ಮಾಹಿತಿ ತಂತ್ರಜ್ಞಾನ ನಿಯಮಗಳು 2021ನ್ನು ಸರ್ಕಾರ ಜಾರಿಗೆ ತರಲು ಉದ್ದೇಶಿಸಿದಂದಿನಿಂದಲೂ ಕಾಯ್ದೆ ವಿವಾದಕ್ಕೊಳಗಾಗುತ್ತಲೇ ಇದೆ. ಹೊಸ ಐಟಿ ಕಾಯ್ದೆಯು ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಸಂವಿಧಾನಿಕ ಎಂಬ ಟೀಕೆ ವ್ಯಕ್ತವಾಗುತ್ತಲೇ ಇದೆ. ಈ ಸಂಬಂಧ ಹಲವು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಬಾಂಬೆ, ಕೇರಳ, ದೆಹಲಿ, ಮದ್ರಾಸ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿವೆ.
ಸರ್ಕಾರ ಅಧಿಸೂಚನೆ ಹೊರಡಿಸಿರುವ ಐಟಿ ಕಾಯ್ದೆಯ ಭಾಗ II ಡಿಜಿಟಲ್ ಮಧ್ಯವರ್ತಿಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೆ ಭಾಗ III ಒಟಿಟಿ ಪ್ಲಾಟ್ಫಾರ್ಮ್ಗಳು ಮತ್ತು ಡಿಜಿಟಲ್ ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸುವ ನಿಯಮಗಳನ್ನು ಒಳಗೊಂಡಿದೆ.
ಇದೀಗ ಮದ್ರಾಸ್ ಹೈಕೋರ್ಟ್ ಐಟಿ ಕಾಯ್ದೆಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶವೊಂದನ್ನು ಹೊರಡಿಸಿದ್ದು “ಕೇಂದ್ರ ಸರ್ಕಾರಕ್ಕೆ ಮಾಧ್ಯಮಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುವ ಐಟಿ ನಿಯಮಗಳ ಮೀಡಿಯಾ ರೂಲ್ 9 ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದು” ಎಂದಿದೆ. ಈ ತೀರ್ಪನ್ನು ಐಟಿ ಕಾಯ್ದೆ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಾಲಯಗಳ ತೀರ್ಪುಗಳಲ್ಲಿ ಅತ್ಯಂತ ಮಹತ್ವದ ತೀರ್ಪು ಎಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.

ಯಾಕೆಂದರೆ ಈ ಮೊದಲು ಐಟಿ ಕಾಯ್ದೆಗೆ ಸಂಬಂಧಪಟ್ಟ ತೀರ್ಪು ನೀಡಿರುವ ವಿವಿಧ ನ್ಯಾಯಾಲಗಳು ಹೆಚ್ಚಿನ ಗಮನವನ್ನು ಭಾಗ IIIಕ್ಕೆ ನೀಡಿದ್ದವು. ಆದರೆ ಮದ್ರಾಸ್ ಹೈಕೋರ್ಟ್ ಉಲ್ಲೇಖಿಸಿರುವ ಮೀಡಿಯಾ ರೂಲ್ 9 ಭಾಗ IIರ ಅಡಿಯಲ್ಲಿ ಬರುತ್ತದೆ.
ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನಂತೆ ಪರಿಚ್ಛೇದ 19 (2)ರ ಅಡಿಯಲ್ಲಿ ಭಾರತದ ಸಾರ್ವಭೌಮತೆ, ಸಮಗ್ರತೆ, ಸುಭದ್ರತೆ, ವಿದೇಶಗಳೊಂದಿಗಿನ ಸ್ನೇಹ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮಾತ್ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಿರ್ಬಂಧಿಸಬಹುದು. ಆದರೆ ಹೊಸ ಐಟಿ ಕಾಯ್ದೆಯ ಭಾಗ IIರ ನಿಯಮ 9 ನೇರವಾಗಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವಂತಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಯಾಕೆಂದರೆ ನಿಯಮ 3 (1) (b)(x) ಯಂತೆ ಮಧ್ಯವರ್ತಿ ಪ್ಲಾಟ್ಫಾರ್ಮ್ಗಳು ‘ಪೇಟೆಂಟ್ ಸುಳ್ಳು ಮತ್ತು ಅಸತ್ಯ’ ಎಂಬ ಕಾರಣ ನೀಡಿ ಯಾವುದೇ ಮಾಹಿತಿಯನ್ನು ಪ್ರಕಟಿಸುವುದನ್ನು ತಡೆಹಿಡಿಯಬಹುದು. ಈ ನಿರ್ಬಂಧಗಳು ಆರ್ಟಿಕಲ್ 19 (2) ರ ವ್ಯಾಪ್ತಿಯನ್ನು ಮೀರಿದ್ದು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಆರ್ಟಿಕಲ್ 19 (2)ರ ಮಿತಿಯನ್ನು ಉಲ್ಲಂಘಿಸುತ್ತದೆ ಮತ್ತು ಕಾನೂನಿನ ಮಾನದಂಡಗಳನ್ನು ಪ್ರತಿನಿಧಿಸದ ಹಾಗೂ ಅಸ್ಪಷ್ಟ ಪದಗಳನ್ನು ಹೊಂದಿವೆ ಎಂಬ ಕಾರಣಕ್ಕೆ ವ್ಯಾಪಕ ಟೀಕೆಗಳನ್ನು ಎದುರಿಸಿದ ಐಟಿ ನಿಯಮ 2021ರ ಭಾಗ IIರ ನಿಯಮ 9ನ್ನು ಇದೀಗ ಮದ್ರಾಸ್ ಹೈಕೋರ್ಟ್ ಶ್ರೇಯಾ ಸಿಂಘಾಲ್ ತೀರ್ಪಿನ ಆಧಾರದ ಮೇಲೆಯೇ ಪರಿಶೀಲಿಸಿದ್ದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ.
ಇದರ ಹೊರತಾಗಿಯೂ ಈ ತೀರ್ಪು ಮಹತ್ವದ್ದಾಗಿದೆ. ಏಕೆಂದರೆ ಡಿಜಿಟಲ್ ಮಾಧ್ಯಮ ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳನ್ನು ನಿಯಂತ್ರಿಸುವ ನಿಯಮಗಳಿಗೆ ಅನುಮತಿ ನೀಡಲು ಅಂತರ್ಗತ ಸಮಸ್ಯೆಗಳಿವೆ ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್ನ ತೀರ್ಪಿಗೆ ಮದ್ರಾಸ್ ಹೈಕೋರ್ಟ್ ಸಹ ಸಹಮತ ವ್ಯಕ್ತಪಡಿಸಿದ್ದು “ಮಾಧ್ಯಮಗಳನ್ನು ನಿಯಂತ್ರಿಸಬಯಸುವ ಸರ್ಕಾರದ ಕಾರ್ಯ ವಿಧಾನವು ಸಂವಿಧಾನದ ನಾಲ್ಕನೇ ಅಂಗದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಹುದು ಮತ್ತು ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ” ಎಂದೂ ಸಹ ಹೇಳಿದೆ.
ಕೇದ್ರ ಸರ್ಕಾರ ರೂಪಿಸಿರುವ ನಿಯಮಗಳ ಅಂತಿಮ ತೀರ್ಪುಗಾರನಾಗುವುದು ಸುಪ್ರೀಂ ಕೋರ್ಟ್ ಮಾತ್ರ ಎನ್ನುವುದು ನಿಜವಾದರೂ ಸುಪ್ರೀಂ ಕೋರ್ಟ್ ತನ್ನ ತೀರ್ಪು ಹಾಗೂ ಆದೇಶ ನೀಡುವವರೆಗೂ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶವು ಆಶಾದಯಕವಾಗಿದೆ ಎಂದೇ ಹೇಳಬಹುದು.