ಶ್ರೀ ಬಿ.ಎಸ್. ಯಡಿಯೂರಪ್ಪ, ಶ್ರೀ ಸಿದ್ದರಾಮಯ್ಯ ಹಾಗೂ ಶ್ರೀ ಎಚ್.ಡಿ. ಕುಮಾರಸ್ವಾಮಿ
– ಅವರುಗಳಿಗೊಂದು ಬಹಿರಂಗ ಪತ್ರ!
ಮಾನ್ಯರೇ,
ಕಳೆದ ಡಿಸೆಂಬರ್ ಅಲ್ಲಿ ಚೀನಾದಿಂದ ಶುರುವಾದ ಕರೋನಾ ಕಂಟಕ ಇಂದು ಇಡೀ ಜಗತ್ತನ್ನೇ ಆವರಿಸಿದೆ. 200ಕ್ಕೂ ಹೆಚ್ಚು ದೇಶಗಳಲ್ಲಿ ಕರೋನಾ ಮಹಾಮಾರಿ ಮರಣ ಮೃದಂಗವನ್ನೇ ಬಾರಿಸಿದೆ ಮತ್ತು ಇನ್ನೂ ತನ್ನ ರುದ್ರತಾಂಡವವನ್ನು ಮುಂದುವರೆಸಿದೆ. ಇದನ್ನು ಬರೆಯುವ ಹೊತ್ತಿಗೆ ಜಗತ್ತಿನಾದ್ಯಂತ 17,83,724 ಜನರಿಗೆ ಸೋಂಕು ತಗಲಿದ್ದರೆ 1,08,907 ಜನರು ಈ ಕೋವಿಡ್-19 ವೈರಾಣುವಿಗೆ ಬಲಿಯಾಗಿದ್ದಾರೆ. ಅಮೇರಿಕ, ಇಟಲಿ, ಸ್ಪೇನ್, ಯುಕೆ ಹಾಗೂ ಮತ್ತಿತರ ದೇಶಗಳು ಅಕ್ಷರಶಃ ನಲುಗಿ ಹೋಗಿವೆ. ಭಾರತದಲ್ಲೂ 290 ಜನರು ಸಾವನ್ನಪ್ಪಿದ್ದು, 8,453 ಜನರಿಗೆ ಸೋಂಕು ಹರಡಿದೆ. ಇನ್ನು ನಮ್ಮ ರಾಜ್ಯಕ್ಕೆ ಬಂದರೆ 215 ಜನರಿಗೆ ಸೋಂಕು ತಗಲಿದ್ದರೆ 6 ಜನ ಮರಣವಾಗಿದ್ದಾರೆ. ನಮ್ಮಲ್ಲೂ, ಭಾರತದಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ.
ಈ ಮಹಾಮಾರಿಯನ್ನು ನಿಯಂತ್ರಿಸಲು ಇಡೀ ಭಾರತ ದೇಶವೇ ಸ್ತಬ್ದವಾಗಿ 18 ದಿನಗಳು ಕಳೆದಿವೆ. ಮತ್ತೆ 2 ವಾರಗಳು ಹೀಗೆ ಮುಂದುವರೆಯಲಿವೆ. ಕರೋನಾ ಸಂಕಷ್ಟದಿಂದ ದೇಶದಲ್ಲಿ ಮತ್ತು ರಾಜ್ಯದಲ್ಲಿ ಎಲ್ಲಾ ರೀತಿಯ ವಾಣಿಜ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ಸಂಪೂರ್ಣವಾಗಿ ನಿಂತು ಹೋಗಿರುವ ಪರಿಣಾಮವಾಗಿ ಸಾಕಷ್ಟು ರೀತಿಯಲ್ಲಿ ಸಾಮಾಜಿಕ, ಆರ್ಥಿಕ ಸಮಸ್ಯೆಗಳು ತಲೆದೋರಿವೆ. ಈ ವಿಷಮ ಸ್ಥಿತಿಯಿಂದಾಗಿ ಭೂತದಲ್ಲಾದ, ವರ್ತಮಾನದಲ್ಲಾಗುತ್ತಿರುವ ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಈ ಎಲ್ಲಾ ಬಿಕ್ಕಟ್ಟುಗಳನ್ನು ಅತ್ಯಂತ ಸಮರ್ಥ ರೀತಿಯಲ್ಲಿ ನಿರ್ವಹಿಸುವ ಅಗತ್ಯತೆ ಈಗ ರಾಜ್ಯ ಸರ್ಕಾರಕ್ಕಿದೆ.
ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಮಾರಾಟ ಬಿಟ್ಟರೆ ರಾಜ್ಯದ ವಾಣಿಜ್ಯ ಚಟುವಟಿಕೆಗಳು ನಿಂತ ನೀರಾಗಿವೆ. ಕೈಗಾರಿಕಾ ವಲಯ (ವೈದ್ಯಕೀಯ ಸಂಬಂಧಪಟ್ಟ ಉತ್ಪಾದನೆ ಹೊರತುಪಡಿಸಿ) ಮುಚ್ಚಿಹೋಗಿದೆ. ಕೃಷಿ ಕ್ಷೇತ್ರವೂ ತೊಂದರೆಗೀಡಾಗಿದೆ. ರೈತರು ಬೆಳೆದ ಫಸಲನ್ನು ಮಾರುವ, ಮತ್ತೆ ಬೆಳೆ ಬೆಳೆಯುವ ಕುರಿತು ಕಂಗಾಲಾಗಿದ್ದಾರೆ. ದಿನಗೂಲಿ ನೌಕರರು, ಕಾರ್ಮಿಕರು, ಬಡವರು ತಮ್ಮ ಕೆಲಸಗಳನ್ನು ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಚಿಂತಿಸುವಂತಾಗಿದೆ, ಪರದಾಡುವಂತಾಗಿದೆ. ಶಿಕ್ಷಣ ಕ್ಷೇತ್ರವೂ ಯಾವುದೇ ಚಟುವಟಿಕೆಗಳು ನಡೆಯದೇ ವಿದ್ಯಾರ್ಥಿಗಳೂ ಕೂಡ ಮೂಕಪ್ರೇಕ್ಷಕರಾಗಿದ್ದಾರೆ. ಇವರೆಲ್ಲರ ಬದುಕನ್ನು ಹಿಡಿದಿಡುವ, ಹಸನಾಗಿಸುವ, ಮತ್ತೆ ಗರಿಬಿಚ್ಚಿ ಹಾರಾಡುವ ಹಾಗೆ ಮಾಡುವ ಪ್ರೀತಿಯುತ ಜವಾಬ್ದಾರಿ ಕರ್ನಾಟಕ ಸರ್ಕಾರದ ಮೇಲಿದೆ.
ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಸೋಂಕು ನಿಯಂತ್ರಣಾ ಕ್ರಮಗಳನ್ನು, ಬಡವರಿಗೆ, ರೈತರಿಗೆ ಹಾಗೂ ಇನ್ನುಳಿದ ಜನಸಾಮಾನ್ಯರಿಗೆ ನೆರವಾಗುವ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಸೂಕ್ತ ರೀತಿಯಲ್ಲಿ ಈ ಬಿಕ್ಕಟ್ಟಿನ ಸಂದರ್ಭವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಇಷ್ಟೆಲ್ಲಾ ಗೊಂದಲ, ಸಮಸ್ಯೆ, ಒತ್ತಡಗಳ ನಡುವೆಯೂ ಸಮಾಜದಲ್ಲಿ ಸ್ವಾಸ್ಥ್ಯ, ಸೌಹಾರ್ದತೆಯನ್ನು ಕಾಪಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾನ್ಯ ಮುಖ್ಯಮಂತ್ರಿಗಳು ಮಾಡುತ್ತಿರುವುದು ಶ್ಲಾಘನೀಯ. ಹಾಗೆಯೇ ಪ್ರತಿಪಕ್ಷಗಳು ತಮ್ಮ ಮುಕ್ತ ಬೆಂಬಲವನ್ನು ಸರ್ಕಾರಕ್ಕೆ ನೀಡಿ ಸಹಕರಿಸುತ್ತಿರುವುದು ಮೆಚ್ಚುವಂತಹದ್ದು.
ಇನ್ನು ಕೇಂದ್ರ ಸರ್ಕಾರವೂ ದೇಶದ ಈ ಸಂಕೀರ್ಣ ಪರಿಸ್ಥಿತಿಯನ್ನು ಸಶಕ್ತವಾಗಿ ನಿರ್ವಹಿಸಬೇಕಿದ್ದು ಅವರ ಮುಂದೆಯೂ ಸಾಕಷ್ಟು ಸಮಸ್ಯೆಗಳು, ಒತ್ತಡಗಳು ಇರುವುದರಿಂದ ಈ ಸಮಯದಲ್ಲಿ ಹೆಚ್ಚಿನ ಸಹಾಯದ ನಿರೀಕ್ಷೆ ಕಷ್ಟಕರವಾಗಬಹುದು. ಈಗಾಗಲೇ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಸದ್ಯಕ್ಕೆ ಕೆಲವು ಆರ್ಥಿಕ ಕ್ರಮಗಳನ್ನು ತಮ್ಮ ಸಂಪುಟದ ಸಹಕಾರದಿಂದ ಹಾಗೂ ಪ್ರತಿಪಕ್ಷಗಳ ಸಲಹೆಗಳ ಮೇರೆಗೆ ಕೈಗೊಂಡಿರುತ್ತಾರೆ. ರಾಜ್ಯವು ಆರ್ಥಿಕವಾಗಿ ಸದೃಢವಾಗಲು ಸಾರ್ವಜನಿಕರಿಂದ ದೇಣಿಗೆಯ ಮನವಿಯನ್ನು ಸಹ ಮುಖ್ಯಮಂತ್ರಿಗಳು ಮಾಡಿರುತ್ತಾರೆ. ಸರ್ಕಾರದ ಜೊತೆಗೆ ಸಾಕಷ್ಟು ವ್ಯಕ್ತಿಗಳು, ಸಂಘ-ಸಂಸ್ಥೆಗಳು ಬಡವರಿಗೆ, ಕಾರ್ಮಿಕರಿಗೆ, ವಲಸೆ ಬಂದವರಿಗೆ ಆಹಾರದ ವ್ಯವಸ್ಥೆಯ ಕಾರ್ಯದಲ್ಲಿ ಆಸರೆಯಾಗಿದ್ದಾರೆ ಹಾಗೆಯೇ ಉದಾರ ದೇಣಿಗೆಯನ್ನು ನೀಡಲು ಮುಂದೆ ಬರುತ್ತಿದ್ದಾರೆ.
ಈ ಅನಿಶ್ಚತೆಯು ಎಲ್ಲಿಯವರೆಗೂ ಮುಂದುವರೆಯುತ್ತದೆ ಎಂಬುದು ಈಗಲೇ ಹೇಳಲು ಸಾಧ್ಯವಿಲ್ಲದ ವಿಷಯ. ಸಾರ್ವಜನಿಕರು ಕೂಡ ತಮ್ಮ ಸಾಮಾಜಿಕ ಬದ್ದತೆ, ಕುಟುಂಬ ಸುರಕ್ಷತೆ, ನೆರೆಹೊರೆಯ ಕಳಕಳಿಯನ್ನು ಪ್ರಬುದ್ಧತೆಯಿಂದ ತೋರುವಂತಹ ಸಂದರ್ಭ ಇದಾಗಿದೆ. ಮುಂದೆ ಎಷ್ಟೇ ದಿನಗಳ ನಿರ್ಬಂಧವನ್ನು ವಿಧಿಸಿದರೂ ಎಲ್ಲಾ ಸ್ಥಿತಿಗತಿಗಳನ್ನು ನಿರ್ವಹಿಸುವ ಕೆಲಸವಾಗಬೇಕು. ವೈದ್ಯಕೀಯ ವ್ಯವಸ್ಥೆಯನ್ನು ಸಬಲವನ್ನಾಗಿಸಬೇಕು. ಜೊತೆಗೆ ಈ ವಿಷಮ ಪರಿಸ್ಥಿತಿ ಕಳೆದ ಬಳಿಕ ಮುಂದಿನ ದಿನಗಳಲ್ಲಿ ಬಹುಶಃ ಕೆಲವು ವರ್ಷಗಳವರೆಗೂ ಉಂಟಾಗುವ ಮತ್ತಷ್ಟು ಸಾಮಾಜಿಕ, ಆರ್ಥಿಕ ಕಗ್ಗಂಟನ್ನು ಸರಿಪಡಿಸುವ, ಜನಜೀವನವನ್ನು ಸರಳೀಕರಿಸುವ ಸವಾಲು, ಮಹತ್ತರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ.
ಕರ್ನಾಟಕದ ಸಮಗ್ರ ಜೀವನವನ್ನು ನಿಭಾಯಿಸುವ ಹೆಜ್ಜೆಗಳನ್ನಿಡುವ ನಿಟ್ಟಿನಲ್ಲಿ, ಸಾರ್ವಜನಿಕರಿಂದ ಕರ್ನಾಟಕ ಸರ್ಕಾರಕ್ಕೆ ಎರಡು ಸಲಹೆಗಳು.
1. ಸರ್ಕಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು, ಸಮಯೋಚಿತ ಸಲಹೆ ಸೂಚನೆಗಳನ್ನು ನೀಡಲು ಮುಂದಿನ ಕೆಲವು ತಿಂಗಳುಗಳವರೆಗೂ ಒಂದು “ಸಮಗ್ರ ಆಡಳಿತಾತ್ಮಕ ಸಲಹಾ ಸಮಿತಿ” ಯ ರಚನೆಯ ಅವಶ್ಯವಿದೆ.
2. ಈ ಸಮಗ್ರ ಸಲಹಾ ಸಮಿತಿಯು ಪಕ್ಷಾತೀತವಾಗಿ ರಚಿತವಾಗಬೇಕು. ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಮತ್ತು ಸಮರ್ಥ ಆರ್ಥಿಕ ತಜ್ಞರೊಬ್ಬರ ಜೊತೆಗೆ ಹಿರಿಯರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಶ್ರೀ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸಬೇಕು ಎನ್ನುವ ಅಪೇಕ್ಷೆ ಸಾರ್ವಜನಿಕರದ್ದು.
ಶ್ರೀ ಬಿ.ಎಸ್. ಯಡಿಯೂರಪ್ಪನವರೇ, ನಿಮ್ಮ ಸುದೀರ್ಘ ರಾಜಕೀಯ ಜೀವನ ಹೋರಾಟದಲ್ಲಿ ಸಾಕಷ್ಟು ಜನಸ್ನೇಹಿ ಕೆಲಸ ಕಾರ್ಯಗಳನ್ನು ಶಾಸಕನಾಗಿ, ವಿರೋಧಪಕ್ಷದ ನಾಯಕನಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಮಾಡುತ್ತಾ ಬಂದಿದ್ದೀರಿ. ಹಲವು ಬಜೆಟ್’ಗಳನ್ನು ತಾವು ಮಂಡಿಸಿರುತ್ತೀರಿ. ಮೊದಲಿನಿಂದಲೂ ರೈತಪರ ಹೋರಾಟಗಳನ್ನು ಮಾಡಿದ್ದೀರಿ. ಇಡೀ ಕರ್ನಾಟಕದ ವಸ್ತುಸ್ಥಿತಿಯನ್ನು ಆಳವಾಗಿ ಅರ್ಥಮಾಡಿಕೊಂಡಿರುತ್ತೀರಿ. ಈಗಿನ ಬಿಕ್ಕಟ್ಟನ್ನು ನಿರ್ವಹಣೆಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವಿರಿ. ಈಗ, ನಿಮ್ಮ ನೇತೃತ್ವದಲ್ಲಿ ಈ ಸಲಹಾ ಸಮಿತಿಯು ರಚನೆ ಆಗಬೇಕಾದ ಅಗತ್ಯವಿದೆ.
ಶ್ರೀ ಸಿದ್ದರಾಮಯ್ಯನವರೇ, ನೀವು ಕರ್ನಾಟಕ ಕಂಡ ರಾಜಕೀಯ ಚತುರ. ೧೩ ಬಾರಿ ಬಜೆಟ್ ಮಂಡಿಸಿದ ಕರ್ನಾಟಕದ ಹಣಕಾಸು ಸಚಿವ, ವಿವಿಧ ಇಲಾಖೆಗಳ ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ, ಪ್ರತಿಪಕ್ಷದ ನಾಯಕನಾಗಿ ಅನೇಕ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುವ ಕೀರ್ತಿ ನಿಮ್ಮದು. ರಾಜ್ಯದ ನರನಾಡಿಯನ್ನು ಅರಿತಿರುವ ತಾವು ಈ ಸಲಹಾ ಸಮಿತಿಯ ಭಾಗವಾಗುವುದು ಸೂಕ್ತ. ನಿಮ್ಮ ಅಪಾರ ಅನುಭವ, ಆಡಳಿತದ ಚಾಕಚಕ್ಯತೆ ಇಂತಹ ಸಮಯದಲ್ಲಿ ನಿಸ್ಸಂಶಯವಾಗಿ ಅತ್ಯಂತ ನೆರವಿಗೆ ಬರುತ್ತದೆ ಅನ್ನುವ ನಂಬಿಕೆ.
ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರೇ, ಕಳೆದ ಒಂದು ದಶಕದಿಂದ ಕರ್ನಾಟಕ ರಾಜಕೀಯದ ಪ್ರಮುಖ ಭಾಗವಾಗಿರುವ, ಗ್ರಾಮ ವಾಸ್ತವ್ಯದಂತಹ ಜನಪರ ಚಟುವಟಿಕೆಯಿಂದಾಗಿ ಗಮನ ಸೆಳೆದಿರುವ, ಈ ಹಿಂದೆ ಬರ ಪರಿಹಾರ ಕ್ರಮಗಳನ್ನು ಸಮರ್ಥವಾಗಿ ನಿಭಾಯಿಸಿರುವ, ಆರ್ಥಿಕ ಶಿಸ್ತನ್ನು ಅರ್ಥೈಸಿಕೊಂಡಿರುವ, ಹಣಕಾಸು ಸೇರಿದಂತೆ ಇನ್ನಿತರ ಖಾತೆಗಳನ್ನು ನಿರ್ವಹಣೆಯ ಅನುಭವವನ್ನು ಹೊಂದಿರುವ ನೀವು ಕೂಡ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸಮಿತಿಯ ಭಾಗವಾಗುವುದು ಬಹು ಮುಖ್ಯ.
50 ವರ್ಷಗಳ ತಮ್ಮ ನಿರಂತರ ರಾಜಕೀಯ ಜೀವನದಲ್ಲಿ ಶಾಸಕನಾಗಿ, ಸಚಿವನಾಗಿ, ಕರ್ನಾಟಕದ ೧೪ನೇ ಮುಖ್ಯಮಂತ್ರಿಯಾಗಿ ಹಾಗೂ ದೇಶದ 11ನೇ ಪ್ರಧಾನಮಂತ್ರಿಯಾಗಿ ಹೀಗೆ ಹಲವಾರು ಜವಾಬ್ದಾರಿಗಳನ್ನು, ಅನೇಕ ಜನಪರ ಕಾರ್ಯಕ್ರಮಗಳನ್ನು ನಿಭಾಯಿಸಿದ ಶ್ರೇಯಸ್ಸು ಶ್ರೀ ಎಚ್.ಡಿ.ದೇವೇಗೌಡರದ್ದು. ಈಗಲೂ ರಾಜಕೀಯದಲ್ಲಿ ಸಕ್ರಿಯರಾಗಿರುವ ಅವರ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಲು ಪ್ರಧಾನಮಂತ್ರಿಗಳೂ ಧಾವಿಸುತ್ತಾರೆ. ದೇವೇಗೌಡರಂತಹ ರಾಜಕೀಯ ಚಾಣಾಕ್ಷನ ಮಾರ್ಗದರ್ಶನ ಖಂಡಿತವಾಗಿಯೂ ಅತ್ಯಮೂಲ್ಯವೆಂದರೆ ತಪ್ಪಾಗಲಾರದು. ಅವರು ಸಲಹಾ ಸಮಿತಿಯ ಭಾಗವಾಗುವುದು ಮುಖ್ಯವಾಗುತ್ತದೆ.
ಇವರೆಲ್ಲರ ಜೊತೆಗೆ ದೇಶದ, ಜಗತ್ತಿನ ಆರ್ಥಿಕ ಪರಿಸ್ಥಿತಿಯನ್ನು ಅರಿತು ಕರ್ನಾಟಕದ ಸದ್ಯದ ಮತ್ತು ಭವಿಷ್ಯದ ಆರ್ಥಿಕ ಸ್ಥಿತಿಗತಿಗಳನ್ನು ಸಂದಿಗ್ಧತೆಯನ್ನು ಕೂಲಂಕುಷವಾಗಿ ಅಧ್ಯಯನ, ಅವಲೋಕನ ಮಾಡಿ ಸಮರ್ಥ ಸಲಹೆ, ಸೂಚನೆಗಳನ್ನು ನೀಡುವ ದೂರದೃಷ್ಟಿವುಳ್ಳ ಅನುಭವಿ ಆರ್ಥಿಕ ತಜ್ಞರೊಬ್ಬರನ್ನು ಈ ಸಮಿತಿಗೆ ನೇಮಿಸಕೊಳ್ಳಬೇಕು.
ಕರ್ನಾಟಕವು ಎಲ್ಲಾ ದೃಷ್ಟಿಯಿಂದ ಸಬಲವಾಗಿ ನಿಲ್ಲಲು, ಈಗಿನ ಈ ವಿಶೇಷ ವಿಪತ್ಕಾಲದಲ್ಲಿ ಅಪಾರ ಅನುಭವಿ, ನಿಪುಣರೂ ಆಗಿರುವ ತ್ರಿಮೂರ್ತಿಗಳಾದ ಆದ ಶ್ರೀ ಬಿ.ಎಸ್. ಯಡಿಯೂರಪ್ಪ, ಶ್ರೀ ಸಿದ್ದರಾಮಯ್ಯ ಮತ್ತು ಶ್ರೀ ಎಚ್.ಡಿ. ಕುಮಾರಸ್ವಾಮಿ ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ಪಕ್ಷಾತೀತವಾಗಿ ಕೆಲಸ ಮಾಡಿದ್ದೇ ಆದಲ್ಲಿ ಕರ್ನಾಟಕ ರಾಜ್ಯವು ಎಂತಹದ್ದೇ ವಿಪತ್ತನ್ನು ಸುಲಭವಾಗಿ ಗೆಲ್ಲಬಹುದು ಎಂಬ ನಂಬಿಕೆ ಜನರದ್ದು.
ಖಂಡಿತವಾಗಿಯೂ ಈಗ ರಾಜ್ಯಕ್ಕೆ ಬೇಕಿರುವುದು ಒಂದು ಪಕ್ಷಕ್ಕೆ ಸೀಮಿತವಾದ ಸರ್ಕಾರಕ್ಕಿಂತ ಹೆಚ್ಚಾಗಿ ಒಮ್ಮತದಿಂದ ಜನರ, ರಾಜ್ಯದ ಸುರಕ್ಷತೆಗೆ, ಏಳಿಗೆಗೆ, ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಸರ್ವಪಕ್ಷ ಸಮ್ಮತದ ಜನತಾ ಸರ್ಕಾರ!
ಎಲ್ಲರೂ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳೇ! ಜನರ ನೋವು-ನಲಿವುಗಳಿಗೆ ಎಲ್ಲರೂ ಪಾಲುದಾರರೇ, ಹೊಣೆಗಾರರೇ! ಇಂದು ಎಲ್ಲರೂ ಕೆಲವು ತಿಂಗಳ ಮಟ್ಟಿಗಾದರೂ ಒಬ್ಬರಿಗೊಬ್ಬರು ಹೆಗಲು ಬೆಸೆದುಕೊಳ್ಳುವ ವಿಶೇಷ ಸಂದರ್ಭ ಇದಾಗಿದ್ದು, ವಿನೂತನ ಇತಿಹಾಸ ನಿರ್ಮಾಣಕ್ಕೆ ಸಜ್ಜಾಗಬೇಕಿದೆ. ಈ ಸಂಕೀರ್ಣ ಸ್ಥಿತಿಯನ್ನು ನೀವೆಲ್ಲರೂ ಒಂದಾಗಿ ನಿರ್ವಹಿಸಿದ್ದೇ ಆದಲ್ಲಿ, ಖಂಡಿತವಾಗಿಯೂ ಶ್ರೇಯಸ್ಸಿನ ಸಮಪಾಲು ನಿಮ್ಮೆಲ್ಲರದಾಗಿರುತ್ತದೆ.
ನೆನಪಿರಲಿ, ಇಂದು ಯಾರೇ ಅಧಿಕಾರದಲ್ಲಿದ್ದರೂ ಕರೋನಾ ವಿಪತ್ತನ್ನು ಸರಿಯಾಗಿ, ಆಮೂಲಾಗ್ರವಾಗಿ ನಿರ್ವಹಿಸದೇ ಹೋದರೆ, ಮುಂದೆ ಅಧಿಕಾರ ಹಿಡಿಯುವ ಎಲ್ಲರಿಗೂ ಈ ವಿಷಮ ಸ್ಥಿತಿಯ ಪರಿಣಾಮಗಳು ಸಲೀಸಾಗಿ ದಾಟುವುದರಲ್ಲಿ ಸಂಶವೇ ಇಲ್ಲ.
ಮತ್ತೊಮ್ಮೆ ರಾಜ್ಯದ ಮೂವರು ಪ್ರಮುಖ ನಾಯಕರಾದ ನಿಮ್ಮಲ್ಲಿ “ಸಮಗ್ರ ಆಡಳಿತಾತ್ಮಕ ಸಲಹಾ ಸಮಿತಿ” ರಚನೆಯ ಸಲಹೆ, ಮನವಿಯನ್ನು ಮಾಡುತ್ತಾ ಸದಾಶಯದ ನಿಮ್ಮ ಕೆಲಸ-ಕಾರ್ಯಗಳಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ. “ಒಗ್ಗಟ್ಟಿನಲ್ಲಿ ನಾಡಿನ ಒಳಿತಿದೆ”, ಜೈ ಕರ್ನಾಟಕ!
ಕರ್ನಾಟಕದ ಪ್ರಜ್ಞಾವಂತ ಪ್ರಜೆಗಳು,
ರವಿ ಕುಲಕರ್ಣಿ & ರಾಜ ಶಶಿಧರ್.