ಯುವತಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ಇಬ್ಬರು ಮಹಿಳೆ ಸೇರಿದಂತೆ ಒಟ್ಟು ಆರು ಮಂದಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಯುವತಿಯ ಮೇಲೆ ಆರೋಪಿತರು ಚಿತ್ರಹಿಂಸೆ ಮಾಡುವ ಹೃದಯ ವಿದ್ರಾವಕ ವಿಡಿಯೋ ವೈರಲ್ ಆಗಿದ್ದು, ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಈ ಕ್ರೌರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಯುವತಿಗೆ ಚಿತ್ರಹಿಂಸೆ ನೀಡುವಲ್ಲಿ ಇನ್ನೋರ್ವ ಮಹಿಳೆಯೂ ಭಾಗಿಯಾಗಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಮದ್ಯದ ಬಾಟಲ್ಗಳನ್ನು ಯುವತಿಯ ಜನನಾಂಗಕ್ಕೆ ತುರುಕುವುದು ಕೂಡಾ ಚಿತ್ರಿತವಾಗಿದ್ದು, ಆರೋಪಿಯಲ್ಲೋರ್ವ ಸಂತ್ರಸ್ತೆಯ ಗೌಪ್ಯ ಭಾಗಕ್ಕೆ ಬಲವಾಗಿ ಒದೆಯುವುದು, ಕಾಲ್ಬೆರಳುಗಳನ್ನು ತಳ್ಳುವುದು ದೃಶ್ಯದಲ್ಲಿದೆ. ಬಳಿಕ ಚಿತ್ರಹಿಂಸೆಗೊಳಗಾದ 22 ರ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಈ ಘಟನೆ ಬೆಂಗಳೂರಿನಲ್ಲಿ ವಾರದ ಹಿಂದೆ ನಡೆದಿದೆ ಎನ್ನಲಾಗಿದೆ.
ವಿಡಿಯೋ ತುಣುಕಿನ ಆಧಾರದ ಮೇಲೆ ಹಾಗೂ ಬಂಧಿತ ಆರೋಪಿಗಳು ವಿಚಾರಣೆಯ ಸಂಧರ್ಭದಲ್ಲಿ ಬಿಚ್ಚಿಟ್ಟ ಮಾಹಿತಿಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಅತ್ಯಾಚಾರ, ಹಲ್ಲೆ ಹಾಗೂ ಅದಕ್ಕೆ ಸಂಬಂಧಪಟ್ಟ ಕಾಯ್ದೆಗಳ ಅಡಿಯಲ್ಲಿ ರಾಮಮೂರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದುವರೆಗೂ ದೊರೆತ ಮಾಹಿತಿ ಪ್ರಕಾರ ಆರೋಪಿಗಳು ಹಾಗೂ ಸಂತ್ರಸ್ತೆ ಬಾಂಗ್ಲಾ ದೇಶದ ಮಾನವ ಕಳ್ಳ ಸಾಗಣಿಕೆಯ ಗುಂಪಿಗೆ ಸೇರಿದವರೆನ್ನಲಾಗಿದೆ. ಹಣಕಾಸಿನ ತಕರಾರಿನಲ್ಲಿ ಯುವತಿಯ ಮೇಲೆ ಈ ಕ್ರೌರ್ಯ ನಡೆದಿದೆ ಎಂದು ಪೊಲೀಸ್ ತಿಳಿಸಿದೆ. ಪ್ರಸ್ತುತ, ಸಂತ್ರಸ್ತೆ ಯುವತಿ ಬೇರೆ ರಾಜ್ಯದಲ್ಲಿದ್ದು, ಆಕೆಯನ್ನು ಇಲ್ಲಿಗೆ ಕರೆ ತರಲು ತಂಡವನ್ನು ಕಳುಹಿಸಲಾಗಿದೆ. ಆಕೆಯನ್ನು ಕರೆತಂದ ಬಳಿಕ ಆಕೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
https://twitter.com/CPBlr/status/1397967395440893953

ವೈರಲ್ ಆಗಿರುವ ವಿಡಿಯೋ ವ್ಯಾಪಕ ಖಂಡನೆಗೆ ಒಳಗಾಗಿದ್ದು, ಅದರಲ್ಲೂ ಈಶಾನ್ಯ ಭಾರತದಲ್ಲಿ ವಿಪರೀತ ಆಕ್ರೋಶಕ್ಕೆ ಕಾರಣವಾಗಿದೆ. ಸಂತ್ರಸ್ತೆ ಅಸ್ಸಾಮ್ ರಾಜ್ಯಕ್ಕೆ ಸೇರಿದಾಕೆ ಎಂಬ ಶಂಕೆಯ ಮೇಲೆ ಅಸ್ಸಾಮ್ ಪೊಲೀಸರು ಆರೋಪಿಗಳ ವಿವರ ನೀಡುವಂತೆ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದಾರೆಇದರಲ್ಲಿ ಐವರು ಆರೋಪಿಗಳ ಚಿತ್ರವನ್ನು ಅಸ್ಸಾಂ ಪೊಲೀಸರು ಟ್ವೀಟ್ ಮಾಡಿದ್ದು, ಇವರ ಕುರಿತು ಯಾವುದಾದರೂ ಮಾಹಿತಿ ಲಭ್ಯವಾದರೆ ಹಂಚಿಕೊಳ್ಳುವಂತೆ ಕೋರಿಕೊಂಡಿದ್ದರು.
https://twitter.com/assampolice/status/1397630456162488320
ಸ್ಥಳ ಮಹಜರು ವೇಳೆ ಪರಾರಿಯಾಗಲೆತ್ನಿಸಿದ ಆರೋಪಿಗಳಿಗೆ ಗುಂಡೇಟು
ಶುಕ್ರವಾರ ಬೆಳಗ್ಗೆ ಬಂಧಿತ ಆರೋಪಿಗಳನ್ನು ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ದಾಗ ಪರಾರಿಯಾಗಲು ಯತ್ನಿಸಿದ್ದು, ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ತಪ್ಪಿಸದಂತೆ ತಡೆದಿದ್ದಾರೆ.












