ವ್ಯಾಪಕವಾಗಿ ಹರಡುತ್ತಿರುವ ಕರೋನಾ ಸೋಂಕಿನ ಹರಡುವಿಕೆ ತಡೆಯಲು ಅಮೇರಿಕ, ಐರೋಪ್ಯ, ಮಧ್ಯಪ್ರಾಚೀನ ಹಾಗೂ ಭಾರತ ಸೇರಿದಂತೆ ಜಗತ್ತಿನ ಹೆಚ್ಚು ಕಡಿಮೆ ಎಲ್ಲಾ ದೇಶಗಳು ಕಠಿಣ ಲಾಕ್ಡೌನ್ ಘೋಷಿಸಿದೆ. ಕರೋನಾ ಹಾಗೂ ಕರೋನಾ ಹರಡುವಿಕೆ ತಡಯಲು ತಂದ ಕಠಿಣ ಲಾಕ್ಡೌನ್ನಿಂದಾಗಿ ಜಗತ್ತಿನಾದ್ಯಂತ ದೇಶಗಳ ಆರ್ಥಿಕತೆಯ ಪರಿಸ್ಥಿತಿ ದಿನೇ ದಿನೇ ಕುಸಿಯುತ್ತಿದೆ. ಮೊದಲೇ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದ ಭಾರತದ ಸ್ಥಿತಿ ಲಾಕ್ ಡೌನ್ನಿಂದಾಗಿ ಇನ್ನಷ್ಟು ಹದಗೆಟ್ಟಿದೆ. ಭಾರತದಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚುತ್ತಿರುವ ಈ ಸಮಯದಲ್ಲಿ ಮತ್ತೆ ‘ಹೆಲಿಕಾಪ್ಟರ್ ಮನಿ’ಯ ಕುರಿತು ಚರ್ಚೆಗಳೆದ್ದಿವೆ.
ಭಾರತದ ಮೋದಿ ಸರಕಾರವು ಕರೋನಾದ ವಿರುದ್ಧದ ಹೋರಾಟಕ್ಕೆ ರಾಜ್ಯಗಳಿಗೆ ಇನ್ನಷ್ಟು ಸಹಾಯ ಮಾಡುವಂತೆ ಹಾಗೂ ರಾಜ್ಯಗಳಿಗೆ ಬಾಕಿಯಿರುವ GST ಪಾಲನ್ನು ಪಾವತಿ ಮಾಡುವಂತೆ ರಾಜ್ಯ ಸರಕಾರಗಳು ಒತ್ತಡ ಹಾಕುತ್ತಿರುವಂತೆಯೇ ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ‘ಹೆಲಿಕಾಪ್ಟರ್ ಮನಿ’ಯ ಕುರಿತು ಮಾತನಾಡಿದ್ದಾರೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಮತ್ತೆ ಹಳೆಸ್ಥಿತಿಗೆ ತರಲು ಹೆಲಿಕಾಪ್ಟರ್ ಮನಿಯಂತಹ ಯೋಜನೆ ಸಹಕಾರಿಯಾಗಬಲ್ಲದು ಎಂದು ಹೇಳಿದ್ದಾರೆ.

ಕೆಸಿಆರ್ ಈ ಆರ್ಥಿಕ ಯೋಜನೆಯ ಕುರಿತು ಸಲಹೆ ನೀಡಿದ ಬೆನ್ನಿಗೆ ಕರ್ನಾಟಕದ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆಗಳು ಶುರುವಾಗಿದೆ. ಹೆಲಿಕಾಪ್ಟರಿನಲ್ಲಿ ಹಣ ಸುರಿಯುವುದೇ ಈ ಯೋಜನೆಯೆಂದು ಭಾವಿಸಿಕೊಂಡ ಹೆಚ್ಚಿನ ಮಾಧ್ಯಮಗಳು ಅದರ ಸಾಧಕ ಬಾಧಕಗಳನ್ನು ಜನರ ಮುಂದಿಡದೆ ವ್ಯಕ್ತಿಪೂಜೆಯ ಅತಿರಂಜಿತ ಸುದ್ದಿಗಳನ್ನು ಹರಿಯಬಿಟ್ಟಿದೆ. ಆದರೆ ‘ಹೆಲಿಕಾಪ್ಟರ್ ಮನಿ’ ಅನ್ನುವುದು ಆರ್ಥಿಕನುಡಿಗಟ್ಟು, ಹೆಲಿಕಾಪ್ಟರ್ ಪದವನ್ನು ರೂಪಕವಾಗಿ ಬಳಸಲಾಗಿದೆ.
‘ಹೆಲಿಕಾಪ್ಟರ್ ಮನಿ’ ಎಂಬ ಆರ್ಥಿಕ ಯೋಜನೆಯನ್ನು ಮೊಟ್ಟಮೊದಲ ಬಾರಿಗೆ ಅರ್ಥಶಾಸ್ತ್ರಜ್ಞ ಮಿಲ್ಟನ್ ಫ್ರೈಡ್ಮನ್ 1969 ರಲ್ಲಿ ಪ್ರಕಟವಾದ ತನ್ನ “Optimum Quantity of Money” ಎಂಬ ಪುಸ್ತಕದಲ್ಲಿ ಪರಿಚಯಿಸುತ್ತಾರೆ. ಈ ಯೋಜನೆಯ ಪ್ರಕಾರ ದೇಶದ ಆರ್ಥಿಕತೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಾಗ ಹಣದ ಹರಿಯುವಿಕೆಯನ್ನು ಹೆಚ್ಚಿಸಲು ಸರಕಾರವು ಹೆಚ್ಚು ಹಣವನ್ನು ಮುದ್ರಿಸಿ ಹಣವನ್ನು ಜನರಿಗೆ ಸಾಲದ ರೂಪವಾಗಿ ನೀಡದೆ ನೆರವಿನ ರೂಪದಲ್ಲಿ ಒದಗಿಸಿ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕತೆಗೆ ಬಲ ತುಂಬುವುದು. ಎಲ್ಲಾ ಆರ್ಥಿಕ ಯೋಜನೆಗಳಂತೆಯೇ ಈ ಯೋಜನೆಯ ಬಗೆಗೂ ಅರ್ಥಶಾಸ್ತ್ರಜ್ಞರಲ್ಲಿ ಪರ-ವಿರೋಧದ ವಾದಗಳಿವೆ.
ಈಗಾಗಲೇ ಇರುವ QE (Quantitative easing) ಮುಖಾಂತರ ಸರಕಾರವು ತುರ್ತಾಗಿ ಹಣ ಮುದ್ರಿಸಬೇಕಿದ್ದರೆ ಸೆಂಟ್ರಲ್ ಬ್ಯಾಂಕಿಗೆ ಭದ್ರತಾ ಕರಾರುಪತ್ರ ಅಥವಾ ಸೊತ್ತು ಅಡವಿಡಬೇಕಿದೆ. ಇದನ್ನು ಸರಕಾರ ಮರುಪಾವತಿಸಬೇಕಾಗುತ್ತದೆ. ಆದರೆ ಹೆಲಿಕಾಪ್ಟರ್ ಮನಿಯಂತಹ ಯೋಜನೆಯಲ್ಲಿ ಪಡೆದುಕೊಂಡ ಹಣವನ್ನು ಸರಕಾರವಾಗಲಿ ಯಾ ಜನರಾಗಲಿ ಮರುಪಾವತಿಸಬೇಕಾದ ಅಗತ್ಯವಿರುವುದಿಲ್ಲ. ಆದ್ದರಿಂದ ಹೀಗೆ ನೋಟು ಮುದ್ರಿಸುವುದರಿಂದ ಹಣದ ಮೌಲ್ಯ ಕುಸಿದು ಆರ್ಥಿಕತೆ ಇನ್ನಷ್ಟು ಅಧೋಗತಿಗೆ ಹೊರಳುವ ಅಪಾಯ ಇರುತ್ತದೆ.

90ರ ದಶಕದ ಕೊನೆಯಲ್ಲಿ ಹೆಲಿಕಾಪ್ಟರ್ ಮನಿ ಯೋಜನೆ ಕುರಿತು ಜಪಾನಿನಲ್ಲಿ ಆರ್ಥಿಕ ತಜ್ಞರ ನಡುವೆ ಪರ-ವಿರೋಧದ ನಡುವೆ ಚರ್ಚೆ ನಡೆದಿತ್ತು. 2002 ರಲ್ಲಿ ಆಗಿನ ಫೆಡ್ ಗವರ್ನರ್ ಬೆನ್ ಬೆರ್ನೇಂಕ್ ಅಮೇರಿಕಾದಲ್ಲಿ ಕುಸಿಯುತ್ತಿರುವ ಆರ್ಥಿಕತೆ ಮೇಲೆತ್ತಲು ಹೆಲಿಕಾಪ್ಟರ್ ಮನಿಯ ಸಲಹೆ ನೀಡಿದಾಗ ಇದರ ಕುರಿತಾದ ಚರ್ಚೆ ಮತ್ತೆ ಮುನ್ನಲೆಗೆ ಬಂತು. ಆದರೆ ಯಾವ ದೇಶಗಳು ಕೂಡಾ ಯಶಸ್ವಿಯಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿಲ್ಲ . ಜಿಂಬಾಬ್ವೆ ದೇಶವು ಹೆಚ್ಚು ಹಣವನ್ನು ಮುದ್ರಿಸಿ ತನ್ನ ದೇಶದ ಕರೆನ್ಸಿಯ ಮೌಲ್ಯ ಕುಸಿಯುವಂತೆ ಮಾಡಿತ್ತು.
ಭಾರತ ಸರಕಾರ ಈಗಾಗಲೇ ಪಿಎಮ್ ಕಿಸಾನ್ ನಂತಹ ಯೋಜನೆಗಳ ಮೂಲಕ ವ್ಯವಸಾಯಿಗಳಿಗೆ ಹಣವನ್ನು ನೀಡುತ್ತಿದೆ. ಆದರೆ ದೊಡ್ಡ ಮಟ್ಟದಲ್ಲಿ ಹಣವನ್ನು ನೀಡಬೇಕಿದ್ದರೆ ಹೆಲಿಕಾಪ್ಟರ್ ಮನಿಯನ್ನು ಅಳವಡಿಸಿಕೊಳ್ಳಬೇಕು.
ಜನರ ಕೊಳ್ಳುವಿಕೆಯ ಶಕ್ತಿ ಹೆಚ್ಚಿಸುವುದರಿಂದ ಮಾರುಕಟ್ಟೆಗೆ ಹಣದ ಹರಿಯುವಿಕೆಯನ್ನು ಹೆಚ್ಚಿಸಬಹುದು. ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಬೇಕಿದ್ದರೆ ಜನರು ಹಣವನ್ನು ಖರ್ಚು ಮಾಡಬೇಕು. ಆದರೆ ಜನರನ್ನು ಖರ್ಚು ಮಾಡುವಂತೆ ಮಾಡುವುದು ಸವಾಲಿನ ಕೆಲಸ, ಹಾಗಾಗಿ ಇದು ಬಹಳ ಅಪಾಯವನ್ನು ತಂದೊಡ್ಡಲಿದೆ ಎಂದು ಆರ್ಥಿಕತಜ್ಞರು ಅಭಿಪ್ರಾಯಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಈ ಯೋಜನೆಯಿಂದಾಗಿ ಭಾರತದ ಆರ್ಥಿಕತೆ ಇನ್ನಷ್ಟು ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಭಾರತದಲ್ಲಿ ಮತ್ತಷ್ಟು ಅವಧಿ ವಿಸ್ತರಣೆಗೊಂಡ ಲಾಕ್ಡೌನ್ ಭಾರತದ ಆರ್ಥಿಕತೆಗೆ ನೇರ ಪರಿಣಾಮ ಒಡ್ಡುತ್ತಿದೆ. ಅಂತರಾಷ್ಟ್ರೀಯವಾಗಿ ಹೆಚ್ಚುತ್ತಿರುವ ಸಾಲ, ರಾಜ್ಯ ಸರಕಾರಗಳಿಗೆ ಕೊಡಬೇಕಾದ GST ಪಾಲು ಎಲ್ಲಾ ಸೇರಿ ಕೇಂದ್ರ ಸರಕಾರದ ಮೇಲೆ ದೊಡ್ಡ ಮೊತ್ತದ ಆರ್ಥಿಕ ಹೊರೆಯಿದೆ. ಸಮರ್ಥವಾಗಿ ನಿಭಾಯಿಸಿದಾಗ್ಯೂ ಆರ್ಥಿಕ ಬಿಕ್ಕಟ್ಟಿನಿಂದ ಮೇಲೇಳಲು ಸರಕಾರದ ಬಳಿ ಬಹಳ ಕಡಿಮೆ ಅವಧಿಯಿದೆ. ದೇಶದ ಬಿಕ್ಕಟ್ಟಿನ ಸಂಧರ್ಭದಲ್ಲಿ ಈ ಮೊದಲು ಆಡಳಿತ ನಡೆಸಿ ಅನುಭವ ಇರುವ ವಿರೋಧ ಪಕ್ಷದ ನಾಯಕರನ್ನು ಸೇರಿಸಿ ಸಮಾಲೋಚಿಸಿ ಆರ್ಥಿಕತೆಯ ಪುನಶ್ಚೇತನಕ್ಕೆ ಯೋಜನೆ ಹಾಕಿಕೊಳ್ಳುವುದು ಅಥವಾ ದೇಶದ ಕಾಳಜಿಯ ಸಲುವಾಗಿ ಸರ್ವಪಕ್ಷ ಸರಕಾರ ಸ್ಥಾಪಿಸುವಂತಹ ಧೃಢವಾದ ನಿಲುವು ತಾಳಬೇಕಿರುವ ಹೊಣೆಗಾರಿಕೆ ಈಗ NDA ಸರಕಾರದ ಮೇಲಿದೆ.