
ಬೆಂಗಳೂರಿನಲ್ಲಿ ನಿವೃತ್ತ ಐಜಿಪಿ ಓಂ ಪ್ರಕಾಶ್ ಅವರನ್ನು ಭೀಕರ ಕೊಲೆ ಮಾಡಲಾಗಿದೆ. HSR ಲೇಔಟ್ ಬಳಿ ಇರುವ ಮನೆಯಲ್ಲಿ ಪತ್ನಿಯಿಂದಲೇ ಗಂಡನ ಹತ್ಯೆ ಆಗಿದೆ. ಸುಮಾರು 20 ವರ್ಷಗಳಿಂದ ಗಂಡ ಹೆಂಡತಿ ನಡುವೆ ಮನಸ್ತಾಪ ಏರ್ಪಟ್ಟಿತ್ತು ಎನ್ನಲಾಗಿದೆ. ಹಲವಾರು ಬಾರಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲೂ ಪತ್ನಿ ಗಂಡನ ವಿರುದ್ಧ ದೂರು ಸಹ ನೀಡಿದ್ದರು. ಆದರೆ ಇದೀಗ ತನ್ನ ಗಂಡನನ್ನು ಕೊಲೆ ಮಾಡಿ, ನನ್ನ ಗಂಡನನ್ನು ಕೊಂದಿದ್ದೇನೆ ಎಂದು ಮತ್ತೊಂದು ಐಪಿಎಸ್ ಹೆಂಡತಿಗೆ ವಿಡಿಯೋ ಕಾಲ್ ಮಾಡಿ ಗಂಡನ ಮೃತದೇಹವನ್ನು ತೋರಿಸಿದ್ದಾರೆ.
ಪ್ರೆಸಿಡೆಂಟ್ ಆಫ್ ಇಂಡಿಯಾ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ ಕೆಲವು ಉನ್ನತ ಮಟ್ಟದ ಸಂಸ್ಥೆಗಳಿಗೂ ಓಂಪ್ರಕಾಶ್ ಪತ್ನಿ ಗಂಡನ ವಿರುದ್ಧ ದೂರು ನೀಡಿದ್ದರು. ಇಬ್ಬರ ನಡುವೆ ವೈ ಮನಸು ಇರುವ ಕಾರಣ ಗಂಡನೇ ನನ್ನನ್ನ ಕೊಲೆ ಮಾಡುತ್ತಾನೆ ಎಂದು ತಿಳಿದು ಕೊಲೆ ಮಾಡಿದ್ದಾರೆ. ವಿಡಿಯೋ ಕಾಲ್ ನಲ್ಲಿ I have finished the monster.. ಎಂದು ಮತ್ತೊಬ್ಬರ ಐಪಿಎಸ್ ಪತ್ನಿ ಜೊತೆ ಮಾಹಿತಿ ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ.
ಒಟ್ಟು ಮೂರು ಮಹಡಿಯ ಮನೆಯಲ್ಲಿ ವಾಸವಾಗಿದ್ದ ಓಂ ಪ್ರಕಾಶ್ ಅವರ ಕುಟುಂಬದಲ್ಲಿ ನಿವೃತ್ತ ಐಜಿಪಿ ಓಂ ಪ್ರಕಾಶ್, ಅವರ ಪತ್ನಿ ಪಲ್ಲವಿ, ಮಗಳು ಕೃತಿ ಹಾಗೂ ಮಗ ಮತ್ತು ಸೊಸೆ ವಾಸವಿದ್ದರು. ಮೇಲಿನ ಮಹಡಿಯಲ್ಲಿ ಮಗ ಸೊಸೆ ಇದ್ದರೆ ಕೆಳ ಮಹಡಿಯಲ್ಲಿ ಓಂಪ್ರಕಾಶ್, ಹಾಗು ಪತ್ನಿ ಮತ್ತು ಮಗಳು ಇದ್ದರು. ಪದೇ ಪದೇ ಜಗಳ ಮನೆಯಲ್ಲಿ ಸರ್ವೇ ಸಾಮಾನ್ಯ ಎನ್ನುವಂತಾಗಿತ್ತು. ಭಾನುವಾರವೂ ಕೂಡ ಬೆಳಗ್ಗೆಯಿಂದಲೇ ಜಗಳ ಆರಂಭವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಪತ್ನಿಗೆ ಕೊಲೆ ಮಾಡಿದ್ದ ವಿಚಾರ ಹೇಳಿದ್ದ ಓಂ ಪ್ರಕಾಶ್ ಪತ್ನಿ ಪಲ್ಲವಿ, ಆ ಬಳಿಕ ಪೊಲೀಸರಿಗೂ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪತ್ನಿ ಪಲ್ಲವಿಯನ್ಮು ವಶಕ್ಕೆ ಪಡೆದಿದ್ದಾರೆ. ಆ ಬಳಿಕ ಘಟನಾ ಸ್ಥಳಕ್ಕೆ ಹಾಲಿ ಡಿಜಿ ಐಜಿಪಿ ಅಲೋಕ್ ಮೋಹನ್ ಹಾಗೂ ಬೆಂಗಳೂರು ಕಮೀಷನರ್ ದಯಾನಂದ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ಮೃತದೇಹ ಶಿಫ್ಟ್ ಮಾಡಲಾಗಿದೆ.

ಓಂ ಪ್ರಕಾಶ್ ಕೊಲೆ ಆರೋಪದಲ್ಲಿ ಪತ್ನಿ ಪಲ್ಲವಿ ಜೊತೆಗೆ ಮಗಳು ಕೃತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಓಂ ಪ್ರಕಾಶ್ ಕಣ್ಣಿಗೆ ಕಾರದ ಪುಡಿ ಎರಚಿ ಸುಮಾರು 8 ರಿಂದ 10 ಬಾರಿ ಚಾಕುವಿನಿಂದ ಇರಿದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಎದೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಚಾಕು ಇರಿತ ಆಗಿದೆ. ಹೊಟ್ಟೆ ಭಾಗಕ್ಕೆ ಸುಮಾರು ನಾಲ್ಕರಿಂದ ಐದು ಬಾರಿ ಚಾಕು ಇರಿತ ಮಾಡಲಾಗಿದೆ. ಹೊಟ್ಟೆ ಭಾಗಕ್ಕೆ ಹೆಚ್ಚು ಬಾರಿ ಚಾಕು ಇರಿದ ಕಾರಣ ತೀವ್ರ ರಕ್ತಸ್ರಾವ ಆಗಿದ್ದು, ಇಡೀ ಮನೆಯ ತುಂಬಾ ಕೆಳ ಮಹಡಿಯ ಮನೆಯಲ್ಲಿ ರಕ್ತ ಹರಿದಿತ್ತು. ಸುಮಾರು 15-20 ನಿಮಿಷಗಳ ಕಾಲ ಒದ್ದಾಡಿದ್ದ ಓಂ ಪ್ರಕಾಶ್, ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಗಂಡನ ನರಳಾಟ ನೋಡುತ್ತಾ ನಿಂತಿದ್ದ ಪತ್ನಿ, ಆ ಬಳಿಕ ಮುಖಕ್ಕೆ ಬಟ್ಟೆ ಸುತ್ತಿದ್ದಾರೆ.







