• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ದಾರ್ಶನಿಕ ನಾಯಕತ್ವವೂ ಭಾರತದ ಬಾಹ್ಯಾಕಾಶ ಪಯಣವೂ- ಭಾಗ 2

ನಾ ದಿವಾಕರ by ನಾ ದಿವಾಕರ
August 31, 2023
in ಅಂಕಣ, ಅಭಿಮತ
0
ದಾರ್ಶನಿಕ ನಾಯಕತ್ವವೂ ಭಾರತದ ಬಾಹ್ಯಾಕಾಶ ಪಯಣವೂ- ಭಾಗ 2
Share on WhatsAppShare on FacebookShare on Telegram

ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಪ್ರಗತಿಗೆ ಸ್ವತಂತ್ರ ಭಾರತದ ಮೊದಲ ಪೀಳಿಗೆ ನಾಯಕರ ದೂರಗಾಮಿ ದೃಷ್ಟಿಕೋನವೇ ಕಾರಣ

ADVERTISEMENT

(ಚಂದ್ರಯಾನದ ಸಂಭ್ರಮವೂ ಚರಿತ್ರೆಯ ಹೆಜ್ಜೆಗಳೂ – ಲೇಖನದ ಮುಂದುವರೆದ ಭಾಗ )

–ನಾ ದಿವಾಕರ

ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್‌ ಚಂದ್ರನ ದಕ್ಷಿಣ ಧೃವದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿರುವುದು ಭಾರತದ ಬಾಹ್ಯಾಕಾಶ ಸಂಶೋಧನೆ ಹಾಗೂ ವೈಜ್ಞಾನಿಕ ಕೌಶಲ್ಯದ ಮಹತ್ತರ ಸಾಧನೆಯಾಗಿದ್ದು ಇದು ಭಾರತವನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ವದ ಇತರ ರಾಷ್ಟ್ರಗಳೊಡನೆ ಸಮಾನಾಂತರವಾಗಿ ನಿಲ್ಲಿಸಿದೆ. ಭಾರತದ ಈ ಪ್ರಗತಿಗೆ ಅಡಿಗಲ್ಲು ಹಾಕಿದ ದೇಶದ ಪ್ರಥಮ ಪ್ರಧಾನಿ ನೆಹರೂ ಮತ್ತು ಅವರ ಸಹೋದ್ಯೋಗಿಗಳೊಂದಿಗೇ ನಾವು ಅಭಿನಂದಿಸಬೇಕಿರುವುದು ಈ ಸಾಧನೆಯ ಹಿಂದೆ ಅಡಗಿರುವ ಅದಮ್ಯ ಚೇತನಗಳನ್ನು. ಡಾ.ಹೋಮಿ ಜೆ.ಭಾಭಾ, ಡಾ.ವಿಕ್ರಮ್ ಸಾರಾಭಾಯ್, ಡಾ.ಸತೀಶ್ ಧವನ್, ಡಾ.ಮೇಘನಾದ್ ಸಹಾ, ಡಾ.ಶಾಂತಿ ಸ್ವರೂಪ್ ಭಟ್ನಾಗರ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರುಗಳು ಹಾಕಿಕೊಟ್ಟ ಹಾದಿಯಲ್ಲೇ ಕ್ರಮಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಂಡಿತ್‌ ಜವಹರಲಾಲ್‌ ನೆಹರೂ ಅವರ ದೂರದೃಷ್ಟಿಯ ಸಾಕ್ಷಿಯಾಗಿ ಇಂದು ಚಂದ್ರನ ಅಂಗಳದಲ್ಲಿ ಸ್ಥಾಪನೆಯಾಗಿದೆ.

ವಿಜ್ಞಾನದ ಸಾಧನೆ, ವೈಜ್ಞಾನಿಕ ಸಂಶೋಧನೆ ಮತ್ತು ಅಧ್ಯಯನ ಹಾಗೂ ವೈಜ್ಞಾನಿಕ ಮನೋಭಾವ ಇವುಗಳ ನಡುವೆ ಅಪಾರ ಅಂತರ ಇರುವುದನ್ನು ಗಮನಿಸುತ್ತಲೇ ನಾವು ಒಂದು ಸಾರ್ವಜನಿಕ ಸಂಸ್ಥೆಯಾದ (Public Sector) ಇಸ್ರೋ ನಡೆದುಬಂದ ಹಾದಿಯನ್ನು ಗುರುತಿಸಬೇಕಾಗಿದೆ. ಚಂದ್ರಯಾನದ ಯಶಸ್ಸು ಭಾರತದ ವೈಜ್ಞಾನಿಕ ಜಗತ್ತಿನ ಸಾಧನೆ ಎಂದು ಬಣ್ಣಿಸುವಾಗಲೇ, ವಿಜ್ಞಾನ ಮತ್ತು ವೈಜ್ಞಾನಿಕ ಧೋರಣೆ ವರ್ತಮಾನದ ಭಾರತದ ಬೌದ್ಧಿಕ-ಸಂವಹನ ವಲಯಗಳಲ್ಲಿ ಪ್ರಧಾನ ಭೂಮಿಕೆಯನ್ನು ಆಕ್ರಮಿಸಿಕೊಂಡಿಲ್ಲ ಎನ್ನುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಭಾರತದ ವೈಜ್ಞಾನಿಕ ಸಾಧನೆ ಸಾಂಸ್ಥಿಕವಾಗಿ ಮೇರು ಶಿಖರ ತಲುಪಿದ್ದರೂ, ತಳಮಟ್ಟದ ಸಮಾಜದಲ್ಲಿ ಬೌದ್ಧಿಕವಾಗಿ ಅಥವಾ ನಿತ್ಯ ಜೀವನದ ಒಂದು ಭಾಗವಾಗಿ ವಿಜ್ಞಾನ ಜನಮಾನಸದ ನಡುವೆ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ. ನೆಹರೂ, ಅಂಬೇಡ್ಕರ್‌ ಮೊದಲಾದ ನೇತಾರರು ಬಯಸಿದ ಮಟ್ಟದಲ್ಲಿ ಭಾರತದಲ್ಲಿ ವೈಜ್ಞಾನಿಕ ಮನೋಭಾವ ಪ್ರಗತಿ ಸಾಧಿಸಿಲ್ಲ ಎನ್ನುವ ಕಟು ವಾಸ್ತವವನ್ನು ಸಹ ಒಪ್ಪಿಕೊಳ್ಳಲೇಬೇಕಾಗಿದೆ. ಇದಕ್ಕೆ ಕಾರಣ ವ್ಯಕ್ತಿಗತ ಶ್ರದ್ಧಾನಂಬಿಕೆಗಳೊಂದಿಗೇ ವಿಜ್ಞಾನವನ್ನು ಮೇಳೈಸುವ ಮೂಲಕ ವೈಜ್ಞಾನಿಕವಾಗಿ ಒಪ್ಪಲಾಗದ ಪ್ರಮೇಯಗಳನ್ನೂ ಸಹ ಸಾರ್ವಜನಿಕ ವಲಯದಲ್ಲಿ ಸ್ವೀಕೃತಗೊಳಿಸುವ ಸಾಂಸ್ಥಿಕ ಪ್ರಯತ್ನಗಳು .

ಎಸ್‌.ಸೋಮನಾಥ್‌
ಎಸ್‌.ಸೋಮನಾಥ್‌

ಬಾಹ್ಯಾಕಾಶದತ್ತ ಬಿರುಸಿನ ನಡೆ

 ಈ ವೈಚಿತ್ರ್ಯಗಳ ನಡುವೆಯೇ ಇಸ್ರೋ ನಡೆದುಬಂದ ಹಾದಿಯನ್ನು ಅವಲೋಕನ ಮಾಡಬೇಕಿದೆ. ಸಾಂಸ್ಥಿಕವಾಗಿ ಕಾಣುವುದಾದರೂ ಇಸ್ರೋ ಒಂದು ಸ್ಥಾವರವಲ್ಲ. ಅಲ್ಲಿ ವಿಜ್ಞಾನ ಎಂಬ ಜಂಗಮ ಜ್ಞಾನವಾಹಿನಿ ಸದಾ ಹರಿದಾಡುತ್ತಲೇ ಇರುತ್ತದೆ. ಸಾರ್ವಜನಿಕ ಬದುಕಿನಿಂದಾಚೆಗೆ ದೇಶದ ಹಲವಾರು ಕೇಂದ್ರಗಳಲ್ಲಿ ಸಾವಿರಾರು ವಿಜ್ಞಾನಿಗಳೊಡನೆ ತನ್ನ ಪಯಣವನ್ನು ಸಾಗಿಸಿರುವ ಇಸ್ರೋ ವಿಜ್ಞಾನಿಗಳ ಹೆಮ್ಮೆಯ ಕೇಂದ್ರವಾದರೂ, ಮೂಲ ವಿಜ್ಞಾನವು ಒಪ್ಪಲಾರದ ಅತೀತ ಶಕ್ತಿಗಳ ನಂಬಿಕೆಯೂ ಸಹ ವ್ಯಕ್ತಿಗತ ನೆಲೆಯಲ್ಲಿ ವಿಜ್ಞಾನಿಗಳ ನಡುವೆಯೇ ರಾರಾಜಿಸುತ್ತಿದೆ. ಈ ವಿಡಂಬನೆಯ ನಡುವೆಯೂ ವೈಜ್ಞಾನಿಕ ಸಂಶೋಧನೆಗೆ ಧಕ್ಕೆ ಬಾರದಂತೆ ಭಾರತದ ವಿಜ್ಞಾನಿಗಳು ಇಂದು ಚಂದ್ರನ ಮೇಲೆ ಭಾರತದ ಪತಾಕೆಯನ್ನು ನೆಟ್ಟಿದ್ದಾರೆ. ಭವ್ಯ ಸುಭದ್ರ ಕಟ್ಟಡದ ಬಾಹ್ಯ ಸೌಂದರ್ಯವನ್ನು ವೈಭವೀಕರಿಸುತ್ತಾ ಕಟ್ಟಡಕ್ಕೆ ಬಣ್ಣ ಬಳಿದವರನ್ನು ಮೆರೆಸುವ ಮುನ್ನ ಈ ಸಂಸ್ಥೆಗೆ ತಳಪಾಯ ಹಾಕಿದವರನ್ನು ಸ್ಮರಿಸುತ್ತಾ, ಇಸ್ರೊ ನಡೆದುಬಂದ ಹಾದಿಯನ್ನು ಅವಲೋಕಿಸುವುದು ಅತ್ಯವಶ್ಯವಾಗಿದೆ.

1947ರಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೆ, ಬಾಹ್ಯಾಕಾಶ ತಂತ್ರಜ್ಞಾನದ ಹೆಚ್ಚಿನ ಪರಿಚಯವೇ ಇಲ್ಲದೆ ಕೆಲವೇ ವಿಜ್ಞಾನಿಗಳೊಂದಿಗೆ, ಇಂಜಿನಿಯರ್‌ಗಳೊಂದಿಗೆ ಭಾರತದ ಬಾಹ್ಯಾಕಾಶ ಯೋಜನೆಗೆ ಅಡಿಗಲ್ಲು ಹಾಕಿದ ಡಾ. ವಿಕ್ರಂ ಅಂಬಾಲಾಲ್‌ ಸಾರಾಭಾಯ್‌ (1919-1971) ಭಾರತದ ಬಾಹ್ಯಾಕಾಶ ಮಿಷನ್‌ನ ಪಿತಾಮಹ ಎಂದೇ ಗುರುತಿಸಲ್ಪಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಸಾರಾಭಾಯ್‌ ಅವರ ಮಹತ್ತರ ಪಾತ್ರವನ್ನು ಕುರಿತು ಇಸ್ರೋದ ಹಿರಿಯ ವಿಜ್ಞಾನಿ ಇ. ವಿ. ಚಟ್ನಿಸ್‌ ಹೀಗೆ ಹೇಳುತ್ತಾರೆ                “ ಯಾವುದೇ ಒಂದು ಹೊಸ ಯೋಜನೆಯನ್ನು ರೂಪಿಸಲು ಬಯಸಿದಾಗ ನೀವು ಯೋಜನಾ ವರದಿಯನ್ನು ಬರೆಯಲು ಪ್ರಾರಂಭಿಸಬಾರದು. ನಾವು ಏನು ಮಾಡಲು ಸಾಧ್ಯವಾಗುತ್ತದೆ ಎಂದು ಆರಂಭದಲ್ಲಿ ನಮಗೆ ತಿಳಿದಿರುವುದಿಲ್ಲ. ತದನಂತರ ಯೋಜನೆ ಅಭಿವೃದ್ಧಿಯಾಗುತ್ತದೆ ಮತ್ತು ವಿಷಯಗಳು ಪ್ರಗತಿ ಕಾಣುತ್ತಾ ಹೋಗುತ್ತವೆ. ನೀವು ಮುಂದಕ್ಕೆ ಸಾಗಿದಂತೆಲ್ಲಾ ಉದ್ದೇಶಗಳು ಮುನ್ನೆಲೆಗೆ ಬರುತ್ತಾ ಹೋಗುತ್ತವೆ. ನೀವು ಪೂರೈಸುವ ಉದ್ದೇಶಗಳೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸುವುದಿಲ್ಲ ಬದಲಾಗಿ ನೀವು ಪ್ರಾರಂಭಿಸಿದ ನಂತರದಲ್ಲಿ ನಿಮ್ಮ ಅಪೇಕ್ಷೆಯ ಸ್ಫೂರ್ತಿಯೊಂದಿಗೆ ಹೊಸ ಉದ್ದೇಶಗಳನ್ನು ರಚಿಸುತ್ತೀರಿ. ಇದು ಅದ್ಭುತ ವಿಷಯ. ಇತ್ತೀಚಿನ ದಿನಗಳಲ್ಲಿ ಅಂತಹ ಸಂಗತಿಗಳು ಸಂಭವಿಸುವುದಿಲ್ಲ.  ” ಚಿಟ್ನಿಸ್‌ ಅವರ ಈ ಮಾತುಗಳು ಸಾರಾಭಾಯ್‌ ಅವರ ನಡಿಗೆ ಮತ್ತು ಸಾಧನೆಯನ್ನು ಸೂಕ್ಷ್ಮವಾಗಿ ಸೂಚಿಸುತ್ತದೆ.

ಬಾಹ್ಯಾಕಾಶದಲ್ಲಿ ಸ್ವತಂತ್ರ ನಡಿಗೆ

ಸ್ವತಂತ್ರ ಭಾರತದ ಮುನ್ನಡಿಗೆಯಲ್ಲಿ ದೇಶದ ಅಭಿವೃದ್ಧಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆ ಅತ್ಯವಶ್ಯ ಎಂಬ ಅಭಿಪ್ರಾಯಕ್ಕೆ ಜವಹರಲಾಲ್‌ ನೆಹರೂ ಅವರಂತೆಯೇ ವಿಕ್ರಮ್‌ ಸಾರಾಭಾಯ್‌ ಮತ್ತು ಹೋಮಿ ಜೆ ಭಾಭಾ ಅವರೂ ಸಹ ಸಮ್ಮತಿಸಿದ್ದರು. ಹಸಿವು ಮತ್ತು ಬಡತನ, ಅನೈರ್ಮಲ್ಯ ಮತ್ತು ಅನಕ್ಷರತೆ, ಮೂಢನಂಬಿಕೆ ಮತ್ತು ಸಂಪ್ರದಾಯ ಇವೆಲ್ಲವನ್ನು ಎದುರಿಸುತ್ತಲೇ ಬಳಕೆಯಾಗದೆ ಪೋಲಾಗುತ್ತಿರುವ ಅಮೂಲ್ಯ ಸಂಪನ್ಮೂಲಗಳ ಸದ್ಬಳಕೆಯಿಂದಲೇ ಭಾರತ ಹಸಿವು ಮತ್ತು ದಾರಿದ್ರ್ಯವನ್ನು ನೀಗಲು ಸಾಧ್ಯ ಈ ಹಾದಿಯಲ್ಲಿ ವಿಜ್ಞಾನದ ಬೆಳವಣಿಗೆಯೂ ಅಷ್ಟೇ ಪ್ರಧಾನವಾಗಿ ಕಾಣುತ್ತದೆ ಎಂಬ ವಾಸ್ತವವನ್ನು ವಿಕ್ರಂ ಸಾರಾಭಾಯ್‌ ಅರಿತಿದ್ದರು. 1958ರಲ್ಲಿ ಸೋವಿಯತ್‌ ರಷ್ಯಾ ಸ್ಪುಟ್ನಿಕ್‌-1 ಬಾಹ್ಯಾಕಾಶ ನೌಕೆಯ ಉಡಾವಣೆ ಮಾಡಿದ ಒಂದು ವರ್ಷದ ಅಂತರದಲ್ಲೇ ಭಾರತದ ಪ್ರಧಾನಿ ನೆಹರೂ ಭಾರತಕ್ಕೆ ತನ್ನದೇ ಆದ ಸ್ವಂತ ಬಾಹ್ಯಾಕಾಶ ನೀತಿ ಮತ್ತು ಯೋಜನೆಯ ಅವಶ್ಯಕತೆ ಇರುವುದನ್ನು ಮನಗಂಡು ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದರು.

“ ವಿಜ್ಞಾನಿಗಳಿಗೆ ಅನುಕೂಲಕರವಾದ ಉತ್ತಮ ಸೇವಾ ಅವಕಾಶಗಳನ್ನು ಕಲ್ಪಿಸಿ ಕಾರ್ಯಕ್ಷೇತ್ರದಲ್ಲಿ ಉತ್ತಮ ಪರಿಸ್ಥಿತಿಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಯ ನೀತಿಗಳನ್ನು ರಚಿಸುವುದೇ ಅಲ್ಲದೆ ವಿಜ್ಞಾನಿಗಳನ್ನು ಒಂದುಗೂಡಿಸಿ ಅವರಿಗೆ ಗೌರವಾನ್ವಿತ ಸ್ಥಾನವನ್ನು ನೀಡಲು ಸರ್ಕಾರ ಬದ್ಧವಾಗಿದೆ ” ಎಂದು ನೆಹರೂ ಸಂಸತ್ತಿನಲ್ಲಿ ಘೋಷಿಸಿದ್ದರು. ಆಗಸ್ಟ್‌ 1961ರಲ್ಲಿ ಹೋಮಿ ಜೆ ಭಾಭಾ ಅವರ ನೇತೃತ್ವದಲ್ಲಿದ್ದ ಪರಮಾಣು ಶಕ್ತಿ ಇಲಾಖೆಗೆ (Department of Atomic Energy) ಬಾಹ್ಯಾಕಾಶ ಸಂಶೋಧನೆ ಹಾಗೂ ಬಾಹ್ಯಾಕಾಶದ ಶಾಂತಿಯುತ ಬಳಕೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮರುವರ್ಷವೇ ಹೋಮಿ ಜೆ ಭಾಭಾ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿಯನ್ನು(INCOSPAR- Indian National Committee for Space Reasearch) ವಿಕ್ರಂ ಸಾರಾಭಾಯ್‌ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದರು. ಸ್ಪುಟ್ನಿಕ್‌ 1ರ ಉಡಾವಣೆಯ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ರೂಪುಗೊಂಡ ಬಾಹ್ಯಾಕಾಶ ಸಂಸೋಧನಾ ಸಮಿತಿ, COSPAR ನ ಪ್ರತಿರೂಪವಾಗಿತ್ತು.

ಕೇರಳದ ತ್ರಿವೆಂಡ್ರಂ (ಈಗಿನ ತಿರುವನಂತಪುರಂ) ಬಳಿ ಇರುವ ತುಂಬಾ ಎಂಬ ಮೀನುಗಾರಿಕೆಯ ಗ್ರಾಮ ಭಾರತದ ಪಶ್ಚಿಮ ಕಡಲ ತೀರದಲ್ಲಿರುವ ಪ್ರಶಸ್ತ ಭೂಮಿಯೂ ಆಗಿತ್ತು. ಈ ಗ್ರಾಮದ ಭೂಭಾಗದಲ್ಲಿ ವಿಶಿಷ್ಟವಾದ ಭೂಭೌತಿಕ ನಿಧಿ (Geophysical Treasure) ಇರುವುದು ಅಲ್ಲಿನ ಮೀನುಗಾರರಿಗೂ ಸಹ ತಿಳಿದಿರಲಿಲ್ಲ. ತುಂಬಾ ಗ್ರಾಮದ ಭೂ ಪ್ರದೇಶಕ್ಕೆ ಸಮೀಪದಲ್ಲಿದ್ದ Magnetic Equator (ಆಯಸ್ಕಾಂತೀಯ ಸಮಭಾಜಕ ವೃತ್ತ) ಭಾರತದ ಬಾಹ್ಯಾಕಾಶ ಸಂಶೋಧನೆಗೆ ಉಪಯುಕ್ತವಾಗುವುದನ್ನು ಮನಗಂಡು ಸಾರಾಭಾಯ್‌ ತ್ವರಿತಗತಿಯಲ್ಲಿ ಮುಂದಿನ ನೀಲನಕ್ಷೆಯನ್ನು ತಯಾರಿಸಿದ್ದರು. ವೈಜ್ಞಾನಿಕ ನೆಲೆಯಲ್ಲಿ ಈ ವೃತ್ತಕ್ಕೆ ಕೆಲವು ವಿಶಿಷ್ಟವಾದ Geophysical ವಿದ್ಯಮಾನಗಳಿರುವುದನ್ನು ಸಾರಾಭಾಯ್‌ ಗಮನಿಸಿದ್ದರು. ಅವುಗಳಲ್ಲಿ ಪ್ರಮುಖವಾಗಿ ಈ ವೃತ್ತದ ಮೇಲೆ ನೇರವಾಗಿ 110 ಕಿಲೋಮೀಟರ್‌ ಎತ್ತರದಲ್ಲಿದ್ದ Equatorial Electrojet ಎನ್ನುವ ವಿದ್ಯುತ್‌ ಪ್ರವಹಿಸುವ ವ್ಯವಸ್ಥೆಯನ್ನು ಗುರುತಿಸಲಾಗಿತ್ತು.

ಈ ಸನ್ನಿವೇಶವನ್ನು ಸಮರ್ಪಕವಾಗಿ ಬಳಸಿಕೊಂಡ ಸಾರಾಭಾಯ್‌ ತುಂಬಾ ಗ್ರಾಮದಲ್ಲಿ ಸೌಂಡಿಂಗ್‌ ರಾಕೆಟ್‌ ಶ್ರೇಣಿಯನ್ನು ಸ್ಥಾಪಿಸಲು ಸಾಧ್ಯವಾಗುವುದಾದರೆ, ಜಗತ್ತಿನ ವೈಜ್ಞಾನಿಕ ಸಮುದಾಯಕ್ಕೆ Electrojet ಹಾಗೂ ತತ್ಸಂಬಂಧಿತ ಪ್ರಕ್ರಿಯೆಯಗಳನ್ನು ಅನ್ವೇಷಿಸುವ ಹಾದಿ ಸುಗಮವಾಗುತ್ತದೆ ಎಂದು ಪ್ರತಿಪಾದಿಸಿದ್ದರು . ಇದಕ್ಕೂ ಮುನ್ನ ಜಾಗತಿಕ COSPAR ಸಂಸ್ಥೆಯೂ ಸಹ Magnetic Equator ಸಮೀಪದಲ್ಲಿ ಸೌಂಡಿಂಗ್‌ ರಾಕೆಟ್‌ಗಳನ್ನು ಸ್ಥಾಪಿಸುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿತ್ತು. 1963ರ ನವಂಬರ್‌ 21ರಂದು ತುಂಬಾ ಗ್ರಾಮದಿಂದ ಸೌಂಡಿಂಗ್‌ ರಾಕೆಟ್‌ ಉಡಾವಣೆಯಾಗುವ ಮೂಲಕ ಅನಾಮಧೇಯವಾಗಿದ್ದ ತುಂಬಾ ಎಂಬ ಗ್ರಾಮ ವಿಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯ ಪ್ರಮುಖ ಬಿಂದುವಾಗಿ ಪರಿಣಮಿಸಿತ್ತು. ಈ ಸಂದರ್ಭದಲ್ಲೇ ತುಂಬಾ ಈಕ್ವೆಟೋರಿಯಲ್‌ ರಾಕೆಟ್‌ ಉಡಾವಣಾ ಕೆಂದ್ರ (TERLS) ಸ್ಥಾಪನೆಯಾಗಿತ್ತು.

TERLS ಸಂಸ್ಥೆಯ ಉಗಮದ ಹಿಂದೆ ಅಂತರರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳ ಸಹಕಾರವನ್ನೂ ಅಲ್ಲಗಳೆಯಲಾಗುವುದಿಲ್ಲ. ಸೌಂಡಿಂಗ್‌ ರಾಕೆಟ್‌ ಮತ್ತು ಕೆಲವು ಟ್ರ್ಯಾಕಿಂಗ್‌ ಉಪಕರಣಗಳು ಅಮೆರಿಕದಿಂದ ಬಂದಿದ್ದವು, Sodium Vapour Payload (ಸೋಡಿಯಂ ಆವಿಯ ಪೇಲೋಡ್)‌ ಫ್ರಾನ್ಸ್‌ನ ಕೊಡುಗೆಯಾಗಿತ್ತು. ಸೋವಿಯತ್‌ ರಷ್ಯಾದಿಂದ MINSK ಗಣಕಯಂತ್ರ, ಕಂಪನದ ಟೇಬಲ್‌, ಹೆಲಿಕಾಪ್ಟರ್‌ ಮತ್ತು ದೋಣಿಯನ್ನು ಒದಗಿಸಿತ್ತು. ಜಾಗತಿಕ ಮಟ್ಟದಲ್ಲಿ ಶೀತಲ ಯುದ್ಧವು ಪರಾಕಾಷ್ಠೆಯಲ್ಲಿರುವ ಸನ್ನಿವೇಶದಲ್ಲಿ ಪರಸ್ಪರ ಶತ್ರು ರಾಷ್ಟ್ರಗಳನ್ನು ವಿಜ್ಞಾನ ಸೇವೆಗಾಗಿ ಒಂದೇ ಭೂಮಿಕೆಯಲ್ಲಿ ಒಂದುಗೂಡಿಸಿದ ದಿಟ್ಟ ಸಾಹಸಕ್ಕೆ ಜವಹರಲಾಲ್‌ ನೆಹರೂ ಅವರ ಪ್ರೋತ್ಸಾಹದೊಂದಿಗೆ ವಿಕ್ರಂ ಸಾರಾಭಾಯ್‌ ಮುಂದಾಳತ್ವ ವಹಿಸಿದ್ದರು. ವಿಕ್ರಂ ಸಾರಾಭಾಯ್‌ ಅವರ ವರ್ಚಸ್ಸು ಮತ್ತು ಕಾರ್ಯದಕ್ಷತೆಗೆ TERLS ಶಾಶ್ವತ ಸಾಕ್ಷಿಯಾಗಿ ನಿಲ್ಲುತ್ತದೆ.

“… ನಮ್ಮ ದೇಶದಲ್ಲಿ ನಾವು ಕಂಡುಕೊಳ್ಳುವ ಮಾನವನ ಮತ್ತು ಸಮಾಜದ ನೈಜ ಸಮಸ್ಯೆಗಳಿಗೆ ಸುಧಾರಿತ ತಂತ್ರಜ್ಞಾನಗಳನ್ನು ಅನ್ವಯಿಸುವಲ್ಲಿ ನಾವು ಯಾರಿಗೂ ಕಡಿಮೆಯಿಲ್ಲ. ಬಾಹ್ಯಾಕಾಶ ತಂತ್ರಜ್ಞಾನದ ಅನ್ವಯದ ಮೂಲಕ ಸಾಧಿಸಿದ ಪ್ರಗತಿಯನ್ನು ಕಠಿಣ ಆರ್ಥಿಕ ಮತ್ತು ಸಾಮಾಜಿಕ ಪರಿಭಾಷೆಯಲ್ಲಿ ಅಳೆಯಬೇಕು” ಎಂದು ಒತ್ತಿ ಹೇಳುವ ಮೂಲಕ ವಿಕ್ರಂ ಸಾರಾಭಾಯ್‌ ಭಾರತವು ಬಾಹ್ಯಾಕಾಶವನ್ನು ಏಕೆ ಅನುಸರಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದರು.  1968ರಲ್ಲಿ TERLS ಸಂಸ್ಥೆಯನ್ನು ಪ್ರಧಾನಿ ಇಂದಿರಾಗಾಂಧಿ ವಿಶ್ವಸಂಸ್ಥೆಗೆ ಸಮರ್ಪಿಸಿದ್ದರು.  ಈ ಸಂಸ್ಥೆಯ ಬಾಹುಗಳು ವಿಸ್ತರಿಸುತ್ತಿದ್ದಂತೆಯೇ ಭಾರತದ ಬಾಹ್ಯಾಕಾಶ ಸಂಶೋಧನೆಯ ಕವಲುಗಳೂ ಸಹ ತೆರೆದುಕೊಳ್ಳಲಾರಂಭಿಸಿದ್ದವು. ನೆಹರೂ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಂದಿರಾಗಾಂಧಿಯವರ ಕೊಡುಗೆಯನ್ನೂ ಇಲ್ಲಿ ಸ್ಮರಿಸಲೇಬೇಕಾಗಿದೆ.

TERLS ಸಂಸ್ಥೆಯ ಬೆಳವಣಿಗೆಯ ಕೆಲವು ರೋಚಕ ಸಂಗತಿಗಳು ಭಾರತದ ಬಾಹ್ಯಾಕಾಶ ನಡಿಗೆ ಇತಿಹಾಸದ ಪ್ರಮುಖ ಘಟ್ಟವೂ ಆಗಿದೆ. ವಿಕ್ರಂ ಸಾರಾಭಾಯ್‌ ಅವರ ಮುಂದಿನ ಹೆಜ್ಜೆಗಳನ್ನು ಅವಲೋಕಿಸುವ ಮುನ್ನ, ಈ ಸಂಸ್ಥೆ ಎದುರಿಸಿದ ಬಿಕ್ಕಟ್ಟುಗಳತ್ತಲೂ ಗಮನಹರಿಸಬೇಕಾಗಿದೆ,,,,,

ಮುಂದಿನ ಭಾಗದಲ್ಲಿ TERLS  ಯಶೋಗಾಥೆ ಮತ್ತು ಇಸ್ರೋದ ನಡಿಗೆ

Tags: Indira GandhiISROJawaharlal NehruTERLSvikram sarabhai
Previous Post

ಚಂದ್ರನ ಮೇಲೆ ವಾಸ ಮಾಡಲು ಸಾಧ್ಯವಿದೆಯೆ?, ಖನಿಜ ಸಂಪತ್ತಿನ ಆಗರ ಚಂದ್ರಲೋಕ..

Next Post

ದಯಮಾಡಿ ಈ ಬಾರಿ ಪ್ರತಾಪ್ ಸಿಂಹನನ್ನು ಗೆಲ್ಲಿಸಬೇಡಿ ; ಸಿಎಂ ಸಿದ್ದರಾಮಯ್ಯ

Related Posts

ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್
Top Story

ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

by ಪ್ರತಿಧ್ವನಿ
February 7, 2026
0

ಹುಬ್ಬಳ್ಳಿ, ಫೆಬ್ರುವರಿ 7: ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕುಸ್ಥಾಪನೆ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನಾ ಮತ್ತು ಭೂಮಿಪೂಜಾ ಸಮಾರಂಭ ನಾಳೆ (8th...

Read moreDetails
U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

February 6, 2026
ಜಾತಿ ತಾರತಮ್ಯದ ವಿರುದ್ಧ ಸಮಾನತೆಯ ಹಾದಿ: ರೋಹಿತ್ ವೇಮುಲಾ ಪ್ರಕರಣದಿಂದ UGC ನಿಯಮಗಳವರೆಗೆ…

ಜಾತಿ ತಾರತಮ್ಯದ ವಿರುದ್ಧ ಸಮಾನತೆಯ ಹಾದಿ: ರೋಹಿತ್ ವೇಮುಲಾ ಪ್ರಕರಣದಿಂದ UGC ನಿಯಮಗಳವರೆಗೆ…

February 3, 2026
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
ಲಿಂಗಾಯತರು ಕೈಗಾರಿಕಾ  ರಂಗಕ್ಕೆ ಧುಮುಕಬೇಕು: ಎಂ ಬಿ ಪಾಟೀಲ

ಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಎಂ ಬಿ ಪಾಟೀಲ

January 29, 2026
Next Post
ʻಯಾವನ್ ರೀ ಅವನು ಪ್ರತಾಪ್ ಸಿಂಹ..?ʼ ಸಿದ್ದರಾಮಯ್ಯ ಕಿಡಿ..!

ದಯಮಾಡಿ ಈ ಬಾರಿ ಪ್ರತಾಪ್ ಸಿಂಹನನ್ನು ಗೆಲ್ಲಿಸಬೇಡಿ ; ಸಿಎಂ ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada