ಬರೋಬ್ಬರಿ ಒಂದು ವರ್ಷದಿಂದ ರೈತರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಕೊನೆಗೂ ಪ್ರಧಾನಿ ಮೋದಿ ಮಣಿದಿದ್ದಾರೆ. ರೈತರ ತೀವ್ರ ವಿರೋಧದ ಕಾರಣಕ್ಕೆ ವಿವಾದಕ್ಕೀಡಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವುದಾಗಿ ಪ್ರಧಾನಮಂತ್ರಿಗಳು ಶುಕ್ರವಾರ ಘೋಷಿಸುವ ಮೂಲಕ ವೈಯಕ್ತಿಕವಾಗಿ ಮೋದಿಯವರು ಮತ್ತು ಭಾರತೀಯ ಜನತಾ ಪಕ್ಷದ ವರ್ಚಸ್ಸಿಗೆ ಭಾರೀ ಪೆಟ್ಟು ಬಿದ್ದಂತಾಗಿದೆ.
ಬರೋಬ್ಬರಿ 360 ದಿನಗಳ ರೈತರ ದೇಶವ್ಯಾಪಿ ಹೋರಾಟ, 680ಕ್ಕೂ ಹೆಚ್ಚು ರೈತರ ಸಾವು, ಲೆಕ್ಕವಿಲ್ಲದಷ್ಟು ಅನ್ನದಾತರ ನೋವು-ಸಂಕಟಗಳ ಹೊರತಾಗಿಯೂ ಆಡಳಿತರೂಢ ಬಿಜೆಪಿ, ಅದರ ಕೇಂದ್ರ ಸರ್ಕಾರ ಮತ್ತು ಸ್ವತಃ ಪ್ರಧಾನಿ ಮೋದಿಯವರು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಆಡಳಿತ ವ್ಯವಸ್ಥೆಯೊಂದು ಪ್ರತಿಕ್ರಿಯಿಸಬೇಕಾದ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಹೋರಾಟನಿರತ ರೈತರಿಗೆ ಭಯೋತ್ಪಾದಕರು, ದೇಶದ್ರೋಹಿಗಳು, ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿರುವವರು ಎಂಬ ಹಲವು ಹಣೆಪಟ್ಟಿ ಹಚ್ಚಿ, ಇಡೀ ಹೋರಾಟವನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಅಷ್ಟೇ ಅಲ್ಲ; ಹೋರಾಟವನ್ನು ಹತ್ತಿಕ್ಕಲು ಸೇನಾ ಬಲ ಪ್ರಯೋಗ, ರೈತರ ಮೇಲೆ ಲಾಠಿ ಪ್ರಹಾರ, ಹೆದ್ದಾರಿಗೆ ಅಡ್ಡಗೋಡೆ, ಕಬ್ಬಿಣದ ಮೊಳೆ, ಮುಳ್ಳುತಂತಿ ಬೇಲಿ ಹಾಕುವುದು ಸೇರಿದಂತೆ ಯಾವುದೇ ಪ್ರಜಾಪ್ರಭುತ್ವ ಸರ್ಕಾರವೂ ಹಿಂದೆಂದೂ ಮಾಡಿರದೇ ಇದ್ದ ದಮನ ಕ್ರಮಗಳನ್ನು ಜಾರಿಗೆ ತಂದಿತ್ತು.
ಕಳೆದ ವರ್ಷದ ಜೂನ್ ನಲ್ಲಿ 2020ರ ಜೂನ್ 5ರಂದು ರಾಷ್ಟ್ರಪತಿಗಳ ಅಂಕಿತದೊಂದಿಗೆ ವಿವಾದಿತ ಮೂರು ಕೃಷಿ ಮಸೂದೆಗಳು ಕಾಯ್ದೆಯಾಗಿ ಜಾರಿಗೆ ಬಂದಿದ್ದವು. ಆದರೆ, ರೈತ ಒಕ್ಕೂಟಗಳು ಆ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಆ ಹಿನ್ನೆಲೆಯಲ್ಲಿ ನ್ಯಾಯಾಲಯ ಕೃಷಿ ಕಾಯ್ದೆಗಳ ಜಾರಿಗೆ 2021ರ ಜನವರಿ 12ರಂದು ತಡೆಯಾಜ್ಞೆ ನೀಡಿ, ಕಾಯ್ದೆಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸ್ವತಂತ್ರ ಸಮಿತಿ ರಚಿಸಿತ್ತು. ಆ ಸಮಿತಿಯ ಕಳೆದ ಮಾರ್ಚ್ 15ರಂದು ಸುಪ್ರೀಂಕೋರ್ಟಿಗೆ ತನ್ನ ವರದಿಯನ್ನು ಸಲ್ಲಿಸಿತ್ತು.
ಕಾಯ್ದೆಯ ಪ್ರತಿ ಹಂತದಲ್ಲೂ, ಸ್ವತಃ ಆ ಕಾಯ್ದೆಗಳ ಫಲಾನುಭವಿಗಳು ಎನ್ನಲಾದ ರೈತರು ಮತ್ತು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಪ್ರಧಾನಿ ಮೋದಿಯವರು ಮತ್ತು ಅವರ ಸರ್ಕಾರ ತನ್ನ ಕಾಯ್ದೆಗಳನ್ನು ಸಮರ್ಥಿಸಿಕೊಂಡಿತ್ತು ಮತ್ತು ಆ ಕಾಯ್ದೆಗಳನ್ನು ವಿರೋಧಿಸುವವರು ರೈತರೇ ಅಲ್ಲ ಮತ್ತು ರೈತರ ಹಿತಕ್ಕೆ ವಿರುದ್ಧವಾಗಿರುವವರು ಎಂದು ಪದೇಪದೆ ಹೇಳುತ್ತಿದ್ದರು.
ಇದೀಗ ರೈತ ಹೋರಾಟಕ್ಕೆ(ರಾಜಧಾನಿ ದೆಹಲಿಯಲ್ಲಿ ಆರಂಭವಾಗಿ) ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ವ್ಯಾಪಿ ಮತ್ತೊಂದು ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿತ್ತು. ಅಲ್ಲದೆ, ಕಳೆದ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಬಹುತೇಕ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ಸರ್ಕಾರಕ್ಕೆ ಅದು ದೊಡ್ಡ ಮಟ್ಟಿನ ಮುಜುಗರ ತಂದಿತ್ತು. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಪ್ರಧಾನಿ ಮೋದಿಯವರ ವರ್ಚಸ್ಸಿಗೆ ಈ ಹೋರಾಟ ಮತ್ತು ಆ ಹೋರಾಟಕ್ಕೆ ಅವರು ಪ್ರತಿಕ್ರಿಯಿಸಿದ ರೀತಿ ಭಾರೀ ಪೆಟ್ಟು ನೀಡಿತ್ತು. ಅಮೆರಿಕ, ಬ್ರಿಟನ್, ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳ ಸಂಸತ್ತುಗಳಲ್ಲಿ ಕೂಡ ರೈತರ ಹೋರಾಟವನ್ನು ಮೋದಿಯವರು ನಿಭಾಯಿಸಿದ ರೀತಿ ತೀವ್ರ ಟೀಕೆಗೆ ಗುರಿಯಾಗಿತ್ತು.
ಹರ್ಯಾಣ, ಪಂಜಾಬ್ ರಾಜ್ಯಗಳ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ವಿಧಾನಸಭಾ ಉಪಚುನಾವಣೆಗಳಲ್ಲಿ ಕೂಡ ಕೃಷಿ ಕಾಯ್ದೆಗಳ ವಿಷಯ ಪ್ರಮುಖ ಚುನಾವಣಾ ವಿಷಯವಾಗಿತ್ತು ಮತ್ತು ಬಿಜೆಪಿಗೆ ಭಾರೀ ಮುಖಭಂಗಕ್ಕೆ ಕಾರಣವಾಗಿತ್ತು.
ಆ ಹಿನ್ನೆಲೆಯಲ್ಲಿ ಮೋದಿಯವರು ಕೃಷಿ ಕಾಯ್ದೆಯ ವಿಷಯದಲ್ಲಿ ಇದೀಗ ತೆಗೆದುಕೊಂಡಿರುವ ಯೂಟರ್ನ್ ಗೆ ಕಾರಣಗಳೇನು ಎಂಬುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಮೊದಲನೆಯದಾಗಿ 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲಾಗಿರುವ ಉತ್ತರಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ; ಈಗಾಗಲೇ ಕೃಷಿ ಪ್ರಧಾನ ಉತ್ತರಪ್ರದೇಶ ಮತ್ತು ಪಂಜಾಬ್ ನಲ್ಲಿ ರೈತ ಸಮುದಾಯ ಬಿಜೆಪಿಯ ವಿರುದ್ಧ ತಿರುಗಿಬಿದ್ದಿರುವ ಸೂಚನೆಗಳು ಸಿಕ್ಕಿವೆ. ಹಾಗಾಗಿ, ಬಿಜೆಪಿಯ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಉತ್ತರಪ್ರದೇಶ ಚುನಾವಣೆ ಗೆಲ್ಲುವ ಉದ್ದೇಶದಿಂದಲೇ ಹೀಗೆ ದಿಢೀರನೇ ರೈತ ಹೋರಾಟದ ಎದುರು ಮಂಡಿಯೂರಿದೆ. ಮುಖ್ಯವಾಗಿ ಚುನಾವಣೆಗಾಗಿಯೇ ಎಲ್ಲವನ್ನೂ ಮಾಡುವ ಮತ್ತು ಚುನಾವಣೆ ಗೆಲುವಿಗಾಗಿಯೇ ರಾಜಕಾರಣ ಎಂಬುದನ್ನು ಅಧಿಕೃತವಾಗಿ ಜಾರಿಗೆ ತಂದಿರುವ ಬಿಜೆಪಿ, ಚುನಾವಣೆಯಲ್ಲಿ ಪೆಟ್ಟು ಬೀಳುವುದು ಖಚಿತ ಎಂಬ ಅಪಾಯವನ್ನು ಅರಿತೇ ಇದೀಗ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ ಎಂಬ ವಿಶ್ಲೇಷಣೆ ಇದೆ.
ಜೊತೆಗೆ ಈ ಹೋರಾಟದ ವಿಷಯದಲ್ಲಿ ತಮ್ಮ ಸರ್ಕಾರ ಮತ್ತು ವೈಯಕ್ತಿಕವಾಗಿ ತಾವು ನಡೆದುಕೊಂಡ ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ‘ವಿಶ್ವಗುರು’, ‘ವಿಶ್ವನಾಯಕ’ ಎಂಬಂತಹ ಪಿಆರ್ ಸರ್ಕಸ್ಸಿನ ವರ್ಚಸ್ಸುಗಳಿಗೆ ಪೆಟ್ಟು ನೀಡಿದೆ ಎಂಬುದು ರೈತ ಹೋರಾಟದ ಆರಂಭವಾದ ಈ ಒಂದು ವರ್ಷದಲ್ಲಿ ಕಳೆದ ತಿಂಗಳು ಕೈಗೊಂಡ ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ಮೋದಿಯವರಿಗೆ ಮನವರಿಕೆಯಾಗಿದೆ. ಆ ಭೇಟಿಯಲ್ಲಿ ಅವರು ಮಾತುಕತೆ ನಡೆಸಿದ ಹಲವು ವಿಶ್ವನಾಯಕರು ಕೃಷಿ ಕಾಯ್ದೆಗಳ ವಿಷಯದಲ್ಲಿ ಮತ್ತು ಅದನ್ನು ವಿರೋಧಿಸುತ್ತಿರುವ ರೈತರ ವಿಷಯದಲ್ಲಿ ಮೋದಿಯವರ ಸರ್ಕಾರದ ದಮನ ನೀತಿಗಳು ಚರ್ಚೆಗೆ ಬಂದಿದ್ದವು. ಆಗ ಕರೋನಾ ಸಂಕಷ್ಟದ ನಡುವೆಯೂ ರೈತರ ಹೋರಾಟ ಹತ್ತಿಕ್ಕಲು ತಾವು ನಡೆಸಿದ ಹುನ್ನಾರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಇಮೇಜಿಗೆ ಹೊಡೆತ ಕೊಟ್ಟಿವೆ ಎಂಬುದು ಮೋದಿಯವರಿಗೆ ಆತಂಕ ತಂದಿತ್ತು. ಈಗ ದಿಢೀರನೇ ಕೃಷಿ ಕಾಯ್ದೆ ವಾಪಸು ಪಡೆಯಲು ಈ ವಿಶ್ವಗುರು ವರ್ಚಸ್ಸು ರಕ್ಷಣೆಯ ಉದ್ದೇಶವೂ ಇದೆ ಎಂಬ ವಾದವೂ ಇದೆ.
ಇನ್ನು ಪ್ರತಿಪಕ್ಷಗಳು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿಯೂ ಕೃಷಿ ಕಾಯ್ದೆಯ ವಿಷಯದಲ್ಲಿ ತಿರುಗಿ ಬೀಳಲಿವೆ. ಸಹಜವಾಗೇ ಪ್ರತಿಪಕ್ಷಗಳ ಪಟ್ಟು ಸಡಿಲಿಸದ ವರಸೆ ಮತ್ತೊಮ್ಮೆ ತಮ್ಮ ಸರ್ಕಾರಕ್ಕೆ ಮಜುಗರ ತರಲಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಸತ್ತಿನ ಈ ಗದ್ದಲ ಸಹಜವಾಗೇ ಕೃಷಿ ಕಾಯ್ದೆಯ ವಿಷಯವನ್ನು ಚುನಾವಣಾ ವಾಗ್ವಾದದ ಮುನ್ನೆಲೆಗೆ ತರಲಿದೆ ಎಂಬ ಕಾರಣವೂ ಮೋದಿಯವರ ಈ ಯೂ ಟರ್ನ್ ಹಿಂದಿದೆ. ಹಾಗಾಗಿ, ಮೋದಿಯವರು ಕೃಷಿಕರ ವಿಷಯದಲ್ಲಿ ಸಹಾನುಭೂತಿಯಿಂದ ಇದ್ದಾರೆ. ಪ್ರಜಾಸತ್ತೆಗೆ ಬದ್ಧರಾಗಿ ಹೋರಾಟಕ್ಕೆ ಮಣಿದಿದ್ದಾರೆ ಮುಂತಾದ ಬಿಜೆಪಿಯ ವ್ಯಾಖ್ಯಾನಗಳ ಹೊರತಾಗಿಯೂ ಅಸಲೀ ಕಾರಣಗಳು ಬಿಜೆಪಿಯ ಚುನಾವಣಾ ಲಾಭ ಮತ್ತು ವೈಯಕ್ತಿಕವಾಗಿ ಮೋದಿಯವರ ವರ್ಚಸ್ಸು ಉಳಿಸಿಕೊಳ್ಳುವ ಯತ್ನ ಇದು ಎಂಬುದನ್ನು ತಳ್ಳಿಹಾಕಲಾಗದು.
ಆದರೆ, ಅಂತಿಮವಾಗಿ ಮೋದಿಯವರ ಉದ್ದೇಶವೇನೇ ಇದ್ದರೂ, ಆ ಉದ್ದೇಶವನ್ನು ಮರೆಮಾಚಿ ಅವರ ಐಟಿ ಸೆಲ್ ಮತ್ತು ಬಿಜೆಪಿಯ ನಾಯಕರು ಏನೇ ಸಬೂಬು, ಸಮರ್ಥನೆಗಳನ್ನು ಹೇಳಿದರೂ, ಕೃಷಿ ಕಾಯ್ದೆಯ ವಿಷಯದಲ್ಲಿ ಮೋದಿಯವರ ಈ ಯೂಟರ್ನ್, ಪ್ರಶ್ನಾತೀತ ನಾಯಕ, ದಿಟ್ಟ ಪ್ರಧಾನಿ ಎಂಬಂತಹ ಅವರ ಕುರಿತ ಕಪೋಲಕಲ್ಪಿತ ಹೆಗ್ಗಳಿಕೆಗಳನ್ನು ಮಣ್ಣುಪಾಲು ಮಾಡಿದೆ ಎಂಬುದನ್ನು ಕೂಡ ಮರೆಯುವಂತಿಲ್ಲ. ಅದೇ ಹೊತ್ತಿಗೆ ಈ ಕಾಯ್ದೆಗಳ ವಿಷಯದಲ್ಲಿ ತಮ್ಮ ಹಠಮಾರಿತನದಿಂದಾಗಿ ಕಳೆದ ಒಂದು ವರ್ಷದಿಂದ ದೇಶಾದ್ಯಂತ ನಡೆದ ನಿರಂತರ ರೈತ ಹೋರಾಟದಿಂದಾಗಿ ಆದ ರೈತರ ಸಾವು-ನೋವು, ಅಪಾರ ಆಸ್ತಿಪಾಸ್ತಿ ನಷ್ಟ, ಬಂದ್ ಮತ್ತು ಪ್ರತಿಭಟನೆಗಳಿಂದಾಗಿ ಆದ ಆರ್ಥಿಕ ನಷ್ಟಗಳ ಹೊಣೆ ಹೊರುವವರು ಯಾರು ಎಂಬುದಕ್ಕೂ ಮೋದಿಯವರ ಉತ್ತರದಾಯಿ ಎಂಬುದನ್ನು ತಳ್ಳಿಹಾಕಲಾಗದು!