
ಮೈಸೂರಿನ ಎಂ.ಕೆ ಹಾಸ್ಟೆಲ್ ವಕ್ಫ್ಗೆ ಸೇರಿದ ಆಸ್ತಿ ಎಂದು ನೋಟಿಸ್ ಕೊಡಲಾಗಿದೆ. ಹೀಗಾಗಿ ವಕ್ಫ್ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಲಾಗಿದೆ. ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಹಾಸ್ಟೆಲ್ ಬಳಿ ಪ್ರತಿಭಟನೆ ನಡೆಸಿದ್ದು, ವಕ್ಫ್ ನೋಟಿಸ್ಗೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ಹೊರ ಹಾಕಿದ್ದಾರೆ. ವಕ್ಫ್ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಕ್ಫ್ ನಿಷೇಧ ಮಾಡುವಂತೆಯೂ ಪ್ರತಿಭಟನಾಕಾರರು ಆಗ್ರಹ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ನಾಗೇಂದ್ರ ಸೇರಿದಂತೆ ಕನ್ನಡ ಪರ ಹೋರಾಟಗಾರರು ಭಾಗಿಯಾಗಿದ್ದರು.
ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕಟ್ಟಡಕ್ಕೆ ವಕ್ಫ್ ಮಂಡಳಿ ನೋಟಿಸ್ ಜಾರಿ ಮಾಡಿದೆ. ಮೈಸೂರಿನ ಹೃದಯ ಭಾಗದಲ್ಲಿರುವ ಶಿವರಾಂ ಪೇಟೆಯ ವಿನೋಬಾ ರಸ್ತೆಯಲ್ಲಿರುವ ಎಂ ಕೆ ಹಾಸ್ಟೆಲ್ಗೆ ಸೇರಿದ ಖಾಲಿ ಜಾಗ ವಕ್ಫ್ಗೆ ಸೇರಿದ ಆಸ್ತಿ ಎಂದು ನೋಟಿಸ್ ಜಾರಿ ಮಾಡಲಾಗಿದೆ. 1916ರಲ್ಲಿ ಕಡಬದ ನಾರಾಯಣ ಶೆಟ್ಟರು ಸ್ಥಾಪಿಸಿರುವ ಸ್ಟೂಡೆಂಟ್ಸ್ ಹಾಸ್ಟೆಲ್ ಇದು. ರಾಜ್ಯದಾದ್ಯಂತ ದೊಡ್ಡ ಸದ್ದು ಮಾಡಿದ ವಕ್ಪ್ ಆಸ್ತಿ ವಿಚಾರ ತಣ್ಣಗಾಗುವ ಹೊತ್ತಲ್ಲೇ ಮೈಸೂರಿನಲ್ಲಿ ಶತಮಾನಗಳ ಇತಿಹಾಸವಿರುವ ಎಂ.ಕೆ ಹಾಸ್ಟೆಲ್ ಜಾಗಕ್ಕೆ ವಕ್ಫ್ ಮಂಡಳಿಯಿಂದ ನೋಟಿಸ್ ಜಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಮುಂಬರುವ ಮೇ 9ರ ಒಳಗೆ ಉತ್ತರ ನೀಡುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಪೂರ್ವ ಪಶ್ಚಿಮ 54 ಅಡಿ, ಉತ್ತರ ದಕ್ಷಿಣ 100 ಅಡಿ ಸೇರಿದಂತೆ ಒಟ್ಟು 3268 ಚದರ ಅಡಿ ನಮ್ಮ ಸಂಸ್ಥೆಗೆ ಸೇರಿದ್ದು ಎಂದು ವಕ್ಫ್ ಮಂಡಳಿ ನೋಟಿಸ್ ಕೊಟ್ಟಿದೆ. ಎಂ ಕೆ ಹಾಸ್ಟೆಲ್ ವಿಳಾಸಕ್ಕೆ ನೋಟಿಸ್ ಅಂಟಿಸಿರುವ ಅಧಿಕಾರಿಗಳು, ಎಂ.ಕೆ ಹಾಸ್ಟೆಲ್ಗೆ ಹೊಂದಿಕೊಂಡಿರುವ ಜಾಗದಲ್ಲಿ ಯಾವುದೇ ದಾಖಲೆ ಇಲ್ಲದ ಅನಧಿಕೃತ ಜಾಗದಲ್ಲಿ ಹಿಂದೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಗದ್ದುಗೆ ಇತ್ತು. ಕಾಲಾ ನಂತರದಲ್ಲಿ ಅಲ್ಲಿ ಕೆಲವರು ಅತಿಕ್ರಮಣ ಮಾಡಿಕೊಂಡು ಗದ್ದಿಗೆಯನ್ನು ನಮ್ಮ ದರ್ಗಾ ಎಂದು ಹೇಳಿ ಜಾಗವನ್ನು ತಮ್ಮ ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಮ್ಮ ಜಾಗದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಅವರ ಬಳಿ ಏನು ದಾಖಲೆಗಳಿವೆಯೋ ಅದನ್ನು ತೋರಿಸಲಿ, ನಾವು ಕೋರ್ಟ್ ಮೂಲಕ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಂ.ಕೆ ಹಾಸ್ಟೆಲ್ ಮಾಲೀಕರಾದ ಸಿ.ವಿ ರಾಮಚಂದ್ರ ಶೆಟ್ಟಿ ಹೇಳಿದ್ದಾರೆ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಹಲವಾರು ಸಾರ್ವಜನಿಕ ಸ್ಥಳಗಳನ್ನು ವಕ್ಫ್ ಆಸ್ತಿ ಎಂದು ಹೇಳಿಕೊಂಡು ಕೆಲವು ಖಾಸಗಿ ಆಸ್ತಿಗಳನ್ನು ಕಬಳಿಸುವ ಯತ್ನವನ್ನು ವಕ್ಪ್ ಮಂಡಳಿ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ವಕ್ಫ್ ಮಂಡಳಿಗೆ ಬಿಟ್ಟುಕೊಡುವುದಿಲ್ಲ. ಅದು ನಮ್ಮ ಆಸ್ತಿ ಅಂತ ಒಂದೇ ಒಂದು ದಾಖಲೆ ಇದ್ದರೇ ತೋರಿಸಲಿ ಎಂದು ಸವಾಲು ಎಸೆದಿದ್ದಾರೆ.

ನಾವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ ಎಂ.ಕೆ ಹಾಸ್ಟೆಲ್ ಪರ ಹೋರಾಟಗಾರರು, ಸರ್ಕಾರ ಮಧ್ಯಪ್ರವೇಶ ಮಾಡಿ ನೋಟಿಸ್ ವಾಪಸ್ ಪಡೆಯುವಂತೆ ಆಗ್ರಹ ಮಾಡಿದ್ದಾರೆ. ವಿಶೇಷ ಅಂದರೆ ವಕ್ಫ್ ಮಂಡಳಿ ಬಳಿ ಯಾವುದೇ ದಾಖಲೆ ಇಲ್ಲದೆ ಇದ್ದರೂ ವಕ್ಫ್ ಮಂಡಳಿ ಆಸ್ತಿ ನನ್ನದು ಎನ್ನಲು ಅವಕಾಶವಿದೆ. ಇದು ರೈತರು ಸೇರಿದಂತೆ ಸಾಕಷ್ಟು ಜನರಿಗೆ ಸಂಕಷ್ಟ ತಂದಿಟ್ಟಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡಿರುವುದು.