ದೇಶದಲ್ಲಿ ಈಗ ಬಿಜೆಪಿ ‘ತನ್ಮದೇಯಾದ ರೀತಿಯ ಹವಾ’ ಇಟ್ಟುಕೊಂಡಿದೆ. ಇದೊಂಥರಾ ‘ಟ್ರೆಂಡಿಂಗ್ ಟುವರ್ಡ್ಸ್ ಬಿಜೆಪಿ’ ಎನ್ನುವಂಥದ್ದು. ಆದರೆ ಉತ್ತರ ಪ್ರದೇಶದಲ್ಲಿ ಅದ್ಯಾಕೋ ಏನೋ ಬಿಜೆಪಿಗೆ ಏಟಿನ ಮೇಲೆ ಏಟು ಬೀಳುತ್ತಲೇ ಇವೆ. ಈಗ ಉತ್ತರ ಪ್ರದೇಶ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಆ ಪಕ್ಷಕ್ಕೆ ಚುನಾವಣೆ ವೇಳೆ ಭಾರೀ ಆಘಾತ ಉಂಟಾಗುವ ಸಾಧ್ಯತೆ ಕೂಡ ಇದೆ.
ಈಗಾಗಲೇ ಉತ್ತರ ಪ್ರದೇಶದಲ್ಲಿ ಇಬ್ಬರು ಸಚಿವರು ಸೇರಿದಂತೆ ಎಂಟು ಜನ ಬಿಜೆಪಿ ಬಿಟ್ಟು ಸಮಾಜವಾದಿ ಪಕ್ಷ ಸೇರಿದ್ದಾರೆ. ಹೊಸ ಸೇರ್ಪಡೆ ಅಲ್ಲಿನ ಹಿಂದುಳಿದ ವರ್ಗಗಳ ಪ್ರಮುಖ ಮುಖಂಡ ಮುಖೇಶ್ ವರ್ಮಾ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಕುಳಿತು ಚುನಾವಣೆ ಗೆಲ್ಲುವ ರಣತಂತ್ರ ರೂಪಿಸುತ್ತಿದ್ದರೆ ಇತ್ತ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ಒಬ್ಬರಾದ ಮೇಲೆ ಒಬ್ಬರು ಪಕ್ಷ ತ್ಯಜಿಸುತ್ತಿದ್ದಾರೆ. ಸಮಾಜವಾದಿ ಪಕ್ಷ ಸೇರುವ ಮೂಲಕ ಉತ್ತರ ಪ್ರದೇಶದಲ್ಲಿ ಈಗ ಸಮಾಜವಾದಿ ಪಕ್ಷಕ್ಕೆ ಪೂರಕ ವಾತಾವರಣ ಇದೆ ಎಂಬ ಸಂದೇಶ ಕೊಡುತ್ತಿದ್ದಾರೆ.
ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ ಯಾದವ್ ಮತ್ತು ಮುಸ್ಲಿಂ ಸಮುದಾಯದ ಮತಗಳು ಸಮಾಜವಾದಿ ಪಕ್ಷದ ಪರ ಇವೆ. ದಲಿತ ಮತಗಳು ಬಿಎಸ್ ಪಿ ಜೊತೆಗಿವೆ. ಕಳೆದ ಬಾರಿ ಹಿಂದುಳಿದ ವರ್ಗಗಳ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದರಿಂದ ಆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿತ್ತು. ಆದರೆ ಈ ಬಾರಿ ಹಿಂದುಳಿದ ವರ್ಗಗಳಲ್ಲಿ ಬಿಜೆಪಿ ಬಗ್ಗೆ ಒಲವು ಇಲ್ಲ ಎಂದು ಸದ್ಯದ ಬೆಳವಣಿಗೆಗಳು ಸಾರಿ ಹೇಳುತ್ತವೆ. ಉದಾಹರಣೆಗೆ ಈಗ ಬಿಜೆಪಿ ತೊರೆದ ಮೊದಲ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹಿಂದುಳಿದ ವರ್ಗಕ್ಕೆ ಸೇರಿದವರು. ಇದೀಗ ಇವತ್ತಿನ ಮಟ್ಟಿಗೆ ಕಡೆಯದಾಗಿ ಬಿಜೆಪಿ ತೊರೆದಿರುವ ಮುಖೇಶ್ ವರ್ಮಾ ಕೂಡ ಹಿಂದುಳಿದವರ ಪೈಕಿ.
ಬಿಜೆಪಿ ತೊರೆದ ಬಳಿಕ ಟ್ವೀಟ್ ಮಾಡಿರುವ ಮುಖೇಶ್ ವರ್ಮಾ ಅವರು ‘ಬಿಜೆಪಿಯು ಹಿಂದುಳಿದ ಜಾತಿಗಳನ್ನು ನಿರ್ಲಕ್ಷ್ಯ ಮಾಡಿದೆ. ಅದಕ್ಕಾಗಿ ನಾನು ಬಿಜೆಪಿ ತ್ಯಜಿಸುತ್ತಿದ್ದೇನೆ’ ಎಂಬ ಅರ್ಥದಲ್ಲಿ ಬರೆದಿದ್ದಾರೆ. ಅಲ್ಲದೆ ಸ್ವಾಮಿ ಪ್ರಸಾದ್ ಮೌರ್ಯ ಅವರು ‘ದಮನಿತರ ಧ್ವನಿ’. ಆದ್ದರಿಂದ ನಾನು ಕೂಡ ಅವರಂತೆಯೇ ಬಿಜೆಪಿ ಬಿಟ್ಟಿದ್ದೇನೆ ಎಂದಿದ್ದಾರೆ. ಇದು ಒಂದು ರೀತಿಯಲ್ಲಿ ಇನ್ನಿತರ ಹಿಂದುಳಿದ ಸಚಿವರು, ಶಾಸಕರು ಪಕ್ಷ ಬಿಡಲು ಕೇಳಿಕೊಂಡಂತಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ಬಗ್ಗೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚಾಗಿವೆ. ಈ ವರ್ಗಗಳ ಅಭಿವೃದ್ಧಿಗೆ ಬಿಜೆಪಿ ಗಮನವನ್ನು ನೀಡಲಿಲ್ಲ. ಅಷ್ಟೇಯಲ್ಲ, ದಲಿತ ಮತ್ತು ಹಿಂದುಳಿದ ಜಾತಿಗಳ ಜನಪ್ರತಿನಿಧಿಗಳಿಗೆ ಅಗೌರವ ತೋರಲಾಗುತ್ತಿದೆ ಎಂದು ಮುಖೇಶ್ ವರ್ಮಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ನೇರವಾಗಿ ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ.
ಇದಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಹಲವಯ ನಾಯಕರು ಬಿಜೆಪಿ ಬಿಡುತ್ತಾರೆ. ಸಮಾಜವಾದಿ ಪಕ್ಷ ಸೇರಲಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಗೆ ಭಾರೀ ಆಘಾತ ಉಂಟುಮಾಡಿದ್ದಾರೆ. ಮೊನ್ನೆ ಎನ್ ಸಿಪಿ ನಾಯಕ ಶರದ್ ಪವರ್ ’13 ಶಾಸಕರು, ಸಚಿವರು ಬಿಜೆಪಿ ತೊರೆಯುತ್ತಾರೆ’ ಎಂದು ಹೇಳಿದ್ದನ್ನು ಸ್ಮರಿಸಬಹುದು. ಈ ಇಬ್ಬರ ಮಾತುಗಳನ್ನು ಗಮನಿಸಿದರೆ ಇನ್ನೂ ಒಂದಷ್ಟು ಮಂದಿ ಬಿಜೆಪಿ ಬಿಡುವ ಸಾಧ್ಯತೆ ಕಂಡುಬರುತ್ತಿದೆ.
2017ರಲ್ಲಿ ಕಾನ್ಪುರ ಗ್ರಾಮಾಂತರದ ಬಿಲ್ಹೌರ್ನಲ್ಲಿ ಬಿಜೆಪಿ ಇತಿಹಾಸ ಬರೆದಿತ್ತು. ಹಿರಿಯ ರಾಜಕಾರಣಿ ಭಗವತಿ ಸಾಗರ್ ಅವರು ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಇದರಿಂದ ಮೊದಲ ಬಾರಿಗೆ ಬಿಜೆಪಿಯು ಈ ಕ್ಷೇತ್ರದಿಂದ ಗೆದ್ದಿತ್ತು. ಈಗ ಭಗವತಿ ಸಾಗರ್ ಕೂಡ ರಾಜೀನಾಮೆ ನೀಡಿದ್ದಾರೆ. ನಾನು ಬಿಆರ್ ಅಂಬೇಡ್ಕರ್ ಮತ್ತು ವಿಚಾರಧಾರೆಗಳನ್ನು ನಂಬುವ ವ್ಯಕ್ತಿ. ಬಿಜೆಪಿ ಅಂಬೇಡ್ಕರ್ ವಿಚಾರಗಳಿಗೆ ವಿರೋಧ ಮಾಡುವುದರಿಂದ ನಾನು ಪಕ್ಷ ತ್ಯಜಿಸಬೇಕಾಯಿತು’ ಎಂದಿದ್ದಾರೆ. ಅಷ್ಟೇಯಲ್ಲ, ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಇನ್ನಷ್ಟು ಜನ ಆಡಳಿತಾರೂಢ ಬಿಜೆಪಿ ಪಕ್ಷವನ್ನು ತೊರೆಯಲಿದ್ದಾರೆ ಎಂದು ಹೇಳಿದ್ದಾರೆ.
80 ಸಂಸದರ ಬಲವನ್ನು ಹೊಂದಿರುವ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಮತ್ತೆ ಗೆಲ್ಲಲೇಬೇಕು ಎಂದು ಬಿಜೆಪಿ ಭಾರೀ ಕಸರತ್ತು ನಡೆಸಿದೆ. ಆದರೆ ಚುನಾವಣಾ ದಿನಾಂಕ ಘೋಷಣೆ ಆಗಿದ್ದರೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೋ ಇಲ್ಲವೋ? ಸ್ಪರ್ಧಿಸಿದರೂ ಯಾವ ಕ್ಷೇತ್ರದಿಂದ ಎಂಬ ಗೊಂದಲ ಬಗೆಹರಿದಿಲ್ಲ. ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ನಡುವೆ ಭಿನ್ನಾಭಿಪ್ರಾಯ ಇದೆ. ಯೋಗಿ ಆದಿತ್ಯನಾಥ್ ಮತ್ತು ಅಮಿತ್ ಶಾ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ. ಹಿಂದಿನಿಂದಲೂ ಈ ಗೊಂದಲ ಇದ್ದರೂ ಬಿಜೆಪಿ ಹೈಕಮಾಂಡ್ ನಾಯಕರು ಮತ್ತು RSS ನಾಯಕರು ಪ್ರಯತ್ನಿಸಿದರೂ ಈ ಗೊಂದಲ ಸಂಪೂರ್ಣವಾಗಿ ಬಗೆಹರಿದಿಲ್ಲ. ಕೇಂದ್ರ ಸರ್ಕಾರ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಲು ತಡ ಮಾಡಿದ್ದರಿಂದ ಈ ಬಾರಿ ಬಿಜೆಪಿಗೆ ರೈತ ವಿರೋಧಿ ಎಂಬ ಹಣೆಪಟ್ಟಿ ಇದೆ. ಯೋಗಿ ಆದಿತ್ಯನಾಥ್ ಅವರು ಧಾರ್ಮಿಕ ವಿಚಾರಗಳಿಗೆ ಒತ್ತು ನೀಡಿದ್ದಾರೆಯಷ್ಟೇ, ಅಭಿವೃದ್ಧಿಗೆ ಅಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇವು ಆಡಳಿತ ವಿರೋಧಿ ಅಲೆಯಾಗಿ ಪರಿಣಮಿಸಬಹುದು ಎಂದು ಹೇಳಲಾಗುತ್ತಿದೆ. ಈಗ ಬಿಜೆಪಿ ನಾಯಕರ ‘ಪಕ್ಷ ಬಿಡುವ ಅಭಿಯಾನ’ ಕೂಡ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈಗ ಬಿಜೆಪಿ ಮೊದಲಿಗಿಂತ ಹೆಚ್ಚು ಒತ್ತಡಕ್ಕೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.