ಪ್ರಸ್ತುತ ಇಡೀ ವಿಶ್ವವನ್ನು ಕರೋನಾ ವೈರಸ್ ಘಾಸಿಗೊಳಿಸುತ್ತಿದೆ. ವಿಶ್ವದಾದ್ಯಂತ 1.4 ಲಕ್ಷ ಜನರ ಸಾವಿಗೆ ಕಾರಣವಾಗಿರುವ ಈ ವೈರಸ್ ಭಾರತದಲ್ಲೂ 500 ಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. 16 ಸಾವಿರಕ್ಕೂ ಜನ ಪ್ರಸ್ತುತ ಈ ಸೋಂಕಿಗೆ ತುತ್ತಾಗಿದ್ದಾರೆ. ಈ ನಡುವೆ ಅಸಲಿ ಸತ್ಯವೊಂದು ಬಹಿರಂಗವಾಗಿದ್ದು, The Center For Disease Dynamics, Economics & Policy ನಿರ್ದೇಶಕ ಡಾ| ರಮಣ ಲಕ್ಷ್ಮೀ ನಾರಾಯಣ್ ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ವರದಿಯೊಂದನ್ನು ನೀಡಿದ್ದು ಕರೋನಾ ವೈರಸ್ ಈಗಾಗಲೇ ಸಾಮೂದಾಯಿಕವಾಗಿ ಹರಡಿದೆ ಎಂಬ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ.
ಅಸಲಿಗೆ ಭಾರತದಲ್ಲಿ ಲಾಕ್ಡೌನ್ ಜಾರಿಯಾಗಿದ್ದ ಸಂದರ್ಭದಲ್ಲೇ ವಿಶ್ವ ಆರೋಗ್ಯ ಸಂಸ್ತೆ ಎಚ್ಚರಿಕೆ ನೀಡಿತ್ತು. “ಭಾರತದಂತಹ ದೇಶದಲ್ಲಿ ಎಲ್ಲರನ್ನೂ ಕರೋನಾ ಪರೀಕ್ಷೆಗೆ ಒಳಪಡಿಸಿ ಸೊಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಮಾತ್ರ ಇದನ್ನು ತಡೆಯುವುದು ಸಾಧ್ಯ. ಇದರ ಹೊರತಾಗಿ ಲಾಕ್ಡೌನ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ”ಎಂದು ಸೂಚನೆ ನೀಡಿತ್ತು. ಆದರೆ, ಭಾರತ ಸರ್ಕಾರ ಈ ಸೂಚನೆಗೆ ಕ್ಯಾರೆ ಎಂದಿರಲಿಲ್ಲ.
ಪ್ರಸ್ತುತ ಕರೋನಾ ವಿಚಾರದಲ್ಲಿ ಇಂದು ದೇಶದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸಿದರೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸೂಚನೆ ಮತ್ತು The Center For Disease Dynamics, Economics & Policy ನಿರ್ದೇಶಕ ಡಾ| ರಮಣ ಲಕ್ಷ್ಮೀ ನಾರಾಯಣ್ ನೀಡಿದ ವರದಿಯಂತೆಯೇ ಎಲ್ಲವೂ ನಡೆಯುತ್ತಿರುವುದು ಸ್ಪಷ್ಟವಾಗಿದೆ.
ಅಸಲಿಗೆ ಭಾರತದಲ್ಲಿ ಲಾಕ್ಡೌನ್ ಘೋಷಣೆ ಮಾಡಿ ಇಂದಿನ 25 ದಿನಗಳಾಗಿವೆ. ಮೊದಲ ಹಂತದ ಲಾಕ್ಡೌನ್ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಭಾರತದಲ್ಲಿ ಕರೋನಾಗೆ ಮೃತರಾದವರ ಸಂಖ್ಯೆ ಕೇವಲ 09 ಮಾತ್ರ. ಇನ್ನೂ ಸೋಂಕಿತರ ಸಂಖ್ಯೆ 170ರ ಆಸುಪಾಸಿನಲ್ಲಿತ್ತು. ಲಾಕ್ಡೌನ್ನಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂಬುದಾದರೆ ಈಗಾಗಲೇ ಸೋಂಕಿತರ ಸಂಖ್ಯೆ ಇಳಿಮುಖವಾಗಬೇಕಿತ್ತು. ಆದರೆ, ಲಾಕ್ಡೌನ್ ನಡುವೆಯೂ 500 ಕ್ಕೂ ಅಧಿಕ ಸಾವು ಮತ್ತು 16 ಸಾವಿರಕ್ಕೂ ಅಧಿಕ ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ ಎಂದರೆ ಲಾಕ್ಡೌನ್ ನಿರ್ಧಾರದಿಂದಾದ ಲಾಭವೇನು? ಎಂಬುದಕ್ಕೆ ಉತ್ತರವನ್ನು ನೀವೆ ಊಹಿಸಿ.
ಈ ನಡುವೆ ದೇಶದಲ್ಲಿ ಕೇವಲ ಕರೋನಾ ಸೋಂಕಿಗೆ ಒಳಗಾದವರು, ವಿದೇಶದಿಂದ ಭಾರತಕ್ಕೆ ವಾಪಾಸಾದವರು ಅವರ ಕುಟುಂಬದವರು ಮತ್ತು ನೆರೆಹೊರೆಯವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆಯೇ ಹೊರತು ಎಲ್ಲರನ್ನೂ ಈ ಪರೀಕ್ಷೆಗೆ ಒಳಪಡಿಸಿಲ್ಲ. ಏಕೆಂದರೆ ವಿದೇಶದಿಂದ ಬಂದವರಲ್ಲಿ ಮಾತ್ರ ಸೋಂಕು ಇದೆ ಎಂಬ ನಂಬಿಕೆ ಇಲ್ಲಿನ ಆರೋಗ್ಯ ಇಲಾಖೆಯದ್ದು.

ಆದರೆ, ಕರ್ನಾಟಕದಲ್ಲೇ ವಿದೇಶಿಗರ ಜೊತೆ ಯಾವುದೇ ಸಂಪರ್ಕ ಇಲ್ಲದ ಹಳ್ಳಿ ಭಾಗದ 34 ಜನರಲ್ಲಿ ಕರೋನಾ ಸೋಂಕು ತಗುಲಿದ್ದು, ಇದು ಹೇಗೆ ಸಾಧ್ಯ? ಎಂಬುದು ಈಗಲೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಭಾರತದಾದ್ಯಂತ ಹೀಗೆ ಯಾರ ಸಂಪರ್ಕವೂ ಇಲ್ಲದೆ ಸೋಂಕಿಗೆ ಒಳಗಾದವರ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಮೂಲಕ ತಿಳಿಯುವ ಒಂದು ವಿಚಾರ ಎಂದರೆ ಕರೋನಾ ಸೋಂಕು ಈಗಾಗಲೇ ಸಾಮೂದಾಯಿಕವಾಗಿ ಹರಡಿದೆ. ಇದನ್ನು ತಡೆಗಟ್ಟಲು ಇರುವ ಏಕೈಕ ಸಾಧನ ಎಂದರೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವುದು. ಆದರೆ, ಭಾರತದಲ್ಲಿ ಈವರೆಗೆ ಎಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ? ದೇಶದ ವೈದ್ಯಕೀಯ ವ್ಯವಸ್ಥೆ ಎಷ್ಟು ಶಕ್ತಿಹೀನವಾಗಿದೆ ಎಂಬುದು ನಿಮಗೆ ಗೊತ್ತಾ?
ದೇಶದಲ್ಲಿ ಪರೀಕ್ಷೆಗೆ ಒಳಗಾದವರ ಸಂಖ್ಯೆ ಎಷ್ಟು?
ಕೋವಿಡ್-19 ವಿರುದ್ಧ ಇರುವ ಪ್ರಬಲ ಅಸ್ತ್ರವೆಂದರೆ ಟೆಸ್ಟಿಂಗ್. ವೈರಸ್ ಎಲ್ಲಿ ಹರಡುತ್ತಿದೆ ಎಂದು ಪತ್ತೆ ಹಚ್ಚುವಷ್ಟು ವ್ಯಾಪಕ ಮಟ್ಟದಲ್ಲಿ ಪರೀಕ್ಷೆಗಳಾಗಬೇಕು. ಈ ಮೂಲಕ ವೈರಸ್ ಅನ್ನು ಪ್ರತ್ಯೇಕಿಸಿ ನಾಶ ಮಾಡಬೇಕು. ಕರೋನಾವನ್ನು ಬುಡಸಮೇತ ಕಿತ್ತು ಹಾಕಲು ಇರುವ ಏಕೈಕ ಆಯುಧ ಇದೊಂದೆ.
ಆದರೆ, ಭಾರತದಲ್ಲಿ ಪ್ರಸ್ತುತ ಪ್ರತಿ 10 ಲಕ್ಷ ಮಂದಿಗೆ ನಾವು ನಡೆಸುತ್ತಿರುವ ಪರೀಕ್ಷೆಗಳ ಸಂಖ್ಯೆ ಕೇವಲ 199 ಮಾತ್ರ. ಕಳೆದ 72 ದಿನದಲ್ಲಿ ನಾವು ನಡೆಸಿರುವ ಎಲ್ಲಾ ಪರೀಕ್ಷೆಗಳನ್ನ ಲೆಕ್ಕ ಹಾಕಿದರೆ ಪ್ರತೀ ಜಿಲ್ಲೆಗೆ ಸರಾಸರಿ 350 ಜನರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗಿದೆ.
ಹಾಗೆ ನೋಡಿದರೆ 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಈವರೆಗೆ ಕೇವಲ 1.9 ಲಕ್ಷ ಜನರನ್ನು ಮಾತ್ರ ಕರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಕರೋನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರನ್ನು ಮಾತ್ರ ಹುಡುಕಿ ಹುಡುಕಿ ಪರೀಕ್ಷೆ ನಡೆಸಲಾಗುತ್ತಿದೆ. ಕ್ವಾರಂಟೈನ್ನಲ್ಲಿ ಇಡಲಾಗುತ್ತಿದೆ.
ಆದರೆ, ನಮ್ಮಂತೆ-ನಿಮ್ಮಂತೆ ಮನೆಯಲ್ಲೇ ಇರುವ ಕೋಟ್ಯಾಂತರ ಸಾರ್ವಜನಿಕರನ್ನು ಈವರೆಗೆ ಕರೋನಾ ಪರೀಕ್ಷೆಗೆ ಒಳಪಡಿಸಲಾಗಿಲ್ಲ. ಈಗಾಗಲೇ ಸಾಮೂದಾಯಿಕವಾಗಿ ಹರಡಿದೆ ಎನ್ನಲಾಗುತ್ತಿರುವ ಕರೋನಾ ನಾಳೆ ನಮ್ಮಲ್ಲಿ ಅಥವಾ ನಿಮ್ಮಲ್ಲಿ ಕಾಣಿಸಿಕೊಂಡರೂ ಅಚ್ಚರಿ ಇಲ್ಲ. ಆದರೆ, ಪರೀಕ್ಷೆ ನಿಮ್ಮ ಮನೆ ಬಾಗಿಲಿಗೆ ಬರಲ್ಲ. ಹೀಗೆ ಎಲ್ಲರನ್ನೂ ಸಾಮೂಹಿಕವಾಗಿ ಪರೀಕ್ಷೆಗೆ ಒಳಪಡಿಸದೆ ಕರೋನಾವನ್ನು ಬುಡಸಮೇತ ಕಿತ್ತು ಹಾಕುವುದು ಸಾಧ್ಯವೇ ಇಲ್ಲ.
ದೇಶದ ವೈದ್ಯಕೀಯ ಸಾಮರ್ಥ್ಯವೇನು ಗೊತ್ತಾ?
ಭಾರತದಲ್ಲಿ ಮೊದಲ ಸೋಂಕು ಕಾಣಿಸಿಕೊಂಡು ಇಂದಿಗೆ ಬರೋಬ್ಬರಿ ಎರಡು ತಿಂಗಳೇ ಕಳೆದಿದೆ. ಆದರೆ, ಈವರೆಗೆ ದೇಶದಲ್ಲಿ ಸಮರ್ಪಕ ವೆಂಟಿಲೇಟರ್ಗಳಿಲ್ಲ. ಅಷ್ಟೇ ಏಕೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ವೈದ್ಯಕೀಯ ಸಹಾಯಕರು ಕಡ್ಡಾಯವಾಗಿ ಧರಿಸಲೇಬೇಕಿರುವ ಪಿಪಿಇ ಕಿಟ್ಗಳು ಲಭ್ಯವಿಲ್ಲ. ಈಗಾಗಲೇ ಭಾರತದಲ್ಲಿ ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೇ ಕಾರಣಕ್ಕೆ ಎರಡು ತಿಂಗಳ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ಹೆಚ್ಚು ವೆಂಟಿಲೇಟರ್ ಖರೀದಿಗೆ ಮುಂದಾಗಿವೆ. ಅಲ್ಲದೆ, ಕೇಂದ್ರ ಸರ್ಕಾರ ಇತ್ತೀಚೆಗೆ ಚೀನಾದಿಂದ 6.5 ಲಕ್ಷ ರಾಪಿಡ್ ಟೆಸ್ಟಿಂಗ್ ಕಿಟ್ಗೆ ಬೇಡಿಕೆ ಇಟ್ಟಿದೆ. ಚೀನಾ ದೇಶ ಪ್ರಸ್ತುತ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ವಿಶ್ವದ ಮುಖ್ಯ ಪೂರೈಕೆದಾರ. ಆದರೆ, ಏಪ್ರಿಲ್ 5 ರಂದು ಭಾರತಕ್ಕೆ ಆಗಮಿಸಿದ 1,70,000 ಪಿಪಿಇ ಕಿಟ್ಗಳಲ್ಲಿ ಸುಮಾರು 50,000 ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿದೆ. 30,000 ಮತ್ತು 10,000 ಪಿಪಿಇ ಕಿಟ್ಗಳನ್ನು ಹೊಂದಿರುವ ಎರಡು ಸಣ್ಣ ಸರಕುಗಳು ಸಹ ಪರೀಕ್ಷೆಗಳಲ್ಲಿ ವಿಫಲವಾಗಿವೆ. ಕಳಪೆ ಗುಣಮಟ್ಟದ ಕಿಟ್ಗಳನ್ನು ಚೀನಾ ನೀಡಿದ್ದು ಭಾರತ ಸರ್ಕಾರವೂ ಅದನ್ನೇ ಬಳಸಲು ಮುಂದಾಗಿದೆ ಎಂದು ಇತ್ತೀಚೆಗೆ ದೇಶದ ಪ್ರಮುಖ ದೈನಿಕ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಭಾರತ ಎಡವಿದ್ದು ಎಲ್ಲಿ?
ಚೀನಾದಲ್ಲಿ ದೇಶದಲ್ಲಿ ಮೊಟ್ಟ ಮೊದಲಿಗೆ ಕರೋನಾ ವೈರಸ್ ಕಾಣಿಸಿಕೊಂಡಿದ್ದು ಕಳೆದ ವರ್ಷದ ಡಿಸೆಂಬರ್ ನಲ್ಲಿ. ಈ ವೇಳೆ ಅನೇಕ ತಜ್ಞರು-ವೈದ್ಯಕೀಯ ಕ್ಷೇತ್ರದವರು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು. ಸ್ವತಃ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ಕರೋನಾ ವಿರುದ್ಧ ಎಚ್ಚರಿಕೆಯ ಸಂದೇಶ ನೀಡಿದ್ದರು.
ಆಗಲೇ ಕೇಂದ್ರ ಸರ್ಕಾರ ಎಚ್ಚೆತ್ತು ತೈವಾನ್ ದೇಶದ ಮಾದರಿಯಲ್ಲಿ ಜನವರಿ ತಿಂಗಳಲ್ಲೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ತಡೆ ಒಡ್ಡಿ, ವಿಮಾನ ನಿಲ್ದಾಣದ ಎಲ್ಲಾ ಪ್ರಯಾಣಿಕರನ್ನೂ ಕರೋನಾ ಪರೀಕ್ಷೆಗೆ ಒಳಪಡಿಸಿದ್ದರೆ ಇಂದು ಭಾರತ ಹೀಗೆ ಪರಿತಪಿಸುವ ಅಗತ್ಯವಿರಲಿಲ್ಲ. ಆದರೆ, ಕೋಟೆ ಕೊಳ್ಳೆ ಹೋದ ನಂತರ ದಿಡ್ಡಿ ಬಾಗಿಲು ಮುಚ್ಚಿ ಏನು ಪ್ರಯೋಜನ? ಎಂಬಂತಾಗಿದೆ ಭಾರತದ ಸದ್ಯದ ಪರಿಸ್ಥಿತಿ.