2010 ರಲ್ಲಿ ಬಿಜೆಪಿಯು ವಿರೋಧ ಪಕ್ಷದಲ್ಲಿದ್ದಾಗ ಆ ಪಕ್ಷವು ಜಾತಿ ಆಧಾರಿತ ಜನಗಣತಿಯ ಬೇಡಿಕೆಯನ್ನು ಬೆಂಬಲಿಸಿತ್ತು. ಅಲ್ಲದೆ ಸೆಪ್ಟೆಂಬರ್ 2019 ರ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು, ಅಂದಿನ ಗೃಹ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ 2021 ರ ಜನಗಣತಿಯು ಇತರ ಹಿಂದುಳಿದ ಜಾತಿಗಳ ಡೇಟಾವನ್ನು ಹೊಂದಿರುತ್ತದೆ ಎಂದು ಘೋಷಿಸಿದ್ದರು. ಆದರೆ ಈಗ ಅದೇ ಸರ್ಕಾರ ಜಾತಿಗಣತಿ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಈ ಹಿಂಜರಿಕೆಗೆ ಕಾರಣಗಳು ಹಲವು. ಆದರೆ ಜಾತಿ ಅಸಮಾನತೆ, ಸಂಪತ್ತಿನ ವಿತರಣೆಯಲ್ಲಿನ ತಾರತಮ್ಯ, ಮೀಸಲಾತಿ ವಿರೋಧಿ ಮನಸ್ಥಿತಿಗಳಿರುವ ಭಾರತದಂತಹ ದೇಶದಲ್ಲಿ ಒಬಿಸಿಗಳ ಸಂಖ್ಯೆಯನ್ನು ಎಣಿಸುವುದು ಬಹಳ ಮುಖ್ಯವಾಗುತ್ತದೆ.
2020 ರಲ್ಲಿ ಬಿಡುಗಡೆಯಾದ ‘ಆಕ್ಸ್ಫ್ಯಾಮ್’ನ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ 10% ನಷ್ಟು ಜನ ಒಟ್ಟು ಸಂಪತ್ತಿನ 74.3% ನಷ್ಟು ಸಂಪತ್ತನ್ನು ಹೊಂದಿದ್ದರೆ, 40% ಜನ 22.9% ಮತ್ತು 50% ಕೇವಲ 2.8% ದಷ್ಟು ಸಂಪತ್ತನ್ನು ಮಾತ್ರ ಹೊಂದಿದ್ದಾರೆ. ಈ ಮಾಹಿತಿಯು ಭಾರತ ಸಮಾಜದಲ್ಲಿ ಹೆಚ್ಚುತ್ತಿರುವ ವರ್ಗ ಆಧಾರಿತ ಅಸಮಾನತೆಯ ಸ್ಪಷ್ಟ ಚಿತ್ರಣವನ್ನು ನಮಗೆ ನೀಡುತ್ತದೆ. ಆದರೆ ಭಾರತೀಯ ಸಮಾಜವು ಜಾತಿಯ ಆಧಾರದ ಮೇಲೆ ಶ್ರೇಣೀಕೃತವಾಗಿದೆ ಎಂಬ ಅಂಶವನ್ನು ಪರಿಗಣಿಸಿ ನ್ಯಾಯಯುತವಾದ ತೀರ್ಮಾನಕ್ಕೆ ಬರಲು ನಾವು ಭಾರತೀಯ ಜನಸಂಖ್ಯೆಯ ಅಗ್ರ 10%, ಮಧ್ಯಮ 40% ಮತ್ತು ಕೆಳಗಿನ 50% ನಷ್ಟು ಜಾತಿ ಆಧಾರಿತ ಸಂಯೋಜನೆಯತ್ತ ಗಮನ ಕೊಡಲೇ ಬೇಕಾಗುತ್ತದೆ.
2018 ರಲ್ಲಿ ಪ್ರಕಟವಾದ ‘ಭಾರತದಲ್ಲಿ ಸಂಪತ್ತು ಅಸಮಾನತೆ ಮತ್ತು ವರ್ಗ, ಜಾತಿ’ ಎಂಬ ಹೆಸರಿನ ‘World inequality database’ ಸಂಗ್ರಹಿಸಿದ ವರದಿಯ ಪ್ರಕಾರ
1. ಭಾರತದಲ್ಲಿ ಸರಾಸರಿ ಮನೆಯ ಆದಾಯ ರೂ 113, 222. ಮೇಲ್ಜಾತಿ ಗುಂಪುಗಳಲ್ಲಿ ಬ್ರಾಹ್ಮಣರು ರಾಷ್ಟ್ರೀಯ ಸರಾಸರಿಗಿಂತ 48% ಜಾಸ್ತಿ ಆದಾಯ ಗಳಿಸುತ್ತಿದ್ದರೆ ಬ್ರಾಹ್ಮಣೇತರ ಮೇಲ್ಜಾತಿಯವರು 45% ಗಳಿಸುತ್ತಾರೆ. ಮತ್ತೊಂದೆಡೆ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳು ಕ್ರಮವಾಗಿ ರಾಷ್ಟ್ರೀಯ ಸರಾಸರಿಗಿಂತ 34% ಮತ್ತು 21% ಕಡಿಮೆ ಸರಾಸರಿ ಆದಾಯ ಗಳಿಸುತ್ತವೆ. ಒಬಿಸಿ ಗುಂಪುಗಳು ರಾಷ್ಟ್ರೀಯ ಸರಾಸರಿಗಿಂತ 8% ಕಡಿಮೆ ಗಳಿಸುತ್ತವೆ.
2. 50% ಬ್ರಾಹ್ಮಣರು, 31% ರಜಪೂತರು, 44% ಬನಿಯಾ ಮತ್ತು 57% ಕಾಯಸ್ಥರು ಶ್ರೀಮಂತರ ಪಟ್ಟಿಯಲ್ಲಿದ್ದರೆ, ಕೇವಲ 5% ST, 10% SC ಮತ್ತು 16% OBC ಗಳು ಶ್ರೀಮಂತ ವರ್ಗದಲ್ಲಿ ಇದ್ದಾರೆ.
3. ಎಸ್ಸಿ ಸಮುದಾಯಗಳು ಒಟ್ಟು ಸಂಪತ್ತಿನ 7-8% ಅನ್ನು ಹೊಂದಿವೆ (ಅವರ ಜನಸಂಖ್ಯೆಯ ಪಾಲಿಗಿಂತ 11 ಶೇಕಡಾ ಕಡಿಮೆ ಅಂಕಗಳು). ಎಸ್ಟಿ ಸಮುದಾಯಗಳು ಒಟ್ಟು ಸಂಪತ್ತಿನ 5-7% ಅನ್ನು ಹೊಂದಿದ್ದಾರೆ (ಅವರ ಜನಸಂಖ್ಯೆಯ ಪಾಲುಗಿಂತ 1-2 ಶೇಕಡಾ ಕಡಿಮೆ). ಒಬಿಸಿ ಸಮುದಾಯಗಳು 2002 ರಲ್ಲಿ ಒಟ್ಟು ಸಂಪತ್ತಿನ 32% ಸಂಪತ್ತನ್ನು ಹೊಂದಿದ್ದವು, ಇದು 2012 ರಲ್ಲಿ ತುಸುವೇ ಹೆಚ್ಚಾಗಿದ್ದು, ಇದೇ ಸಮಯದಲ್ಲಾದ ಜನಸಂಖ್ಯಾ ಹೆಚ್ಚಳಕ್ಕೆ ಹೋಲಿಸಿದರೆ ಅಂತರವು ಮತ್ತಷ್ಟು ಹದಗೆಟ್ಟಿದೆ. 2002 ರಿಂದ 2012 ರವರೆಗಿನ ಒಟ್ಟು ಸಂಪತ್ತಿನಲ್ಲಿ ಮೇಲ್ಜಾತಿ ಗುಂಪುಗಳ ಪಾಲು 39% ರಿಂದ 41% ಕ್ಕೆ ಏರಿಕೆಯನ್ನು ತೋರಿಸಿದೆ. ಅವರ ಜನಸಂಖ್ಯೆಗೆ ಸಂಬಂಧಿಸಿ ಈ ಗುಂಪು ಈ ಅಂತರವನ್ನು +14% ರಿಂದ +18% ಕ್ಕೆ 10 ವರ್ಷಗಳಲ್ಲಿ ಸುಧಾರಿಸಿದೆ.
4. 2002 ರಿಂದ 2012 ರ ವರೆಗೆ ಟಾಪ್ 10, ಮಧ್ಯಮ 40 ಮತ್ತು ಕೆಳಗಿನ 50 ರಲ್ಲಿನ ಜಾತಿ ಗುಂಪುಗಳ ಸಂಪತ್ತಿನ ಬೆಳವಣಿಗೆ ಮತ್ತು ಸಂಯೋಜನೆಯ ವಿಷಯಗಳಲ್ಲಿ, ಮೇಲ್ವರ್ಗದ ಗುಂಪುಗಳು ಮಾತ್ರ ಅಗ್ರ 10 ಮತ್ತು ಮಧ್ಯದ 40 ರಲ್ಲಿ ಪಾಲು ಹೆಚ್ಚಿಸಿವೆ. ಒಬಿಸಿ ಸಮುದಾಯಗಳಿಗೆ ಸಂಬಂಧಿಸಿದಂತೆ, ಅವರ ಪಾಲು ಮಧ್ಯದ 40 ರಲ್ಲಿ ಹೆಚ್ಚಾಗಿದೆ ಮತ್ತು ಅಗ್ರ 10 ರಲ್ಲಿ ಕುಸಿದಿದೆ.
ಹೀಗಾಗಿ ಮೇಲ್ಜಾತಿಯ ಸಮುದಾಯಗಳು ಭಾರತದ ಸಾಂಪತ್ತಿಕ ವಿತರಣೆಯ ಬಹುಪಾಲನ್ನು ತನ್ನದಾಗಿಸಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ (ಎಸ್ಪಿಪಿಯು), ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಮತ್ತು ಭಾರತೀಯ ದಲಿತ ಅಧ್ಯಯನ ಸಂಸ್ಥೆ ಜಂಟಿಯಾಗಿ ನಡೆಸಿದ ಸಂಶೋಧನೆಗಳೂ ಸಹ ಇದೇ ರೀತಿಯ ತೀರ್ಮಾನಕ್ಕೆ ಬಂದಿದೆ. 2018 ರಲ್ಲಿ ಪ್ರಕಟವಾದ ‘ಭಾರತದಲ್ಲಿ ಸಂಪತ್ತಿನ ಮಾಲೀಕತ್ವ ಮತ್ತು ಅಸಮಾನತೆ: ಒಂದು ಸಾಮಾಜಿಕ-ಧಾರ್ಮಿಕ ವಿಶ್ಲೇಷಣೆ’ ಎಂಬ ಅಧ್ಯಯನದಲ್ಲಿ ಪ್ರಸ್ತುತಪಡಿಸಲಾದ ದಾಖಲೆಯಲ್ಲಿ ” ಒಟ್ಟು ರಾಷ್ಟ್ರೀಯ ಸ್ವತ್ತುಗಳಲ್ಲಿ ಅತ್ಯಧಿಕ ಅಂದರೆ 41% ರಷ್ಟು ಸಂಪತ್ತು ಮೇಲ್ಜಾತಿ ಹಿಂದುಗಳ ಒಡೆತನದಲ್ಲಿದೆ. ಒಬಿಸಿ ಗುಂಪುಗಳಲ್ಲಿ 31%, ಎಸ್ಟಿ ಮತ್ತು ಎಸ್ಸಿಗಳು ಅತ್ಯಂತ ಕಡಿಮೆ ಅಂದರೆ ಕ್ರಮವಾಗಿ 3.7% ಮತ್ರು 7.6% ಮಾತ್ರ ಹೊಂದಿದೆ ಎಂದಿದೆ.

ರಾಷ್ಟ್ರದ ಸಂಪತ್ತನ್ನು ಸಮಾನವಾಗಿ ಹಂಚಬೇಕೆಂದರೆ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ನಿಖರವಾದ ಡೇಟಾವನ್ನು ಹೊಂದಿರಬೇಕು. ಆಗ ಮಾತ್ರ ಒಟ್ಟಾರೆ ಮತ್ತು ಸಮಗ್ರ ಬೆಳವಣಿಗೆಗೆ ಅಗತ್ಯವಾದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ.
ನಮ್ಮ ರಾಷ್ಟ್ರದ ಜಾತಿ ಆಧಾರಿತ ಜನಗಣತಿಯ ವಿರೋಧವು ಪ್ರಾಥಮಿಕವಾಗಿ ಅನೇಕ ಅಂತರ್-ಸಂಬಂಧಿತ ಅಂಶಗಳಿಂದ ಹೊರಹೊಮ್ಮುತ್ತದೆ. ಮೊದಲನೆಯದು ಮೇಲ್ಜಾತಿಯ ಗುಂಪುಗಳು ಸರ್ಕಾರದ ಶಿಕ್ಷಣ, ಆರ್ಥಿಕ ಮತ್ತು ಅಭಿವೃದ್ಧಿ ನೀತಿಗಳ ಪ್ರಾಥಮಿಕ ಫಲಾನುಭವಿಗಳಾಗಿವೆ ಎಂಬ ಅಂಶಕ್ಕೆ ನೇರವಾಗಿ ಸಂಬಂಧಿಸಿದೆ. ಜಾತಿ ಆಧಾರಿತ ಜನಗಣತಿಯು ಈ ಸತ್ಯವನ್ನು ಬಲವಂತವಾಗಿ ಬಹಿರಂಗಪಡಿಸುತ್ತದೆ, ಇದು ಬ್ರಾಹ್ಮಣ ಆಡಳಿತ ವರ್ಗಕ್ಕೆ ತಮ್ಮ ಪ್ರಾಬಲ್ಯಕ್ಕೆ ಧಕ್ಕೆ ತರುವ ಸಮಸ್ಯೆಯಾಗಿದೆ. ಎರಡನೆಯದಾಗಿ, ಹಿಂದು ಸಂಘಟನೆಗಳು ಜಾತಿ ಆಧಾರಿತ ಜನಗಣತಿಯನ್ನು ಅವರ ‘ಹಿಂದೂ’ ಏಕತೆಯ ಯೋಜನೆಗೆ ಬೆದರಿಕೆಯಾಗಿ ನೋಡುತ್ತದೆ ಏಕೆಂದರೆ ಅದು ಅವರ ಯೋಜನೆಯ ಬ್ರಾಹ್ಮಣೀಯ ಸ್ವರೂಪವನ್ನು ಬಹಿರಂಗಪಡಿಸುತ್ತದೆ. ಮೂರನೆಯದಾಗಿ, ಜಾತಿ ಆಧಾರಿತ ಜನಗಣತಿಯು ನವ-ಉದಾರವಾದದ ಬೆಂಬಲಿಗರ ಹುನ್ನಾರಗಳನ್ನು ಬಹಿರಂಗಪಡಿಸುತ್ತದೆ ಅವರು ಜಾತಿಯನ್ನು ನಿರ್ಮೂಲನೆ ಮಾಡಲು ಬಂಡವಾಳಶಾಹಿ ಮತ್ತು ಅದರ ರೂಪಾಂತರಗಳು ಅತ್ಯುತ್ತಮವಾದ ವ್ಯವಸ್ಥೆ ಎಂದು ಹೇಳಿಕೊಳ್ಳುತ್ತಾರೆ.
ಆದರೆ ಇದುವರೆಗೆ ನಡೆದ ಎಲ್ಲಾ ಅಧ್ಯಯನಗಳು ಕಳೆದ 30 ವರ್ಷಗಳ ಆರ್ಥಿಕ ಉದಾರೀಕರಣದಲ್ಲಿ ಕೇವಲ ಮೇಲ್ಜಾತಿ ಗುಂಪುಗಳು ಮತ್ತು ಇತರ ಜಾತಿ ಗುಂಪುಗಳ ನಡುವಿನ ಸಂಪತ್ತಿನ ಅಂತರವು ಮಾತ್ರ ಹೆಚ್ಚಾಗಿದೆ ಎಂದು ತೋರಿಸಿವೆ. ಮೇಲ್ಜಾತಿಯ ಗುಂಪುಗಳು ಮಾತ್ರ ಖಾಸಗೀಕರಣ, ಉದಾರೀಕರಣ ಮತ್ತು ಬಂಡವಾಳಶಾಹಿತ್ವ ಮೊದಲಾದವುಗಳ ಲಾಭವನ್ನು ಪಡೆದಿವೆ. ಹಾಗಾಗಿಯೇ ಜಾತಿ ಗಣತಿ ನಡೆದರೆ ಮೇಲ್ವರ್ಗದ ಗುಂಪುಗಳು ಮೀಸಲಾತಿಯ ಮೇಲಿನ 50% ಮಿತಿಯ ಅನ್ನು ತೆಗೆದು ಹಾಕಲು ದಾರಿ ಮಾಡಿಕೊಡಬಹುದೆಂದು ಭಯಪಡುತ್ತಾರೆ ಮತ್ತು ಇದನ್ನು ಅವರು ತಮ್ಮ ಆರ್ಥಿಕತೆಯ ಮೇಲಿನ ಆಕ್ರಮಣವೆಂದು ಪರಿಗಣಿಸುತ್ತಾರೆ.
ಪ್ರಸ್ತುತ ಮೀಸಲಾತಿ ವ್ಯವಸ್ಥೆಯ ವಿರುದ್ಧ ಸಾಮಾನ್ಯವಾಗಿ ಬಳಸುವ ಒಂದು ವಾದವೆಂದರೆ ಅದು ಕೇವಲ ಹತ್ತು ವರ್ಷಗಳವರೆಗೆ ಮಾತ್ರ ಚಾಲ್ತಿಯಲ್ಲಿರಬೇಕು ಎಂದು ಜಾರಿಮಾಡಿದ್ದಾಗಿತ್ತು ಎನ್ನುವುದಾಗಿದೆ. ಬ್ರಾಹ್ಮಣರ ಗುಂಪುಗಳು ಮೀಸಲಾತಿಯನ್ನು ‘ಬಡತನ ನಿರ್ಮೂಲನೆ ಕಾರ್ಯಕ್ರಮ’ ಎಂದು ತಪ್ಪಾಗಿ ಅರ್ಥೈಸುತ್ತವೆ ಮತ್ತು ಅದಕ್ಕಾಗಿಯೇ ಅವರು ಮೀಸಲಾತಿ ವ್ಯವಸ್ಥೆಯನ್ನು ಜಾತಿಯ ಆಧಾರದ ಮೇಲೆ ಮಾಡಬಾರದು ವರ್ಗವನ್ನು ಆಧರಿಸಿ ಮಾಡಬೇಕು ಎಂದು ವಾದಿಸುತ್ತಾರೆ.
ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವು, ಒಬಿಸಿ ಗಣತಿಯನ್ನು ಹೊಂದಿರುವುದರಿಂದ ಮೇಲ್ಜಾತಿಯ ಪ್ರಾಬಲ್ಯದ ಅಡಿಯಲ್ಲಿ ಹಲವಾರು ರಾಜ್ಯಗಳಲ್ಲಿ ತಮ್ಮ ಅಜೆಂಡಾ ಜಾರಿಗಾಗಿ ನಿರ್ಮಿಸಲಾದ ಜಾತಿ ಮೈತ್ರಿಗಳ ಒಗ್ಗಟ್ಟನ್ನು (ಪ್ರಬಲವಲ್ಲದ ಒಬಿಸಿ ಗುಂಪುಗಳು) ಕುಗ್ಗಿಸಬಹುದು ಎಂದು ಹೆದರುತ್ತದೆ. ಒಬಿಸಿ ಸಮುದಾಯಗಳ ನಿಜವಾದ ಸಂಖ್ಯೆಗಳು ಹೊರಬಂದರೆ ಇದು ಪ್ರಸ್ತುತ ಮೀಸಲಾತಿ ವ್ಯವಸ್ಥೆಯ ಸಂರಚನೆಯನ್ನು ಪುನರ್ರಚಿಸುವ ಬೇಡಿಕೆಯನ್ನು ಪೂರೈಸಬೇಕಾದೀತು ಮತ್ತು ಮೀಸಲಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮತ್ತು ಅಂತಿಮವಾಗಿ ಕಿತ್ತುಹಾಕುವ ಯೋಜನೆಗೆ ದೊಡ್ಡ ಮತ್ತು ನಿರ್ಣಾಯಕ ಹೊಡೆತ ಬೀಳಬಹುದು ಎಂದು ಅವರು ಭಯಪಡುತ್ತಾರೆ.
ಪ್ರಸ್ತುತ, ಸಾರ್ವಜನಿಕ ವಲಯದ ಕಂಪನಿಗಳು ಮತ್ತು ರಾಷ್ಟ್ರೀಯ ಸ್ವತ್ತುಗಳು ಹಿಂದೆಂದೂ ಕಾಣದ ರೀತಿಯಲ್ಲಿ ಮಾರಾಟವಾಗುತ್ತಿರುವಾಗ ಖಾಸಗಿ ವಲಯದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ವಿಸ್ತರಿಸುವ ತುರ್ತು ಅಗತ್ಯವೂ ಇದೆ. ಸರ್ಕಾರವು ರಾಷ್ಟ್ರೀಯ ಕಂಪನಿಗಳನ್ನು ಮಾರಾಟ ಮಾಡುವುದನ್ನು ಮುಂದುವರಿಸಿದರೆ, ಸಾರ್ವಜನಿಕ ವಲಯದಲ್ಲಿ ಉದ್ಯೋಗಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಮೀಸಲಾತಿ ವ್ಯವಸ್ಥೆ ಮತ್ತು ಅದರ ಹಿನ್ನೆಲೆಯಲ್ಲಿನ ಸಾಮಾಜಿಕ ನ್ಯಾಯವು ಅರ್ಥಹೀನವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಒಬಿಸಿ ಗಣತಿಯನ್ನು ಧರ್ಮ ಆಧಾರದಲ್ಲಿ ಮಾಡಬಾರದು. ಭಾರತದಲ್ಲಿ ಜಾತಿಗಳು ಅಸ್ತಿತ್ವದಲ್ಲಿರುವವರೆಗೂ ಈ ತಾರತಮ್ಯ ಮತ್ತು ಸಾಂಪತ್ತಿಕ ವಿತರಣೆಯಲ್ಲಿನ ಅಸಮಾನತೆ ಅಸ್ತಿತ್ವದಲ್ಲಿರುತ್ತದೆ. ಜಾತಿಗಣತಿ ಸರಿಯಾದ ರೀತಿಯಲ್ಲಿ ನಡೆದರೆ ಸಾಂಪತ್ತಿಕ ವಿತರಣೆಯು ಹೇಗೆ ಮಾಡಬೇಕು ಮತ್ತು ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಮೀಸಲಾತಿಯ ಪುನರ್ಸಂರಚನೆ ಹೇಗೆ ಆಗಬೇಕು ಎನ್ನುವ ಸ್ಪಷ್ಟ ಚಿತ್ರಣ ಸಿಗಬಹುದು.