
ವಯನಾಡ್; ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕನ್ನಡಿಗ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಿಶೇಷವಾಗಿ ಅಲ್ಲಿನ ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಕನ್ನಡಿಗರನ್ನು ಕಾಣಬಹುದಾಗಿದೆ. ಅವರನ್ನು ಪಕ್ಷದ ಕಡೆ ಸೆಳೆಯಲು ಕಾಂಗ್ರೆಸ್ ಕರ್ನಾಟಕದಿಂದ ಕಾಂಗ್ರೆಸ್ ಹಲವಾರು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರನ್ನು ನಿಯೋಜಿಸಿದೆ. ಆ ಪೈಕಿ ಮುಂಚೂಣಿಯಲ್ಲಿ ಇರುವವರೆಂದರೆ ಇಂಧನ ಸಚಿವ ಜಾರ್ಜ್. ವಯನಾಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಗೆಲ್ಲಿಸಲು ಸಚಿವ ಕೆ.ಜೆ. ಜಾರ್ಜ್ ಟೊಂಕ ಕಟ್ಟಿ ನಿಂತಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರದು ಇದು ಮೊದಲ ಚುನಾವಣೆ. ಜೊತೆಗೆ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರ ಸಹೋದರ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಜೊತೆಗೆ ಗಾಂಧಿ ಕುಟುಂಬ ದಕ್ಷಿಣದಲ್ಲಿ ನೆಲೆಯೂರಲು ಅನುಕೂಲವಾಗುವಂತಹ ಚುನಾವಣೆ ಇದು. ಈ ಹಿನ್ನೆಲೆಯಲ್ಲಿ ಅತ್ಯಂತ ನಿರ್ಣಾಯಕವಾಗಿರುವ ವಯನಾಡ್ ಉಪ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದ್ದು ಅಲ್ಲಿನ ಕನ್ನಡಿಗರ ಮತ ಸೆಳೆಯಲು ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಯೋಜನೆ ರೂಪಿಸಿದೆ.

ದಶಕಗಳ ಕಾಲದಿಂದ ಕರ್ನಾಟಕದಲ್ಲೇ ಇದ್ದರೂ ಕೇರಳ ಮೂಲದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ವಯನಾಡಿನಲ್ಲಿ ಗಣನೀಯ ಪ್ರಭಾವ ಹೊಂದಿದ್ದಾರೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ದೊಡ್ಡ ಮಟ್ಟದ ಸಂಪರ್ಕ ಹೊಂದಿರುವ ಜಾರ್ಜ್ ಮಲಯಾಳಿ ಭಾಷಿಕರ ಮೇಲೂ ಪ್ರಭಾವ ಬೀರಬಲ್ಲಂತಹ ನಾಯಕರು. ಆದುದರಿಂದ ಕೆ.ಜೆ. ಜಾರ್ಜ್ ಅವರು ವಯನಾಡ್ ಉಪಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ.

ಕೆ.ಜೆ. ಜಾರ್ಜ್ ಅವರು ತೊಟ್ಟುಮುಳಿ, ತಿರುವಂಬಾಡಿ, ಪಲ್ಲಟ್ಟು, ಅನಕ್ಕಂಪೊಯಿಲ್ ಮತ್ತು ಪುತ್ತುಪ್ಪಾಡಿ ಪಟ್ಟಣಗಳಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ವಯನಾಡು ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅವರ ಗೆಲುವಿಗಾಗಿ ಶ್ರಮಿಸುವಂತೆ ಉತ್ತೇಜಿಸಿದರು.

ಮೈಸೂರು ಮೂಲದ ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಮತ್ತು ಕೇರಳದ ಕಾರ್ಯಾಚರಣೆಯ ಉಸ್ತುವಾರಿ ಎಸ್. ಪ್ಯಾರಿ ಜಾನ್ ಅವರು ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಅವರ ಗೆಲುವಿಗಾಗಿ ಸೇವಾದಳದ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ವಯನಾಡ್ನಲ್ಲಿ ನೆಲೆಸಿರುವ ಜಾನ್ ಕಾಂಗ್ರೆಸ್ ಪಕ್ಷದ ಸ್ಥಳೀಯ ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. “ನಾವು ಕ್ಷೇತ್ರದಲ್ಲಿ ಮೂಲೆ ಮೂಲೆಗಳಲ್ಲಿ ಸಭೆಗಳನ್ನು ನಡೆಸಿ ಭಾಷೆಯ ತಡೆಗೋಡೆಯ ಹೊರತಾಗಿಯೂ ಪ್ರಿಯಾಂಕಾ ಗಾಂಧಿ ಅವರ ಗೆಲುವಿಗೆ ಶ್ರಮಿಸುತ್ತಿದ್ದೇವೆ” ಎಂದು ಜಾನ್ ಹೇಳಿದರು.

ಮೈಸೂರು ಜಿಲ್ಲೆಯ ಎಚ್ಡಿ ಕೋಟೆಯ ಶಾಸಕ ಮತ್ತು ಪ್ರಭಾವಿ ಬುಡಕಟ್ಟು ನಾಯಕ ಅನಿಲ್ ಚಿಕ್ಕಮಾದು ಅವರು ಕೂಡ ವಯನಾಡು ಉಪಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬುಡಕಟ್ಟು ಮತದಾರರ ಜೊತೆಗಿನ ಬಾಂಧವ್ಯಕ್ಕೆ ಹೆಸರುವಾಸಿಯಾಗಿರುವ ಚಿಕ್ಕಮಾದು ಅವರ ಬೆಂಬಲವನ್ನು ಎಚ್ಡಿ ಕೋಟೆ-ವಯನಾಡು ಗಡಿಯಲ್ಲಿ ಬುಡಕಟ್ಟು ಜನಾಂಗದ ಮತವನ್ನು ಭದ್ರಪಡಿಸಿಕೊಳ್ಳಲು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಇವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮತ್ತು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಕೂಡ ಸೇರ್ಪಡೆಯಾಗಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಹಲವು ಕಾಂಗ್ರೆಸ್ ನಾಯಕರು ಸಹ ಕ್ಷೇತ್ರದ ಕನ್ನಡಿಗರೊಂದಿಗೆ ಸಾಂಸ್ಕೃತಿಕ ಮತ್ತು ಭಾಷಿಕ ಬಾಂಧವ್ಯದಿಂದ ವಯನಾಡಿಗೆ ಪ್ರಯಾಣಿಸಿದ್ದಾರೆ. “ವಯನಾಡಿನಲ್ಲಿರುವ ಕನ್ನಡ ಮಾತನಾಡುವ ಸಮುದಾಯವು ಮತದಾರರಲ್ಲಿ ಗಣನೀಯ ಭಾಗವಾಗಿದೆ ಮತ್ತು ಅವರ ಅನನ್ಯ ಅಗತ್ಯತೆಗಳು ಮತ್ತು ಕಾಳಜಿಗಳನ್ನು ಅರ್ಥಮಾಡಿಕೊಳ್ಳುವ ನಾಯಕರನ್ನು ಕರೆತರುವ ಮೂಲಕ ನಾವು ಅವರೊಂದಿಗೆ ವಿಶ್ವಾಸವನ್ನು ಬೆಳೆಸುವ ಗುರಿಯನ್ನು ಹೊಂದಿದ್ದೇವೆ” ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ.

ವಯನಾಡಿನಲ್ಲಿ ಬೆಂಬಲ ಸಂಗ್ರಹಿಸಲು ಕಾಂಗ್ರೆಸ್ ಕರ್ನಾಟಕ ಮೂಲದ ನಾಯಕರನ್ನು ನಿಯೋಜಿಸಿದ್ದರೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಅವರು ಕರ್ನಾಟಕ ಬಿಜೆಪಿ ಘಟಕವು ರಾಜ್ಯ ಉಪಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ಮೇಲೆ ಕೇಂದ್ರೀಕರಿಸಿದೆ, ಕರ್ನಾಟಕ ಮೂಲದ ಬಿಜೆಪಿ ನಾಯಕರು ವಯನಾಡಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.





