ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ವೇಳೆ ಮೊಬೈಲ್ ಬಳಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಅಂಶಗಳು ಬೆಳಕಿಗೆ ಬಂದಿವೆ. ಸಿಸಿಬಿ ಪೊಲೀಸರು ಈ ಹಿಂದೆ ಆರು ಬಾರಿ ಜೈಲಿನಲ್ಲಿ ದಾಳಿ ನಡೆಸಿದ್ದರೂ ಮೊಬೈಲ್ ಪತ್ತೆಯಾಗಿರಲಿಲ್ಲ. ಆದರೆ, ಆಗಸ್ಟ್ 11ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಜ್ವಲ್ ಇದ್ದ ಬ್ಯಾರಕ್ನಿಂದ ಮೊಬೈಲ್ ಪತ್ತೆಯಾಗಿದೆ ಎನ್ನಲಾಗಿದೆ.

ಈ ಬಾರಿ ಸಿಸಿಬಿ ಅಧಿಕಾರಿಗಳು ವಿಭಿನ್ನ ಕಾರ್ಯತಂತ್ರ ರೂಪಿಸಿದ್ದರು. ಇಬ್ಬರು ಅಧಿಕಾರಿಗಳು ಸಭೆ ನಡೆಸುವ ನೆಪದಲ್ಲಿ ಜೈಲಿನೊಳಗೆ ಪ್ರವೇಶಿಸಿದರೆ, ಮತ್ತಿಬ್ಬರು ಇನ್ಸ್ಪೆಕ್ಟರ್ಗಳು ಕಂಟ್ರೋಲ್ ರೂಮ್ನಲ್ಲಿ ಮೊಕ್ಕಾಂ ಹೂಡಿದ್ದರು. ಬ್ಯಾರಕ್ಗಳಿಗೆ ವಾಕಿಟಾಕಿ ಮೂಲಕ ಯಾವುದೇ ಮಾಹಿತಿ ರವಾನೆಯಾಗದಂತೆ ನಿಗಾ ವಹಿಸಲಾಗಿತ್ತು.
ಇದೇ ವೇಳೆ ಸಿಸಿಬಿಯ ಸುಮಾರು 120 ಪೊಲೀಸ್ ಸಿಬ್ಬಂದಿ ಜೈಲಿನ ಹೊರಭಾಗದಲ್ಲಿ ಸಿದ್ಧರಾಗಿದ್ದರು. ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದಾಗ ಪ್ರಜ್ವಲ್ ಇದ್ದ ಬ್ಯಾರಕ್ನಿಂದ ಮೊಬೈಲ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೆ ಸಿಸಿಬಿ ಪೊಲೀಸರು ಜೈಲಿಗೆ ದಾಳಿ ನಡೆಸಲು ತೆರಳಿದಾಗ ಪ್ರವೇಶ ದ್ವಾರದಲ್ಲೇ ಜೈಲು ಸಿಬ್ಬಂದಿ ಅವರನ್ನು ತಡೆದು ಗುರುತಿನ ಚೀಟಿ ಪರಿಶೀಲನೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ವಿಳಂಬ ಮಾಡುತ್ತಿದ್ದರು ಎನ್ನಲಾಗಿದೆ.ಈ ಸಮಯದಲ್ಲಿ ಕೆಲ ಜೈಲು ಸಿಬ್ಬಂದಿ ಕೋಡ್ ವರ್ಡ್ ಅಥವಾ ಸನ್ನೆಗಳ ಮೂಲಕ ಕೈದಿಗಳಿಗೆ ಮಾಹಿತಿ ನೀಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಎಚ್ಚೆತ್ತುಕೊಳ್ಳುತ್ತಿದ್ದ ಕೈದಿಗಳು ತಮ್ಮ ಬ್ಯಾರಕ್ಗಳಲ್ಲಿದ್ದ ನಿಷೇಧಿತ ವಸ್ತುಗಳನ್ನು ಬಚ್ಚಿಡುತ್ತಿದ್ದರು ಎನ್ನಲಾಗಿದೆ.
ಜೈಲಿನೊಳಗೆ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು 2024ರಲ್ಲೇ ಚಿತ್ರೀಕರಿಸಲಾಗಿತ್ತು ಎನ್ನಲಾಗಿದ್ದು, ಅದೇ ಬ್ಯಾರಕ್ನಲ್ಲಿದ್ದ ಮತ್ತೊಬ್ಬ ವಿಚಾರಣಾಧೀನ ಕೈದಿ ವಿಡಿಯೋ ಮಾಡಿದ್ದ ಎನ್ನಲಾಗಿದೆ.ಇದರಿಂದ ಪ್ರಜ್ವಲ್ ಜೈಲಿಗೆ ಬಂದ ಆರಂಭಿಕ ದಿನಗಳಿಂದಲೇ ಮೊಬೈಲ್ ಬಳಸುತ್ತಿದ್ದರೇ ಎಂಬ ಅನುಮಾನ ಮೂಡಿದೆ. ಈ ಕುರಿತು ತನಿಖೆ ಮುಂದುವರಿದಿದೆ.

ಪ್ರಜ್ವಲ್ ಬಳಿ ಪತ್ತೆಯಾದ ಮೊಬೈಲ್ನಲ್ಲಿದ್ದ ಸಿಮ್ ಕಾರ್ಡ್ ಆಂಧ್ರಪ್ರದೇಶ ಮೂಲದ್ದು ಎನ್ನಲಾಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಈ ಹಿಂದೆ ಪತ್ತೆಯಾದ ಕೆಲವು ಮೊಬೈಲ್ಗಳಲ್ಲೂ ಆಂಧ್ರಪ್ರದೇಶದ ಸಿಮ್ ಕಾರ್ಡ್ಗಳು ಪತ್ತೆಯಾಗಿದ್ದವು ಎನ್ನಲಾಗಿದೆ.
ಹೀಗಾಗಿ ಜೈಲಿನೊಳಗೆ ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳ ಪ್ರವೇಶಕ್ಕೆ ಆಂಧ್ರಪ್ರದೇಶದ ಸಂಪರ್ಕವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆಯಿದೆ.ಮೊಬೈಲ್ ಪತ್ತೆಯಾದ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಶುಕ್ರವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೈಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬ್ಯಾರಕ್ಗೆ ಮೊಬೈಲ್, ಸಿಮ್ ಕಾರ್ಡ್, ಚಾರ್ಜರ್ ಹಾಗೂ ಪೆನ್ಡ್ರೈವ್ನಂತಹ ನಿಷೇಧಿತ ವಸ್ತುಗಳು ಹೇಗೆ ತಲುಪಿದವು ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಜೈಲಿನ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕಾರಾಗೃಹದೊಳಗಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ನಿಷೇಧಿತ ವಸ್ತುಗಳ ಪ್ರವೇಶ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಸಿಸಿಬಿಯ ಹಿಂದಿನ ದಾಳಿಗಳ ವೇಳೆ ಕೈಗೆ ಸಿಗದಿದ್ದ ಮೊಬೈಲ್ ಈ ಬಾರಿ ಹೇಗೆ ಪತ್ತೆಯಾಯಿತು? ಜೈಲಿನೊಳಗೆ ಮೊಬೈಲ್ ತಲುಪಿಸಿದವರು ಯಾರು? ಆಂಧ್ರಪ್ರದೇಶದ ಸಿಮ್ಕಾರ್ಡ್ ಬಳಕೆಯ ಹಿಂದಿನ ಜಾಲವೇನು? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.





