ರಾಜ್ಯದಲ್ಲಿ ಗುತ್ತಿಗೆದಾರರಿಗೆ ಕೊಡಬೇಕಾದ ಬಿಲ್ ಪೆಂಡಿಂಗ್ ವಿಚಾರದಲ್ಲಿ ಭಾರೀ ಚರ್ಚೆ ಆಗ್ತಿದೆ. ಬಾಕಿ ಬಿಲ್ ಪಾವತಿ ಹಾಗೂ ಸಮಸ್ಯೆಗಳನ್ನ ಬಗೆಹರಿಸುವಂತೆ ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ಸಚಿವರಿಗೆ ಪತ್ರ ಬರೆದಿದೆ. ತಮ್ಮ ತಮ್ಮ ಇಲಾಖೆಗಳಲ್ಲಿ ಪೆಂಡಿಂಗ್ ಇರುವ ಬಿಲ್ ಪಾವತಿ ಮಾಡಬೇಕು ಹಾಗೂ ಸಮಸ್ಯೆಗಳ ಬಗ್ಗೆ ಸಂಘದೊಂದಿಗೆ ಚರ್ಚೆ ನಡೆಸಬೇಕು ಅಂತಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು 33 ಸಾವಿರ ಕೋಟಿ ಬಿಲ್ ಬಾಕಿ ಇದೆ. ಕೂಡಲೇ ಇದನ್ನ ಬಿಡುಗಡೆ ಮಾಡಬೇಕು ಅಂತಾ ಡಿಸಿಎಂ ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಮಹದೇವಪ್ಪ, ದಿನೇಶ್ ಗುಂಡೂರಾವ್ ಸೇರಿ ಪ್ರಮುಖ ಸಚಿವರಿಗೆ ಪತ್ರ ಬರೆಯಲಾಗಿದೆ.

ಗುತ್ತಿಗೆದಾರರು ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ನಾನು ಪತ್ರ ಇನ್ನೂ ನೋಡಿಲ್ಲ, ಮೊನ್ನೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಭೇಟಿ ಮಾಡಿದ್ರು. 3-4 ವರ್ಷದ ಹಣ ಬಾಕಿ ಇದೆ ಅಂದ್ರು. ಹಿಂದಿನ ಸರ್ಕಾರ ನಿಯಮ ಮಿರಿ ಗುತ್ತಿಗೆ ಕೊಟ್ಟಿದ್ದಾರೆ. ನೂರು ರೂಪಾಯಿ ಕೆಲಸಕ್ಕೆ 1000 ರೂಪಾಯಿಗೆ ಕೊಟ್ಟಿದ್ದಾರೆ. ಬಿಜೆಪಿಯವರು ಮಾಡಿದ ಸಾಲವನ್ನ ನಾವು ತೀರಿಸ್ತಿದ್ದೇವೆ. ಜೇಷ್ಠತೆ ಮೇಲೆ ನಾವು ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ. ಇನ್ನು ಇದೇ ವಿಚಾರದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ, ಬೋಸರಾಜು ಕೂಡ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘದಿಂದ ಸಚಿವರುಗಳಿಗೆ ಪತ್ರ ಬರೆದ ವಿಚಾರದ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಗುತ್ತಿಗೆದಾರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ, ಗುತ್ತಿಗೆದಾರರರಿಗೆ ಹಣ ನೀಡಲು ಸಚಿವರಗಳ ಬಳಿ ಹಣವಿಲ್ಲ. ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಕೊಡಲು ಆಯಾ ಇಲಾಖೆಗಳ ಬಳಿ ಹಣವಿಲ್ಲ. ಆದರೆ ಶಾಸಕರುಗಳ ಪರ್ಸೆಂಟೆಜ್ ದಂಧೆ ಮಾತ್ರ ಮೀತಿಮೀರಿದೆ. ಗುತ್ತಿಗೆದಾರರು ಶಾಸಕರ ಬಳಿ ಹೋದರೆ ಎಷ್ಟು ಪರ್ಸೆಂಟೆಜ್ ಕೊಡ್ತಿರಾ ಅಂತಾ ಓಪನ್ ಆಗಿ ಕೇಳ್ತಾರೆ. ಗುತ್ತಿಗೆದಾರರು ಚಿನ್ನಾಭರಣ ಮಾರಿ ಕಾಮಗಾರಿ ಮಾಡ್ತಿದ್ದಾರೆ. ಈಗ ಮಾರ್ಚ್ ಅಂತ್ಯಕ್ಕೆ ಬಾಕಿ ಬಿಲ್ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಒಂದು ವೇಳೆ ಮಾಡದಿದ್ರೆ ಉಗ್ರ ಹೋರಾಟ ಮಾಡ್ತೇವೆ ಎಂದಿದ್ದಾರೆ.

ಗುತ್ತಿಗೆದಾರರ ಬಿಲ್ ಪೆಂಡಿಂಗ್ ವಿಚಾರದಲ್ಲಿ ಮಾಜಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗದಲ್ಲಿ ಮಾತನಾಡಿದ ಸಿ ಸಿ ಪಾಟೀಲ್, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ. ಹಿಂದಿನ ಸರ್ಕಾರ ಕೆಲಸ ಕೊಟ್ಟಿದೆ ಎಂದಿದ್ದಾರೆ. ಆಗ ಸತೀಶ್ ಅವರ ಕ್ಷೇತ್ರಕ್ಕೂ ಕೆಲಸ ಕೊಟ್ಟಿದ್ದೆ. ಗುತ್ತಿಗೆದಾರ ಬಿಲ್ ಕೇಳಿದ್ರೆ, ಹಿಂದಿನ ಸರ್ಕಾರ ಕೊಟ್ಟಿದೆ ಅಂತಾರೆ. ಹಿಂದಿನ ಸರ್ಕಾರ ಹೋಗಿ ಎರಡು ವರ್ಷ ಆಗ್ತಿದೆ. ಅಲ್ಲಿಂದ ಇಲ್ಲೀವೆರೆಗೆ ಟ್ಯಾಕ್ಸ್ ಕಲೆಕ್ಷನ್ ಎಲ್ಲಿಗೆ ಹೋಯ್ತು..? ಏನ್ ಮಾಡಿದ್ರಿ..? ಯಾವ ಉದ್ದೇಶಕ್ಕಾಗಿ ಗುತ್ತಿಗೆದಾರರ ಬಿಲ್ ಪೇಂಟಿಂಗ್ ಇಟ್ಟುಕೊಂಡಿದ್ದೀರಾ..? ಅನ್ನೋದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.