• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಪಂಥದಿಂದ ಸಂಸ್ಕೃತಿಯೆಡೆಗೆ – ಹಿಂದುತ್ವದ ಜಾತಿ ಕರಾಮತ್ತು (ಭಾಗ-೨)

ನಾ ದಿವಾಕರ by ನಾ ದಿವಾಕರ
January 22, 2022
in ಅಭಿಮತ
0
ಪಂಥದಿಂದ ಸಂಸ್ಕೃತಿಯೆಡೆಗೆ – ಹಿಂದುತ್ವದ ಜಾತಿ ಕರಾಮತ್ತು (ಭಾಗ-೧)
Share on WhatsAppShare on FacebookShare on Telegram

ಮತ ಅಥವಾ ಧರ್ಮದ ಮಸೂರದಿಂದಲೇ ಇದನ್ನು ನೋಡಿದಾಗ ವಿಭಜನೆಯ ಪೂರ್ವದ ಭಾರತವೂ ಸಹ ಹಿಂದೂ ಬಾಹುಳ್ಯದ ದೇಶವೇ ಆಗಿತ್ತು. ಜಾತಿಯ ಮಸೂರದಿಂದ ನೋಡಿದರೆ ಭಾರತ ಎಲ್ಲ ಕಾಲಕ್ಕೂ ಅನೇಕ ಅಲ್ಪಸಂಖ್ಯಾತ ಸಮುದಾಯಗಳನ್ನೊಳಗೊಂಡ ಪ್ರದೇಶದಂತೆಯೇ ಕಾಣುತ್ತದೆ. ರಾಜಕಾರಣಿಗಳಿಗೆ ಮತ ಅಥವಾ ಧರ್ಮ ಎನ್ನುವುದು ಜಾತಿಗಿಂತಲೂ ಹೆಚ್ಚು ಅನುಕೂಲಕರವಾಗಿ ಕಾಣುತ್ತದೆ ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಮುಖ್ಯವಾಗುತ್ತದೆ. ಮೇಲ್ಪದರದ ಗಣ್ಯ ಹಿಂದೂಗಳ ವಿರುದ್ಧ ಹೋರಾಡುತ್ತಿರುವವರೆಗೂ ಮುಸ್ಲಿಂ ರಾಜಕಾರಣಿಗಳು ಉತ್ತರ ಭಾರತದ ಮೇಲ್ಪದರದ ಗಣ್ಯ ಮುಸಲ್ಮಾನರನ್ನು ಒಗ್ಗೂಡಿಸಿ ಪಾಕಿಸ್ತಾನವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದ್ದರು. ಆದರೆ ಅಲ್ಲಿ ಬಂಗಾಲದ ಮೇಲ್ಪದರದ ಗಣ್ಯರು ಪಂಜಾಬಿನ ಗಣ್ಯರೊಡನೆ ಸಮನ್ವಯ ಸಾಧಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವೇ ಪಾಕಿಸ್ತಾನ ಇಬ್ಭಾಗವಾಗಿ ಬಾಂಗ್ಲಾದೇಶ ಸೃಷ್ಟಿಯಾಗಿತ್ತು.

ADVERTISEMENT

ಜಾತಿಯನ್ನು ಕುರಿತು ಮಾತನಾಡುವಾಗ

ಈಗ ಈ ಎರಡೂ ದೇಶಗಳಲ್ಲಿ ಮತ್ತೊಂದು ವಿಭಜನೆಯ ಭೀತಿ ಕಾಡುತ್ತಿದೆ. ಕಾರಣವೇನೆಂದರೆ ದಕ್ಷಿಣ ಏಷಿಯಾದ ಜನರು, ಅವರು ಅನುಸರಿಸುವ ಮತ ಅಥವಾ ಧರ್ಮ ಯಾವುದೇ ಆದರೂ, ಆಳವಾದ ಜಾತಿ ಮತ್ತು ಬುಡಕಟ್ಟು ಬೇರುಗಳನ್ನು ಹೊಂದಿದ್ದಾರೆ. ಆದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸ್ಲಿಂ ಸಮುದಾಯಗಳ ನಡುವೆ ಜಾತಿಯ ಸುತ್ತಲಿನ ವಾದ ಪ್ರತಿವಾದಗಳನ್ನು ನಿರ್ಬಂಧಿಸುವುದು, ಪ್ರತಿರೋಧಿಸುವುದು ಸುಲಭವಾಗುತ್ತದೆ ಏಕೆಂದರೆ ಜಾತಿಯ ಪರಿಕಲ್ಪನೆ ಹಿಂದೂ ಮತಕ್ಕೆ ಸಂಬಂಧಿಸಿರುವುದೇ ಹೊರತು ದಕ್ಷಿಣ ಏಷಿಯಾಗೆ ಸಂಬಂಧಿಸಿರುವುದಲ್ಲ. ಇದಕ್ಕೆ ಪ್ರತಿಯಾಗಿ ಸಾಕಷ್ಟು ಪುರಾವೆಗಳು ಲಭ್ಯವಿದ್ದರೂ ಬೌದ್ಧಿಕ ವಲಯದಲ್ಲಿ ಈ ವಾದ ಪ್ರತಿವಾದಗಳನ್ನು ಮಂಡಿಸುವ ಪ್ರಯತ್ನವನ್ನು ಚಿಂತಕರು ಮಾಡುವುದು ಅಪರೂಪ.
ಜಾತಿಯಿಂದ ಹೊರತಾಗಿ ಹಿಂದೂ ಎನ್ನುವುದರ ಅಸ್ತಿತ್ವವೇನಾದರೂ ಇರಲು ಸಾಧ್ಯವೇ ? ಜಾತಿಯನ್ನು ಕುರಿತು ಮಾತನಾಡದ ಹಿಂದೂಗಳನ್ನು ಜಾತಿಯನ್ನು ನಿರಾಕರಿಸುವ ಮೇಲ್ಪದರದ ಗಣ್ಯ ಹಿಂದೂ ಎಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ ಒಬ್ಬ ಹಿಂದೂ ಜಾತಿಯನ್ನು ಕುರಿತು ಮಾತನಾಡಿದಾಗ, ಅದು ಕೇವಲ ದಬ್ಬಾಳಿಕೆ, ಶೋಷಣೆ ಮತ್ತು ಜಾತಿ ವಿನಾಶದ ನೆಲೆಯಲ್ಲೇ ಮಾತನಾಡಬೇಕಾಗುತ್ತದೆ. ಜಾತಿಯನ್ನು ಕುರಿತ ಮತ್ತಾವುದೇ ರೀತಿಯ ಚರ್ಚೆಯನ್ನು, ಉದಾಹರಣೆಗೆ ಸಾಂಸ್ಕೃತಿಕ ಹಾಗೂ ಕಸುಬು ಆಧಾರಿತ ವೈವಿಧ್ಯತೆಯನ್ನು ಕುರಿತ ಚರ್ಚೆಯನ್ನು ಮಂಡಿಸಿದಾಗ ಅಂಥವರನ್ನು ಜಾತಿಯನ್ನು ಅನುಮೋದಿಸುವ ಮತಾಂಧರೆಂದು ಭಾವಿಸಲಾಗುತ್ತದೆ. ಹಾಗಾಗಿ ಎಲ್ಲ ಚರ್ಚೆ, ವಾದ ಪ್ರತಿವಾದಗಳ ಸಂದರ್ಭದಲ್ಲೂ ಸಹ, ಹಿಂದೂ ಮತ ಅಥವಾ ಧರ್ಮ ಜಾತಿಯಿಂದ ಹೊರತಾದುದಲ್ಲ ಎಂಬ ಅಭಿಪ್ರಾಯವನ್ನು ದೃಢೀಕರಿಸಲಾಗುತ್ತದೆ.

ರಾಜಕಾರಣಿಗಳಿಗೆ ಜಾತಿಯ ಪ್ರಶ್ನೆಯನ್ನು ಬಳಸಿಕೊಳ್ಳುವುದು ಒಂದು ಸಮಸ್ಯೆ ಎನಿಸಲೇ ಇಲ್ಲ ಏಕೆಂದರೆ ಅದು ಮತ ಗಳಿಸಲು ನೆರವಾಗುತ್ತದೆ ಮತ್ತು ಅಲ್ಪಸಂಖ್ಯಾತ ಹಕ್ಕುಗಳ ಆಧಾರದಲ್ಲಿ ಇದನ್ನು ಯಾವುದೇ ಸಂದರ್ಭದಲ್ಲಾದರೂ ಸಮರ್ಥಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಇಸ್ಲಾಂಗೆ ಸಂಬಂಧಿಸಿದಂತೆ ರಾಜಕಾರಣಿಗಳು ಮತ ಅಥವಾ ಧರ್ಮದ ಪ್ರಶ್ನೆಯನ್ನೇ ಬಳಸಿಕೊಂಡು, ಮತ್ತದೇ ಅಲ್ಪಸಂಖ್ಯಾತರ ಹಕ್ಕುಗಳ ಆಧಾರದ ಮೇಲೆ ಸಮರ್ಥಿಸಿಕೊಳ್ಳಲಾರಂಭಿಸಿದರು. ಆದರೆ ಹಿಂದೂಗಳಿಗೆ ಸಂಬಂಧಿಸಿದಂತೆ ಮತ ಅಥವಾ ಧರ್ಮವನ್ನು ಹೊರತರುವುದರಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ. ಇಸ್ಲಾಂ ಭೀತಿಯನ್ನು ಹೊರತುಪಡಿಸಿದರೆ ಹಿಂದೂಗಳನ್ನು ಒಂದುಗೂಡಿಸಲು ಮತ್ತಾವುದೇ ಬಲವಾದ ಕಾರಣಗಳೂ ಇರಲಿಲ್ಲ.

ಒಂದು ಪ್ರಬಲ ಶಕ್ತಿ

ಮಂಡಲ್ ಆಯೋಗ ಈ ಸನ್ನಿವೇಶದಲ್ಲಿ ಪರಿವರ್ತನೆ ತಂದಿತ್ತು. ಈ ಆಯೋಗವು ತನ್ನ ವರದಿಯಲ್ಲಿ, ಭಾರತದ ಶೇ 50ಕ್ಕೂ ಹೆಚ್ಚು ಜಾತಿಗಳು ಹಿಂದುಳಿದ ಸಮುದಾಯಗಳಾಗಿದ್ದು ಇವರು ಮೇಲ್ಪದರದ ಗಣ್ಯ ವರ್ಗಕ್ಕೂ ಸೇರದೆ, ಪರಿಶಿಷ್ಟರ ಗುಂಪಿಗೂ ಸೇರದೆ, ಸವರ್ಣೀಯರೂ ಅಲ್ಲದೆ ಅವರ್ಣೀಯರೂ ಅಲ್ಲದೆ ಇರುವುದಾಗಿ ಹೇಳಿತ್ತು. ಈ ಪ್ರಬಲ ಹಿಂದುಳಿದ ಸಮುದಾಯಗಳಿಗೆ ಅವರ ಜಾತಿಯ ಪೂರ್ವೇತಿಹಾಸವನ್ನು ನೆನಪಿಸುವುದೇ ಅಲ್ಲದೆ ಹಿಂದೂ ಪರಂಪರೆಗೆ ಸೇರುವ ಹೆಮ್ಮೆಯ ಭಾವನೆಯನ್ನು ಮೂಡಿಸುವ ಮೂಲಕ ಹಿಂದುತ್ವ ಒಂದು ಪ್ರಬಲ ಶಕ್ತಿಯಾಗಿ ರೂಪುಗೊಂಡಿತ್ತು.

ಇದು ಹಿಂದುತ್ವದ ಚಾತುರ್ಯ ಅಥವಾ ಕರಾಮತ್ತು ಎಂದು ಹೇಳಬಹುದು. ಇಂದು ಹಿಂದೂ ಧರ್ಮವನ್ನು ಕುರಿತು ಮಾತನಾಡುವಾಗ ಜಾತಿಶ್ರೇಣಿಯ ಮಧ್ಯಭಾಗದಲ್ಲಿರುವ ನಿರ್ಲಕ್ಷಿತರನ್ನು ಕುರಿತು ಮಾತನಾಡಲಾಗುತ್ತದೆ. ಒಂದೆಡೆ ಅಸಂಖ್ಯಾತ ಕೋಟ್ಯಂತರ ಭಾರತೀಯರಿಗೆ, ಅವರು ಸಾಂಸ್ಥಿಕ ನೆಲೆಗಳಿಂದ ಅಥವಾ ಉದ್ಯೋಗದಿಂದ ವಂಚಿತರಾಗುತ್ತಿರುವುದು ಅವರ ಪ್ರತಿಭೆಯ ಕಾರಣದಿಂದ ಅಲ್ಲ ಬದಲಾಗಿ ಅವರ ಪೂರ್ವಿಕರು ಜಾತಿ ವ್ಯವಸ್ಥೆಯನ್ನು ಸಾಂಸ್ಥೀಕರಿಸಿ ಅದರಿಂದ ಹೆಚ್ಚಿನ ಪ್ರಯೋಜನ ಪಡೆದಿದ್ದುದರಿಂದ ಎಂದು ಹೇಳಲಾಗುತ್ತಿದೆ. ಅವರ ಪೂರ್ವಿಕರು ಮಾಡಿದ ಅಪರಾಧಗಳಿಗಾಗಿ ಈಗ ಬೆಲೆ ತೆರಬೇಕಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ತರ್ಕಬದ್ಧವಾಗಿಯೂ, ನೈತಿಕವಾಗಿಯೂ, ವಿವೇಕಯುತವೂ ಆಗಿ ಕಾಣುತ್ತದೆ. ಆದರೆ ಇದು ಅವರ ಆಕ್ರೋಶವನ್ನು ತಣಿಸುವುದಿಲ್ಲ. ಯಾರಿಗೂ ಜಾತಿಯಿಂದ ಹೊರಬರಲು ಪ್ರೇರೇಪಿಸುವುದಿಲ್ಲ, ಬದಲಾಗಿ ಇನ್ನೂ ಹೆಚ್ಚು ಜಾತಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ.

ಮತ್ತೊಂದೆಡೆ ಸವಲತ್ತು ವಂಚಿತ ಜನಸಮುದಾಯಗಳು ಜಾತಿ ಪ್ರಜ್ಞೆಯನ್ನು ಬಿಟ್ಟುಕೊಡುತ್ತವೆ ಎಂಬ ಬೌದ್ಧಿಕ ವಲಯದ ಗ್ರಹಿಕೆ ಆಧಾರರಹಿತವಾದದ್ದು. ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ನೆರವಾಗುವಂತಹ ಪ್ರಮಾಣಪತ್ರ ಪಡೆಯಲು ಜನರು ತಮ್ಮ ಜಾತಿ ಅಸ್ಮಿತೆಗೆ ಅಂಟಿಕೊಳ್ಳುತ್ತಾರೆ. ಮೇಲ್ಪದರದ ಗಣ್ಯರ ವಲಯದಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲಿ ಇದನ್ನು ಮರೆಮಾಚಬಹುದಷ್ಟೆ. ಭಾರತದ ಬೃಹತ್ ಜನಸಂಖ್ಯೆಯ ದೃಷ್ಟಿಯಿಂದ ನೋಡಿದಾಗ ಎಲ್ಲರಿಗೂ ಸಕಾರಾತ್ಮಕ ತಾರತಮ್ಯದ ನೀತಿಗಳ ಪ್ರಯೋಜನ ಆಗಲಿಕ್ಕಿಲ್ಲ. ಸಂಪತ್ತು, ಅಧಿಕಾರ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಬಹುಸಂಖ್ಯೆಯ ಜನರು ತಮ್ಮ ಜಾತಿ ಅಸ್ಮಿತೆಗಳಲ್ಲೇ ಸಾಂತ್ವನ ಕಂಡುಕೊಳ್ಳುತ್ತಾರೆ. ಏಕೆಂದರೆ ಅವರ ಕೌಟುಂಬಿಕ ಹಿನ್ನೆಲೆ ಮತ್ತು ಚರಿತ್ರೆಯನ್ನು ಪ್ರತಿನಿಧಿಸಲು ಇದು ಪೂರಕವಾಗಿರುತ್ತದೆ. ಹಿಂದುತ್ವ ಇದನ್ನು ಅನುಮೋದಿಸುತ್ತದೆ. ಇದನ್ನು ಸಿನಿಕತನ ಎಂದು ಆಕ್ಷೇಪಿಸಬಹುದಾದರೂ, ಈ ಅನುಮೋದನೆ ವಾಸ್ತವವಾದದ್ದು ಮತ್ತು ಇದು ಮತದಾರರ ಮನಸು ಗೆಲ್ಲುತ್ತದೆ.

ಹಿಂದೂ ಮತ ಬ್ಯಾಂಕುಗಳು

ಮೇಲ್ಪದರದ ಗಣ್ಯ ಹಿಂದೂಗಳನ್ನು ಜಾತಿ ಎನ್ನುವುದು ಮುಜುಗರಕ್ಕೀಡುಮಾಡುತ್ತದೆ. 19ನೆಯ ಶತಮಾನದಲ್ಲಿ ಧರ್ಮ ವಿನಾಶವನ್ನು ಪ್ರತಿಪಾದಿಸಿದ ಚಿಂತಕರು ನೈತಿಕವಾದ ಮೇಲರಿಮೆಯನ್ನು ಹೊಂದಿದ್ದಂತೆಯೇ, 21ನೆಯ ಶತಮಾನದಲ್ಲಿ ಲಿಂಗ ವಿನಾಶವನ್ನು ಪ್ರತಿಪಾದಿಸಿದ ಚಿಂತಕರು ನೈತಿಕ ಮೇಲರಿಮೆ ಹೊಂದಿದ್ದಂತೆಯೇ ಇಂದು ಜಾತಿ ವಿನಾಶವನ್ನು ಪ್ರತಿಪಾದಿಸುವ ಚಿಂತಕರು ನೈತಿಕ ಮೇಲರಿಮೆಯನ್ನು ಹೊಂದಿರುತ್ತಾರೆ. ಆದರೆ ಜಾತಿ ವಿರೋಧಿ ಸಂಘರ್ಷಗಳು ಹೆಚ್ಚು ಹೆಚ್ಚಾಗಿ ಹಿಂದೂ ವಿರೋಧಿಯಾಗಿಯೇ ಕಾಣುವುದರಿಂದ ಅದು ಸಹಜವಾಗಿ ಹಿಂದೂ ರಾಷ್ಟ್ರ ವಿರೋಧಿಯಾಗಿ, ಅಂತಿಮವಾಗಿ ದೇಶ ವಿರೋಧಿಯಾಗಿ ಕಾಣುತ್ತದೆ. ಏತನ್ಮಧ್ಯೆ ಜಾತಿಯ ವಾಸ್ತವತೆಯನ್ನು ಅನುಮೋದಿಸುವ ಮೂಲಕ ಹಿಂದೂ ಮತಬ್ಯಾಂಕುಗಳನ್ನು ಯಶಸ್ವಿಯಾಗಿ ಬಲಪಡಿಸಿರುವ ಹಿಂದುತ್ವ ಅದಕ್ಕೆ ಆಧಾರವಾಗಿರುವ ಇಸ್ಲಾಂ ಭೀತಿಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಈ ಮನಸ್ಥಿತಿಯನ್ನು ರಾಷ್ಟ್ರೀಯತೆಯೊಂದಿಗೆ ಸಮೀಕರಿಸುವುದರಲ್ಲಿ ಯಶಸ್ವಿಯಾಗಿದೆ.

ಜಾತ್ಯತೀತತೆಯ ಮೌಲ್ಯಗಳು ಅತಿ ಹೆಚ್ಚು ಮತಗಳನ್ನು ಹೊಂದಿರುವ ಹಿಂದೂಗಳ ಹೃದಯವನ್ನು ಗೆಲ್ಲಲಾಗುವುದಿಲ್ಲ ಎಂಬ ವಾಸ್ತವವನ್ನು ಬಹುತೇಕ ರಾಜಕಾರಣಿಗಳು ಬಲ್ಲವರಾಗಿದ್ದಾರೆ. ಇಸ್ಲಾಂ ಭೀತಿ ಅಥವಾ ಜಾತಿಯ ಮೂಲಕ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಲು ನಿರಾಕರಿಸುವ ಹಿಂದೂಗಳಲ್ಲಿ ಒಂದು ಹೊಸ ಮತಬ್ಯಾಂಕ್ ಸೃಷ್ಟಿಯಾಗುತ್ತಿರುವುದನ್ನು ಇವರು ಗಮನಿಸುತ್ತಿದ್ದಾರೆ. ಈ ಹೊಸ ಮತಬ್ಯಾಂಕನ್ನು ಸೃಷ್ಟಿಸುವ ಪ್ರಕ್ರಿಯೆಯೇ ಹಿಂದುತ್ವ ಸಿದ್ಧಾಂತಿಗಳನ್ನು ಜಾಗೃತಗೊಳಿಸಿದೆ. ಹಾಗೆಯೇ ಒಂದು ಸಮಯದಲ್ಲಿ ಜಾತಿ ದೃಷ್ಟಿಕೋನದ ಮೂಲಕವೇ ಹಿಂದೂ ಧರ್ಮವನ್ನು ವ್ಯಾಖ್ಯಾನಿಸುವ ವಿಶೇಷ ಹಕ್ಕು ಹೊಂದಿರುವುದಾಗಿ ಭಾವಿಸಿದ್ದ ಜಾತ್ಯತೀತ ಚಿಂತಕರಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ.

(ಮೂಲ : From cult to culture- Hindutva’s caste masterstroke ದೇವ್ದತ್ ಪಟ್ಟನಾಯಕ್- ದ ಹಿಂದೂ)

Tags: From cult to culture- Hindutva’s caste masterstrok
Previous Post

ಬಿಹಾರದ ನೆರೆ ಅಲ್ಲಿನ ಹೆಣ್ಣುಮಕ್ಕಳ ಬದುಕಿನ ಮೇಲೆ ಬೀರಿರುವ ಪರಿಣಾಮದ ಭೀಕರತೆ ಎಂಥದ್ದು ಗೊತ್ತಾ? (ಭಾಗ-೨)

Next Post

UP Election | ಯೂಪಿಯಲ್ಲಿ ಕಾಂಗ್ರೆಸ್ ಮತ್ತೊಂದು ವರಸೆ, ನಾನೇ ಸಿಎಂ ಅಭ್ಯರ್ಥಿ ಎಂದ ಪ್ರಿಯಾಂಕಾ ಗಾಂಧಿ

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 17, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್. ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
Next Post
ತುಮರಿ ಸೇತುವೆಗಾಗಿ ಲಿಂಗನಮಕ್ಕಿ ಬರಿದು ಮಾಡುವ ಉದ್ದೇಶದ ಹಿಂದಿನ ಹುನ್ನಾರವೇನು?

ತುಮರಿ ಸೇತುವೆಗಾಗಿ ಲಿಂಗನಮಕ್ಕಿ ಬರಿದು ಮಾಡುವ ಉದ್ದೇಶದ ಹಿಂದಿನ ಹುನ್ನಾರವೇನು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada