
ಜಾತಿ ಜನಗಣತಿ ವಿಚಾರವಾಗಿ ಲಿಂಗಾಯತ ಸಚಿವರು ವಿಶೇಷ ಕ್ಯಾಬಿನೆಟ್ ಸಭೆಗೂ ಮುನ್ನ ಪ್ರತ್ಯೇಕವಾಗಿ ಸಭೆ ಮಾಡಿದ್ದಾರೆ ಅನ್ನೋ ವಿಚಾರ ಭಾರೀ ಚರ್ಚೆ ಆಗ್ತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ವಿಶೇಷ ಸಚಿವ ಸಂಪುಟ ಸಭೆಗೂ ಮುನ್ನ ಪ್ರತ್ಯೇಕ ಸಭೆ ಮಾಡಿ, ಸಿಎಂ ಸಿದ್ದರಾಮಯ್ಯ ಎದುರು ಏನು ಹೇಳಬೇಕು..? ಜಾತಿ ಜನಗಣತಿ ಬಗ್ಗೆ ಸಮುದಾಯದಲ್ಲಿ ಯಾವ ವಿಚಾರ ಆತಂಕ ಮೂಡಿಸಿದೆ ಎನ್ನೂ ಬಗ್ಗೆ ಸಚಿವರು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಚಿವರಾದ ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಲಿಂಗಾಯತ ಸಮುದಾಯದ 7 ಮಂದಿ ಸಚಿವರು ಸಭೆ ಸೇರಿ ಕ್ಯಾಬಿನೆಟ್ಗೂ ಮುನ್ನ ಚರ್ಚೆ ನಡೆಸಿದ್ದಾರೆ. ಎಲ್ಲಾ ಸಚಿವರು ಚರ್ಚೆ ನಡೆಸಿದ ನಂತರ ಕಳೆದ ಬಾರಿ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಪ್ರಯತ್ನ ಮಾಡಿದ ನಂತರ ಎದುರಾದ ಚುನಾವಣೆಯಲ್ಲಿ ಎಡವಟ್ಟು ಆಗಿತ್ತು ಅನ್ನೋದನ್ನು ಸಿಎಂ ಸಿದ್ದರಾಮಯ್ಯ ಎದುರು ಗಮನಕ್ಕೆ ತಂದರು.

ಸಚಿವ ಶಿವಾನಂದ ಪಾಟೀಲ್ ಸಚಿವ ಸಂಪುಟದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದಾಗ ಸಿಎಂ ಸಿದ್ದರಾಮಯ್ಯ ಮರುಪ್ರಶ್ನೆ ಹಾಕಿದ್ದು, ಯಾವ ರೀತಿ ತೊಂದರೆ ಆಯ್ತು ಶಿವಾನಂದ ಪಾಟೀಲ್ ಎಂದಿದ್ದಕ್ಕೆ ಮತಗಳಿಕೆ ಮೇಲೆ ಪರಿಣಾಮ ಬೀರಿತ್ತು ಸರ್ ಎಂದಿದ್ದಾರೆ ಎನ್ನಲಾಗಿದೆ. ಈ ಮಾತು ನಿಜವಾಗಿದ್ದರೆ ಎಂ.ಬಿ ಪಾಟೀಲ್ ಹೇಗೆ ಗೆದ್ರು..? ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ಎಂ.ಬಿ ಪಾಟೀಲ್ ಅವರೇ ಮುಂಚೂಣಿಯಲ್ಲಿ ಇದ್ರಲ್ಲಪ್ಪ ಎಂದಿದ್ದಾರೆ ಎನ್ನಲಾಗಿದೆ.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಈಶ್ವರ ಖಂಡ್ರೆ, ಇಲ್ಲ ಸಾರ್, ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಮತಗಳಿಗೆ ಮೇಲೆ ಸಮಸ್ಯೆ ಆಗಿತ್ತು ಎಂದಿದ್ದಾರೆ. ಈ ಮಾತುಕತೆ ವೇಳೆ ಮಧ್ಯ ಪ್ರವೇಶ ಮಾಡಿದ ಎಂಬಿ ಪಾಟೀಲ್, ಪ್ರತ್ಯೇಕ ಧರ್ಮ ವಿರೋಧ ಮಾಡಿದ್ದವರೂ ಆಗ ಸೋತಿದ್ದರು. ಎಸ್.ಎಸ್ ಮಲ್ಲಿಕಾರ್ಜುನ್ ಕೂಡ ಸೋತಿದ್ರಲ್ಲ ಎಂದಿದ್ದಾರೆ. ಅಷ್ಟರಲ್ಲಿ ಚರ್ಚೆ ದಾರಿ ತಪ್ಪುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸಿ. ಜಾತಿ ಜನಗಣತಿ ಅಂಕಿ-ಅಂಶದ ಬಗ್ಗೆ ಮಾತಾಡೋಣ ಎಂದು ಲಿಂಗಾಯತ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದರು ಅನ್ನೋದು ಗೊತ್ತಾಗಿದೆ.

ಈ ಬಗ್ಗೆ ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್ ಮಾತನಾಡಿ, ಸಂಪುಟ ಸಭೆಯಲ್ಲಿ ಸಚಿವರು ಹಾಗೂ ಅಧಿಕಾರಿಗಳು ವರದಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವೆಲ್ಲ ಸಚಿವರು ನಮ್ಮ ನಮ್ಮ ಸಮುದಾಯಕ್ಕೆ ಆಗುವ ಅನುಕೂಲ ಹಾಗೂ ಅನಾಕೂಲದ ಬಗ್ಗೆ ತಿಳಿಸಿದ್ದೇವೆ. ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಸಂಪುಟ ಸಭೆ ವೇಳೆ ಯಾವುದೇ ವಾಗ್ವಾದ ಆಗಿಲ್ಲ. ಎಲ್ಲವೂ ಸೌಹಾರ್ಧಯುತವಾಗಿದೆ. ಎಲ್ಲರೂ ಕೂಡಾ ಇದರ ಬಗ್ಗೆ ಅರ್ಥ ಮಾಡಿಕೊಂಡಿದ್ದಾರೆ. ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೆವೆ. ಸಮೀಕ್ಷೆ ಬಗ್ಗೆಯೂ ಸಭೆಯಲ್ಲಿ ವಿವರಣೆ ನೀಡಿದ್ದಾರೆ ಎಂದಿದ್ದಾರೆ ಎಂಬಿ ಪಾಟೀಲ್.