ನಾಳೆಯಿಂದ (ಡಿ.9) ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ (Winter session) ಆರಂಭವಾಗಲಿದೆ.ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳ ಜಟಾಪಟಿಗೆ ಅಧಿವೇಶನದ ಅಖಾಡ ಸಿದ್ಧವಾಗಿದೆ. ಆದ್ರೆ ಈ ಮಧ್ಯೆ ಸಾವರ್ಕರ್ ಫೋಟೋ (Savarkar photo) ಚರ್ಚೆ ಮತ್ತೆ ಮುನ್ನಲೆಗೆ ಬರುವಂತೆ ಭಾಸವಾಗುತ್ತಿದೆ.

ಹೌದು, ನಾಳೆಯಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಇದೀಗ ಸಭಾಂಗಣದಲ್ಲಿ ಅಳವಡಿಸಲಾಗಿರುವ ಫೋಟೋಗಳು ಸದ್ದು ಮಾಡಲಿದೆ.ಈ ಹಿಂದೆ ಬೆಳಗಾವಿಯಲ್ಲಿ (Belagavi) ನಡೆದ ಚಳಿಗಾಲದ ಅಧಿವೇಶನದಲ್ಲಿ ರಾಜದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಹೀಗಾಗಿ ವೀರ ಸಾವರ್ಕರ್ ಭಾವಚಿತ್ರವನ್ನು ಸದನದಲ್ಲಿ ಆಳವಡಿಕೆ ಮಾಡಲಾಗಿತ್ತು.
ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹೀಗಾಗಿ ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ,ಬಿಜೆಪಿ ಆಳವಡಿಕೆ ಮಾಡಿದ್ದ ವೀರ ಸಾವರ್ಕರ್ ಭಾವಚಿತ್ರ ತೆಗೆದು ಹಾಕಲು ನಿರ್ಧರಿಸಿದ್ದು ,ಆ ಜಾಗದಲ್ಲಿ ಮಾಜಿ ಪ್ರಧಾನಿ ಜವಹರಲಾಲ್ ನೆಹರು,ಇಂದಿರಾಗಾಂಧಿ ಅವರ ಭಾವಚಿತ್ರ ಆಳವಡಿಕೆಗೆ ಮುಂದಾಗಿದೆ ಎನ್ನಲಾಗಿದ್ದು, ಇದು ಮತ್ತೊಂದು ಸುತ್ತಿನ ಜಟಾಪಟಿಗೂ ಸಾಕ್ಷಿಯಾಗಬಹುದು.