ಮೈಸೂರಿನ ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ಅವರ ವಿರುದ್ದ ಕೇಳಿ ಬಂದ ಆರೋಪಗಳಲ್ಲಿ ಅತ್ಯಂತ ಗಂಭೀರವಾದ ಆರೋಪ ಈ ಸಾಂಕ್ರಮಿಕ ಸಮಯದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣಕ್ಕೆ ಕೈ ಹಾಕಿದ್ದುದು. ಕಳೆದ ಒಂದು ತಿಂಗಳ ಹಿಂದೆ ಈ ಅರೋಪವನ್ನು ಪತ್ರಿಕಾ ಗೋಷ್ಟಿ ಕರೆಯುವ ಮೂಲಕ ಮಾಡಿದ್ದು ಮಾಜಿ ಕಾರ್ಪೊರೇಟರ್ ಮಲ್ಲೇಶ್ ಮತ್ತು ಕೆ ಆರ್ ನಗರದ ಜೆಡಿಎಸ್ ಶಾಸಕ ಸಾ ರಾ ಮಹೇಶ್ ಅವರು. ಅಲ್ಲಿಯವರೆಗೆ ಯಾರಿಗೂ ಈ ಸ್ವಿಮ್ಮಿಂಗ್ ಪೂಲ್ ಬಗ್ಗೆ ಗೊತ್ತೇ ಇರಲಿಲ್ಲ. ಇಲ್ಲಿನ ವಿಚಾರವಾದಿಗಳ, ಜನ ಸಾಮಾನ್ಯರ ಅಕ್ರೋಶಕ್ಕೆ ಕಾರಣ ಏನೆಂದರೆ ಒಂದೆಡೆ ಈ ಸಾಂಕ್ರಮಿಕದ ಕಾರಣದಿಂದಾಗಿ ಜನರು ಹುಳುಗಳಂತೆ ಸಾಯುತ್ತಿರುವಾಗ ಈ ಐಷಾರಾಮಿ ಸ್ವಿಮ್ಮಿಂಗ್ ಪೂಲ್ ಅಗತ್ಯ ವಿತ್ತೇ ಎನ್ನೋದು.
ಪಾರಂಪರಿಕ ಕಟ್ಟಡಗಳ ನಗರವಾಗಿರುವ ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳನ್ನು ಉಳಿಸಲೆಂದೇ , ಅವುಗಳ ಯಥಾ ಸ್ಥಿತಿ ಕಾಯ್ದುಕೊಳ್ಳಲೆಂದೇ ಪಾರಂಪರಿಕ ಸಮಿತಿಯೂ ಇದೆ, ಸ್ವತಃ ಜಿಲ್ಲಾಧಿಕಾರಿಗಳೇ ಇದರ ಅದ್ಯಕ್ಷರು. ಯಾವುದೇ ಪಾರಂಪರಿಕ ಕಟ್ಟಡಗಳ ನವೀಕರಣ, ಒಡೆಯುವುದು , ನಿರ್ಮಾಣದ ಚಟುವಟಿಕೆಗಳಿಗೆ ಈ ಸಮಿತಿಯ ಪೂರ್ವಾನುಮತಿ ಕಡ್ಡಾಯ ಆಗಿದೆ. ಆದರೆ ಜಿಲಾಧಿಕಾರಿಗಳ ಸ್ವಿಮ್ಮಿಂಗ್ ಪೂಲ್ ಗೆ ಈ ಸಮಿತಿಯಿಂದ ಅನುಮತಿಯನ್ನೇ ಪಡೆದುಕೊಂಡಿಲ್ಲ. ಕನಿಷ್ಟ ಪಕ್ಷ ಸಮಿತಿಯ ಗಮನಕ್ಕೂ ತಂದಿಲ್ಲ. ಪಾರಂಪರಿಕ ಕಟ್ಟಡವಾದ ಮೈಸೂರು ಜಿಲ್ಲಾಧಿಕಾರಿ ನಿವಾಸ ‘ಜಲಸನ್ನಿಧಿ’ಯ ಆವರಣದಲ್ಲಿ ಈಜುಕೊಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳಲ್ಲಿ ಅನುಮತಿಯನ್ನೇ ಪಡೆದಿಲ್ಲ. ಪಾಲಿಸಬೇಕಿದ್ದ ಬಹುತೇಕ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿದುಬಂದಿದೆ. ಈಜುಕೊಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಸೂಚನೆಯಂತೆ ತನಿಖೆ ನಡೆಸುತ್ತಿರುವ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರಿಗೆ ಎರಡು ಪುಟದ ಪತ್ರ ಬರೆದಿದ್ದ ರೋಹಿಣಿ ಸಿಂಧೂರಿ, ‘ನಿಯಮ ಉಲ್ಲಂಘಿಸಿಲ್ಲ. ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.
ಆದರೆ, ಈ ವಿಷಯವಾಗಿ ನಿಯಮ ಪಾಲನೆಯೇ ಆಗಿಲ್ಲ ಎನ್ನುತ್ತಾರೆ, ಹೆಸರು ಬಹಿರಂಗ ಪಡಿಸಲು ಬಯಸದ ಕೆಲವು ಅಧಿಕಾರಿಗಳು. ‘ರೋಹಿಣಿ ಸಿಂಧೂರಿ ಸೂಚನೆಯಂತೆಯೇ ಜಲಸನ್ನಿಧಿ ಆವರಣದಲ್ಲಿ ₹ 28.72 ಲಕ್ಷ ವೆಚ್ಚದಲ್ಲಿ, 650 ಚದರ ಅಡಿ ಜಾಗದಲ್ಲಿ, 60 ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಈಜುಕೊಳ ನಿರ್ಮಿಸಿದ್ದೇವೆ. ಅತ್ಯಾಧುನಿಕ ಓಜೋನೈಸೇಷನ್ ತಂತ್ರಜ್ಞಾನ ಅಳವಡಿಸಿದ್ದೇವೆ. ಇದರಿಂದ ಪದೇ ಪದೇ ನೀರು ಬದಲಿಸುವ ಅಗತ್ಯವಿಲ್ಲ. ರೀ ಸೈಕ್ಲಿಂಗ್ ಆಗಲಿದೆ. ಕ್ಲೋರಿನೈಸೇಷನ್ ಸಹ ಮಾಡುವಂತಿಲ್ಲ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದರು. ‘ಮೇಲ್ಚಾವಣಿ ಇರುವುದರಿಂದ ನೀರು ಆವಿಯೂ ಆಗಲ್ಲ. ನಿರ್ಮಿತಿ ಕೇಂದ್ರದ ಆಡಳಿತಾತ್ಮಕ ವೆಚ್ಚದಲ್ಲಿ ಉಳಿತಾಯವಾಗಿದ್ದ ಅನುದಾನವನ್ನೇ ಈಜುಕೊಳ ನಿರ್ಮಾಣಕ್ಕೆ ಬಳಸಿಕೊಂಡಿದ್ದೇವೆ. ಜಿಲ್ಲಾಧಿಕಾರಿ ನಿವಾಸಕ್ಕೆ ಪೂರೈಕೆಯಾಗುವ ನೀರನ್ನೇ ಈಜುಕೊಳಕ್ಕೂ ತುಂಬಿಸಲಾಗಿದೆ’ ಎಂದು ಕೇಂದ್ರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಯಾವುದೇ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಮೈಸೂರಿನ ಮಹಾನಗರ ಪಾಲಿಕೆಯಿಂದ ಕಾಮಗಾರಿಗೆ ನಿರಾಕ್ಷೇಪಣಾ ಪತ್ರ ಮತ್ತು ಅನುಮತಿ ಪಡೆದುಕೊಳ್ಳಬೇಕಾಗಿತ್ತು. ಜಿಲ್ಲಾಧಿಕಾರಿ ನಿವಾಸ ಪಾರಂಪರಿಕ ಕಟ್ಟಡದ ಪಟ್ಟಿಯಲ್ಲಿದೆ. ಈಜುಕೊಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿಗಾಗಿ ನಮಗೆ ಯಾವ ಕೋರಿಕೆಯೂ ಬಂದಿಲ್ಲ’ ಎಂದು ಪಾಲಿಕೆಯ ಯೋಜನಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು..‘ಈಜುಕೊಳಕ್ಕೆ ನೀರಿನ ಬಳಕೆಗಾಗಿ ನಮಗೂ ಸಹ ಮನವಿ ಬಂದಿಲ್ಲ’ ಎಂದು ವಾಣಿವಿಲಾಸ ನೀರು ಸರಬರಾಜು ವಿಭಾಗದ ಹಾಲಿ ಅಧಿಕಾರಿಯೊಬ್ಬರು ತಿಳಿಸಿದರೆ, ನಿವೃತ್ತ ಅಧಿಕಾರಿಯೊಬ್ಬರು ‘ನನ್ನನ್ನು ಯಾರು ಕೇಳುತ್ತಾರೆ ಎಂಬ ಮನೋಭಾವನೆಯಿಂದ ಮಾಡಿಕೊಂಡಿದ್ದಾರೆ. ಆಡಳಿತಾರೂಢರು, ಅಧಿಕಾರಸ್ಥರ ಕಾರ್ಯವೈಖರಿಯೇ ಹೀಗೆ. ಏನೂ ಮಾಡಕ್ಕಾಗಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಅದು ಪಾರಂಪರಿಕ ಕಟ್ಟಡವಷ್ಟೇ ಅಲ್ಲ. ಆ ಕಟ್ಟಡದ ವ್ಯಾಪ್ತಿಯೂ ಸಂರಕ್ಷಣಾ ಪ್ರದೇಶ. ಹೊಸ ನಿಯಮದಂತೆ, ಪರಂಪರೆ ಇಲಾಖೆಯ ತಜ್ಞರ ವರದಿಯಂತೆಯೇ ಕಾಮಗಾರಿ ನಡೆಸಬೇಕು. ಈಜುಕೊಳ ನಿರ್ಮಾಣ ವಿಷಯದಲ್ಲಿ ನಿಯಮಾವಳಿ ಉಲ್ಲಂಘನೆಯಾಗಿರುವುದು ಸ್ಪಷ್ಟ’ ಎಂದು ಪಾರಂಪರಿಕ ಸಮಿತಿ ಸದಸ್ಯ, ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ತಿಳಿಸಿದರು.
ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯಿಲ್ಲದೆ ‘ಜಲಸನ್ನಿಧಿ’ಯಲ್ಲಿ ₹ 16.35 ಲಕ್ಷ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಸಿ, ನೆಲಹಾಸಿಗೆ ವಿಟ್ರಿಫೈಡ್ ಟೈಲ್ಸ್ ಅಳವಡಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಜೂನ್ 5ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ‘ಭೂ ಮಾಫಿಯಾ, ಮೆಡಿಕಲ್ ಮಾಫಿಯಾದಿಂದಲೇ ತಮ್ಮ ವರ್ಗಾವಣೆಯಾಗಿದ್ದಾಗಿ ರೋಹಿಣಿ ಸಿಂಧೂರಿ ಹೇಳಿದರೆ, ‘ಯಾರ ಮನೆಯಲ್ಲಿ ರಿಯಲ್ ಎಸ್ಟೇಟ್ ಡೀಲರ್ಸ್ ಮತ್ತು ಬ್ರೋಕರ್ಸ್ ಇದ್ದಾರೆ ಎಂಬುದು ತಮಗೆ ಗೊತ್ತಿರುವುದಾಗಿ’ ಶಿಲ್ಪಾನಾಗ್ ಹೇಳಿದ್ದಾರೆ. ತಮ್ಮ ಪ್ರತಿಭಟನೆ ಸಾರ್ಥಕವಾಯಿತು ಎಂದೂ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರು ಎತ್ತಂಗಡಿಯಾದ ಈ ಐಎಎಸ್ ಅಧಿಕಾರಿಗಳಿಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನೇ ಮಾಡಿದ್ದು, ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕಾಗಿದೆ. ಅಲ್ಲದೆ ನಗರದಲ್ಲಿ ಕೇಳಿ ಬರುತ್ತಿರುವ ರಿಯಲ್ ಎಸ್ಟೇಟ್ ಕುಳಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರೀ ಭೂಮಿಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕೆಂದೂ ಅವರು ಅಗ್ರಹಿಸಿದ್ದಾರೆ.






