
ವಿನಯ್ ಕುಲಕರ್ಣಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ದಾಳಿ ಅಂತ್ಯ ಆಗಿದೆ. ಬರೋಬ್ಬರಿ 28 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಅಧಿಕಾರಿಗಳು ಮನೆಯಿಂದ ಹೊರಟಿದ್ದಾರೆ. ನಾಲ್ಕು ಕಾರಗಳಲ್ಲಿ ಬಂದಿದ್ದ ಎಂಟು ಮಂದಿ ED ಅಧಿಕಾರಿಗಳ ತಂಡ, ಸಾಕಷ್ಟು ದಾಖಲೆ ಪತರಗಳನ್ನು ತೆಗೆದುಕೊಂಡು ಹೋಗಿದೆ ಎನ್ನುವ ಮಾಹಿತಿ ಸಿಕ್ಕಿದೆ.
ED ದಾಳಿ ಬಗ್ಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಮಾತನಾಡಿ, ಏನು ಬೇಕೋ ಎಲ್ಲಾ ಕೇಳಿದ್ದಾರೆ. ಯಾವ ಕೇಸ್ ಹಾಕಬೇಕೋ ಎಲ್ಲ ಕೇಸ್ ಹಾಕಿದ್ದಾರೆ. ಇದೆಲ್ಲ ರಾಜಕೀಯ ಷಡ್ಯಂತ್ರ. ನಾನು ಸಂಪೂರ್ಣ ಕೃಷಿಕ. ಯಾವುದೇ ಬಿಜಿನೆಸ್ ಇಲ್ಲ. ಮನೆಯಲ್ಲಿ ಏನು ಸಿಗಲಿಲ್ಲ. ಅವರಿಗೆ ಏನು ಬೇಕು ಎಲ್ಲ ಹುಡುಕಿದ್ದಾರೆ. ಹೈಕೋರ್ಟ್ನಲ್ಲಿ ಕೆಲವು ಕೇಸ್ಗಳಲ್ಲಿ ನಾನು ವಿಟ್ನೆಸ್ ಆಗಿದ್ದೇನೆ. ಒಂದು ತಿಂಗಳಿನಿಂದ ಪ್ರತಿದಿನ ಹರಾಸ್ಮೆಂಟ್ ನಡಿತಿದೆ ಎಂದಿದ್ದಾರೆ.

ನಾನು ಎಂಎಲ್ಎ ಆದರೂ ಕ್ಷೇತ್ರಕ್ಕೆ ಹೋಗಲು ಆಗ್ತಿಲ್ಲ. ಹಾರಾಸ್ಮೆಂಟ್ಗೂ ಒಂದು ಲಿಮಿಟೇಷನ್ ಇರಬೇಕು. ಬಹಳ ನೋವಾಗತ್ತದೆ. ಐಶ್ವರ್ಯಗೌಡ ಜೊತೆ ಟ್ರಾನ್ಸಾಷನ್ ಇದ್ರೆ ಸಿಕ್ಕೇ ಸಿಗುತ್ತದೆ. ಒಮ್ಮೆ ಕೊಲ್ಲಾಪುರ ಟೆಂಪಲ್ ಹೋಗುವಾಗ ಪರಿಚಯ ಆಯ್ತು. ಅವರೇ ಕಾರನ್ನ ನಮ್ಮ ಫಾರ್ಮ್ನಲ್ಲಿ ಬಿಟ್ಟೊಗಿದ್ರು. ಒಂದು ತಿಂಗಳ ನಂತರ ಪೊಲೀಸರು ಕಾಲ್ ಮಾಡಿದ್ರು. ನಂತರ ತಂದು ಕೊಟ್ಟಿದ್ರು. ಮಂಜುಳಾ ಪಾಟೀಲ್, ವನಿತಾ ಐತಾಳ್ ಎರಡು ತಿಂಗಳ ನಂತರ ಪರಿಚಯ. ಕೇಸ್ ಮಾಡೋದು ಬೇಡ ದುಡ್ಡು ಕೊಡಿಸಿ ಅಂತ ಬಂದಿದ್ರು. ನನ್ನ ಬರ್ತ್ ಡೇ ದಿನ ಸನ್ಮಾನ ಮಾಡಿದ್ರು. ಅಣ್ಣಮ್ಮ ಜಾತ್ರೆಗೆ ಒಮ್ಮೆ ಹೋಗಿ ಬಂದಿದ್ದೆ. ಜನರಿಗೆ ಮೋಸ ವಂಚನೆ ಮಾಡುವುದು ಒಳ್ಳೆ ಕೆಲಸವಲ್ಲ. ED ಅವರು ಯಾವುದೇ ನೋಟಿಸ್ ನೀಡಿಲ್ಲ ಎಂದಿದ್ದಾರೆ.

ಚಾಮರಾಜನಗರದಲ್ಲಿ ED ದಾಳಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ನಾನು ಸಿಎಂ ಆದ ಮೇಲೆ 20ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ಇದರಿಂರ ನಮಗೆ ಅಧಿಕಾರ ಗಟ್ಟಿಯಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮನೆ ಮೇಲೆ ED ದಾಳಿ ಮಾಡಿರುವ ವಿಚಾರವಾಗಿ ಮಾತನಾಡಿ, ಇದು ರಾಜಕೀಯ ಪ್ರೇರಿತ ದಾಳಿ. ಕೇಂದ್ರ ಸರ್ಕಾರದ ಒತ್ತಡದ ಮೇಲೆ ದಾಳಿ ಮಾಡಿದ್ದಾರೆ. ಬಿಜೆಪಿಯರ ಮೇಲೆ ಯಾಕೆ ದಾಳಿ ಮಾಡುತ್ತಿಲ್ಲ..? ಬಿಜೆಪಿಯವರು ಏನ್ ಸಾಚಾಗಳಾ..? ಎಂದು ಪ್ರಶ್ನೆ ಮಾಡಿದ್ದಾರೆ.