ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಸಿಕ್ಕ ಜಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರಿಗೆ ಸಿಕ್ಕ ಅಭೂತಪೂರ್ವ ಜಯ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಪ್ರಧಾನಿಯವರು ತೆಗೆದುಕೊಂಡ ಹಲವು ಅಪಾಯಕಾರಿ ಆರ್ಥಿಕ ನಿರ್ಧಾರಗಳು ಮತದಾನದ ದಿಕ್ಕನ್ನು ಬದಲಿಸಲಿಲ್ಲ ಎನ್ನುವುದು ನಿಜವಾದರೂ ಆದರೆ ಮುಂಬರುವ ದಿನಗಳಲ್ಲಿ ಅವರ ಆಡಳಿತವು ತಮಗೆ ಸಂಬಂಧವೇ ಇಲ್ಲದ ಸಮಸ್ಯೆಯೊಂದರಲ್ಲಿ ಸಿಲುಕಿಕೊಳ್ಳಲಿದೆ. ಅದುವೇ ರಷ್ಯಾ- ಉಕ್ರೇನ್ ಯುದ್ಧ.
ತೈಲ ಬೆಲೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸುದೀರ್ಘ ಏಳು ವರ್ಷಗಳ ರಿಯಾಯಿತಿಯನ್ನು ಪರಿಸ್ಥಿತಿಯೇ ಒದಗಿಸಿಕೊಟ್ಟಿದೆ ಎನ್ನಬಹುದು. ಮತ್ತು ಸರ್ಕಾರವು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಳೆದ ಏಳು ವರ್ಷಗಳಲ್ಲಿ ಅಂತರರಾಷ್ಟ್ರೀಯವಾಗಿ ಕುಸಿದಿದ್ದ ತೈಲ ಬೆಲೆಗಳೂ ಕಾರಣವಾಗಿದೆ. ಹೆಚ್ಚಿನ ಮೌಲ್ಯದ ನೋಟು ಅಮಾನ್ಯೀಕರಣ , ವಿವಾದಾತ್ಮಕ ಕೃಷಿ ಕಾನೂನು, ಸರಕು ಮತ್ತು ಸೇವಾ ತೆರಿಗೆ ಮುಂತಾದ ಎಲ್ಲಾ ನಿರ್ಧಾರಗಳಿಗೆ ಕುಸಿದಿದ್ದ ಕಚ್ಚಾ ತೈಲ ಬೆಲೆಯು ಬೆಂಬಲ ನೀಡಿತ್ತು.
ಆದರೆ ಈಗ ರಷ್ಯಾ-ಉಕ್ರೇನ್ ಯುದ್ಧವು ಪ್ರಧಾನಿ ನರೇಂದ್ರ ಮೋದಿಯವರ ಲೆಕ್ಕಾಚಾರಗಳನ್ನು ಬುಡಮೇಲು ಗೊಳಿಸುವಂತಿದೆ. ಮೇ 2014 ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡಾಗ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ USD115 ಆಗಿತ್ತು ಮತ್ತು ಜೂನ್ನಿಂದ ಅದು ನಿರಂತರವಾಗಿ ಕುಸಿಯಲು ಪ್ರಾರಂಭಿಸಿತು. ಮತ್ತು 2019 ರಲ್ಲಿ ಕೋವಿಡ್ -19 ಸಂದರ್ಭದಲ್ಲಿ ಬ್ಯಾರೆಲ್ಗೆ USD22 ಅನ್ನು ತಲುಪಿತು.
ಯುಎಸ್ ಮತ್ತು ಇತರೆಡೆಗಳಲ್ಲಿ ಆರ್ಥಿಕ ಚೇತರಿಕೆಯು ಮತ್ತೆ ಕಂಡು ಬಂದ ಮೇಲೆ ಅದು ಮತ್ತೆ USD100 ಆಗಿದೆ. ಇದೀಗ ಪ್ರಪಂಚದ ಎರಡನೇ ತೈಲ ರಫ್ತು ದೇಶವಾದ ರಷ್ಯಾ ಯುದ್ಧದಲ್ಲಿ ಪಾಲ್ಗೊಂಡ ಮೇಲೆ ಬ್ರೆಂಟ್ USD139 ತಲುಪಿದೆ. ಕೆಲ ಆರ್ಥಿಕ ತಜ್ಞರು ತೈಲ ಬೆಲೆ USD200 ಗೆ ತಲುಪುವ ನಿರೀಕ್ಷೆ ಇದೆ ಎಂದೂ ಇನ್ನೂ ಕೆಲವರು USD300 ಎಂದೂ ಅಂದಾಜಿಸುತ್ತಿದ್ದಾರೆ.
ಇನ್ನೊಂದೆಡೆ ಅರ್ಥಶಾಸ್ತ್ರಜ್ಞರು ಮುಂದಿಡುತ್ತಿರುವ ಊಹೆಗಳಿಗೆ ವ್ಯತಿರಿಕ್ತವಾಗಿ ಜಿಡಿಪಿ ಬೆಳವಣಿಗೆಯಲ್ಲಿ ಭಾರತವು ಸರಿಸುಮಾರು ಒಂದು ಶೇಕಡಾವಾರು ಪಾಯಿಂಟ್ನವರೆಗೆ ಕಳೆದುಕೊಳ್ಳುತ್ತಿದೆ ಮತ್ತು ಹಣದುಬ್ಬರವು ಏರಿಕೆಯಾಗುತ್ತಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯು ನೆಲಕಚ್ಚುತ್ತಿದೆ. ಒಂದು ವರ್ಷದ ಹಿಂದೆ ಇದ್ದ 72.5 ರೂ.ಗೆ ಹೋಲಿಸಿದರೆ ಈ ವರ್ಷ ಈಗಾಗಲೇ 76 ರಿಂದ 77 ರೂಪಾಯಿಗಳಿಗೆ ಕುಸಿದಿದೆ.

ರಷ್ಯಾದ ಮೇಲಿನ ನಿರ್ಬಂಧಗಳು ಭಾರತದ ಮೇಲೆ ಹೇಗೆ ಪ್ರಭಾವ ಬೀರುತ್ತಿವೆ?
ರಷ್ಯಾದ ತೈಲ ಆಮದುಗಳನ್ನು ಯುಎಸ್ ಈಗಾಗಲೇ ನಿಷೇಧಿಸಿದೆ. Visa, Mastercard, McDonald’s, Coca-Cola ಮತ್ತು ಇತರ US ಕಂಪೆನಿಗಳು ರಷ್ಯಾದಿಂದ ಹೊರಬರುತ್ತಿವೆ. ಜಾಗತಿಕವಾಗಿ ಹಣವನ್ನು ವರ್ಗಾಯಿಸಲು ಬ್ಯಾಂಕ್ಗಳು ಬಳಸಿಕೊಳ್ಳುವ SWIFT ವ್ಯವಸ್ಥೆಯು ರಷ್ಯಾದಲ್ಲಿ ಬ್ಲಾಕ್ ಆಗಿದೆ. ಎರಡು ಮಿಲಿಯನ್ ನಿರಾಶ್ರಿತರು ಯುದ್ಧ ಪೀಡಿತ ಉಕ್ರೇನ್ನಿಂದ ಪಶ್ಚಿಮ ಯುರೋಪಿಗೆ ತೆರಳಿದ್ದಾರೆ.
ಭಾರತವು ಉಕ್ರೇನ್ನಿಂದ ಕೃಷಿ ರಸಗೊಬ್ಬರಗಳು ಮತ್ತು ಗೃಹೋಪಯೋಗಿ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿತ್ತು. ಉಕ್ರೇನ್ನಲ್ಲಿನ ಯುದ್ಧದ ನೇರ ಪರಿಣಾಮ ಭಾರತದ ದೇಶೀಯ ಮಾರುಕಟ್ಟೆ ಮೇಲೆ ಆಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಬಡ್ಡಿದರಗಳನ್ನು ಹೆಚ್ಚಿಸುವ ಒತ್ತಡದಲ್ಲಿದೆ. ಏಕೆಂದರೆ USನಲ್ಲಿ ಈಗಾಗಲೇ ದೇಶೀಯ ಚಿಲ್ಲರೆ ಹಣದುಬ್ಬರವು 6% ಕ್ಕೆ ತಲುಪಿ ಸಾಲಗಳು ದುಬಾರಿಯಾಗಲು ಪ್ರಾರಂಭಿಸಿದೆ. ಅಲ್ಲದೆ ಭಾರತವು ತನ್ನ ತೈಲ ಅಗತ್ಯದ ಸುಮಾರು 85% ಆಮದು ಮಾಡಿಕೊಳ್ಳುತ್ತದೆ. ಇಂಧನ ಬೆಲೆಗಳು ಆಟೋಮೊಬೈಲ್ ಮಾರಾಟದಿಂದ ಈರುಳ್ಳಿ ಬೆಲೆಯವರೆಗೆ ಎಲ್ಲದರ ಮೇಲೆ ಪ್ರಭಾವ ಬೀರುತ್ತವೆ.
ಈ ಹಂತದಲ್ಲಿ ಭಾರತದ ವಿತ್ತ ಸಚಿವರಾಗುವುದು ತಮಾಷೆಯ ಸಂಗತಿಯಲ್ಲ. ಫೆಬ್ರವರಿಯ ಆರಂಭದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸಲು ಮತ್ತು ಬೆಳವಣಿಗೆಯ ಪುನರುಜ್ಜೀವನದ ಬೇಡಿಕೆಯನ್ನು ಉಳಿಸಲು ‘ಖರ್ಚು ಮಾಡಿ-ಬೆಳೆಸುವ’ ಬಜೆಟ್ ಅನ್ನು ಧೈರ್ಯದಿಂದ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್, ತಿಂಗಳ ಅಂತ್ಯದ ವೇಳೆಗೆ ಇಂತಹ ಪರಿಸ್ಥಿತಿ ಬರಲಿದೆ ಎಂದು ಖಂಡಿತಾ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಯಾಕೆಂದರೆ ತೈಲ ಬೆಲೆಯು ಬ್ಯಾರೆಲ್ಗೆ USD85 ಇದ್ದಾಗ ಎಲ್ಲಾ ಬಜೆಟ್ ಲೆಕ್ಕಾಚಾರಗಳನ್ನು ಮಾಡಲಾಗಿತ್ತು. ಈಗ ಆ ಲೆಕ್ಕಾಚಾರವೇ ತಲೆಕೆಳಗಾಗಿದೆ. ಮತ್ತು ಎಲ್ಲವನ್ನೂ ಸರ್ಕಾರ ಹೇಗೆ ಸರಿದೂಗಿಸಲಿದೆ ಎನ್ನುವ ಕುತೂಹಲಕ್ಕೆ ಕಾರಣವಾಗಿದೆ.
1991 ರಲ್ಲಿ ಪಾವತಿಯ ಸಮತೋಲನ (balance of payments crisis)ಬಿ ಕ್ಕಟ್ಟಿನಿಂದ ಬದುಕುಳಿದ ದೇಶಕ್ಕೆ ಮತ್ತು 1998ರಲ್ಲಿ ಪೋಖ್ರಾನ್-2 ಪರಮಾಣು ಪರೀಕ್ಷೆಗಳನ್ನು ನಡೆಸಿದಾಗ US ಹೇರಿದ ಆರ್ಥಿಕ ನಿರ್ಬಂಧಗಳ ನಡುವೆಯೂ ತನ್ನ ಬೆಳವಣಿಗೆಯನ್ನು ಉಳಿಸಿಕೊಂಡ ಈ ದೇಶಕ್ಕೆ ಇಂತಹ ಆರ್ಥಿಕ ಅಸಮತೋಲನವನ್ನು ನಿರ್ವಹಿಸುವುದು ಅಸಾಧ್ಯವೇನಲ್ಲ. ಆದರೆ ಸರ್ಕಾರವು ಈ ಹಿಂದೆ ಮಾಡಿದಂತೆ ಬೇಕಾಬಿಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸ್ವಲ್ಪ ಸೂಕ್ಷ್ಮವಾಗಿ ವರ್ತಿಸಬೇಕು. ರಾಜಕೀಯ ನಿಲುವುಗಳು ಮತ್ತು ಓಟು ತಂದುಕೊಡಬಲ್ಲ ನಿರ್ಧಾರಗಳು ಆರ್ಥಿಕತೆಯನ್ನು ಸುಧಾರಿಸದು ಎನ್ನುವುದನ್ನು 2024-25 ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಬಗ್ಗೆ ಮಾತನಾಡುವ ಪ್ರಧಾನಿ, ವಿತ್ತ ಸಚಿವರು ಮತ್ತವರ ಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು.