ದೆಹಲಿ ಪೊಲೀಸರ ಆರು ತಿಂಗಳ ʼಅವಿರತʼ ಶ್ರಮದ ನಂತರ ಸಿಎಎ ವಿರುದ್ದದ ಹೋರಾಟದ ಸಂದರ್ಭದಲ್ಲಿ ನಡೆದ ಗಲಭೆಗಳ ಕುರಿತು ಸುಮಾರು 17,000ಕ್ಕೂ ಮಿಕ್ಕಿ ಪುಟಗಳ ಚಾರ್ಜ್ಶೀಟ್ ಅನ್ನು ಸೆಪ್ಟೆಂಬರ್ 16ರಂದು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ 15 ಜನರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ದೆಹಲಿ ಗಲಭೆಗೆ ಸಂಬಂಧಪಟ್ಟಂತಹ ಈ ಹಿಂದಿನ ಚಾರ್ಜ್ಶೀಟ್ನ ಬಹುತೇಕ ಅಂಶಗಳು ಈ ಬೃಹತ್ ಚಾರ್ಜ್ಶೀಟ್ನಲ್ಲಿ ಮತ್ತೆ ಪುನರಾವರ್ತಿತವಾಗಿವೆ. 2020ರ ಫೆಬ್ರವರಿಯಲ್ಲಿ ನಡೆದ ಗಲಭೆಗೆ ಸುಮಾರು ಐವತ್ತಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಂಪೂರ್ಣ ಚಾರ್ಜ್ಶೀಟ್ನಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಹೆಸರುಗಳು ಮಾತ್ರವೇ ದಾಖಲಾಗಿದೆ. ಸಿಎಎ ಪರವಾಗಿ ನಿಂತು ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ ಅಥವಾ ಪ್ರಚೋದನಾಕಾರಿ ಹೇಳಿಕೆ ನೀಡಿದ ಯಾರ ಹೆಸರೂ ಈ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿಲ್ಲ. 17,500 ಪುಟಗಳ ಚಾರ್ಜ್ಶೀಟ್ನಲ್ಲಿ 2,695 ಶೀಟ್ಗಳಲ್ಲಿ ಆರೋಪಿಗಳ ವಿರುದ್ದ ಇರುವಂತಹ ಆಪಾದನೆಯನ್ನು ದಾಖಲಿಸಲಾಗಿದ್ದರೆ ಉಳಿದ ಪುಟಗಳಲ್ಲಿ ಆರೋಪಗಳಿಗೆ ಸಂಬಂಧಪಟ್ಟಂತಹ ದಾಖಲೆಗಳನ್ನು ಒದಗಿಸಲಾಗಿದೆ.
FIR ಸಂಖ್ಯೆ 59/2020ಯು ದೆಹಲಿ ಗಲಭೆಗೆ ಸಂಬಂಧಪಟ್ಟ ಎಲ್ಲಾ FIRಗಳ ಮೂಲ. ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಸುಮಾರು 700 FIRಗಳ ಕುರಿತಾದಂತಹ ವಿಸ್ತೃತ ಮಾಹಿತಿಯಿದೆ. ಭಾರತದ ಪರೀಕ್ಷಾ ವಿಧಾನದ ಪ್ರಕಾರ (ವಿಷಯ ಮುಖ್ಯವಲ್ಲ, ಪುಟಗಳ ಸಂಖ್ಯೆ ಮುಖ್ಯ) ಈ ಚಾರ್ಜ್ಶಿಟ್ ಎಲ್ಲಾ ವಿಧದಲ್ಲಿಯೂ ಉತ್ತಮವೆನಿಸುತ್ತದೆ. 17,500 ಪುಟಗಳ ಚಾರ್ಜ್ಶೀಟ್ ಎಂದರೆ ಸಾಮಾನ್ಯದ ಮಾತೇ?
ಆಸಿಫ್ ಇಕ್ಬಾಲ್ ತನ್ಹಾ, ಸಫೂರಾ ಜಾರ್ಗರ್, ದೇವಾಂಗನಾ ಕಲಿತಾ, ಸಲೀಮ್ ಮಲಿಕ್, ಅಬ್ದುಲ್ ಖಾಲಿದ್ ಸೈಫಿ, ಇಸ್ರಾತ್ ಜಹಾನ್, ಗುಲ್ಫಿಶಾ ಖತೂನ್, ಮೀರನ್ ಹೈದರ್, ತಾಹೀರ್ ಹುಸೈನ್ (ಆಮ್ಆದ್ಮಿ ಪಕ್ಷದಿಂದ ಉಚ್ಚಾಟಿತರಾದ ಕೌನ್ಸಿಲರ್), ಸಫಾ-ಉರ್-ರೆಹಮಾನ್, ಶದಾಬ್ ಅಹ್ಮದ್, ನತಾಷಾ ನರ್ವಾಲ್, ತಸ್ಲೀಮ್ ಅಹ್ಮದ್, ಸಲೀಮ್ ಖಾನ್ ಮತ್ತು ಅಖ್ತರ್ ಖಾನ್ ದೆಹಲಿ ಗಲಭೆಯ ಪ್ರಮುಖ ಆರೋಪಿಗಳು ಎಂದು ಚಾರ್ಜ್ಶೀಟ್ನಲ್ಲಿ ದಾಖಲಿಸಲಾಗಿದೆ. ಇವರ ವಿರುದ್ದ ಯುಎಪಿಎ, ಐಪಿಸಿ ಹಾಗೂ ಇತರ ಕಾಯ್ದೆಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
“ಈ ಆರೋಪಿಗಳು ದೆಹಲಿಯಲ್ಲಿ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೀದಿಗಿಳಿದು ದಂಗೆ ಎಬ್ಬಿಸಿದ್ದವರೊಂದಿಗೆ ಇವರ ನೇರ ಸಂಬಂಧವಿತ್ತು,” ಎಂದು ಹೇಳಿ ಎರಡು ವಾಟ್ಸಾಪ್ ಗುಂಪುಗಳಲ್ಲಿ ಸಂಪೂರ್ಣ ಗಲಭೆಯ ರೂಪು ರೇಷೆಗಳ ಕುರಿತು ಚರ್ಚೆ ನಡೆಸಲಾಗಿತ್ತೆಂದು ಅದರ ವಿವರಗಳನ್ನು ನೀಡಿದೆ.
2019ರ ಚುನಾವಣೆಯನ್ನು ಬಿಜೆಪಿ ಬೃಹತ್ ಬಹುಮತದಿಂದ ಗೆದ್ದಾಗಲೇ ದೇಶದಲ್ಲಿ ಹಿಂಸೆಯನ್ನು ಪ್ರಚೋದಿಸುವ ಯೋಜನೆಗಳನ್ನು ರೂಪಿಸಲಾಗಿತ್ತು, ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಸಂಪೂರ್ಣ ಚಾರ್ಜ್ಶಿಟ್ನಲ್ಲಿ ದೆಹಲಿ ಪೊಲೀಸರು ಏನು ನಂಬಿಸಲು ಪ್ರಯತ್ನಿಸುತ್ತಿದ್ದಾರೆಂದರೆ,
1) ದೆಹಲಿಯಲ್ಲಿ ನಡೆದ ಗಲಭೆ ಪೂರ್ವ ನಿರ್ಧಾರಿತವಾದದು. ಇದರ ರೂಪುರೇಷೆಗಳನ್ನು ಮೂರು ತಿಂಗಳಿಗಿಂತಲೂ ಹಿಂದೆಯೇ ರೂಪಿಸಲಾಗಿತ್ತು. ಗಲಭೆ ನಡೆಯಬೇಕಾಗಿದ್ದ ಜಾಗವನ್ನು ವ್ಯವಸ್ಥಿತವಾಗಿ ನಿರ್ಧರಿಸಲಾಗಿತ್ತು. ಭಾರತಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುವ ಸಮಯವನ್ನು ನೋಡಿ ಗಲಭೆಯನ್ನು ಸೃಷ್ಟಿಲಾಗಿತ್ತು.
2) ಈ ಗಲಭೆಗಳ ಸೂತ್ರದಾರ ಉಮರ್ ಖಾಲಿದ್. ಇವರನ್ನು ದೆಹಲಿ ಪೊಲೀಸರು 2018ರಿಂದ ಗಮನಿಸುತ್ತಾ ಇದ್ದಾರೆ. ಆದರೂ ಹೇಗೆ ದೆಹಲಿ ಗಲಭೆಯನ್ನು ಯಾರಿಗೂ ಶಂಕೆ ಬಾರದ ರೀತಿಯಲ್ಲಿ ಯೋಜಿಸಿದ್ದಾರೆ ಎಂದು ಪ್ರಶ್ನಿಸಿದರೆ, ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಅವರು ದೆಹಲಿಯಲ್ಲಿ ಇರದ ಕಾರಣ ದೆಹಲಿ ಪೊಲೀಸರು ಉಮರ್ ಖಾಲಿದ್ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿಲ್ಲ ಎಂಬ ಉತ್ತರ ಪೊಲೀಸರ ಬಳಿ ಸಿದ್ದವಿದೆ. ಮತ್ತೂ ಮುಂದುವರೆದು, ಇಷ್ಟು ಮುಖ್ಯವಾದ ಆರೋಪಿಯನ್ನು ಮೊದಲೇ ಏಕೆ ಪೊಲೀಸರು ವಿಚಾರಣೆಗೆ ಕರೆದಿಲ್ಲ? ಸೆಪ್ಟೆಂಬರ್ 14ರ ವರೆಗೆ ಏಕೆ ಕಾಯಬೇಕಾಯಿತು? ಎಂದು ಕೇಳುವ ಹಾಗಿಲ್ಲ. ಏಕೆಂದರೆ, ಈ ಪ್ರಶ್ನೆಗಳಿಗೆ ಉತ್ತರವಿಲ್ಲ.
3) ಖಾಲಿದ್ ಜೊತೆಗಿದ್ದವರು ಯಾರು? ಈ ಪ್ರಶ್ನೆಗೆ ಉತ್ತರ ಬಹಳ ಸುಲಭ. ಉಮರ್ ಖಾಲಿದ್ ಜೊತೆಗಿದ್ದವರು ಜೆಎನ್ಯುನ ಇನ್ನೋರ್ವ ವಿದ್ಯಾರ್ಥಿ ಶಾರ್ಜಿಲ್ ಇಮಾಮ್. ಇವರೇ ಜೆಎನ್ಯು ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ರಚಿಸಿ, ಶಹೀನ್ ಬಾಘ್ನ ಹೋರಾಟವನ್ನು ರೂಪಿಸಿದವರು ಹಾಗೂ ಅದು ಫಲಪ್ರದವಾಗುವಂತೆ ಮಾಡಿದವರು. ಇವರ ಗುರು ಉಮರ್ ಖಾಲಿದ್. ಇವರಿಬ್ಬರ ಸಿದ್ದಾಂತಗಳು ಬೇರೆ ಬೇರೆಯಾದರೂ, ಇಬ್ಬರೂ ʼಮುಸ್ಲಿಂʼ ವಿದ್ಯಾರ್ಥಿ ಮುಖಂಡರು. ಚಾರ್ಜ್ಶೀಟ್ನಲ್ಲೇ ದಾಖಲಿಸಿರುವಂತೆ, ಶಾಹಿನ್ ಬಾಘ್ನ ಸ್ಥಳೀಯರು ಪ್ರತಿಭಟನೆಯಲ್ಲಿ ಶಾರ್ಜಿಲ್ ಇಮಾಮ್ನ ಪಾಲ್ಗೊಳ್ಳುವಿಕೆಯನ್ನು ಖಂಡಿಸಿದ್ದರೂ ಪರವಾಗಿಲ್ಲ, ಶಾರ್ಜಿಲ್ ಇಮಾಮ್ ಶಾಹೀನ್ ಬಾಘ್ ಪ್ರತಿಭಟನೆಯನ್ನು ವಾಪಾಸ್ ಪಡೆಯುವಂತೆ ಹೇಳಿದರೂ, ಅವರ ಮಾತನ್ನು ಅಲ್ಲಿನ ಮಹಿಳೆಯರು ಕೇಳಲಿಲ್ಲ. ಆದರೂ, ಪರವಾಗಿಲ್ಲ ಶಾರ್ಜಿಲ್ ಇಮಾಮ್ ಉಮರ್ ಖಾಲಿದ್ ಜೊತೆಗೂಡಿ ದೆಹಲಿ ದಂಗೆಯನ್ನು ಯೋಜಿಸಿದ್ದರು.
3) ಇಷ್ಟು ದೊಡ್ಡ ಗಲಭೆಯನ್ನು ಯಾವ ರೀತಿ ಜಾರಿಗೆ ತರಲಾಯಿತು, ಎಂದು ಕೇಳಿದರೆ ಪೊಲೀಸರು ಬೊಟ್ಟು ಮಾಡುವುದು ವಾಟ್ಸಾಪ್ ಗ್ರೂಪ್ಗಳೆಡೆಗೆ. ದೆಹಲಿ ಪ್ರತಿಭಟನೆ ಬೆಂಬಲಿಗರ ಗುಂಪು, (Delhi Protest Support Group-DPSG) ಎಂಬ ವಾಟ್ಸಾಪ್ ಗ್ರೂಪ್ನಲ್ಲಿದ್ದ ಸುಮಾರು 100 ಜನರ ತಂಡ ಸಂಪೂರ್ಣ ದೆಹಲಿ ಗಲಭೆಯನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತಂದಿತು ಎಂದು ಪೊಲೀಸರು ನಂಬಿಸಲು ಹೊರಟಿದ್ದಾರೆ. ಆ ಗುಂಪಿನಲ್ಲಿದ್ದ ಸದಸ್ಯರು ಎಷ್ಟು ಅಮಾಯಕರೆಂದರೆ, ಸುಲಭದಲ್ಲಿ ಪೊಲೀಸರಿಗೆ ಲಭ್ಯವಾಗುವಂತೆ ಎಲ್ಲಾ ಸಂದೇಶಗಳನ್ನು ರವಾನಿಸಿದ್ದಾರೆ.
ಸುಮಾರು 3,000 ಪುಟಗಳಷ್ಟು ವಾಟ್ಸಾಪ್ ಸಂದೇಶಗಳನ್ನು ಚಾರ್ಜ್ಶೀಟ್ನಲ್ಲಿ ನಮೂದಿಲಾಗಿದೆ. ಆದರೆ, ಎಲ್ಲಿಯೂ ಆರೋಪಿಗಳೆಂದು ಕರೆಯಲ್ಪಡುವ 15 ಜನರ ಸಂದೇಶಗಳು ಪ್ರಚೋದನಾತ್ಮಕವಾಗಿಲ್ಲ. ಸಂಪೂರ್ಣ ಚಾಟ್ನಲ್ಲಿ ಹಿಂದು ವಿರೋಧಿ ಅಥವಾ ಮುಸಿಂ ವಿರೋಧಿ ವಿಷಯಗಳು ಪ್ರಸ್ತಾಪವಾಗಿದೆಯೇ? ಗಲಭೆ ನಡೆಯುವುದಕ್ಕೂ ಒಂದು ವಾರದ ಹಿಂದೆ ಕೋಮು ಗಲಭೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಿರುವ ಒಂದು ಸಂದೇಶ ಸಂಪೂರ್ಣ ದೆಹಲಿ ಗಲಭೆಯ ಹಿಂದಿನ ಷಡ್ಯಂತ್ರವೆಂದು ಹೇಳಲಾಗುವುದೇ? ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಈ ಮೂರು ಪ್ರಮುಖ ಅಂಶಗಳನ್ನು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ನಂಬಿಸಲು ಹೊರಟಿದ್ದಾರೆ. ಆದರೆ, ತಮ್ಮ ಚಾರ್ಜ್ಶೀಟ್ನಲ್ಲಿರುವ ಆರೋಪಗಳನ್ನು ದೃಢೀಕರಿಸುವ ನೇರವಾದ ದಾಖಲೆಗಳು ಮಾತ್ರ ಪೊಲೀಸರಿಗೆ ಲಭ್ಯವಾಗಿಲ್ಲ. ಈವರೆಗೆ ಸಲ್ಲಿಸಲಾಗಿದ್ದ ಹಲವು ಚಾರ್ಜ್ಶೀಟ್ಗಳಲ್ಲಿಯೂ ನಿಖರ ದಾಖಲೆಗಳ ಕುರಿತು ಪೊಲೀಸರು ನಮೂದಿಸಿಲ್ಲ. ಎಲ್ಲಾ ಕಡೆಯೂ ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಕಾರ್ಯತಂತ್ರ ಪೊಲೀಸರದು.
ಸಿಎಎ ವಿರೋಧಿಗಳು ಮಾತ್ರ ಆರೋಪಿಗಳು!
ಚಾರ್ಜ್ಶೀಟ್ನಲ್ಲಿ ಆರೋಪಿಗಳೆಂದು ಕರೆಯಲ್ಪಟ್ಟಿರುವ 15 ಜನರೂ ಸಿಎಎ ವಿರುದ್ದ ಪ್ರತಿಭಟಿಸಿದವರು. ದೆಹಲಿ ಗಲಭೆಯಲ್ಲಿ ಇವರದ್ದು ಬಿಟ್ಟರೆ ಬೇರೆ ಯಾರ ಕೈವಾಡವೂ ಇರಲಿಲ್ಲವೆಂಬಂತೆ ಚಾರ್ಜ್ಶಿಟ್ ಬಿಂಬಿಸುತ್ತದೆ. ಹಿಂಸೆಗೆ ಪ್ರಚೋದನೆ ನೀಡಿದ ಕಪಿಲ್ ಮಿಶ್ರಾ, ʼದೇಶ್ ಕೆ ಗದ್ದಾರೋಂ ಕೊ ಗೋಲಿ ಮಾರೋ ಸಾಲೋಂ ಕೊʼ ಎಂದು ಘೋಷಣೆ ಕೂಗಿ, ದೆಹಲಿ ಚುನಾವಣಾ ಪ್ರಚಾರದಿಂದ ಬಹಿಷ್ಕರಿಸಲ್ಪಟ್ಟಿದ್ದ ಅನುರಾಗ್ ಠಾಕುರ್ ಅಥವಾ ಯಾವುದೇ ಬಲಪಂಥೀಯ ನಾಯಕರ ಹೆಸರುಗಳು ಇಲ್ಲಿ ಉಲ್ಲೇಖವಾಗಿಲ್ಲ. ಚಾರ್ಜ್ಶೀಟ್ ಪ್ರಕಾರ ದೆಹಲಿ ಗಲಭೆ ಎಂಬುದು ಒಂದೇ ಕೈಯಲ್ಲಿ ತಟ್ಟಿದ ಚಪ್ಪಾಳೆಯಂತಿದೆ.
ಚಾರ್ಜ್ಶೀಟ್ ಪ್ರಕಾರ ದೇಶಾದ್ಯಂತ ನಡೆದ ಸಿಎಎ ಪ್ರತಿಭಟನೆಗಳು ದೆಹಲಿ ಗಲಭೆಯ ಸತ್ಯಾಸತ್ಯತೆಯನ್ನು ಮರೆಮಾಚಲು ನಡೆದಿರುವಂತವು. ಗಾಂಧಿ, ಅಂಬೇಡ್ಕರ್ ಅವರ ಭಾವಚಿತ್ರಗಳು, ಸಂವಿಧಾನದ ಮುನ್ನುಡಿಯ ಓದುವಿಕೆ ಮತ್ತು ಕವಿಗಳ ಶ್ಲಾಘನಾರ್ಹ ಕವಿತೆಗಳು ದೆಹಲಿ ಗಲಭೆ ಯೋಜನೆಯನ್ನು ರೂಪಿಸುವುದನ್ನು ಮರೆಮಾಚಲು ಮಾಡಿರುವಂತಹ ವಿಚಾರಗಳು. ಮಹಿಳೆಯರು ಕೂಡಾ ಪಾಲ್ಗೊಂಡು ಈ ಪ್ರತಿಭಟನೆಯು, ಲಿಂಗ ಬೇಧವಿಲ್ಲದೇ, ಜಾತ್ಯಾತೀತವಾಗಿ ಮಾಧ್ಯಮಗಳ ರಕ್ಷಣೆಯೊಂದಿಗೆ ನಡೆಯುತ್ತಿದೆ ಎಂಬುದನ್ನು ಬಿಂಬಿಸಲು ದೇಶಾದ್ಯಂತ ಪ್ರತಿಭಟನೆಯನ್ನು ನಡೆಸಲಾಯಿತು, ಎಂದು ಚಾರ್ಜ್ಶೀಟ್ ಹೇಳಿದೆ.
ದೆಹಲಿಯ ಜಾಫ್ರಾಬಾದ್ನಲ್ಲಿ ಕಪಿಲ್ ಮಿಶ್ರಾ ಪ್ರತಿಭಟನಾಕಾರರಿಗೆ ಪೊಲೀಸರ ಎದುರೇ ಬಹಿರಂಗವಾಗಿ ಬೆದರಿಕೆ ಹಾಕಿದ್ದು ಮತ್ತು ಗಲಭೆ ನಡೆಯುವ ಸ್ಥಳಗಳಲ್ಲಿ ಗಲಭೇಕೋರರನ್ನು ನಿಯುಕ್ತಿಗೊಳಿಸಿದ್ದು ಚಾರ್ಜ್ಶೀಟ್ನಲ್ಲಿ ದಾಖಲಾಗಿಲ್ಲ. ಇವರ ಪ್ರಚೋದನಾಕಾರಿ ಹೇಳಿಕೆಯ ನಂತರ ಜಾಫ್ರಾಬಾದ್ನಲ್ಲಿ ಗಲಭೆ ಆರಂಭವಾಯಿತು. ನಂತರ ಈಶಾನ್ಯ ದೆಹಲಿಯ ಇತರ ಭಾಗಗಳಿಗೂ ಇದರ ಪ್ರಭಾವ ಹಬ್ಬಿತ್ತು.
ಒಟ್ಟಿನಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ ಸಂಪೂರ್ಣವಾಗಿ ಏಕಪಕ್ಷೀಯವಾಗಿ ಸತ್ಯವನ್ನು ಮರೆಮಾಚುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಉಮರ್ ಖಾಲಿದ್ ಸಂಪೂರ್ಣ ಗಲಭೆಯ ಸೂತ್ರದಾರನಾಗಿದ್ದಿದ್ದರೆ, ಅವರನ್ನು ಬಂಧನದಲ್ಲಿನ ವಿಳಂಬ, ಚಾರ್ಜ್ಶೀಟ್ನಲ್ಲಿ ನಮೂದಿಸಿರುವ ಘಟನೆಗಳನ್ನು ನೇರವಾಗಿ ಬೆಂಬಲಿಸುವ ದಾಖಲೆಗಳ ಅಲಭ್ಯತೆ ಹಾಗೂ ಮುಖ್ಯವಾಗಿ ದೆಹಲಿ ಗಲಭೆಯಲ್ಲಿ ಬಿಜೆಪಿ ಬೆಂಬಲಿಗರ ಪಾತ್ರವನ್ನು ಮರೆಮಾಚಿರುವುದು ಈ ಚಾರ್ಜ್ಶೀಟ್ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಮಾಧ್ಯಮದವರಿಗೆ ವಿವರಿಸಿದ್ದ ಕ್ರೊನೋಲಜಿಯೇ ಸರಿ ಎಂಬುದನ್ನು ಪೊಲೀಸ್ ಇಲಾಖೆಯ ಮುದ್ರೆ ಒತ್ತಿ ನ್ಯಾಯಾಲಯಕ್ಕೆ ನೀಡಲಾಗಿದೆ.