ಉತ್ತರ ಪ್ರದೇಶದ ಶರಣ್ ಪುರ್ ಜಿಲ್ಲೆಯಲ್ಲಿ ಮೇಲ್ವರ್ಗದ ಜನರು ವಿಕೃತಿ ಮೆರೆದಿದ್ದಾರೆ. ದಲಿತ ವಿದ್ಯಾರ್ಥಿಯೊಬ್ಬ ಮೀಸೆ ಇಟ್ಟುಕೊಂಡ ಕಾರಣಕ್ಕೆ ಬಲವಂತವಾಗಿ ಅವನ ಮೀಸೆಯನ್ನು ತೆಗೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಸತತವಾಗಿ ದಲಿತರ ವಿರುದ್ದ ದೌರ್ಜನ್ಯಗಳು ಮುಂದುವರೆದಿದ್ದು, ಈ ಘಟನೆ ಅವುಗಳಲ್ಲಿ ಒಂದು ಎಂಬಂತಾಗಿದೆ.
ದಲಿತ ಯುವತಿಯರ ಮೇಲೆ ಅತ್ಯಾಚಾರ, ಕೊಲೆ, ಹಲ್ಲೆ ಮುಂತಾದ ಘಟನೆಗಳು ವ್ಯಾಪಕವಾಗಿ ವರದಿಯಾಗುತ್ತಿದ್ದರೂ, ಸರ್ಕಾರ ಮಾತ್ರ ಮುಗಮ್ಮಾಗಿ ಕುಳಿತಿದೆ. ಮೇಲ್ಜಾತಿಯವರ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಾನೂನುಗಳು ಗಾಳಿಗೆ ತೂರಲಾಗಿವೆ.
ವಿದ್ಯಾರ್ಥಿಯ ವಿರುದ್ದ ದೌರ್ಜನ್ಯವೆಸಗಿದ ಕಾರಣಕ್ಕೆ ಎಫ್ಐಆರ್ ಕೂಡಾ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದಿದ್ದೇನೆಂದರೆ, ಜುಲೈ 18ರಂದು ಶಿಮ್ಲಾನಾ ಎಂಬ ಗ್ರಾಮದಲ್ಲಿ ಆರು ‘ಮೇಲ್ವರ್ಗ’ದ ಜನರು ಇಪ್ಪತ್ತರ ಆಸುಪಾಸಿನ ವಿದ್ಯಾರ್ಥಿಯನ್ನು ಹಿಡಿದು ಅವಾಚ್ಯವಾಗಿ ನಿಂದಿಸಿದ್ದಾರೆ. ಆಯುಧದಾರಿಗಳಾಗಿದ್ದ ಗುಂಪು, ನಂತರ ಯುವಕನನ್ನು ಹತ್ತಿರದ ಕ್ಷೌರಿಕನ ಅಂಗಡಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅವನ ಮೀಸೆಯನ್ನು ತೆಗೆಸಿದ್ದಾರೆ.
ಈ ಎಲ್ಲಾ ಘಟನೆಗಳನ್ನು ವೀಡಿಯೋ ಚಿತ್ರೀಕರಿಸಿ, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಮೀಸೆ ತೆಗೆದ ಕ್ಷೌರಿಕ ಸೇರಿದಂತೆ ಏಳು ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಗಲಭೆ ಉಂಟು ಮಾಡುವ ಯತ್ನ, ಸ್ವಯಂಪ್ರೇರಣೆಯಿಂದ ದಾಳಿ ನಡೆಸುವ ಯತ್ನ, ಶಾಂತಿ ಕದಡುವ ಯತ್ನ ಸೇರಿದಂತೆ ಎಸ್ ಟಿ, ಎಸ್ ಸಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಎಸ್ ಪಿ ಅತುಲ್ ಶರ್ಮಾ ಅವರು, “ಘಟನೆಯ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,” ಎಂದು ಹೇಳಿದ್ದಾರೆ. ಇದರೊಂದಿಗೆ, ಘಟನೆಯಲ್ಲಿ ಭಾಗಿಯಾಗಿದ್ದ ಯುವಕರ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದ್ದು, ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.