ಇಡೀ ದೇಶವನ್ನ ಬೆಚ್ಚಿ ಬೀಳಿಸಿದ ಶ್ರದ್ದಾ ವಾಲ್ಕರ್(26) ಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ವರದಿಯಾಗಿದೆ.
ಪತಿಯನ್ನು ಪತ್ನಿ ಹಾಗೂ ಪುತ್ರ ಸೇರಿಕೊಂಡು ಕೊಲೆ ಮಾಡಿ ದೇಹದ ಭಾಗಗಳನ್ನ 22 ತುಂಡುಗಳನ್ನಾಗಿಸಿ ಫ್ರಿಡ್ಜ್ನಲ್ಲಿಟ್ಟಿರುವ ಘಟನೆ ದೆಹಲಿಯ ಪಾಂಡವನಗರದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಅಂಜನ್ ದಾಸ್ ಕೊಲೆಯಾದ ವ್ಯಕ್ತಿ, ಪತ್ನಿ ಪೂನಮ್ ಹಾಗೂ ಪುತ್ರ ದೀಪಕ್ ಹತ್ಯೆ ಮಾಡಿರುವವರು ಎಂದು ತಿಳಿದು ಬಂದಿದೆ. ಜೂನ್ ತಿಂಗಳಲ್ಲಿ ಹತ್ಯೆ ನಡೆದಿದ್ದು ದೇಹದ ಭಾಗಗಳನ್ನ ಚೀಲದಲ್ಲಿರಿಸಿ ಕಲ್ಯಾಣಪುರಿಯಲ್ಲಿರುವ ರಾಮ್ಲೀಲಾ ಮೈದಾನ ಸೇರಿದಂತೆ ದೆಹಲಿಯ ವಿವಿಧೆಡೆ ಎಸೆದು ಕ್ರೌರ್ಯ ಮೆರೆದಿದ್ದಾರೆ.
ಸದ್ಯ ಆರೋಪಿಗಳು ಪೊಲೀಸರ ವಶದಲ್ಲಿದ್ದು ಅಕ್ರಮ ಸಂಬಂಧ ಹೊಂದಿದ್ದ ಕಾರಣ ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳು ಪೊಲೀಸರೆದುರು ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
ಪಾಂಡವನಗರ ಪೊಲೀಸರು ಐಪಿಸಿ ಸೆಕ್ಷನ್ 302, 201 ಅಡಿ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.