• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸೋಂಕಿನ ಟೈಂ ಬಾಂಬ್ ಮೇಲಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ! 

by
April 15, 2020
in ದೇಶ
0
ಸೋಂಕಿನ ಟೈಂ ಬಾಂಬ್ ಮೇಲಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ! 
Share on WhatsAppShare on FacebookShare on Telegram

ಕರೋನಾ ವಿರುದ್ಧದ ಭಾರತದ ಹೋರಾಟದ ಮೊದಲ ಹಂತದ ಲಾಕ್ ಡೌನ್ ಮುಕ್ತಾಯವಾಗಿ, ಇನ್ನಷ್ಟು ಬಿಗಿಯ ಎರಡನೇ ಹಂತದ ಲಾಕ್ ಡೌನ್ ಆರಂಭವಾಗಿದೆ. ಈ ನಡುವೆ ಪ್ರಧಾನಿ ಮೋದಿಯವರು ಮಾತನಾಡಿ, ರೋಗ ಮತ್ತು ಆರ್ಥಿಕ ಸಂಕಷ್ಟ ದೂರ ಮಾಡಲು ತಮ್ಮ ಸರ್ಕಾರ ಏನೆಲ್ಲಾ ಮಾಡಿದೆ ಎಂಬುದಕ್ಕಿಂತ, ಜನ ಇನ್ನೂ ಏನೆಲ್ಲಾ ತ್ಯಾಗ ಮಾಡಬೇಕು ಎಂದಷ್ಟೇ ಹೇಳಿ ಕೈಮುಗಿದು ದೇಶದ ಜನತೆಗೆ ಮನವಿ ಮಾಡಿದ್ದಾರೆ.

ADVERTISEMENT

ಹಾಗೇ, ತಮ್ಮ ಸರ್ಕಾರ ರೋಗ ತಡೆಯ ನಿಟ್ಟಿನಲ್ಲಿ ಕೈಗೊಂಡ ಕ್ರಮವನ್ನು ಹೆಸರಿಸುತ್ತಾ ಪ್ರಮುಖವಾಗಿ ದೇಶದಲ್ಲಿ ಯಾವುದೇ ಸಾವು ಸಂಭವಿಸುವ ಮುನ್ನವೇ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಆರಂಭಿಸಿದ್ದೆವು. ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗೂ ಮುಂಚೆಯೇ ನಾವು ಅಂತಹ ಮುಂಜಾಗ್ರತೆ ವಹಿಸಿದ್ದೆವು ಎಂದಿದ್ದಾರೆ.

ಆದರೆ, ಜನವರಿ ಮೂರನೇ ವಾರದಿಂದ ಮಾರ್ಚ್ 24ರಂದು ಲಾಕ್ ಡೌನ್ ಘೋಷಣೆಯವರೆಗೆ ಸುಮಾರು 15 ಲಕ್ಷ ಮಂದಿಯನ್ನು ವಿದೇಶಗಳಿಂದ ದೇಶದೊಳಗೆ ಬಿಟ್ಟುಕೊಳ್ಳಲಾಗಿದೆ ಎಂದು ಸರ್ಕಾರವೇ ಹೇಳಿದೆ. ಮೋದಿಯವರು ಹೇಳಿದಂತೆ ಈ ಎಲ್ಲರ ತಪಾಸಣೆ ನಡೆಸಿದ್ದರೆ, ದೇಶದಲ್ಲಿ ಸೋಂಕು ಹರಡಲು ಹೇಗೆ ಸಾಧ್ಯವಿತ್ತು ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಕರೋನಾ ಭಾರತದಲ್ಲಿ ಹರಡಿದ್ದೇ ಇತರೆ ದೇಶಗಳಂತೆ ವಿದೇಶಗಳಿಂದ ದೇಶದೊಳಕ್ಕೆ ಬಂದವರಿಂದಲೇ ಎಂಬುದು ನಿರ್ವಿವಾದ.

ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಿದ್ದರೂ, ಅದು ಕೇವಲ ದೇಹದ ತಾಪಮಾನ ಪರೀಕ್ಷೆಯಾಗಿತ್ತು. ಕರೋನಾದ ರೋಗ ಲಕ್ಷಣಗಳಲ್ಲಿ ಜ್ವರ ಒಂದು ಅಂಶವಷ್ಟೇ, ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳ ಪೈಕಿ ಯಾವುದಾದರೂ ಒಂದು ಅಥವಾ ಎರಡು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಕರೋನಾ ಸೋಂಕಿತರೆಲ್ಲರಿಗೂ ಜ್ವರ ಇದ್ದೇ ಇರುತ್ತದೆ ಎಂಬುದು ಖಾತ್ರಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ. ಹಾಗಾಗಿ ಕೇವಲ ತಾಪಮಾನ ಪರೀಕ್ಷೆಯೊಂದನ್ನೇ ಮಾಡಿ, ನಾವು ರೋಗ ತಡೆಗೆ ಎಲ್ಲಾ ಪ್ರಯತ್ನ ಮಾಡಿದ್ದೇವೆ ಎಂಬುದು ಅರೆಸತ್ಯವಷ್ಟೇ. ಜೊತೆಗೆ ತಾಪಮಾನ ಪರೀಕ್ಷೆಯನ್ನೂ ವಂಚಿಸಲು ಕೆಲವರು ವಿಮಾನ ನಿಲ್ದಾಣಕ್ಕೆ ತಲುಪುವ ಕೆಲವು ತಾಸು ಮುನ್ನ ಪ್ಯಾರಸೆಟಮಾಲ್ ಮಾತ್ರೆ ನುಂಗಿ ತಪಾಸಣೆಯನ್ನೂ ವಂಚಿಸಿದ ಪ್ರಕರಣಗಳು ವರದಿಯಾಗಿದ್ದವು.

ಹಾಗಾಗಿ ಮೊದಲನೆಯದಾಗಿ ಲಾಕ್ ಡೌನ್ ಗೆ ಮೂರು ವಾರಗಳ ಮುನ್ನ ವಿದೇಶದಿಂದ ಬಂದ ಎಲ್ಲರನ್ನೂ ತಪಾಸಣೆಗೊಳಪಡಿಸಲಾಗಿದೆ ಎಂಬುದಾಗಲೀ, ಹಾಗೆ ನಡೆಸಿದ ತಪಾಸಣೆ ಎಷ್ಟು ವೈಜ್ಞಾನಿಕ ಮತ್ತು ಕಟ್ಟುನಿಟ್ಟಿನದ್ದಾಗಿತ್ತು ಎಂಬುದಾಗಲೀ ಹುರುಳಿರುವ ಸಂಗತಿ ಅಲ್ಲ. ಕನಿಷ್ಠ ಲಾಕ್ ಡೌನ್ ಬಳಿಕವಾದರೂ ಸರ್ಕಾರ, ಮತ್ತು ಐಸಿಎಂಆರ್ ನಂಥ ಸೋಂಕು ಸಂಬಂಧಿ ಸಂಸ್ಥೆಗಳು ವ್ಯಾಪಕ ಪ್ರಮಾಣದಲ್ಲಿ ತಪಾಸಣೆ ಮತ್ತು ವೈರಾಣು ಪರೀಕ್ಷೆಗಳನ್ನು ನಡೆಸುವ ಮೂಲಕ ತಮ್ಮ ತಪ್ಪಿನಿಂದಾಗಿ ಅದಾಗಲೇ ದೇಶದೊಳಕ್ಕೆ ಬಂದಿರುವ ಸೋಂಕನ್ನು ಪತ್ತೆ ಮಾಡುವ ಕೆಲಸವನ್ನಾದರೂ ವ್ಯಾಪಕವಾಗಿ ಮಾಡಿವೆಯೇ? ಎಂದರೆ, ಅದಕ್ಕೂ ಸಮಾಧಾನಕರ ಉತ್ತರ ದೊರೆಯದು.

ಏಕೆಂದರೆ; ಸರ್ಕಾರದ ಮಾಹಿತಿ ಪ್ರಕಾರವೇ ಈವರೆಗೆ ದೇಶದಲ್ಲಿ ಒಟ್ಟು ಕೋವಿಡ್-19 ವೈರಾಣು ಪರೀಕ್ಷೆಗೆ ಒಳಗಾದವರ ಸಂಖ್ಯೆ ಕೇವಲ 2.3 ಲಕ್ಷ ಮಂದಿ ಮಾತ್ರ! ಅಂದರೆ; ಬರೋಬ್ಬರಿ 10 ಸಾವಿರ ಜನರಲ್ಲಿ ಒಬ್ಬರ ಲೆಕ್ಕದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಅಂದರೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ ಹಲವು ಸಾವಿರ ಸಂಖ್ಯೆಯ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದ್ದರೆ, ನಾವು ಇನ್ನೂ ಕೇವಲ 142(ಪ್ರತಿ ಹತ್ತು ಲಕ್ಷ ಮಂದಿಗೆ) ಮಂದಿಯ ಪ್ರಮಾಣದಲ್ಲೇ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ರಾಷ್ಟ್ರೀಯ ಸರಾಸರಿ ಪ್ರಮಾಣದ 142 ಆಗಿದ್ದರೆ, ಕರ್ನಾಟಕದಲ್ಲಿ ಪ್ರತಿ ಹತ್ತು ಲಕ್ಷ ಮಂದಿಗೆ 135 ಮಂದಿಯ ಪ್ರಮಾಣದಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಈವರೆಗೆ ಒಟ್ಟು 9,100 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.

ಆದರೆ, ದೇಶದ ಜನದಟ್ಟಣೆ ಮತ್ತು ಸಾಮಾಜಿಕ ಸಂಪರ್ಕದ ಹಿನ್ನೆಲೆಯಲ್ಲಿ ನೋಡಿದರೆ, ಈ ಪ್ರಮಾಣದ ಪರೀಕ್ಷೆಗಳು ರೋಗದ ಹರಡುವಿಕೆಗೆ ತಡೆಯೊಡ್ಡಲು ಸಾಕಾಗದು. ಭಾರತ ವ್ಯಾಪಕವಾಗಿ ಪರೀಕ್ಷೆಗಳನ್ನು ನಡೆಸದೇ ರೋಗ ಹತೋಟಿಗೆ ಬಂದಿದೆ. ಇತರ ಮುಂದುವರಿದ ದೇಶಗಳಿಗಿಂತ ರೋಗ ನಿಯಂತ್ರಣದಲ್ಲಿ ನಾವು ಮುಂದಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು ಮೂರ್ಖತನವಾದೀತು ಮತ್ತು ಆ ಮೂರ್ಖತನಕ್ಕೆ ಮುಂದೆ ಭಾರೀ ಬೆಲೆ ತೆರಬೇಕಾದೀತು. ಹಾಗಾಗಿ ಕನಿಷ್ಠ ಈಗಲಾದರೂ ಕೊರತೆ ಇರುವ ಪರೀಕ್ಷಾ ಕಿಟ್ ಸಮಸ್ಯೆ ಬಗೆಹರಿಸಿ, ವ್ಯಾಪಕ ಪ್ರಮಾಣದಲ್ಲಿ ಪರೀಕ್ಷೆ ನಡೆಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದೀಗ ಅಂತಾರಾಷ್ಟ್ರೀಯ ತಜ್ಞರು ಮತ್ತು ಸಂಸ್ಥೆಗಳ ಎಚ್ಚರಿಕೆಯ ಬಳಿಕ ಎಚ್ಚೆತ್ತಿರುವ ಐಸಿಎಂಆರ್, ಸದ್ಯ ದಿನವೊಂದಕ್ಕೆ 21 ಸಾವಿರ ಸಂಖ್ಯೆಯಲ್ಲಿರುವ ದೇಶದ ಕರೋನಾ ವೈರಾಣು ಪರೀಕ್ಷೆ ಪ್ರಮಾಣವನ್ನು ದುಪ್ಪಟ್ಟುಗೊಳಿಸಲು ಇನ್ನಷ್ಟು ಖಾಸಗೀ ಪ್ರಯೋಗಾಲಯಗಳಿಗೆ ಅವಕಾಶ ನೀಡುವುದಾಗಿ ಹೇಳಿದೆ. ಅಂದರೆ, ದಿನವೊಂದಕ್ಕೆ ವೈರಾಣು ಪರೀಕ್ಷೆ ಪ್ರಮಾಣವನ್ನು 40 ಸಾವಿರಕ್ಕೆ ಹೆಚ್ಚಿಸಲು ಐಸಿಎಂಆರ್ ಮುಂದಾಗಿದೆ. ಸದ್ಯ ದೇಶದಲ್ಲಿ ಒಟ್ಟು 244 ಕರೋನಾ ವೈರಾಣು ಪರೀಕ್ಷಾ ಪ್ರಯೋಗಾಲಯಗಳನ್ನು ತೆರೆಯಲಾಗಿದ್ದು ಆ ಪೈಕಿ 171 ಸರ್ಕಾರಿ ಲ್ಯಾಬ್ ಗಳಾದರೆ, ಉಳಿದ 73 ಖಾಸಗೀ ಲ್ಯಾಬ್ಗಳಾಗಿವೆ. ಈ ನಡುವೆ ಖಾಸಗೀ ಲ್ಯಾಬ್ ಗಳಲ್ಲಿ ಪರೀಕ್ಷೆಯೊಂದಕ್ಕೆ ಐದು ಸಾವಿರ ರೂ. ಶುಲ್ಕ ನಿಗದಿ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿದ್ದು, ದೇಶದ ಜನರ ಜೀವ ಕಾಪಾಡಲು ಸರ್ಕಾರ ಕನಿಷ್ಠ ವೈರಾಣು ಪರೀಕ್ಷೆಯನ್ನು ಕೂಡ ಉಚಿತವಾಗಿ ನಡೆಸಲಾಗದ ಹಣಕಾಸು ದಾರಿದ್ರ್ಯ ಪರಿಸ್ಥಿತಿಗೆ ತಲುಪಿದೆಯೇ ಎಂಬ ಪ್ರಶ್ನೆ ಕೂಡ ಎದ್ದಿದೆ.

ವಾಸ್ತವವಾಗಿ ಲಾಕ್ ಡೌನ್ ಉದ್ದೇಶ ಜನರ ನಡುವಿನ ಪರಸ್ಪರ ಸಂಪರ್ಕವನ್ನು ಕಡಿತ ಮಾಡುವ ಮೂಲಕ ಸೋಂಕು ಹರಡುವುದನ್ನು ತಡೆಯುವುದು ಮತ್ತು ಅದೇ ಹೊತ್ತಿಗೆ ಸೋಂಕು ನಿಯಂತ್ರಣದ ದಿಸೆಯಲ್ಲಿ ಅತ್ಯಂತ ನಿರ್ಣಾಯಕವಾದ ವೈರಾಣು ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ತಯಾರಿಗಳನ್ನು ಮಾಡಿಕೊಳ್ಳುವುದೇ ಆಗಿದೆ. ಆದರೆ, ಕಳೆದ 22 ದಿನಗಳ ಅವಧಿಯಲ್ಲಿ ಭಾರತ ಸರ್ಕಾರ ಪರೀಕ್ಷಾ ಪ್ರಮಾಣವನ್ನು ಹೆಚ್ಚು ಮಾಡದೆ, ಬಹುತೇಕ ಯಥಾ ಪ್ರಕಾರ ಉಳಿಸಿಕೊಂಡುಬಂದಿದೆ. ವ್ಯಾಪಕ ಪರೀಕ್ಷೆಗಳನ್ನಾಗಲೀ, ಕ್ಲಸ್ಟರ್ ಮಟ್ಟದ ಪೋಲಿಂಗ್ ಪರೀಕ್ಷೆಗಳನ್ನಾಗಲೀ ಆರಂಭಿಸಿಯೇ ಇಲ್ಲ. ಹಾಗಾಗಿ ಸದ್ಯಕ್ಕೆ ದೃಢಪಟ್ಟಿರುವ ಪಾಸಿಟೀವ್ ಕೇಸುಗಳ ಹತ್ತಾರು ಪಟ್ಟು ಪಾಸಿಟೀವ್ ಪ್ರಕರಣಗಳು ಇದ್ದರೂ ಪರೀಕ್ಷೆ ನಡೆಸದೇ ಇರುವುದರಿಂದ ಅವುಗಳನ್ನು ಪತ್ತೆಮಾಡಲಾಗಿಲ್ಲ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

ಈ ನಡುವೆ, ವ್ಯಾಪಕ ಪರೀಕ್ಷೆ ನಡೆಸಲು ಮತ್ತು ದಿನವಹಿ ಪರೀಕ್ಷೆ ಪ್ರಮಾಣ ಹೆಚ್ಚಳಕ್ಕೆ ಪರೀಕ್ಷಾ ಕಿಟ್ ಕೊರತೆಯೂ ಒಂದು ಪ್ರಮುಖ ಕಾರಣ. ಮಾರ್ಚ್ 20ರ ಆಸುಪಾಸಿನಲ್ಲಿ ದೇಶದಲ್ಲಿ ಸರಾಸರಿ ದಿನವೊಂದಕ್ಕೆ 12 ಸಾವಿರ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವಿದ್ದರೂ ವಾಸ್ತವವಾಗಿ ಪರೀಕ್ಷೆ ನಡೆಯುತ್ತಿದ್ದದ್ದು ಕೇವಲ 3-4 ಸಾವಿರ ಪರೀಕ್ಷೆಗಳು ಮಾತ್ರ. ಈಗಲೂ ಕೂಡ ಪರಿಸ್ಥಿತಿ ಅಷ್ಟೇನೂ ಬದಲಾಗಿಲ್ಲ. ದೇಶದ ಒಟ್ಟಾರೆ ಪರೀಕ್ಷಾ ಸಾಮರ್ಥ್ಯ 21 ಸಾವಿರ ಪರೀಕ್ಷೆ ನಡೆಸುವಷ್ಟಿದ್ದರೂ ವಾಸ್ತವವಾಗಿ ಅಷ್ಟು ಪ್ರಮಾಣದಲ್ಲಿ ನಡೆಯುತ್ತಿರುವ ಬಗ್ಗೆ ಅನುಮಾನಗಳಿವೆ. ಈ ನಡುವೆ ದೇಶಾದ್ಯಂತ ನಡೆಯುತ್ತಿರುವ ಪರೀಕ್ಷೆಗಳ ಬಗ್ಗೆಯಾಗಲೀ, ಪರೀಕ್ಷಾ ಕಿಟ್ ಲಭ್ಯತೆ, ಬೇಡಿಕೆ ಮುಂತಾದ ಅಂಕಿ ಅಂಶಗಳನ್ನು ಒದಗಿಸುವ ರಾಷ್ಟ್ರವ್ಯಾಪಿ ಕೇಂದ್ರೀಕೃತ ಮಾಹಿತಿ ವ್ಯವಸ್ಥೆಯೇ ಇಲ್ಲ.

ಈ ನಡುವೆ ಪರೀಕ್ಷೆಗಳನ್ನು ಈಗಿರುವುದಕ್ಕಿಂತ ದುಪ್ಪಟ್ಟು ಹೆಚ್ಚು ಮಾಡುವುದಾಗಿ ಹೇಳಿರುವ ಐಸಿಎಂಆರ್, ಹೆಚ್ಚುವರಿಯಾಗಿ ಬೇಕಿರುವ ಕಿಟ್ ಗಳು ಗುರುವಾರದ ಒಳಗೆ ತಲುಪಲಿವೆ. ಸುಮಾರು 37 ಲಕ್ಷ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಮತ್ತು 33 ಲಕ್ಷ ಆರ್ ಟಿ-ಪಿಸಿಆರ್ ಕಿಟ್ ಗಳ ಸರಬರಾಜಾಗಲಿದೆ ಎಂದು ಹೇಳಿದೆ. ಜೊತೆಗೆ ಚೀನಾದಿಂದ ಬರಬೇಕಿದ್ದ ಸುಮಾರು 7 ಲಕ್ಷ ಕಿಟ್ ಗಳು ಸರಕು ಸಾಗಣೆ ವಿಮಾನಗಳ ಅಲಭ್ಯತೆಯಿಂದಾಗಿ ತಲುಪುವುದು ವಿಳಂಬವಾಗಿದೆ ಎಂದೂ ಹೇಳಲಾಗಿದೆ. ಜೊತೆಗೆ ಇದೀಗ ಎರಡು ದಿನಗಳ ಹಿಂದೆ ಒಟ್ಟು 51 ವಿವಿಧ ದೇಶಗಳ ಸರಬರಾಜುದಾರರಿಂದ ಕಿಟ್ ತರಿಸಿಕೊಳ್ಳಲು ಅನುಮೋದನೆ ನೀಡಲಾಗಿದ್ದು, ಆ ಪೈಕಿ ಚೀನಾ, ದಕ್ಷಿಣ ಕೊರಿಯಾ, ಫ್ರಾನ್ಸ್, ಜರ್ಮನಿಯ ಸಂಸ್ಥೆಗಳ ಪ್ರಸ್ತಾವನೆಗಳೂ ಇವೆ ಎಂದು ವರದಿಗಳು ಹೇಳಿವೆ.

ಅಂದರೆ, ಐಸಿಎಂಆರ್ ಮತ್ತು ಆರೋಗ್ಯ ಸಚಿವಾಲಯ ಇದೀಗ ದೇಶದ ಸೋಂಕಿತರ ಸಂಖ್ಯೆ ಹತ್ತು ಸಾವಿರದ ಗಡಿ ದಾಟಿದ ಬಳಿಕ, ಬರೋಬ್ಬರಿ 21 ದಿನಗಳ ಲಾಕ್ ಡೌನ್ ಬಳಿಕವೂ ಸೋಂಕಿತರ ಮತ್ತು ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬರದೇ ಇರುವ ಆತಂಕಕಾರಿ ಪರಿಸ್ಥಿತಿಯ ಬಳಿಕ ತಡಬಡಾಯಿಸಿ ಎದ್ದು ಕೂತಿವೆ. ಇದೀಗ ಪರೀಕ್ಷೆ ಪ್ರಮಾಣ ಹೆಚ್ಚಿಸುವ, ರ್ಯಾಪಿಡ್ ಮತ್ತು ಪೂಲಿಂಗ್ ಪರೀಕ್ಷೆಗಳಿಗೆ ಚಾಲನೆ ನೀಡಲು ತಯಾರಿಗೆ ಮುಂದಾಗಿವೆ. ಹಾಗಾದರೆ, ಈ 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಸರ್ಕಾರ ಮತ್ತು ಐಸಿಎಂಆರ್ ನಂತಹ ಸಂಸ್ಥೆಗಳು ಏನು ಮಾಡುತ್ತಿದ್ದವು. ವ್ಯಾಪಕ ಪರೀಕ್ಷೆಯೊಂದೇ ಸೋಂಕು ನಿಯಂತ್ರಣಕ್ಕೆ ದಾರಿ. ಕೇವಲ ಲಾಕ್ ಡೌನ್ ಒಂದರಿಂದಲೇ ರೋಗ ನಿಯಂತ್ರಣ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ್ದರೂ, ಯಾಕೆ ಮೂರು ವಾರಗಳವರೆಗೆ ಕನಿಷ್ಠ ತಯಾರಿಗಳನ್ನೂ ಮಾಡಿಕೊಳ್ಳದೆ ಕಾಲಾಹರಣ ಮಾಡಲಾಯಿತು?

ಹಲವಾರು ಕಂಪನಿಗಳು, ಕಾರ್ಪರೇಟ್ ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ಪರೀಕ್ಷಾ ಕಿಟ್ ದೇಣಿಗೆ ನೀಡಿದ ಹೊರತಾಗಿಯೂ ಈಗಲೂ ಪರೀಕ್ಷಾ ಕಿಟ್ ಕೊರತೆ ಇದೆ. ವ್ಯಾಪಕ ಪರೀಕ್ಷೆ ನಡೆಸದೇ ಕೇವಲ ಶಂಕಾಸ್ಪದ ಪ್ರಕರಣಗಳಲ್ಲಿ ಮಾತ್ರವೇ ಸದ್ಯ ಪರೀಕ್ಷೆಗಳನ್ನು ನಡೆಸುತ್ತಿರುವಾಗಲೂ ಇಷ್ಟೊಂದು ಕೊರತೆ ಇದೆ ಎಂದರೆ, ಸರ್ಕಾರ ಈ ಲಾಕ್ ಡೌನ್ ಅವಧಿಯಲ್ಲಿ ಏನು ಮಾಡಿತು? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ದೇಶದ ಜನತೆ ಪ್ರಧಾನಿ ಮೋದಿಯವರಿಂದ ಮಂಗಳವಾರದ ಅವರ ಭಾಷಣದ ವೇಳೆ ಉತ್ತರ ಬಯಸಿದ್ದರು. ಆದರೆ, ಆ ಉತ್ತರ ಸಿಗಲಿಲ್ಲ.

ಇನ್ನು ಲಾಕ್ ಡೌನ್ ವೇಳೆ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ ಅವರು, ತಮ್ಮ ಅಡುಗೆ ಮನೆಯಲ್ಲಿ ಬೆಂಡೆ ಕಾಯಿ ಗೊಜ್ಜು ಮಾಡುವುದರಲ್ಲಿ, ಪತ್ನಿಯೊಂದಿಗೆ ಕುಳಿತು ಪಗಡೆಯಾಡುವುದರಲ್ಲಿ ತೋರಿದ ಆಸಕ್ತಿಯ ಒಂದಿಷ್ಟಾದರೂ, ವ್ಯಾಪಕ ಪರೀಕ್ಷೆಗೆ ಬೇಕಾದ ಅಗತ್ಯ ಪ್ರಮಾಣದ ಪರೀಕ್ಷಾ ಕಿಟ್, ಹೊಸ ಲ್ಯಾಬ್, ಸಿಬ್ಬಂದಿಗಳು, ವೈದ್ಯರಿಗೆ ಮತ್ತು ಸಿಬ್ಬಂದಿಗೆ ಸುರಕ್ಷಾ ಸಾಧನೆಗಳ ಹೊಂದಿಸಲು ತೋರಿದ್ದರೆ ಬಹುಶಃ ಈ ಸ್ಥಿತಿ ಬರುತ್ತಿರಲಿಲ್ಲ!

ಜನರಿಗೆ ನಾವು ಉತ್ತರದಾಯಿಗಳಲ್ಲ ಎಂದು ಸ್ವಯಂ ನಿರ್ಧರಿಸಿರುವ ಆಳುವ ಮಂದಿ ಮತ್ತು ಅವರ ಸರ್ಕಾರದ ಧೋರಣೆಯಿಂದಾಗಿ ಸದ್ಯ ಭಾರತ ಕರೋನಾ ಪರೀಕ್ಷೆಯನ್ನು ವ್ಯಾಪಕಗೊಳಿಸುವಲ್ಲಿ ಎಡವುತ್ತಿದೆ. ಪರಿಣಾಮವಾಗಿ ಕೋಟ್ಯಂತರ ಜನರ ಬದುಕನ್ನೇ ಕಸಿದ ಲಾಕ್ ಡೌನ್ ಗಾಗಿ ಜನಸಾಮಾನ್ಯರು ಮಾಡಿದ ತ್ಯಾಗ ಮಣ್ಣುಪಾಲಾಗುತ್ತಿದೆ. ಅತ್ತ ದೈನಂದಿನ ಬದುಕೂ ಉಳಿಯಲಿಲ್ಲ; ಇತ್ತ ನಾಳೆ ಜೀವ ಕೂಡ ವೈರಾಣು ದಾಳಿಯಿಂದ ಸುರಕ್ಷಿತವಾಗಿ ಉಳಿಯುತ್ತದೆ ಎಂಬ ಖಾತ್ರಿ ಇಲ್ಲ! ಇದು ಸದ್ಯ ಭಾರತದ ಬಡ ಬೋರೇಗೌಡನ ದೈನೇಸಿ ಸ್ಥಿತಿ!

Tags: Corona OutbreakICMRPM ModiPPEWHOಐಸಿಎಂಆರ್ಕರೋನಾ ಭೀತಿಪಿಪಿಇಪ್ರಧಾನಿ ನರೇಂದ್ರ ಮೋದಿವಿಶ್ವ ಆರೋಗ್ಯ ಸಂಸ್ಥೆ
Previous Post

ವಾಹನ ಪರಿಶೀಲನೆಗೆ RSS ಕಾರ್ಯಕರ್ತರ ಬಳಕೆ; ಅಧಿಕಾರಿ ಅಮಾನತು

Next Post

ವಿಶ್ವದಲ್ಲಿ ಕರೋನಾ ಸೋಂಕಿನ ಅಂಕಿ ಸಂಖ್ಯೆ ಲೆಕ್ಕಾಚಾರ ಹೇಗಿದೆ ಗೊತ್ತಾ?

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ವಿಶ್ವದಲ್ಲಿ ಕರೋನಾ ಸೋಂಕಿನ ಅಂಕಿ ಸಂಖ್ಯೆ ಲೆಕ್ಕಾಚಾರ ಹೇಗಿದೆ ಗೊತ್ತಾ?

ವಿಶ್ವದಲ್ಲಿ ಕರೋನಾ ಸೋಂಕಿನ ಅಂಕಿ ಸಂಖ್ಯೆ ಲೆಕ್ಕಾಚಾರ ಹೇಗಿದೆ ಗೊತ್ತಾ?

Please login to join discussion

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು
Top Story

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

by ಪ್ರತಿಧ್ವನಿ
October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ
Top Story

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

by ಪ್ರತಿಧ್ವನಿ
October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada