ನಮಾಝ್‌ ನಿರ್ವಹಿಸಲೂ ಇಚ್ಛೆ ಪಡುವುದಿಲ್ಲ. ಆದರೆ ʼತಬ್ಲೀಗ್‌ ಜಮಾಅತ್‌ʼ ಸಿದ್ಧಾಂತದ ವಿಚಾರದಲ್ಲಿ ಸುನ್ನೀ-ಸಲಫಿಗಳ ರೀತಿಯಲ್ಲಿ ಕೆಸರೆರಚಾಟ ಮಾಡುವ ಬುದ್ಧಿ ಹೊಂದಿಲ್ಲ. ಆದರೆ ಇವರ ಜೀವನ ಶೈಲಿ ಅನ್ನೋದು ಒಂದು ರೀತಿಯ ದ್ವೀಪ ಪ್ರದೇಶದಂತೆ. ಅತಿಯಾದ ಧಾರ್ಮಿಕ ಶಿಷ್ಟಾಚಾರ, ಸೃಷ್ಟಿಕರ್ತನ ಪ್ರೀತಿ ಗಳಿಸಲು ಇವರು ಮಾಡುವ ಕರ್ಮಗಳೆಲ್ಲವೂ ಒಂದೊಮ್ಮೆ ಅತೀ ಕಟ್ಟರ್‌ ಪಂಥೀಯ ಸಲಫಿಗಳಿಗಿಂತಲೂ ಹೆಚ್ಚು. ಹೆಚ್ಚಾಗಿ ತಬ್ಲೀಗ್‌ ಜಮಾಅತ್‌ನ ಮುಖಂಡರು, ಮೌಲ್ವಿಗಳು ಮಸೀದಿ, ಮದ್ರಸಗಳನ್ನೇ ಅವಲಂಬಿಸಿರುತ್ತಾರೆ. ಆದರೆ ಕುಟುಂಬ ಸಂಬಂಧಕ್ಕೆ ಹೆಚ್ಚಿನ ಆದ್ಯತೆ ಕೊಡುವ ಇಸ್ಲಾಮ್‌ ಧರ್ಮದಲ್ಲಿ ಇವರ ಈ ರೀತಿಯ ಗುಳೆ ಹೊರಟು ಮತಪ್ರಚಾರಕ್ಕೆ ಆದ್ಯತೆ ನೀಡುವುದು ಎಷ್ಟು ಸರಿ ಅನ್ನೋದನ್ನು ಮುಸ್ಲಿಂ ಪ್ರಗತಿಪರರು ಪ್ರಶ್ನೆ ಎತ್ತುತ್ತಾರೆ.

ಆದರೆ ಇದೀಗ ಆ ಎಲ್ಲಾ ವಿಚಾರಗಳನ್ನು ಬಿಟ್ಟು ವಾಸ್ತವ ವಿಚಾರಕ್ಕೆ ಬರೋದಾದರೆ, ದೆಹಲಿ ಸರಕಾರಕ್ಕಾಗಲೀ, ದೆಹಲಿ ಪೊಲೀಸರಿಗಾಗಲೀ ನಿಜಾಮುದ್ದೀನ್‌ ಮರ್ಕಝ್‌ ನಲ್ಲಿ ಸಾವಿರಾರು ಮಂದಿ ನೆಲೆಸಿರೋದು ಗೊತ್ತಿರದೇ ಇರಲಿಲ್ಲ. ಮಾರ್ಚ್‌ 25 ರಂದೇ ಅಲ್ಲಿಗೆ ಭೇಟಿ ನೀಡಿದ್ದ ತಹಶೀಲ್ದಾರ್‌ ನೇತೃತ್ವದ ತಂಡ ಅವರನ್ನು ತಪಾಸಣೆಗೆ ಒಳಪಡಿಸಿತ್ತು. ಅಂತೆಯೇ ಮರುದಿನ ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ಭೇಟಿ ಮಾಡಿ ಸ್ಥಳ ಪರೀಕ್ಷೆ ನಡೆಸಿ ಕ್ವಾರೆಂಟೈನ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಅದೇ ದಿನ ಮರ್ಕಝ್‌ ನಲ್ಲಿ ಉಳಿದುಕೊಂಡಿದ್ದ ಒಂದಿಷ್ಟು ಮೌಲ್ವಿ, ಮುಖಂಡರ ಪ್ರಯಾಣಕ್ಕಾಗಿ ವಾಹನಗಳ ನಂಬರ್‌ ಸಹಿತ ಜಿಲ್ಲಾಧಿಕಾರಿ ಮನವಿ ಸಲ್ಲಿಸಿ ಅವಕಾಶ ಕೇಳಿದ್ದರು. ಆದರೆ ಗಡಿಗಳು ಬಂದ್‌ ಆಗಿದ್ದರ ಪರಿಣಾಮ ಅವಕಾಶ ನೀಡಲು ಅಲ್ಲಿನ ಆಡಳಿತ ವ್ಯವಸ್ಥೆ ನಿರಾಕರಿಸಿದೆ. ಬಳಿಕ ಮಾರ್ಚ್‌ 29 ರಂದು ಮತ್ತೊಂದು ಬಾರಿ ಅವಕಾಶ ಕೇಳಿದ್ದಾರೆ. ಆದರೆ ಅದಾಗಲೇ ಕ್ವಾರೆಂಟೈನ್‌ ನಲ್ಲಿದ್ದ 24 ಮಂದಿಗೆ ಸೋಂಕು ದೃಢಪಟ್ಟಿದೆ. ಇತ್ತ ತಮಿಳುನಾಡು, ತೆಲಂಗಾಣ, ಕರ್ನಾಟಕಗಳಲ್ಲಿ ಸೋಂಕು ಪೀಡಿತರು ಹಾಗೂ ಸಾವನ್ನಪ್ಪಿದ್ದವರು ಇದೇ ಮರ್ಕಝ್‌ ನಲ್ಲಿದ್ದರು ಎಂದು ಗೊತ್ತಾಗಿದ್ದೇ ತಡ ಕೇಂದ್ರ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿಗೆ ತೆರಳಿ ಅವರೆಲ್ಲರನ್ನು ಕ್ವಾರೆಂಟೈನ್‌ ಗೆ ಒಳಪಡಿಸಲು ಮುಂದಾಗಿದೆ. ಅಷ್ಟಾಗುತ್ತಲೇ ಮಾಧ್ಯಮಗಳ ಮುಂದೆ ಕಾಣಿಸಿಕೊಂಡವರೆಲ್ಲರನ್ನು ಇವರೇ ಭಾರತಕ್ಕೆ ಕರೋನಾ ವೈರಸ್‌ ಹೊತ್ತು ತಂದವರು ಅನ್ನೋ ರೀತಿಲಿ ಫೋಕಸ್‌ ಮಾಡಲಾಯಿತು. ತಮ್ಮ ಮೂಗಿನ ನೇರಕ್ಕೆ ಮುಸ್ಲಿಂ ಸಮುದಾಯವನ್ನು ದೂಷಿಸುವ ಪ್ರಯತ್ನ ನಡೆಯಿತು.

ಹಾಗಂತ ತಬ್ಲೀಗ್‌ ಜಮಾಅತ್‌ ನಿರ್ಧಾರ ಸರಿಯಾದುದಲ್ಲ. ಜನವರಿ 30 ಕ್ಕೆ ಚೀನಾದಿಂದ ಬಂದ ಕೇರಳದ ವಿದ್ಯಾರ್ಥಿಗಳಲ್ಲಿ ಕೋವಿಡ್‌-19 ದೃಢಪಟ್ಟಿತ್ತು. ಅದಾಗಲೇ ಜಗತ್ತಿನ ಹಲವು ರಾಷ್ಟ್ರಗಳಿಗೆ ಸೋಂಕು ಭಯಾನಕವಾಗಿ ಹರಡಿದ್ದರೂ ಸೋಂಕು ಪೀಡಿತ ರಾಷ್ಟ್ರಗಳಿಂದಲೂ ವಿದ್ವಾಂಸರನ್ನ ಕರೆಯುವ ಮೂಲಕ ದೆಹಲಿಯ ನಿಜಾಮುದ್ದೀನ್‌ ಸೆಂಟರ್‌ ಮುಂದಾಳುಗಳು ಬೇಜವಾಬ್ದಾರಿ ಮೆರೆದಿದ್ದರು. ಆದರೆ ಇದನ್ನ ತಡೆಯುವ ಎಲ್ಲಾ ಅವಕಾಶಗಳು ಅರವಿಂದ ಕೇಜ್ರಿವಾಲ್‌ ಸರಕಾರಕ್ಕಿತ್ತಾದರೂ ಅದಿನ್ನು ನಿದ್ದೆಗೆ ಜಾರಿತ್ತು. ಮಾರ್ಚ್‌ 19 ರ ತನಕವೂ ಕೇಂದ್ರ ಸರಕಾರವೂ ಇಂತಹ ಮಹಾಮಾರಿ ಬಗ್ಗೆ ಎಳ್ಳಷ್ಟು ಜಾಗೃತವಾಗಿರಲಿಲ್ಲ. ವಿಪಕ್ಷ ನಾಯಕರು ಜಾಗೃತಿ ಮೂಡಿಸೋ ಕೆಲಸ ಮಾಡಿದ್ದರೂ ಅದನ್ನು ಕಿವಿಗೆ ಹಾಕಿಸಿಕೊಂಡಿರಲಿಲ್ಲ ಮೋದಿ ಸರಕಾರ. ಫೆಬ್ರವರಿ 12 ಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕರೋನಾ ಬಗ್ಗೆ ಟ್ವೀಟ್‌ ಮಾಡಿ ನರೇಂದ್ರ ಮೋದಿ ಸರಕಾರವನ್ನು ಬಡಿದೆಚ್ಚರಿಸುವ ಕೆಲಸ ಮಾಡುತ್ತಾರೆ. “The Corona Virus is an extremely serious threat to our people and our economy. My sense is the government is not taking this threat seriously.” ಎನ್ನುವ ಈ ಟ್ವೀಟ್‌ ಗೆ ಬಿಜೆಪಿ ಕಾರ್ಯಕರ್ತರು, ನಿಮಗೂ ʼsenseʼ ಇದಿಯಾ ಅಂತಾ ಮೂದಲಿಸಿ ಕಾಮೆಂಟ್‌ ಹೊಡೆದಿದ್ದರು.ಅತ್ತ ಸರಾಗವಾಗಿ ಮಾಸ್ಕ್‌ ಗಳು ರಫ್ತು ಮಾಡುತ್ತಾ ಕೇಂದ್ರ ಸರಕಾರ ಆದಾಯ ಹೆಚ್ಚಿಸುವ ಜಿದ್ದಿಗೆ ಬಿದ್ದ ಪರಿಣಾಮ, ಕರೋನಾ ಭಾರತದೊಳಗೆ ನುಗ್ಗಿ ಮೂರ್ನಾಲ್ಕು ಪ್ರಾಣ ತೆಗೆಯುವವರೆಗೂ ಸೈಲೆಂಟ್‌ ಆಗಿತ್ತು. ಆದರೆ ಆ ನಂತರ ಜನತಾ ಕರ್ಫ್ಯೂ, ಇದೀಗ ಲಾಕ್‌ಡೌನ್..

ಹೀಗೆ ಲಾಕ್‌ಡೌನ್‌ ಆಗುತ್ತಲೇ ದೇಶದಲ್ಲಿ ಜನಜೀವನ ಅಸ್ತವ್ಯಸ್ತವಾಯಿತು. ಆ ನಂತರ ಮಾರ್ಚ್‌ 19 ರಂದು ಜನತಾ ಕರ್ಫ್ಯೂ ಆದೇಶವಾಗುತ್ತಿದ್ದಂತೆ ಮರ್ಕಝ್‌ ನ ಎಲ್ಲಾ ಚಟುವಟಿಕೆಗಳೂ ಸ್ಥಗಿತವಾಗಿತ್ತು. ಒಂದಿಷ್ಟು ವಿವಿಧ ರಾಜ್ಯಗಳ ತಬ್ಲೀಗ್‌ ಕಾರ್ಯಕರ್ತರು ವಾಪಾಸ್‌ ತಮ್ಮ ತಮ್ಮ ರಾಜ್ಯಕ್ಕೆ ರೈಲುಗಳಲ್ಲಿ ವಾಪಾಸ್‌ ಆಗಿದ್ದರು. ಹೀಗೆ ವಾಪಾಸ್‌ ಆದವರು ಸಾವಿರಾರು ಜನರನ್ನು ದಾಟಿ ಮುಂದು ಹೋಗಿದ್ದಾರೆ. ಆದರೆ ಈ ರೀತಿ ಹೋದವರಲ್ಲಿ ಅನೇಕ ಮಂದಿಗೆ ಅದಾಗಲೇ ಕರೋನಾ ವೈರಸ್‌ ತಗುಲಿತ್ತು. ಮಾರ್ಚ್‌ 21 ರ ನಂತರ ರೈಲ್ವೇ ಸ್ಥಗಿತದಿಂದ ಸಾವಿರಾರು ಮಂದಿ ಮರ್ಕಝ್‌ ನಲ್ಲೇ ಉಳಿಯುವಂತಾಯಿತು. ಹಾಗಂತ ಈ ವಿಚಾರ ದೆಹಲಿ ಸರಕಾರದ ಗಮನದಲ್ಲೂ ಇತ್ತು. ಆದರೆ ಅದ್ಯಾವಾಗ ಅಲ್ಲಿದ್ದ 24 ಮಂದಿಯಲ್ಲಿ ಕೋವಿಡ್‌-19 ದೃಢಪಟ್ಟಿತ್ತೋ ಪರಿಣಾಮ ಮರ್ಕಝ್‌ ನಲ್ಲಿದ್ದವರು ತೆರವಿಗೆ ಆರೋಗ್ಯಾಧಿಕಾರಿ, ಪೊಲೀಸರ ದಂಡು ನಿಝಾಮುದ್ದೀನ್‌ ಗೆ ಭೇಟಿ ನೀಡುತ್ತಲೇ ಅಲ್ಲಿ ಸಾವಿರಾರು ಮಂದಿ ಜೊತೆಗಿದ್ದಾರೆ ಅನ್ನೋ ವಿಚಾರ ಹೊರ ಪ್ರಪಂಚಕ್ಕೆ ತಿಳಿಯಿತು. ಹೀಗೆ ಗೊತ್ತಾಗಿದ್ದೇ ತಡ ಮಾಧ್ಯಮಗಳು ವಾಸ್ತವಿಕತೆ ಬದಲಾಗಿ ʼಇವರೇ ಕರೋನಾ ಹರಡಿಸಿದವರುʼ ಅಂತಾ ಅವರನ್ನೇ ಫೋಕಸ್‌ ಮಾಡಿ ತಮ್ಮಿಷ್ಟದ ವರದಿ ತಯಾರಿಸಿಕೊಂಡವು.

ಮೊದಲೇ ರಾಜಕೀಯ ಬಲವಿಲ್ಲದ , ಕೇವಲ ಧಾರ್ಮಿಕ ಚಟುವಟಿಕೆಗಷ್ಟೇ ಸೀಮಿತವಾದ ತಬ್ಲೀಗ್‌ ಜಮಾಅತ್‌ ನ ಕಾರ್ಯಕರ್ತರಿಗೆ ಮಾಧ್ಯಮಗಳ ವರದಿ ಬಗ್ಗೆ ಪ್ರತಿಕ್ರಿಯಿಸುವುದು ಹೇಗೆಂದು ಗೊತ್ತಾಗಲೇ ಇಲ್ಲ. ಅಲ್ಲಿದ್ದ ಸಾವಿರಕ್ಕೂ ಮಿಕ್ಕ ಮರ್ಕಝ್‌ ಸದಸ್ಯರನ್ನ ವಿವಿಧ ಕಡೆಗಳಲ್ಲಿ ಕ್ವಾರೆಂಟೈನ್‌ಗೆ ಒಪ್ಪಿಸಲಾಗಿದೆ. ಅದರಲ್ಲೂ ಕೆಲವರು ತಮ್ಮಿಷ್ಟದಂತೆ ವರ್ತಿಸುತ್ತಿದ್ದಾರೆ ಅನ್ನೋ ಆರೋಪವಿದೆ. ವೈದ್ಯರ ಮೇಲೆ ಉಗುಳಿದ ಹಾಗೂ ಕ್ವಾರೆಂಟೈನ್‌ ನಲ್ಲಿದ್ದ ತಬ್ಲೀಗ್‌ ಜಮಾಅತ್‌ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಹುಚ್ಚು ಧರ್ಮಾಭಿಮಾನದ ಘಟನೆಯೂ ದೆಹಲಿಯಲ್ಲಿ ನಡೆದಿದೆ. ಸುನ್ನೀ ಪಂಥದ ಸಹಿತ ದೇಶಾದ್ಯಂತ ವಿವಿಧ ಪಂಥಗಳ ಮಸೀದಿಗಳು ಈಗಾಗಲೇ ಶುಕ್ರವಾರದ ಜುಮಾ ನಮಾಝ್‌ ಸಹಿತ ಎಲ್ಲಾ ಪ್ರಾರ್ಥನೆಗಳನ್ನು ಸ್ಥಗಿತಗೊಳಿಸಿದ್ದಾವೆ.

ಆದರೆ ದ್ವೀಪ ಪ್ರದೇಶದಂತೆ ಬದುಕುತ್ತಿದ್ದ ತಬ್ಲೀಗ್‌ ಜಮಾಅತ್‌ ವಿದ್ವಾಂಸರ ಮೇಲೆ ಮಾಧ್ಯಮಗಳು ಮುಗಿಬಿದ್ದ ಪರಿಣಾಮ ಜನರ ಚಿತ್ತವೆಲ್ಲ ಅತ್ತ ಹೊರಳಿದ್ದಾವೆ. ಕರೋನಾ ಎದುರಿಸಲು ಸರಕಾರ ಮಾಡಿಕೊಂಡ ಎಡವಟ್ಟು, ವೈಫಲ್ಯಗಳು ಅತ್ತ ಬದಿಗೆ ಸರಿದಿದ್ದಾವೆ. ಮೊದಲೇ ಕೆಲ ಪೂರ್ವಾಗ್ರಹಪೀಡಿತ ಮಾಧ್ಯಮಗಳು ಸೋಂಕಿಗೂ ಕೋಮು ಬಣ್ಣ ಹಚ್ಚಿ ತಮ್ಮ ಚಾನೆಲ್‌ TRP ಹೆಚ್ಚಿಸಿಕೊಂಡಿದ್ದಾವೆ. ಈ ಮೂಲಕ ದೇಶದಲ್ಲಿ ಒಂದು ಸಮುದಾಯ ರೋಗ ಹಬ್ಬಿಸಿದೆ, ಇದೆಲ್ಲಕ್ಕೂ ಇವರೇ ಕಾರಣ ಅನ್ನೋ ಹಾಗೆ ಬೊಟ್ಟು ಮಾಡುತ್ತಲೇ ಕೇಂದ್ರ ಸರಕಾರ ಹಾಗೂ ದೆಹಲಿ ಸರಕಾರ ನಿರ್ವಹಿಸಬೇಕಿದ್ದ ಜವಾಬ್ದಾರಿ ಬಗ್ಗೆ ಪ್ರಶ್ನೆ ಮಾಡದೇ ಮಗುಮ್ಮಾಗಿ ವರದಿ ಮಾಡಿವೆ.

ಅಷ್ಟಕ್ಕೂ ಸೋಂಕಿನ ವಿರುದ್ಧ ಅಣ್ಣ-ತಮ್ಮಂದಿರಂತೆ ಹೋರಾಡಬೇಕಿದ್ದ ಸಮುದಾಯಗಳ ನಡುವೆ ಬೆಂಕಿ ಹಚ್ಚಿರೋ ಚಾನೆಲ್‌ ಗಳಿಗೆ, ಬಿಜೆಪಿ ನಾಯಕರಿಗೆ ಈ ದೇಶದ ಸಾರ್ವಭೌಮತೆಯ ಬಗ್ಗೆಯಾಗಲೀ, ಜಾತ್ಯತೀತ ಸಿದ್ಧಾಂತದ ಬಗ್ಗೆಯಾಗಲೀ ನಂಬಿಕೆ ಇಲ್ಲ ಅನ್ನೋದು ಸ್ಪಷ್ಟ. ಒಂದು ವೇಳೆ ಹಾಗಿರುತ್ತಿದ್ದರೆ ಈ ರೀತಿಯ ಅನಗತ್ಯ ಗೊಂದಲ ಹುಟ್ಟುಹಾಕುವ ಬದಲು ಕೋವಿಡ್‌-19 ನಿಯಂತ್ರಣಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ದೇಶಪ್ರೇಮ, ಪಾಕಿಸ್ತಾನ, ನೆಹರೂ ಬಳಿಕ ಬಿಜೆಪಿಗೆ ಕರೋನಾ ಕೂಡಾ ಮತಬ್ಯಾಂಕ್‌ ಆಗೋ ಲಕ್ಷಣಗಳು ಗೋಚರಿಸುತ್ತಿವೆ.

Tags: Covid 19islamophobianizamuddin markaztableeg jamaathಇಸ್ಲಾಮೋಫೋಬಿಯಾಕೋವಿಡ್-19ತಬ್ಲೀಗ್‌ ಜಮಾಅತ್‌ನಿಝಾಮುದ್ದೀನ್‌ ಮರ್ಕಝ್‌
Previous Post

ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಇನ್ನೆಷ್ಟು ಕಾಲ?

Next Post

ಹೇಳೋಕೆ ಲಕ್ಷ ಕೋಟಿ ಪ್ಯಾಕೇಜ್, ತೊಡೋಕೆ ಕನಿಷ್ಠ ಪಿಪಿಇ ಕೂಡ ಇಲ್ಲ!

Related Posts

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?
Top Story

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

by ಪ್ರತಿಧ್ವನಿ
April 29, 2026
0

ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್  ಉತ್ತರ ಪ್ರದೇಶದ ಶಾಸಕಿ ಹಾಗೂ...

Read moreDetails
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
ಹೇಳೋಕೆ ಲಕ್ಷ ಕೋಟಿ ಪ್ಯಾಕೇಜ್

ಹೇಳೋಕೆ ಲಕ್ಷ ಕೋಟಿ ಪ್ಯಾಕೇಜ್, ತೊಡೋಕೆ ಕನಿಷ್ಠ ಪಿಪಿಇ ಕೂಡ ಇಲ್ಲ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada