ನಮ್ಮ ದೇಶದಲ್ಲಿ ಬಹುದೊಡ್ಡ ಸಮುದಾಯ ಇಂದಿಗೂ ಕೃಷಿಯನ್ನೇ ಅವಲಂಬಿಸಿದೆ. ವ್ಯವಸಾಯ ದೇಶದ ಬೆನ್ನೆಲುಬು ಎಂಬುದು ಕರೋನಾ ಸಮಯದಲ್ಲಿಯೂ ಸಾಬೀತಾಗಿದೆ. ಕೃಷಿಯನ್ನ ನಾವು ಮರೆತಿದ್ದರೆ ಇಡೀ ದೇಶ ಕರೋನಾ ಲಾಕ್ಡೌನ್ಲ್ಲಿ ಕಂಗಾಲಾಗಬೇಕಿತ್ತು. ಮಳೆ ಬರಲಿ, ಬರಗಾಲವಿರಲಿ, ನೆರೆಹಾವಳಿಯಿಂದ ಜೀವನ ಕೊಚ್ಚಿಹೋಗಲಿ ರೈತರು ಮುಂದಿನ ವರ್ಷ ತಮ್ಮ ಬದುಕು ಹೇಗೆ ಎಂಂದು ಚಿಂತನೆ ಮಾಡುತ್ತಲೇ ಇರುತ್ತಾರೆ. ಕಳೆದ ವರ್ಷ ಭೀಕರ ಪ್ರವಾಹಗಳಿಗೆ ರಾಜ್ಯದ ಮುಕ್ಕಾಲು ಭಾಗ ರೈತರು ಸಂಕಷ್ಟ ಎದುರಿಸಿದರು. ಹಿಂಗಾರು ಮಳೆ ಆರಂಭವಾಗುತ್ತಿದ್ದಂತೆ ಕೆಲವು ರೈತರು ಬೇಸಿಗೆ ಬೆಳೆಗೆ ಮುಖ ಮಾಡಿದರು. ಅದರಲ್ಲೂ ಒಣ ಭೂಮಿಯಲ್ಲಿಯೂ ಜೋಳ, ಭತ್ತವನ್ನ ಬೆಳೆದರು. ಶುಂಠಿ ಬೆಳೆಯನ್ನ ಭೂಮಿಯಲ್ಲೇ ಬಿಟ್ಟಿದ್ದರು. ಕಲ್ಲಂಗಡಿ ಹಣ್ಣು ಬಾಡದಿರಲಿ ಎಂದು ಹುಲ್ಲು ಮುಚ್ಚಿದರು. ತರಕಾರಿ ಮಡಿಗಳಲ್ಲೇ ಬಲಿತು ಒಣಗತೊಡಗಿತು. ಕರೋನಾ ಹೆಮ್ಮಾರಿ ರೈತರ ಬದುಕನ್ನ ಕಸಿದುಕೊಂಡಿತು. ಹೊಲದಲ್ಲಿದ್ದ ಬಹುತೇಕ ಬೆಳೆಗಳನ್ನ ಮಣ್ಣು ಮಾಡಿ ಮುಂಗಾರಿಗೆ ಸಿದ್ಧವಾಗಿದ್ದಾರೆ. ಕರೋನಾ ಕಟ್ಟಳೆಗಳನ್ನ ಪಾಲಿಸಿಕೊಂಡು ಹೊಲಗಳನ್ನ ಹಸನುಮಾಡುತ್ತಿದ್ದಾರೆ. ದುರಂತ ಅಂದರೆ ಸರ್ಕಾರ ಮಾತ್ರ ರೈತರ ಪರವಾಗಿ ಒಂದೇ ಒಂದು ಗಟ್ಟಿ ಘೋಷಣೆಯನ್ನೂ ಹೊರಡಿಸಿಲ್ಲ. ಕೃಷಿ ಸಚಿವ ಬಿ ಸಿ ಪಾಟೀಲ್ ದಿನಕ್ಕೆ ಮೂರು ಜಿಲ್ಲೆಗಳನ್ನ ಪ್ರವಾಸ ಮಾಡಿ ವಾರದಲ್ಲಿ ಇಡೀ ರಾಜ್ಯ ಪ್ರವಾಸ ಮುಗಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಕಳೆದ ವಾರ ಹಿರೇಕೇರೂರಿನಿಂದ ಫೀಲ್ಡ್ಗೆ ಇಳಿದ ಕೃಷಿ ಸಚಿವರು ಧಾರವಾಡಕ್ಕೆ ಹೊರಟರು. ಅಲ್ಲಿ ಪತ್ರಿಕಾಗೋಷ್ಟಿ ಕರೆದು ಸಿದ್ಧಪಠ್ಯವನ್ನ ಮಂಡಿಸಿ ಮುಂದೆ ಬೆಳಗಾವಿ, ಬಾಗಲಕೋಟೆ, ಬಿಜಾಪುರ ಕಲಬುರಗಿ ಹೀಗೆ ಹೋದಲ್ಲೆಲ್ಲಾ ಇದೇ ಭಾಷಣ. ಒಂದೋ ಎರಡೋ ಸಾಲುಗಳು ಮಾತ್ರ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಬದಲಾಗುತ್ತಿದ್ದವು. ಉದಾಹರಣೆಗೆ ಕೊಪ್ಪಳಕ್ಕೆ ಬಂದರು. ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗಬಾರದು. ಎಲ್ಲಾ ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಕೃಷಿ ಉಪಕರಣಗಳ ಅಂಗಡಿಗೆ ನಿರ್ಭಂದ ಇಲ್ಲ. ಎಪಿಎಂಸಿ ಮಾರುಕಟ್ಟೆ ಆರಂಭವಾಗಿದೆ, ಇಲ್ಲವಾದರೆ ಆರಂಭವಾಗಲಿದೆ. ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದೆ ಎಂದು ಸಿದ್ಧಪಠ್ಯವನ್ನ ಮಾಧ್ಯಮದವರ ಮುಂದೆ ಓದಿದರು. ಅದರ ಜೊತೆ ಕೊಪ್ಪಳ ಜಿಲ್ಲೆಯಾದ್ದರಿಂದ ಭತ್ತದ ಬಗ್ಗೆ ನಾಲ್ಕು ಸಾಲುಗಳನ್ನ ಹೇಳಿದರು. ಅಲ್ಲಿಗೆ ಆ ಜಿಲ್ಲೆ ಮುಗೀತು. ಅಲ್ಲಿಂದ ಗದಗಕ್ಕೆ ಹೋದರು ಅಲ್ಲೂ ಅದೇ ಸಿದ್ಧಪಠ್ಯ ಓದಿದರು. ಅಲ್ಲಿಂದ ಹಾವೇರಿಯಲ್ಲೂ ಅದೇ ಕೆಲಸ.
ಶಿವಮೊಗ್ಗದಲ್ಲಿ ಈಗಾಗಲೇ ಸಾವಿರಾರು ಟನ್ ಅನಾನಸ್ ಹಣ್ಣುಗಳು ಕೊಳೆಯಲಾರಂಭಿಸಿವೆ. ಕಲ್ಲಂಗಡಿ ಹಣ್ಣುಗಳ ರಾಶಿ ಹೊಲದಲ್ಲೇ ಬಿದ್ದಿದೆ. ಶುಂಠಿ ಬೆಳೆ ಭೂಮಿಯಲ್ಲೇ ಕರಗುತ್ತಿದೆ. ಬೇಸಿಗೆ ಜೋಳ ಕಟಾವು ಮಾಡಲು ಆಗುತ್ತಿಲ್ಲ. ಎಲ್ಲಾ ಸಮಸ್ಯೆಗಳನ್ನ ಇಟ್ಟುಕೊಂಡು ಕೂಲಂಕುಷವಾಗಿ ಚರ್ಚೆ ಮಾಡಲು ಕನಿಷ್ಟ ಅರ್ಧ ದಿನವಾದರೂ ಸಚಿವರಿಗೆ ಬೇಕು. ಆದರೆ ಸಚಿವರು ಶುಕ್ರವಾರ ಬರುತ್ತಾರೆಂದು ನಿಗದಿಯಾಗಿತ್ತು. ಸಭಾಂಗಣಕ್ಕೆ ರೈತ ಮುಖಂಡರು, ಕೆಲವು ಆಯ್ದ ರೈತರು ಹಾಗೂ ಪತ್ರಕರ್ತರಿಗೂ ಆಹ್ವಾನವಿತ್ತು. ಟಿವಿ ಚಾನೆಲ್ನ ಪತ್ರಕರ್ತರು ಎಂದಿನಂತೆ ವಿಡಿಯೋ ಚಿತ್ರೀಕರಣ ಆರಂಭಿಸಿದರು. ಸಚಿವರು ಮಾತ್ರ ದಯವಿಟ್ಟು ಪತ್ರಕರ್ತರು ಹೊರಗೆ ಹೋಗಿ ಎಂದರು. ಎಂಥಾ ಅವಮಾನ, ಕರೋನಾ ಭಯದಲ್ಲೂ ರೈತರ ಸಮಸ್ಯೆಗಳನ್ನ ವರದಿ ಮಾಡಿದ ಪತ್ರಕರ್ತರನ್ನ ಬಿಟ್ಟು ಸಭಾಂಗಣದ ಒಳಗೆ ರಹಸ್ಯ ಸಭೆ ಮಾಡಿದ್ರಾ ಸಚಿವರು..!? ಕೆಲವು ಘನತೆಯಿದ್ದ ಪತ್ರಕರ್ತರು ಸಭೆಯಿಂದ ಹೊರಬಂದರೆ ಕೆಲವರು ಅಲ್ಲೇ ಕುಳಿತು ಸಚಿವರ ಕೋಆರ್ಡಿನೇಟ್ ಟೀಂನ ಜೊತೆ ಮಾತಿನ ಚಕಮಕಿ ನಡೆಸಿದರು. ಕೊನೆಗೆ ಕಾವಲು ನಿಂತ ಮಾಧ್ಯಮದವರನ್ನ ಕರೆದು ಅದೇ ಸಿದ್ಧ ಪಠ್ಯ ವಾಚನ. ಅದರ ಜೊತೆ ಶಿವಮೊಗ್ಗ ರೈತರ ಕೋಟಿ ಕೋಟಿ ನಷ್ಟದ ಸಮಸ್ಯೆ ಅನಾಸನ್ ಬೆಳೆ ಸೇರಿಸಿಕೊಂಡರು. ರೈತರೆಲ್ಲಾ ನಿರೀಕ್ಷೆ ಇಟ್ಟುಕೊಂಡು ಕಾಯ್ತಿದ್ದರು ಆದರೆ ಕೃಷಿ ಸಚಿವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಕರೋನಾದಿಂದ ಸಮಸ್ಯೆ ಇದೆ. ರಫ್ತು ನಿಷೇಧ ತೆರವಾಗುವ ಮುನ್ನ ಉತ್ತರ ಭಾರತದ ಜ್ಯೂಸ್ ಅಂಗಡಿಗಳು ತೆರೆದುಕೊಳ್ಳಬೇಕು. ಮುಂದಿನ ವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಇದರ ಬಗ್ಗೆ ಮಾತಾಡ್ತಾರೆ ಎಂದರು. ಅಲ್ಲಿಗೆ ಶಿವಮೊಗ್ಗ ಸಮಸ್ಯೆ ಮುಗೀತು.
ಸಚಿವರ ಮುಂದಿನ ನಿಲ್ದಾಣ ಚಿಕ್ಕಮಗಳೂರು. ಅಲ್ಲಿ ತಮ್ಮ ಸಹೋದ್ಯೋಗಿ ಅರೆಕಾಲಿಕ ಕೃಷಿಕರಾದ ಸಚಿವ ಸಿಟಿ ರವಿ ಅವರನ್ನ ಕೂರಿಸಿಕೊಂಡು ಸಿದ್ಧಪಠ್ಯವನ್ನ ವಾಚಿಸಿ ಅಲ್ಲಿಂದ ಹಾಸನಕ್ಕೆ ನಡೆದರು. ಹೇಳಿ ಕೇಳಿ ದೊಡ್ಡಗೌಡರ ಸರಹದ್ದು ಅಲ್ಲಿ ಏನಾದರೂ ವಿಶೇಷ ಮಾತಾಡಿಲ್ಲ ಎಂದರೆ ಹೇಗೆ. ಪಠ್ಯದ ಜೊತೆ ಕೆಲವು ಸಾಲುಗಳನ್ನ ಸೇರಿಸಿಕೊಂಡು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೀನಿ ಎಂದು ಹೇಳಿದರು. ಅಂದರೆ ಕೃಷಿ ಸಚಿವರು ಯಾವುದೇ ನಿರ್ಧಾರಗಳನ್ನ ಹೇಳಲು ಆಗದ ಸ್ಥಿತಿ ಇದೆ. ಆದರೂ ರಾಜ್ಯ ಪ್ರವಾಸ ಮಾಡಿ ಮಾದರಿ ಸಚಿವರಾಗುವ ತವಕವೇನೋ ಪಾಪ. ಕರೋನಾ ಭೀತಿಯಲ್ಲಿ ಇದೆಲ್ಲಾ ಮಾಡುವ ಬದಲು ಮೈಸೂರು ಜಿಲ್ಲಾಧಿಕಾರಿ ತರಹ ಫೇಸ್ಬುಕ್ ಲೈವ್ ಬಂದು ಕುಂತಲ್ಲೇ ಕೆಲಸ ಮಾಡಿ ಮುಗಿಸಬಹುದಿತ್ತು. ಅದಕ್ಕೊಂದು ಟೀಂ, ಅದಕ್ಕೆ ಕೆಲವು ಹಾಲಿ ಮಾಜಿ ಪತ್ರಕರ್ತರ ಸಹಾಯ, ಹೋದಲ್ಲೆಲ್ಲಾ ಸೆಕ್ಯುರಿಟಿ ಬೇಕಿತ್ತಾ..? ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ನಷ್ಟದ ಬಗ್ಗೆ ವರದಿ ಸಿದ್ಧ ಪಡಿಸಲು ಆದೇಶ ನೀಡಿದರೆ ಸಾಕಿತ್ತು. ಸಚಿವರಿಗೆ ಗೊತ್ತು ಯಾವ ವರದಿಯನ್ನು ಈ ಸಂಕಷ್ಟದ ಸಮಯದಲ್ಲಿ ಪುರಸ್ಕರಿಸಲು ಆಗುವುದಿಲ್ಲ. ರೈತರ ಮೂಗಿಗೆ ಬೆಣ್ಣೆ ಸವರಿ ಹೋದ ಸಚಿವರು ವಾರದಲ್ಲಿ ರಾಜ್ಯ ಪ್ರವಾಸ ಮಾಡಿ, ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಬೇಟಿ ನೀಡಿ ದಾಖಲೆ ನಿರ್ಮಿಸಿದ್ದಾರೆ. ಸದ್ಯ ಟಿವಿ ಚಾನೆಲ್ಗಳು ಕರೋನಾ ಕಾಲದ ಹೀರೋ ಎಂದು ಸುದ್ದಿಮಾಡುವುದಷ್ಟೇ ಬಾಕಿ ಇದೆ.
ಮಾನ್ಯ ಸಚಿವರೇ ಇದು ಕೃಷಿ ಖಾತೆ, ನಮ್ಮ ದೇಶದ ಆರ್ಥಿಕತೆ ನಿಂತಿರುವುದು ವ್ಯವಸಾಯದಿಂದಲೇ. ತಕ್ಷಣಕ್ಕೆ ಕೊಳೆತು ಹೋಗುವ ಹಣ್ಣುಹಂಪಲುಗಳನ್ನ ಸಂರಕ್ಷಿಸಿಡಲು ಶಿಥಲೀಕರಣ ಕೇಂದ್ರಗಳೆಲ್ಲಿ ಹೋದವು. ಖಾಸಗಿ ಒಡೆತನದ ಕೇಂದ್ರಗಳನ್ನ ಶಾಸಕರು ಹಾಗೂ ಸಂಸದರು ಉದ್ಘಾಟನೆ ಮಾಡಿ ಟಿವಿ ಪೇಪರ್ಗಳಲ್ಲಿ ಸುದ್ದಿಯಾದವು. ಅವರೆಲ್ಲಾ ನಿಜವಾಗಿಯೂ ರೈತರಿಗೆ ನೆರವಾಗಿದ್ದಾರ..? ನೀವೇನಾದರೂ ಆದೇಶ ಮಾಡಿದ್ದೀರಾ..? ಕೃಷಿ ಸಹಾಯಕ್ಕೆ ಪ್ರತ್ಯೇಕ ಸಹಯವಾಣಿ, ಟಾಸ್ಕ್ಫೋರ್ಸ್ ಏನಾದರೂ ರಚನೆ ಆಗಿದ್ಯಾ..? ತಕ್ಷಣ ಕೊಳೆತು ಹೋಗುತ್ತಿರುವ ಬೆಳೆಗಳ ಪಟ್ಟಿ ಸಿದ್ಧಪಡಿಸಿ ಅವುಗಳಿಗೆ ಪರ್ಯಾಯ ವ್ಯವಸ್ಥೆ ಆಗಿದ್ಯಾ.? ಏನೂ ಇಲ್ಲ. ಹೋದೆಲ್ಲೆಲ್ಲಾ ಸಿದ್ಧಪಠ್ಯ ವಾಚನದ ಜೊತೆ ತಬ್ಲಿಘಿಗಳಿಂದ ಹಾಗೂ ಜುಬ್ಲಿ ಫ್ಯಾಕ್ಟರಿ (ಸಚಿವರು ಜ್ಯುಬ್ಲಿಯಂಟ್ಗೆ ಕರೆಯೋದು ಜುಬ್ಲಿ) ಯಿಂದ ರಾಜ್ಯ ಕರೋನಾಕ್ಕೆ ಸಿಲುಕಿತು ಎಂದು ಹೇಳಿ ಹೊರಟ್ತೀರ..! ಹೀಗೆ ಆದರೆ ಕೆಲವೇ ದಿನಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚಾಗಲಿವೆ. ಇದನ್ನ ಸ್ವತಃ ಸೊರಬದ ಅನಾನಸ್ ಬೆಳೆಗಾರರು ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ. ಇನ್ನಾದರೂ ಕಾಟಾಚಾರದ ಪ್ರವಾಸ ಬಿಡಿ. ದೇಶವೇ ಬೆರಗಾಗುವಂತಹ ಯೋಜನೆ ರೂಪಿಸಿ.