ಶ್ರೀಲಂಕಾದ ಪ್ರತಿಯೊಂದು ಬ್ಯಾಂಕು ವಿದೇಶಿ ಕರೆನ್ಸಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಸರ್ಕಾರವು ವಿದೇಶಕ್ಕೆ ಕಳುಹಿಸಬಹುದಾದ ಹಣದ ಮೇಲೆ ಮಿತಿ ಹಾಕಿದೆ. ಪ್ರತಿದಿನ ನೂರಾರು ಜನರು ತುರ್ತು ಅಗತ್ಯಗಳಿಗಾಗಿ ಅಮೂಲ್ಯವಾದ US ಡಾಲರ್ಗಳನ್ನು ಪಡೆಯುವ ಆಶಯದೊಂದಿಗೆ ಬ್ಯಾಂಕುಗಳಿಗೆ ಭೇಟಿ ನೀಡುತ್ತಿದ್ದಾರೆ. ಕೊರೊನಾ ಮೂರನೇ ಅಲೆ, ಒಂದರ ಹಿಂದೊಂದರಂತೆ ಲಾಕ್ಡೌನ್ಗಳನ್ನು ಹೇರಿದ್ದು ದ್ವೀಪ ರಾಷ್ಟ್ರದಾದ್ಯಂತ ಅನಿಶ್ಚಿತ ಪರಿಸ್ಥಿತಿಯನ್ನು ಸೃಷ್ಟಿಸಿದೆ. ವಿದೇಶಿ ನಿಕ್ಷೇಪಗಳು ಆತಂಕಕಾರಿ ದರದಲ್ಲಿ ಕ್ಷೀಣಿಸುತ್ತಿವೆ ಮತ್ತು ನಗದಿನ ಒಳಹರಿವನ್ನು ಹೊರಹರಿವಿನೊಂದಿಗೆ ಹೋಲಿಸಿದಾಗ ಪರಿಸ್ಥಿತಿ ಆಶಾದಾಯಕವಾಗಿಲ್ಲ.
ರಾಜಪಕ್ಸೆ ಸರ್ಕಾರವು ಹಣದುಬ್ಬರವನ್ನು ನಿಯಂತ್ರಿಸಲು ಆಹಾರ ತುರ್ತುಸ್ಥಿತಿಯನ್ನು ಹೇರಿದೆ. ಮೋಟಾರ್ ವಾಹನಗಳು, ದುಬಾರಿ ಟೈರುಗಳು, ಫ್ಲೋರಿಂಗ್ ಟೈಲ್ಸ್, ಪೀಠೋಪಕರಣಗಳು, ಗ್ಯಾಜೆಟ್ಗಳು, ಕೆಲವು ನಿರ್ಮಾಣ ಸಾಮಗ್ರಿಗಳು ಮುಂತಾದ ಅನಗತ್ಯ ವಸ್ತುಗಳ ಆಮದನ್ನು ನಿಷೇಧಿಸುವ ಮೂಲಕ ಸರ್ಕಾರವು ಆಮದುಗಳ ಮೇಲೆ ತೀವ್ರ ನಿರ್ಬಂಧಗಳನ್ನು ಹಾಕಿದೆ.
2020ರ ಜನವರಿ ವರೆಗೆ ಉಜ್ವಲ ಭವಿಷ್ಯ ಹೊಂದಿದ ಶ್ರೀಲಂಕಾಗೆ ಏಕಾಏಕಿ ಕೊರೋನಾ ಹೊಡೆತ.!!
ವಿಶ್ವಬ್ಯಾಂಕಿನ ಪ್ರಕಾರ ಶ್ರೀಲಂಕಾ ಇಡೀ ದಕ್ಷಿಣ ಏಷ್ಯಾದ ಏಕೈಕ ಉನ್ನತ ಮಧ್ಯಮ ಆದಾಯದ ಗುಂಪಿಗೆ ಸೇರಿದ ರಾಷ್ಟ್ರವಾಗಿದೆ. 100% ಸಾಕ್ಷರತೆ ಪ್ರಮಾಣವನ್ನು ಹೊಂದಿದೆ ಮತ್ತು ಇತರ ಪ್ರದೇಶಗಳಲ್ಲಿ ಮಾನವ ಸೂಚ್ಯಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜನವರಿ 2020 ರಲ್ಲಿ ಶ್ರೀಲಂಕಾದವರಿಗೆ ಭವಿಷ್ಯವು ಉಜ್ವಲವಾಗಿ ಕಂಡಿತ್ತು. ಆದರೆ ಒಂದು ತಿಂಗಳ ನಂತರ ಕೋವಿಡ್ 19 ಜಗತ್ತನ್ನು ಅಪ್ಪಳಿಸಿತು, ಅದರೊಂದಿಗೆ ದ್ವೀಪ ರಾಷ್ಟ್ರದ ಸಾಮಾನ್ಯ ಜನರ ಜೀವನವು ರಾತ್ರೋರಾತ್ರಿ ತಲೆಕೆಳಗಾಯಿತು. ಶ್ರೀಲಂಕಾ ಕೋವಿಡ್ ಮೊದಲ ಅಲೆಯನ್ನು ಉತ್ತಮವಾಗಿ ನಿರ್ವಹಿಸಿದರೂ, ಎರಡನೆಯ ಮತ್ತು ಮೂರನೇ ಅಲೆಗಳು ದೇಶದ ಆರ್ಥಿಕತೆ ಮತ್ತು ಸಾಮಾಜಿಕ ಜೀವನಕ್ಕೆ ಹೊಡೆತ ಕೊಟ್ಟಿತು. ಇದರಿಂದ ದ್ವೀಪ ರಾಷ್ಟ್ರಕ್ಕೆ ಭಾರೀ ನಷ್ಟ ಉಂಟಾಗಿದೆ. ಡೆಲ್ಟಾ ರೂಪಾಂತರವು ಜನರನ್ನು ಆಪೋಷನ ಪಡೆಯುತ್ತಿದೆ. ಇತ್ತೀಚೆಗೆ ಶ್ರೀಲಂಕಾದ ಮಾಜಿ ವಿದೇಶಾಂಗ ಮತ್ತು ಹಣಕಾಸು ಸಚಿವ ಮಂಗಳಾ ಸಮರವೀರ ಅವರು ಡೆಲ್ಪಾ ರೂಪಾಂತರಿ ವೈರಸ್ಗೆ ಬಲಿಯಾಗಿದ್ದಾರೆ. ಅಷ್ಟು ಭೀಕರವಾಗಿ ಲಂಕಾ ನಡುಗಿತು.
ವಿಶ್ವದ ಅಗ್ರ 10 ಪ್ರವಾಸಿ ತಾಣಗಳಲ್ಲಿ ಶ್ರೀಲಂಕಾ ಕೂಡ ಒಂದು.!!
22 ದಶಲಕ್ಷ ಜನರ ಸಾಧಾರಣ ಜನಸಂಖ್ಯೆಯನ್ನು ಹೊಂದಿರುವ ಶ್ರೀಲಂಕಾ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೆಚ್ಚಿನ ಆಹಾರ ಉತ್ಪನ್ನಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಭಾರತ ಸೇರಿದಂತೆ ನೆರೆಯ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಶ್ರೀಲಂಕಾ ಹೆಚ್ಚು ಉತ್ಪಾದನಾ ಕೈಗಾರಿಕೆಗಳನ್ನು ಹೊಂದದೆ ಇರುವದೇ ಇದಕ್ಕೆ ಪ್ರಮುಖ ಕಾರಣ. ಶ್ರೀಲಂಕಾವನ್ನು ವಿಶ್ವದ ಅಗ್ರ 10 ಪ್ರವಾಸಿ ತಾಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ವರ್ಷಕ್ಕೆ 2 ಮಿಲಿಯನ್ ಪ್ರವಾಸಿಗರು ಈ ದ್ವೀಪ ರಾಷ್ಟ್ರವನ್ನು ನೋಡಲು ಇಷ್ಟ ಪಡುತ್ತಾರೆ. ಜಿಡಿಪಿಗೆ ಪ್ರವಾಸೋದ್ಯಮ ವಲಯದ ಕೊಡುಗೆ 5% ಆಗಿದ್ದರೂ, ಇದು 30 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಪ್ರತಿ ವರ್ಷ 4 ಬಿಲಿಯನ್ ಯುಎಸ್ ಡಾಲರ್ನಷ್ಟು ಆದಾಯವನ್ನುಗಳಿಸುತ್ತಿದೆ. ಆದರೆ ಈಗ ಇಡೀ ಪ್ರವಾಸೋದ್ಯಮ ಬಹುತೇಕ ಸತ್ತುಹೋಗಿದೆ. ಪ್ರವಾಸೋದ್ಯಮದ ಮೇಲೆ ಅವಲಂಬಿಸಿರುವ ಜನ ಸದ್ಯ ನಷ್ಟದಿಂದ ಪಾರಾಗಲು ಪವಾಡವನ್ನು ಎದುರು ನೋಡುತ್ತಿದ್ದಾರೆ.
ಕೋವಿಡ್ 19 ಲಾಕ್ಡೌನ್ ನಿಂದ ಆಮದು & ರಫ್ತು ವ್ಯವಹಾರಕ್ಕೆ ಹೊಡೆತ.!!
ಇದೇ ಪರಿಸ್ಥಿತಿ ಇನ್ನೂ ಆರು ತಿಂಗಳು ಮುಂದುವರಿದರೆ ಶ್ರೀಲಂಕಾ ಪ್ರವಾಸೋದ್ಯಮದ ಶೇ.50 ಕ್ಕಿಂತಲೂ ಹೆಚ್ಚು ಭಾಗ ಶಾಶ್ವತವಾಗಿ ಮುಚ್ಚಿಹೋಗಿ, ಲಕ್ಷಾಂತರ ಜನರು ನಿರುದ್ಯೋಗಿಗಳಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು ಸಂಭವಿಸಿದಲ್ಲಿ ಭಯಾನಕ ಸನ್ನಿವೇಶ ಸೃಷ್ಟಿಯಾಗುತ್ತೆ. ನಮಗೆ ಹಣದ ಹರಿವು ಸಂಪೂರ್ಣವಾಗಿ ನಿಂತಿದೆ ಎಂದು ಕೊಲಂಬೋದ ಪ್ರಮುಖ ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಶ್ರೀಲಂಕಾ ಚಹಾ, ದಾಲ್ಚಿನ್ನಿ, ಮಸಾಲೆಗಳು, ಸಮುದ್ರ ಆಹಾರ ಉತ್ಪನ್ನಗಳು, ರತ್ನಗಳು ಮತ್ತು ಉಡುಪುಗಳನ್ನು ರಫ್ತು ಮಾಡುತ್ತದೆ. ಈ ಮೂಲಕ ಪ್ರತಿ ವರ್ಷ ಆರು ಶತಕೋಟಿ ಡಾಲರ್ಗಳಷ್ಟು ವಿದೇಶಿ ಕರೆನ್ಸಿಗಳನ್ನುಗಳಿಸುತ್ತಿದೆ. ಕೋವಿಡ್ 19 ಲಾಕ್ಡೌನ್ ನಿಂದ ಈ ಉತ್ಪನ್ನಗಳಿಗೆ ಪ್ರಸ್ತುತ ಡಿಮ್ಯಾಂಡೇ ಇಲ್ಲದಂತೆ ಆಗಿದೆ. ಕೊರೊನಾದಿಂದಾಗಿ ರಫ್ತು ಮತ್ತು ಆಮದು ವ್ಯವಹಾರಗಳಿಗೆ ದೊಡ್ಡ ಹೊಡೆತ ಬಿದ್ದಿದೆ.
25% ಕ್ಕೆ ಇಳಿದ ವಿದೇಶಿ ಹಣದ ಹರಿವು.!!
ಶ್ರೀಲಂಕಾದ ವಲಸಿಗರು ದ್ವೀಪ ರಾಷ್ಟ್ರದ ಮುಖ್ಯ ಆದಾಯದ ಮೂಲ. ಅರಬ್ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ದುಡಿಯುತ್ತಿರುವ ಶ್ರೀಲಂಕನ್ನರು ಪ್ರತಿವರ್ಷ ಸುಮಾರು 1.5 ಬಿಲಿಯನ್ ಯುಎಸ್ ಡಾಲರ್ಗಳನ್ನು ತವರಿಗೆ ಕಳುಹಿಸುತ್ತಾರೆ. ಕೊರೊನಾ ಈ ಹಣ ರವಾನೆಯ ಮೇಲೂ ಪರಿಣಾಮ ಬೀರಿದೆ, ಈ ವರ್ಷ ಕನಿಷ್ಠ 25%ನಷ್ಟು ಇಳಿಕೆಯಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ದೇಶ ಎದುರಿಸುತ್ತಿರುವ ಅಗಾಧ ಬಿಕ್ಕಟ್ಟನ್ನು ನಿವಾರಿಸಲು, ಸೆಂಟ್ರಲ್ ಬ್ಯಾಂಕ್ ಆಫ್ ಶ್ರೀಲಂಕಾ (CBSL) ಭಾರತ, ಚೀನಾ ಮತ್ತು ಬಾಂಗ್ಲಾದೇಶದೊಂದಿಗೆ ಕರೆನ್ಸಿ ವಿನಿಮಯಕ್ಕೆ ಮುಂದಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿಧಿಸಲಾಗಿರುವ ಆಹಾರ ತುರ್ತುಪರಿಸ್ಥಿತಿಯಿಂದ ಕಾಳಧನ ಮತ್ತು ಕಪ್ಪು ಮಾರುಕಟ್ಟೆ ಬಾಗಿಲು ತೆರೆದಿದೆ. ಸಾಮಾನ್ಯ ಜನರ ಪರಿಸ್ಥಿತಿಯನ್ನು ಇದು ಮತ್ತಷ್ಟು ದುಸ್ಥಿತಿಗೆ ತಳ್ಳುತ್ತದೆ. ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್ (CBSL) ವಿದೇಶಿ ಕರೆನ್ಸಿಗಳನ್ನು ನಿರ್ವಹಿಸಲು ಆಯಾ ಬ್ಯಾಂಕುಗಳಿಗೆ ಅಧಿಕಾರ ನೀಡಿದೆ. ಆದರೆ ವಿನಿಮಯ ದರವು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಯುಎಸ್ ಡಾಲರ್ ಶುಕ್ರವಾರ LKR 230 ಕ್ಕೆ ಮಾರಾಟವಾಗುತ್ತಿದೆ ಮತ್ತು ಭಾರತೀಯ ರೂಪಾಯಿ LKR 3 ಕ್ಕೆ ಮಾರಾಟವಾಗುತ್ತಿದೆ. ಸಿಬಿಎಸ್ಎಲ್ ತನ್ನ ಪ್ರಾಥಮಿಕ ಜವಾಬ್ದಾರಿಗಳನ್ನು ತ್ಯಜಿಸಿದಂತಿದೆ. ಬ್ಯಾಂಕುಗಳು ಈಗ ಖಾಸಗಿ ಹಣಕಾಸು ಕಂಪನಿಗಳಂತೆ ಕಾರ್ಯನಿರ್ವಹಿಸುತ್ತಿವೆ. ಇದು ನಿಜಕ್ಕೂ ಆಘಾತಕಾರಿ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಶಿರಾಣಿ ಸೇನನಾಯಕೆ ಎಂಬವರು ಯುಎಸ್ಎನಲ್ಲಿರುವ ತನ್ನ ಮಗಳ ಶಿಕ್ಷಣಕ್ಕಾಗಿ ಹಣವನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಒಬ್ಬಳೇ ಮಗಳು ನ್ಯೂಯಾರ್ಕ್ನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾಳೆ ಮತ್ತು ಪ್ರಸ್ತುತ ಶೈಕ್ಷಣಿಕ ಅವಧಿಗೆ ಆಕೆಗೆ ತಕ್ಷಣ ಹಣದ ಅಗತ್ಯವಿದೆ. ಆದರೆ, ಆಕೆಯ ತಾಯಿಗೆ ಕೊಲಂಬೊದಲ್ಲಿರುವ ತನ್ನ ಬ್ಯಾಂಕಿನಿಂದ 3000 ಅಮೆರಿಕನ್ ಡಾಲರ್ಗಳನ್ನು ಕಳುಹಿಸಲು ಸಾಧ್ಯವಾಗಲಿಲ್ಲ. ಉದ್ದದ ಸರತಿ ಸಾಲು ಇರುವುದರಿಂದ ಬ್ಯಾಂಕ್ ಆಕೆಯನ್ನು ವೇಯ್ಟಿಂಗ್ ಲಿಸ್ಟ್ನಲ್ಲಿ ಇರಿಸಿದೆ. ದೂರದ ದೇಶದಲ್ಲಿರುವ ಮಗಳ ವಿದ್ಯಾಭ್ಯಾಸಕ್ಕೆ ಅಡ್ಡಿ ಆಗಬಾರದೆಂದು ಇತರೆ ಮಾರ್ಗಗಳ ಮೂಲಕ ಹಣ ತಲುಪಿಸಲು ಯತ್ನಿಸುತ್ತಿದ್ದಾರೆ. ಆದರೆ ಬೇರೆ ಯಾವುದೇ ಆಯ್ಕೆಗಳಿಲ್ಲ ಎಂದು ಮನವರಿಕೆಯಾಗಿ ಹತಾಷೆಗೊಂಡಿದ್ದಾರೆ ಎಂದು ಅಲ್ಜಝೀರ್ ವರದಿ ಮಾಡಿದೆ.
ಮತ್ತೆ ಪುಟಿದೇಳುವ ವಿಶ್ವಾಸ ವ್ಯಕ್ತಪಡಿಸುತ್ತಿರುವ ಶ್ರೀಲಂಕಾ.!!
ದಿನನಿತ್ಯದ ಕಷ್ಟಗಳ ಹೊರತಾಗಿಯೂ ಶ್ರೀಲಂಕಾದ ಜನರು ಇನ್ನೂ ನಗುವುದನ್ನು ಮರೆತಿಲ್ಲ. ಸದ್ಯದ ಪರಿಸ್ಥಿತಿ ರಾಷ್ಟ್ರಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ ಎಂದೇ ಧೈರ್ಯಗೆಡೆದೆ ಇದ್ದಾರೆ. “ನಾವು ಈ ಹಿಂದೆ ಸಾಕಷ್ಟು ಕೆಟ್ಟದ್ದನ್ನು ನೋಡಿದ್ದೇವೆ. 1970 ರ ದಶಕದಲ್ಲಿ, ನಾವು ತೀವ್ರ ಆಹಾರ ಬಿಕ್ಕಟ್ಟನ್ನು ಎದುರಿಸಿದ್ದೆವು, ಮಾರ್ಕ್ಸಿಸ್ಟ್ ಜೆವಿಪಿ ಹಿಂಸಾತ್ಮಕ ಚಳುವಳಿಯನ್ನು ಮುನ್ನಡೆಸಿತು. 30 ವರ್ಷಗಳ ಕ್ರೂರ ಅಂತರ್ಯುದ್ಧ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಕೊಂದಿತು. 2004ರ ವಿನಾಶಕಾರಿ ಸುನಾಮಿ ಮತ್ತು ಇತ್ತೀಚಿನ ಈಸ್ಟರ್ ಬಾಂಬ್ ಸ್ಫೋಟಗಳು. ಪ್ರತಿ ಬಿಕ್ಕಟ್ಟಿನ ನಂತರ ನಾವು ಹೆಚ್ಚು ಬಲಶಾಲಿಯಾಗಿದ್ದೇವೆ. ನಾನು ಬೇಗನೆ ಚೇತರಿಸಿಕೊಳ್ಳುವ ಭರವಸೆ ಹೊಂದಿದ್ದೇವೆ. ನಾವು ಖಂಡಿತವಾಗಿಯೂ ಶೀಘ್ರದಲ್ಲೇ ಪುಟಿದೇಳುತ್ತೇವೆ ”ಎಂದು ಪ್ರಮುಖ ಪ್ರವಾಸೋದ್ಯಮ ಕ್ಷೇತ್ರದ ತಜ್ಞ ಚಂದನ ಅಮರದಾಸ ವಿಶ್ವಾಸ ವ್ಯಕ್ತಪಡಿಸಿದ್ದಾರೆ