
ರಾಜ್ಯದಲ್ಲಿ ಜಾತಿ ಜನಗಣತಿ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಿದೆ. ರಾಜ್ಯ ಸಚಿವ ಸಂಪುಟ ವಿಶೇಷ ಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಆದರೆ ಸಂಪುಟದಲ್ಲಿ ವಿರೋಧ ವ್ಯಕ್ತವಾಯ್ತು. ಸಚಿವರು ಏರು ದನಿಯಲ್ಲಿ ಮಾತನಾಡಿದ್ರಿಂದ ಒಮ್ಮತದ ತೀರ್ಮಾನಕ್ಕೆ ಬರುವುದಕ್ಕೆ ಸಾಧ್ಯವಾಗಲಿಲ್ಲ ಅನ್ನೋ ಮಾಹಿತಿ ಹೊರಬಿದ್ದಿತ್ತು. ಮುಂದೆ ಮೇ 2 ರಂದು ವಿಶೇಷ ಕ್ಯಾಬಿನೆಟ್ನಲ್ಲಿ ಮತ್ತೆ ಚರ್ಚೆ ಮಾಡುವುದಾಗಿಯೂ ಅಧಿಕೃತವಾಗಿ ತಿಳಿಸಿದ್ರು. ಆದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಸಂಪುಟದಲ್ಲಿ ಯಾರು ವಿರೋಧ ಮಾಡಿಲ್ಲ. ಚರ್ಚೆ ಅಪೂರ್ಣವಾಗಿದೆ ಎಂದಿದ್ದಾರೆ.
ನಾನು ಸಂಪುಟದಲ್ಲಿ ಪೂರ್ಣ ಪ್ರಮಾಣ ಚರ್ಚೆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಸಂಪುಟದಲ್ಲಿ ಅನೇಕರು ವಿರೋಧ ಮಾಡಿದ ವಿಚಾರವಾಗಿ ನಾನೇ ಕ್ಯಾಬಿನೆಟ್ ಸಭೆಯಲ್ಲಿದೆ. ಜಾತಿ ಜನಗಣತಿಯ ಚರ್ಚೆಯಲ್ಲಿ ಎಲ್ಲರೂ ಭಾಗಿಯಾಗಿದ್ದೇವೆ. ಅವೈಜ್ಞಾನಿಕ ಎನ್ನುವ ಆರೋಪಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಸಚಿವರಾದ ಶಿವಾನಂದ ಪಾಟೀಲ್ ಹಾಗೂ ಎಂ.ಬಿ ಪಾಟೀಲ್ ನಡುವೆ ವಾದ ವಿವಾದ ನಡೆದಿಲ್ಲ. ಉಪಹಾಪೋಗಳಿಗೆ ಎಡೆ ಮಾಡಿ ಕೊಡುವುದು ಬೇಡ ಎಂದಿದ್ದಾರೆ.

ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಯಾವುದೇ ಸಮಾಜಕ್ಕೆ ಹಾನಿಯಾಗಬಾರದು ಎಂಬ ರೀತಿಯಲ್ಲಿ ತೀರ್ಮಾನ ಆಗಲಿದೆ. ಎಲ್ಲರಿಗೂ ನ್ಯಾಯ ಕೊಡಿಸಬೇಕು ಎಂಬುದು ನಮ್ಮ ಉದ್ದೇಶ. ಮುಂದುವರಿದ ಹಾಗೂ ಹಿಂದುಳಿದ ಸಮುದಾಯಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ರೀತಿಯಲ್ಲಿ ತೀರ್ಮಾನ ಮಾಡುತ್ತೇವೆ. ಆಯೋಗದ ಅಧ್ಯಕ್ಷ, ಸದಸ್ಯ ನೇಮಕ ಮಾಡಿದ್ದು ಕುಮಾರಸ್ವಾಮಿ, ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ ಸರ್ಕಾರ, ಬಿಜೆಪಿ ಅವಧಿಯಲ್ಲಿ ಜಾತಿ ಜನ ಗಣತಿ ಆಗಿದೆ ಎಂದಿದ್ದಾರೆ.

ಜಾತಿ ಗಣತಿಯನ್ನು ಅಧ್ಯಯನ ಮಾಡಿದ್ದು ಬಿಜೆಪಿ ಸರ್ಕಾರ. ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರು ವರದಿ ತಿರಸ್ಕಾರ ಮಾಡಬಹುದು ಇತ್ತು..? ಈಗ ಅವೈಜ್ಞಾನಿಕ ಅವೈಜ್ಞಾನಿಕ ಎನ್ನುತ್ತಾರೆ. ವರದಿಯಲ್ಲಿ ಲೋಪದೋಷ ಇದ್ರೆ ಒಪ್ಪಿಕೊಳ್ಳೊಣ. ಎಲ್ಲಿ ಲೋಪವಾಗಿದೆ ಎಂದು ಸ್ಪಷ್ಟವಾಗಿಲ್ಲ. ಮುಂದಿನ ಕ್ಯಾಬಿನೆಟ್ನಲ್ಲಿ ಚರ್ಚೆಯಾದ ಬಳಿಕ ಒಂದು ನಿರ್ಧಾರಕ್ಕೆ ಬರಬಹುದು ಎಂದಿದ್ದಾರೆ.