ಬೆಂಗಳೂರು:ಏ.೦೨: ಒಂದು ದೇಶವನ್ನು ಮುನ್ನಡೆಸಲು ಉತ್ತಮ ನಾಯಕತ್ವ ಅವಶ್ಯಕ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನನ್ನು ಉತ್ತಮವಾಗಿ ನೋಡಿಕೊಂಡು, ಕಷ್ಟ ಸುಖಕ್ಕೆ ಆಗುವ ನಾಯಕನನ್ನು ಆಯ್ಕೆ ಮಾಡಲು ಪ್ರತಿ 5 ವರ್ಷಗಳಿಗೆ ಒಮ್ಮೆ ಚುನಾವಣೆ ನಡೆಸಲಾಗುತ್ತದೆ. ಪಕ್ಷ ನೋಡಿ ಮತ ಹಾಕುವ ಬದಲು ನಾಯಕನನ್ನು ನೋಡಿ ಮತ ಹಾಕಬೇಕು ಎನ್ನುವುದು ಸತ್ಯ. ನನಗೆ ನಾಯಕನಾದವನು ನನ್ನ ಹಿತಾಸಕ್ತಿಗಾಗಿ ಕೆಲಸ ಮಾಡುವ ಅವಶ್ಯಕತೆ ಇರುತ್ತದೆ. ನಮ್ಮ ಮನೆಯ ಯಜಮಾನಿಕೆಯನ್ನು ನನ್ನ ಅಪ್ಪನಿಗೆ ಕೊಡುವುದು ಉತ್ತಮ. ಯಾಕಂದರೆ ಅಪ್ಪ ಎಲ್ಲಾ ಮಕ್ಕಳನ್ನು ಸಮಾನವಾಗಿ ನೋಡಿಕೊಳ್ಳುತ್ತಾನೆ. ಅದನ್ನು ಬಿಟ್ಟರೆ ಅಮ್ಮನಿಗೂ ಕೊಡಬಹುದು. ಇಲ್ಲದಿದ್ದರೆ ಅಜ್ಜ, ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ ಕೂಡ ನಮ್ಮ ಮನೆಯನ್ನು ಮುನ್ನಡೆಸಲು ಪೈಪೋಟಿ ನಡೆಸುವುದರಲ್ಲಿ ಅರ್ಥವಿದೆ. ಆದರೆ ಪಕ್ಕದ ಮನೆಯ ನಾಯಕನಿಗೆ ಅಧಿಕಾರ ಕೊಡುವುದು ಎಷ್ಟು ಸೂಕ್ತ ಎನ್ನುವುದು ಈಗ ಸೃಷ್ಟಿಯಾಗಿರುವ ಪ್ರಶ್ನೆ.

ಕಾಂಗ್ರೆಸ್ನಲ್ಲಿ ನಾಯಕತ್ವದ ಜೊತೆಗೆ ಪೈಪೋಟಿ..!

ಕಾಂಗ್ರೆಸ್ನಲ್ಲಿ ನಾಯಕತ್ವಕ್ಕೆ ಕೊರತೆಯಿಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಎಂಬಿ ಪಾಟೀಲ್, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹತ್ತು ಹಲವು ನಾಯಕರಿದ್ದಾರೆ. ಓರ್ವ ಮುಖ್ಯ ನಾಯಕ ಮುಂದೆ ಸಾಗುತ್ತಿದ್ದರೆ, ಹಿಂದೆ ಹತ್ತಾರು ನಾಯಕರು ಜನರಿಗಾಗಿ ಹೆಗಲು ಕೊಡುವುದಕ್ಕೆ ಸಿದ್ದರಿದ್ದಾರೆ. ಜನರು ತಮ್ಮ ಕ್ಷೇತ್ರದಲ್ಲಿ ಉತ್ತಮ ಅಬ್ಯರ್ಥಿ ಯಾರು ಎನ್ನುವುದನ್ನು ನೋಡುವ ಜೊತೆಗೆ ಕರ್ನಾಟಕದಲ್ಲಿ ಅಧಿಕಾರ ಹಿಡಿಯಬಹುದಾದ ಸಂಭವನೀಯ ನಾಯಕರ ಮುಖ ನೋಡಿಕೊಂಡು ಮತ ಚಲಾವಣೆ ಮಾಡುವುದರಲ್ಲಿ ಅರ್ಥವಿದೆ. ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಬ್ಯರ್ಥಿಗಿಂತ ಜೆಡಿಎಸ್, ಬಿಜೆಪಿ ಆಯ್ಕೆ ಮಾಡಿರುವ ಅಭ್ಯರ್ಥಿ ಉತ್ತಮ ಎನ್ನುವುದಾದರೆ ಜನರು ಮತಗಳ ಮೂಲಕ ಆಯ್ಕೆಯನ್ನು ತೀರ್ಮಾನ ಮಾಡುತ್ತಾರೆ. ಅಂತಿಮವಾಗಿ ಕರುನಾಡನ್ನು ಅಳುವ ನಾಯಕ ಇಂತಹ ಪಕ್ಷದಲ್ಲಿ ಇಂತವರು ಎನ್ನುವುದು ಜನರಿಗೆ ಗೊತ್ತಿದೆ.
ಜೆಡಿಎಸ್ನಲ್ಲಿ ಸಾಕಷ್ಟು ನಾಯಕರಿದ್ದರೂ ಗೊಂದಲವಿಲ್ಲ..!

ಜೆಡಿಎಸ್ನಲ್ಲಿ ನಾಯಕರನ್ನು ಬೆಳೆಸುವುದಿಲ್ಲ ಎನ್ನುವ ಆರೋಪ ಮಾಡಿಕೊಂಡೇ ಸಾಕಷ್ಟು ಜನರು ಪಕ್ಷ ಬಿಟ್ಟು ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಾರೆ. ಈ ಬಾರಿ ಕೂಡ ನಾಲ್ಕೈದು ಶಾಸಕರು ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ಕೋಲಾರದಲ್ಲಿ ಶ್ರೀನಿವಾಸಗೌಡ, ಗುಬ್ಬಿ ವಾಸು, ಅರಸೀಕೆರೆ ಶಿವಲಿಂಗೇಗೌಡ, ಅರಕಲಗೂಡು ಎ.ಟಿ ರಾಮಸ್ವಾಮಿ ಹೀಗೆ ಸಾಕಷ್ಟು ಜನರು ಪಕ್ಷ ಬಿಟ್ಟಿದ್ದಾರೆ. ಆದರೆ ಇಂದು ಬಿಜೆಪಿ, ಕಾಂಗ್ರೆಸ್ನಲ್ಲಿ ಮುಂಚೂಣಿಯಲ್ಲಿ ಇರುವ ಬಹುತೇಕ ನಾಯಕರು ರಾಜಕೀಯ ಶಕ್ತಿಯನ್ನು ಪಡೆದುಕೊಂಡಿದ್ದು ಜೆಡಿಎಸ್ ಪಕ್ಷದಲ್ಲಿ ಎನ್ನುವುದನ್ನು ಜನರು ಗಮನಿಸಬೇಕು. ಅಂದರೆ ಜೆಡಿಎಸ್ ಸಾಕಷ್ಟು ನಾಯಕರನ್ನು ಬೆಳೆಸುವಲ್ಲಿ ಶ್ರಮವಹಿಸಿದೆ. ವೈಯಕ್ತಿಕ ಕಾರಣಗಳು ಹಾಗಿ ಈರ್ಷೆಗಳಿಗಾಗಿ ಪಕ್ಷವನ್ನು ಬಿಟ್ಟು ಹೋಗುವಾಗ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಜೆಡಿಎಸ್ ಪಕ್ಷವನ್ನು ಬೆಂಬಲಿಸಲು ಪ್ರಮುಖವಾಗಿ ಕುಮಾರಸ್ವಾಮಿ ನಾಯಕತ್ವ ಇದೆ. ಜೆಡಿಎಸ್ನಿಂದ ಗೆಲುವು ಸಾಧಿಸಿದರೆ ಮುಖ್ಯಮಂತ್ರಿ ಆಗುವುದು ಕುಮಾರಸ್ವಾಮಿ ಅನ್ನೋದು ಸತ್ಯ.
ಬಿಜೆಪಿಯಲ್ಲಿ ನಾಯಕತ್ವ ಇದೆ.. ಆದರೆ ರಾಜ್ಯದಲ್ಲಿ ಎಲ್ಲಿದೆ..?

ದೇಶದಲ್ಲಿ ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕ ಸಂಕಷ್ಟ, ಖಾಸಗೀಕರಣ, ಅತಿಯಾದ ಹಿಂದುತ್ವ ಹೇರಿಕೆ, ಪ್ರತಿಮೆ ದೇವಸ್ಥಾನಗಳನ್ನು ತೋರಿಸಿ ರಾಜಕಾರಣ ನಡೆಯುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಸುಭದ್ರವಾಗಿದೆ ಎಂದು ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನರ ದನಿಯನ್ನು ಗೌರವಿಸೋಣ. ಆದರೆ ಕರ್ನಾಟಕದಲ್ಲಿ ನರೇಂದ್ರ ಮುಖ ನೋಡಿ ವಿಧಾನಸಭಾ ಚುನಾವಣೆಗೆ ಮತ ಹಾಕುವುದು ಹೇಗೆ..? ಪ್ರಧಾನಿ ನರೇಂದ್ರ ಮೋದಿ ಬಂದು ಅಧಿಕಾರ ಚಲಾವಣೆ ಮಾಡ್ತಾರಾ..? ಎನ್ನುವುದು ಈಗ ಇರುವ ಪ್ರಶ್ನೆ. ಬಿಜೆಪಿಯಲ್ಲಿ ನಾಯಕರು ಇಲ್ಲ ಎಂದೇನಿಲ್ಲ. ಪ್ರಹ್ಲಾದ್ ಜೋಷಿ, ಬಿ.ಎಲ್ ಸಂತೋಷ್, ನಳೀನ್ ಕುಮಾರ್ ಕಟೀಲ್ ಹೀಗೆ ಹಲವು ನಾಯಕರಿದ್ದಾರೆ. ಆದರೆ ಜನರಿಗೆ ಇರುವ ಗೊಂದಲ ಎಂದರೆ ರಾಜ್ಯವನ್ನು ಅಳುವ ನಾಯಕತ್ವ ಯಾರದ್ದು..? ಎನ್ನುವುದು. ಈ ಪ್ರಶ್ನೆ ಅಥವಾ ಗೊಂದಲವನ್ನು ಪರಿಹರಿಸಿಕೊಂಡರೆ ಜನರು ಮತಹಾಕುವ ಮುನ್ನ ಯೋಜನೆ ಮಾಡಬಹುದು ಅಷ್ಟೆ. ಇಲ್ಲದಿದ್ದರೆ ರಾಜ್ಯಕ್ಕೆ ನಾಯಕತ್ವ ಇಲ್ಲದ ಕಾರಣಕ್ಕೆ ಜನ ಕಾಂಗ್ರೆಸ್, ಜೆಡಿಎಸ್ ಕಡೆಗೆ ಮುಖ ಮಾಡಿದರೂ ಅಚ್ಚರಿಯಿಲ್ಲ ಎನ್ನಬಹುದು.
ಕೃಷ್ಣಮಣಿ






