ಮಲೆನಾಡಿನಲ್ಲಿ ಶುಂಠಿ ಬಿತ್ತನೆ ಹಂಗಾಮು. ಮೈಮುರಿದು ಮಣ್ಣಿನ ಕೆಲಸ ಮಾಡಿದ ಕುಗ್ರಾಮದ ರೈತ ಸುರೇಶ ಹತ್ತಿರದ ಪೇಟೆಗೆ ಹೋಗಿ ಮೈ-ಕೈ ನೋವಿನ ಮಾತ್ರೆ ಕೊಡಿ ಎಂದು ಮೆಡಿಕಲ್ಸ್ ನವರಿಗೆ ಕೇಳಿದ. ಲಾಕ್ ಡೌನ್ ಇರೋದ್ರಿಂದ ಮುಂಜಾಗ್ರತೆಯಾಗಿ ನಾಲ್ಕು ಮಾತ್ರೆ ಮನೆಯಲ್ಲಿರಲಿ ಎಂದು ಆತ, ಹತ್ತು ಮಾತ್ರೆ ಕೇಳಿದರೆ, ಅಂಗಡಿಯವರು ಕೊಟ್ಟದ್ದು ಐದು ಮಾತ್ರ!
“ಯಾಕ್ರಿ, ಹತ್ತು ಕೊಡ್ರಿ, ಪದೇಪದೇ ಬರೋಕಾಗಲ್ಲ ಮಾರಾಯ್ರೆ, ಲಾಕ್ ಡೌನ್ ಬೇರೆ…” ಎಂಬ ಸುರೇಶನ ಮನವಿಗೆ, “ಇಲ್ರೀ,.. ಇರೋದು ಇಷ್ಟು ನೋಡಿ,.. ಇದರಲ್ಲೇ ಇನ್ನು ಒಂದು ವಾರ ಕಾಲ ಹಾಕಬೇಕು. ವಾರಕ್ಕೊಂದು ಸರ್ತಿ ಮೆಡಿಸಿನ್ ಬರುತ್ತೆ, ಇನ್ನು ಒಂದು ವಾರದ ಮೇಲೆ ಅದೂ ಬರೋದು ಗ್ಯಾರಂಟಿ ಇಲ್ಲ. ಹಾಂಗಾಗಿ ತೀರಾ ತುರ್ತು ಇಲ್ಲ ಅಂದ್ರೆ ಜಾಸ್ತಿ ತಗೋಬ್ಯಾಡ್ರಿ. ಬೇರೆಯವರಿಗೂ ಬೇಕಲ್ಲ” ಎಂದು ಅಂಗಡಿಯವರು ಪರಿಸ್ಥಿತಿ ವಿವರಿಸಿದರು!
ಹಾಗೆ ನೋಡಿದರೆ, ಇದು ಬರೀ ಮಲೆನಾಡಿನ ಮಟ್ಟಿಗೆ ಮಾತ್ರವಲ್ಲ; ಬಹುತೇಕ ದೇಶಾದ್ಯಂತ ಔಷಧಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಗಡಿಕಲ್ಲು ಗ್ರಾಮಪಂಚಾಯ್ತಿ ವ್ಯಾಪ್ತಿಯ 65 ವರ್ಷದ ಹಿರಿಯ ಮಹಿಳೆ ಔಷಧಿಗಾಗಿ 17 ಕಿ.ಮೀ ದೂರದ ಗುತ್ತಿಗಾರು ಗ್ರಾಮಕ್ಕೆ ನಡೆದುಕೊಂಡೇ ಹೋಗಿ ಬಂದ ಘಟನೆ ಕೂಡ ವರದಿಯಾಗಿದೆ.
ಒಂದು ಕಡೆ ಔಷಧ ಮತ್ತಿತರ ಜೀವರಕ್ಷಕ ಪದಾರ್ಥಗಳಿಗಾಗಿ ಜನರು ಹತ್ತಾರು ಕಿ.ಮೀ ದೂರಕ್ಕೆ ನಡೆದುಕೊಂಡು, ಇಲ್ಲವೇ ಸ್ವಂತದ ವಾಹನದಲ್ಲಿ ಪರದಾಡಬೇಕಾಗಿದೆ. ಮತ್ತೊಂದು ಕಡೆ ಅಷ್ಟು ಹರಸಾಹಸ ಮಾಡಿಯೂ ಅಗತ್ಯ ಔಷಧಿಗಳು, ಕನಿಷ್ಠ ಒಂದು ತಿಂಗಳಿಗಾಗುವಷ್ಟಾದರೂ ಸಂಗ್ರಹಿಸಿಕೊಳ್ಳಲು(ನಿತ್ಯಬಳಕೆಯ ಔಷಧಿ) ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ! ಈ ನಡುವೆ ಮುಂದಿನ ಒಂದೆರಡು ವಾರಗಳಲ್ಲಿ ಲಾಕ್ ಡೌನ್ ನಿಂದ ಔಷಧ ಉತ್ಪಾದನೆ ಮತ್ತು ಅದಕ್ಕೆ ಸಂಬಂಧಪಟ್ಟ ಚಟುವಟಿಕೆಗಳಿಗೆ ವಿನಾಯ್ತಿ ನೀಡಿ, ಉತ್ಪಾದನಾ ಚಟುವಟಿಕೆಗೆ ಪೂರಕ ಕ್ರಮಗಳನ್ನು ಸರ್ಕಾರ ಕೈಗೊಳ್ಳದೇ ಹೋದಲ್ಲಿ, ಔಷಧಿಗಳ ಕೊರತೆ ಇನ್ನಷ್ಟು ಬಿಗಡಾಯಿಸಲಿದೆ. ಕೆಲವು ಪ್ರದೇಶಗಳಲ್ಲಿ ಈಗಾಗಲೇ ಅಗತ್ಯ ಪ್ರಮಾಣದಲ್ಲಿ ಲಭ್ಯವಿರದ ಕೆಲವು ಔಷಧಗಳು, ಇನ್ನು ಅಲಭ್ಯವಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

ದೇಶಾದ್ಯಂತ ಔಷಧ, ವೈದ್ಯಕೀಯ ಸಲಕರಣೆ-ಉಪಕರಣಗಳ ಉತ್ಪಾದನೆ ಮತ್ತು ಸಾಗಣೆಯ ಮೇಲೆ ಲಾಕ್ ಡೌನ್ ಬೀರಿರುವ ಪರಿಣಾಮದ ಹಿನ್ನೆಲೆಯಲ್ಲಿ ಕೇಂದ್ರ ಫಾರ್ಮಸ್ಯೂಟಿಕಲ್ಸ್ ಇಲಾಖೆ, ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಕೂಡಲೇ ಔಷಧ ತಯಾರಿಕಾ ಕಂಪನಿಗಳು ಮತ್ತು ಅವುಗಳಿಗೆ ಪೂರಕವಾಗಿರುವ ಚಟುವಟಿಕೆಗಳು ಪುನರಾರಂಭವಾಗುವಂತೆ ಮಾಡದೇ ಇದ್ದಲ್ಲಿ ಇನ್ನು ಕೆಲವೇ ದಿನಗಳಲ್ಲೇ ದೇಶದಲ್ಲಿ ಔಷಧಗಳ ಭಾರೀ ಬಿಕ್ಕಟ್ಟು ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದೆ. ‘ದ ಹಿಂದೂ’ ಈ ಕುರಿತು ವರದಿ ಮಾಡಿದ್ದು, “ಸದ್ಯ ಲಾಕ್ ಡೌನ್ ಕಾರಣದಿಂದಾಗಿ ದೇಶದ ಔಷಧ ಮತ್ತು ಫಾರ್ಮಾಸ್ಯೂಟಿಕಲ್ಸ್ ಕಂಪನಿಗಳೂ ತಮ್ಮ ಸಹಜ ಸಾಮರ್ಥ್ಯದ ಶೇ.20-30ರಷ್ಟು ಪ್ರಮಾಣದಲ್ಲಿ ಉತ್ಪಾದನೆ ನಡೆಸುತ್ತಿವೆ. ಹಾಗಾಗಿ ಮುಂದಿನ ವಾರದ ಹೊತ್ತಿಗೆ ದೇಶದ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಕೊರತೆ ತಲೆದೋರಲಿದೆ. ಆ ಹಿನ್ನೆಲೆಯಲ್ಲಿ ಆ ವಲಯದ ತಯಾರಕರು ತಮ್ಮ ಪೂರ್ಣ ಸಾಮರ್ಥ್ಯದ ಮಟ್ಟಕ್ಕೆ ಉತ್ಪಾದನೆ ಪುನರಾರಂಭಿಸಲು ಅನುಕೂಲಕರ ವಾತಾವರಣ ಮತ್ತು ವ್ಯವಸ್ಥೆ ಖಾತ್ರಿಪಡಿಸಲು ಗೃಹ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಫಾರ್ಮಸ್ಯೂಟಿಕಲ್ಸ್ ಇಲಾಖೆ ಕಾರ್ಯದರ್ಶಿ ಪಿ ಡಿ ವಘೇಲಾ ಅವರು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದೆ.
ದೇಶದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಔಷಧಗಳ ಮತ್ತು ವೈದ್ಯಕೀಯ ಸಲಕರಣೆಗಳ ಪೈಕಿ ಸುಮಾರು ಅರ್ಧದಷ್ಟು ವಿವಿಧ ದೇಶಗಳಿಗೆ ರಫ್ತಾಗುತ್ತಿವೆ. ಹಾಗಾಗಿ, ದೇಶಿ ಮಾರುಕಟ್ಟೆಯ ಜೊತೆ, ವಿದೇಶಿ ಬೇಡಿಕೆಯ ಒತ್ತಡವೂ ಇದೆ. ಆ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಂಚಿನ ದಿನಗಳ ಮಟ್ಟದಲ್ಲಿ ಕೂಡಲೇ ಉತ್ಪಾದನೆ ಆರಂಭವಾಗದೇ ಇದ್ದಲ್ಲಿ ಸ್ಥಳೀಯವಾಗಿ ಭಾರೀ ಕೊರತೆ ತಲೆದೋರಲಿದೆ. ಹಾಗಾಗಿ ಅಂತಹ ಅನಿವಾರ್ಯತೆ ಸೃಷ್ಟಿಯಾಗದಂತೆ ತಡೆಯುವುದು ಈಗ ಬಹಳ ತುರ್ತಾಗಿ ಆಗಬೇಕಾದ ಕೆಲಸ ಎಂದೂ ಗೃಹ ಸಚಿವಾಲಯದ ಗಮನ ಸೆಳೆಯಲಾಗಿದೆ.
ಪ್ರಧಾನಿ ಮೋದಿಯವರು ಮಾರ್ಚ್ 24ರಂದು ಕರೆ ನೀಡಿದ ಮೂರು ವಾರಗಳ ಲಾಕ್ ಡೌನ್ ನಿಂದ ವಾಸ್ತವವಾಗಿ ಔಷಧ, ವ್ಯಾಕ್ಸಿನ್, ಮಾಸ್ಕ್ ಮತ್ತು ಸಂಬಂಧಪಟ್ಟ ಪೂರಕ ಸಾಮಗ್ರಿ ತಯಾರಿಕೆ ಸೇರಿದಂತೆ ಜೀವರಕ್ಷಕ ಉತ್ಪನ್ನಗಳ ತಯಾರಿಕಾ ಉದ್ಯಮಗಳಿಗೆ ವಿನಾಯ್ತಿ ನೀಡಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಹಲವು ರಾಜ್ಯಗಳು ಸರಕು ಸಾಗಣೆ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದವು. ಹಾಗಾಗಿ ಔಷಧ ಮತ್ತು ವೈದ್ಯಕೀಯ ಸಲಕರಣೆ ತಯಾರಿಕಾ ಚಟುವಟಿಕೆ ಮತ್ತು ಉತ್ಪಾದನೆಯಾದ ಸರಕು ಸಾಗಣೆಯ ಮೇಲೆ ಆ ನಿರ್ಬಂಧ ವ್ಯತಿರಿಕ್ತ ಪರಿಣಾಮ ಬೀರಿತ್ತು. ಜೊತೆಗೆ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಉದ್ಯೋಗಿಗಳು ಕೂಡ ಕೆಲಸಕ್ಕೆ ಹಾಜರಾಗದ ಸ್ಥಿತಿ ನಿರ್ಮಾಣವಾಯಿತು.
ಹಾಗಾಗಿ ಒಂದು ಕಡೆ ಕಚ್ಛಾ ಸಾಮಗ್ರಿ ಕೊರತೆ, ಮೊತ್ತೊಂದು ಕಡೆ ಕಾರ್ಮಿಕರು ಮತ್ತು ಸಿಬ್ಬಂದಿಯ ಕೊರತೆ, ಉತ್ಪಾದನೆಯಾದ ಸರಕು ಸಾಗಣೆಯ ಬಿಕ್ಕಟ್ಟು, ಪ್ಯಾಕಿಂಗ್ ಸಾಮಗ್ರಿ ಸೇರಿದಂತೆ ಬಿಡಿಭಾಗಗಳ ಪೂರೈಕೆ ಉದ್ಯಮಗಳ ಸ್ಥಗಿತ, ಕೊರಿಯರ್ ಸೇವೆ ಸ್ಥಗಿತ ಮುಂತಾದ ಹಲವು ಕಾರಣಗಳಿಂದಾಗಿ ಔಷಧ ಕಂಪನಿಗಳ ಬಹುತೇಕ ಚಟುವಟಿಕೆ ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಯಿತು. ಕೇಂದ್ರ ಸರ್ಕಾರ ಈ ವಲಯದ ಕೈಗಾರಿಕೆ ಮತ್ತು ಉದ್ಯಮ ಚಟುವಟಿಕೆಗೆ ಲಾಕ್ ಡೌನ್ ನಿಂದ ವಿನಾಯ್ತಿ ನೀಡಿದ್ದರೂ, ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳ ಮಟ್ಟದಲ್ಲಿ ಸರಿಯಾದ ಗ್ರಹಿಕೆ ಮತ್ತು ಮುಂದಾಲೋಚನೆ ಇಲ್ಲದೆ; ಉದ್ಯಮಕ್ಕೆ ಪೂರಕವಾದ ಮತ್ತು ಅನಿವಾರ್ಯವಾದ ಕೊರಿಯರ್, ಟ್ರಕ್ ಸೇವೆ, ಉದ್ಯೋಗಿಗಳ ಓಡಾಟ ಮುಂತಾದ ಚಟುವಟಿಕೆಗಳಿಗೂ ಲಾಕ್ ಡೌನ್ ಹೇರಿದ್ದರಿಂದ ಸದ್ಯ ದೇಶದಾದ್ಯಂತ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ತೀವ್ರ ಬಿಕ್ಕಟ್ಟಿನ ಅಪಾಯ ಎದುರಾಗಿದೆ.
ಹಾಗಾಗಿ ಕಾರ್ಮಿಕರ ಕೊರತೆ, ಸರಕು ಸಾಗಣೆ ಬಿಕ್ಕಟ್ಟು, ಉತ್ಪಾದನೆಯಾದ ಸರಕು ಸಾಗಣೆಗೆ ಕೊರಿಯರ್ ಸೇವೆ ಲಭ್ಯವಿಲ್ಲದೇ ಇರುವುದು ಮತ್ತು ಪೂರಕ ಹಲವು ಉದ್ಯಮಗಳ ಚಟುವಟಿಕೆಯನ್ನು ಅಗತ್ಯವಸ್ತು ಸೇವೆ ಎಂದು ಪರಿಗಣಿಸದೇ ರಾಜ್ಯ ಸರ್ಕಾರಗಳು ಅವುಗಳನ್ನು ಮುಚ್ಚಿಸಿರುವುದು ಸೇರಿ ಹಲವು ವಿಷಯಗಳಲ್ಲಿ ಕೇಂದ್ರ ಗೃಹ ಸಚಿವಾಲಯ ಕೂಡಲೇ ರಾಜ್ಯಗಳಿಗೆ ಮತ್ತು ಅಲ್ಲಿನ ಪೊಲೀಸರಿಗೆ ಸರಿಯಾದ ಸೂಚನೆ ನೀಡಿ ವಲಯದ ಮುಕ್ತ ಕಾರ್ಯನಿರ್ವಹಣೆಗೆ ಅವಕಾಶ ನೀಡಬೇಕು ಮತ್ತು ಪೊಲೀಸರ ಭೀತಿಯಿಂದ ಕೆಲಸಕ್ಕೆ ಬರಲು ಹಿಂಜರಿಯುತ್ತಿರುವ ಕಾರ್ಮಿಕರು ಮತ್ತು ಲಾರಿ ಚಾಲಕರಿಗೆ ಧೈರ್ಯತುಂಬುವ ನಿಟ್ಟಿನಲ್ಲಿ ಅವರಿಗೆ ವಿಶೇಷ ಪ್ರೋತ್ಸಾಹಕ ಕ್ರಮಗಳನ್ನೂ ಸರ್ಕಾರ ಘೋಷಿಸಬೇಕು. ಆ ಮೂಲಕ ಕೂಡಲೇ ಔಷಧ ಉತ್ಪಾದನೆ ವ್ಯಾಪಕ ಪ್ರಮಾಣದಲ್ಲಿ ಆಗುವಂತೆ ನೋಡಿಕೊಳ್ಳಬೇಕು ಎಂದು ಫಾರ್ಮಸ್ಯೂಟಿಕಲ್ಸ್ ಇಲಾಖೆ ಹೇಳಿದೆ.
ಹಾಗೆ ನೋಡಿದರೆ, ಕರೋನಾ ವೈರಾಣು ಮಹಾಮಾರಿಯ ಹಿನ್ನೆಲೆಯಲ್ಲಿ ಚೀನಾದಲ್ಲಿ ಉದ್ಯಮ ಚಟುವಟಿಕೆ ಸ್ಥಗಿತವಾಗಿದೆ. ಭಾರತದ ಫಾರ್ಮಸ್ಯೂಟಿಕಲ್ಸ್ ವಲಯ ಕಚ್ಛಾ ವಸ್ತುವಿಗಾಗಿ ಚೀನಾದ ಮೇಲೆ ಬಹಳಷ್ಟು ಅವಲಂಬಿಸಿದೆ. ಹಾಗಾಗಿ ಚೀನಾದ ಈ ಬಿಕ್ಕಟ್ಟು ಭಾರತದ ಔಷಧ ಉತ್ಪಾದನೆಗೆ ಪೆಟ್ಟು ನೀಡಲಿದೆ. ಆಗ ದೇಶದ ಔಷಧ ಬೇಡಿಕೆ ಮತ್ತು ಪೂರೈಕೆಯ ಸರಪಳಿ ತುಂಡಾಗಬಹುದು. ಪರಿಣಾಮವಾಗಿ ದೇಶ ಕೆಲವೇ ದಿನಗಳಲ್ಲಿ ಜೀವರಕ್ಷಕ ಔಷಧಗಳ ದೊಡ್ಡ ಹಾಹಾಕಾರಕ್ಕೆ ಸಾಕ್ಷಿಯಾಗಬಹುದು ಎಂದು ಫೆ.19ರಷ್ಟು ಹಿಂದೆಯೇ ಹಾಂಗ್ ಕಾಂಗ್ ಮೂಲದ ಹೈಟಾಂಗ್ ಇಂಟರ್ ನ್ಯಾಷನಲ್ ಸೆಕ್ಯುರಿಟಿ ಗ್ರೂಪ್ ಎಂಬ ಷೇರುಮಾರುಕಟ್ಟೆ ಸಂಶೋಧನಾ ಸಂಸ್ಥೆ ವರದಿ ಹೇಳಿತ್ತು.
ಕರೋನಾದಿಂದಾಗಿ ಚೀನಾ ಉತ್ಪಾದನೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಬಹುತೇಕ ಭಾರತೀಯಾ ಫಾರ್ಮಾ ಕಂಪನಿಗಳಿಗೆ ಕಚ್ಛಾವಸ್ತು ಕೊರತೆ ತಲೆದೋರಲಿದೆ. ಈ ಅಪಾಯದಿಂದ ಪಾರಾಗಬಹುದಾದ ಒಂದೇ ಒಂದು ಭಾರತೀಯ ಕಂಪನಿ ಕೂಡ ಕಾಣುತ್ತಿಲ್ಲ. ಅಷ್ಟರಮಟ್ಟಿಗೆ ಭಾರತೀಯ ಫಾರ್ಮಾ ವಲಯ ಚೀನಾದ ಕಚ್ಛಾವಸ್ತುವಿನ ಮೇಲೆ ಅವಲಂಬಿತವಾಗಿದೆ. ಆ ಹಿನ್ನೆಲೆಯಲ್ಲಿ ಮಾರ್ಚ್ ಮಧ್ಯಭಾಗದ ಹೊತ್ತಿಗೆ ಭಾರತದಲ್ಲಿ ಔಷಧಗಳ ಅಭಾವ ತಲೆದೋರಬಹುದು ಎಂದು ಆ ಸಂಸ್ಥೆ ಹೇಳಿದ್ದಾಗಿ, ‘ದ ಪ್ರಿಂಟ್’ ವರದಿ ಮಾಡಿತ್ತು(ಫೆ.19). ಎದುರಾಗಬಹುದಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ
ಆದರೆ, ಫೆಬ್ರವರಿ ಮೂರನೇ ವಾರಂತ್ಯದ ಹೊತ್ತಿಗೆ ಬಯೋಕಾನ್ ನ ಕಿರಣ್ ಮಜುಂದಾರ್ ಶಾ, ರೆಡ್ಡಿ ಲಾಬ್ ನ ಸತೀಶ್ ರೆಡ್ಡಿ ಸೇರಿದಂತೆ ದೇಶದ ಪ್ರಮುಖ ಫಾರ್ಮಾ ಉದ್ಯಮಿಗಳು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರನ್ನು ಭೇಟಿಯಾಗಿ ಚರ್ಚೆಯನ್ನೂ ನಡೆಸಿದ್ದರು. ಅದಾದ ಒಂದು ತಿಂಗಳ ಬಳಿಕ ಮಾರ್ಚ್ 21ರಂದು ಪತ್ರಿಕಾ ಹೇಳಿಕೆ ನೀಡಿದ್ದ ದೇಶದ 24 ಪ್ರಮುಖ ಫಾರ್ಮಾ ಕಂಪನಿಗಳ ಒಕ್ಕೂಟ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಲೆಯನ್ಸ್(ಐಪಿಎ), ಮುಂದಿನ ಹಲವು ತಿಂಗಳವರೆಗೆ ಅಗತ್ಯ ಪ್ರಮಾಣದ ಔಷಧ, ಕಚ್ಛಾಸಾಮಗ್ರಿ ಮತ್ತು ಪೂರೈಕೆ ವ್ಯವಸ್ಥೆಯನ್ನು ಸಜ್ಜುಗೊಳಿಸಿಕೊಂಡಿದ್ದು, ಯಾವುದೇ ಕೊರತೆ ಅಥವಾ ಬಿಕ್ಕಟ್ಟು ತಲೆದೋರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿತ್ತು(ಬ್ಯುಸಿನೆಸ್ ಟುಡೆ ವರದಿ, ಮಾ.21).
ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕ, ಯುರೋಪ್ ಸೇರಿದಂತೆ ಹಲವು ದೇಶಗಳ ಔಷಧ ಮತ್ತು ವೈದ್ಯಕೀಯ ಸಾಮಗ್ರಿ ಉತ್ಪಾದನೆಗೆ ಸಂಬಂಧಿಸಿದ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ -19ರ ಪರಿಣಾಮಗಳು ಮತ್ತು ಅದರಿಂದಾಗಿ ಔಷಧ ಉತ್ಪಾದನೆ ಮತ್ತು ಸರಬರಾಜಿನ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ನಿರಂತರ ಮಾಹಿತಿ ವಿನಿಮಯದಲ್ಲಿ ತೊಡಗಿದ್ದೇವೆ. ಹಾಗಾಗಿ ಎಂಥಹದ್ದೇ ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ಫಾರ್ಮಾ ವಲಯ ಸಜ್ಜಾಗಿದೆ ಎಂದೂ ಹೇಳಿದ್ದರು.
ಅಂತಹ ವಿಶ್ವಾಸ ವ್ಯಕ್ತಪಡಿಸಿ ಕೇವಲ 20 ದಿನದಲ್ಲಿ ಪರಿಸ್ಥಿತಿ ತಿರುವುಮುರುವಾಗಿದೆ ಎಂದು ಸ್ವತಃ ಕೇಂದ್ರ ಸರ್ಕಾರವೇ ಹೇಳಿದೆ! ಅಂದರೆ; ಲೆಕ್ಕಾಚಾರ ತಪ್ಪಿದ್ದೆಲ್ಲಿ? ಫಾರ್ಮಾ ವಲಯದ ವಿಶ್ವಾಸ ಅತಿ ಆತ್ಮವಿಶ್ವಾಸದ ಹೇಳಿಕೆಯಾಗಿತ್ತೆ? ಅಥವಾ ದೇಶದ ಹಿತಾಸಕ್ತಿಗಿಂತ ವಿದೇಶಿ ವಿನಿಮಯದ ರಫ್ತು ಆಸಕ್ತಿಯೇ ಫಾರ್ಮಾ ಕಂಪನಿಗಳ ಆದ್ಯತೆಯಾದ ಪರಿಣಾಮ ಇದುವೇ? ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಇಂತಹ ಎಚ್ಚರಿಕೆ, ವಿಶ್ವಾಸಗಳ ಹೊರತಾಗಿಯೂ ಆತಂಕ ಮತ್ತು ಅನುಮಾನದ ಸ್ಥಿತಿ ಈ ನಿರ್ಮಾಣವಾಗಿದೆ. ಜೊತೆಗೆ ಪರಿಸ್ಥಿತಿ ಕೈಮೀರಿದೆ. ದೇಶದ ಆಂತರಿಕ ಬಳಕೆಯ ಮೇಲೆ ಪರಿಣಾಮ ಬೀರತೊಡಗಿದ್ದು ಸಣ್ಣ ಸಣ್ಣ ಊರುಗಳಲ್ಲಿಯೂ ಔಷಧ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದೆ. ಅಂಗಡಿಯ ರ್ಯಾಕುಗಳು ಖಾಲಿಯಾಗತೊಡಗಿವೆ. ಆ ಹಿನ್ನೆಲೆಯಲ್ಲಿಯೇ ಇದೀಗ ಸ್ವತಃ ಕೇಂದ್ರ ಫಾರ್ಮಾಸ್ಯೂಟಿಕಲ್ ಇಲಾಖೆಯೇ ಪರಿಸ್ಥಿತಿಯ ಗಂಭೀರತೆಯನ್ನು ಲಾಕ್ ಡೌನ್ ಹೇರಿರುವ ಗೃಹ ಇಲಾಖೆಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದೆ. ಈಗಲೂ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳದೇ ಹೋದರೆ, ಮುಂದಿನ ಕೆಲವೇ ದಿನಗಳಲ್ಲಿ ಕರೋನಾ ಸಾವಿನ ಜೊತೆ, ಸಕಾಲದಲ್ಲಿ ಅಗತ್ಯ ಔಷಧ ದೊರೆಯದೆ ಜನ ಸಾವಿನ ದವಡೆಗೆ ತುತ್ತಾಗುವ ಸಾಧ್ಯತೆ ತಳ್ಳಿಹಾಕಲಾಗದು!