ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಇಂದು ಲೋಕಸಭೆಯಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು, ಮಧ್ಯಮ ವರ್ಗದ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದ್ದಾರೆ. ಸರ್ಕಾರವು ಹೊಸ ತೆರಿಗೆ ಪದ್ಧತಿಯನ್ನು (New Tax Regime) ಇನ್ನಷ್ಟು ಸರಳ ಮಾಡಲು ಮುಂದಾಗಿದೆ.

ಕಳೆದ ವರ್ಷ ಘೋಷಿಸಿದ್ದ 12.75 ಲಕ್ಷ ರೂಪಾಯಿ ವರೆಗಿನ ಆದಾಯ ತೆರಿಗೆ ವಿನಾಯಿತಿಯನ್ನು ಈ ಬಾರಿಯೂ ಮುಂದುವರಿಸಲಾಗಿದೆ. ಆದರೆ, ಇದಕ್ಕಿಂತ ಹೆಚ್ಚಿನ ವಿನಾಯಿತಿ ಘೋಷಣೆ ಮಾಡಲಾಗಿಲ್ಲ. ಹೀಗಾಗಿ, ಹಿಂದಿನ ಸಾಲಿನ ತೆರಿಗೆ ವಿನಾಯಿತಿಯೇ ಈ ವರ್ಷವೂ ಅನ್ವಯವಾಗಲಿದೆ.
ಇದನ್ನೂ ಓದಿ:Union Budget 2026: ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಬಂಪರ್: 1.4 ಲಕ್ಷ ಕೋಟಿ ರೂ ಅನುದಾನ
2026ರ ಬಜೆಟ್ನಲ್ಲಿ ಹೊಸ ತೆರಿಗೆ ಪದ್ಧತಿಯಡಿ ಶೂನ್ಯ ತೆರಿಗೆ ಮಿತಿಯನ್ನು 4 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಈ ವೇಳೆ, ಸೆಕ್ಷನ್ 87A ಅಡಿಯಲ್ಲಿ ಸಿಗುವ ರಿಯಾಯಿತಿಯ ಪರಿಣಾಮವಾಗಿ, ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡು 12 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವ ತೆರಿಗೆದಾರರು ಸಂಪೂರ್ಣ ತೆರಿಗೆ ಮುಕ್ತರಾಗಿರುತ್ತಾರೆ. ಇದರಿಂದ ಲಕ್ಷಾಂತರ ಮಧ್ಯಮ ವರ್ಗದ ಉದ್ಯೋಗಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ.

ಇನ್ನು ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಯಾಗಲಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31ರವರೆಗೆ ಅವಕಾಶ ನೀಡಲಾಗಿದೆ. ಆದಾಯ ತೆರಿಗೆ ಅಪರಾಧಗಳಿಗೆ ಸಂಬಂಧಿಸಿದ ಶಿಕ್ಷೆಯನ್ನು ಕೋರ್ಟ್ ತೀರ್ಮಾನಿಸಲಿದೆ. ಸಣ್ಣ ತೆರಿಗೆ ತಪ್ಪುಗಳಿಗೆ ಕೇವಲ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ.
ಇದನ್ನೂ ಓದಿ: Union Budget 2026: ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಬಂಪರ್: 1.4 ಲಕ್ಷ ಕೋಟಿ ರೂ ಅನುದಾನ
ಹೊಸ ತೆರಿಗೆ ಪದ್ಧತಿಯಡಿ ಅಂತರ-ಸಹಕಾರಿ ಸಂಘಗಳ ಲಾಭಾಂಶ (Dividend) ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲು ಪ್ರಸ್ತಾವಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026–27ನೇ ಸಾಲಿನ ಒಟ್ಟು ಬಜೆಟ್ ಗಾತ್ರ 53.5 ಲಕ್ಷ ಕೋಟಿ ರೂಪಾಯಿಗಳು. ಇದರಲ್ಲಿನ ನಿವ್ವಳ ತೆರಿಗೆ ಸಂಗ್ರಹ 28.7 ಲಕ್ಷ ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.







