ಬೆಂಗಳೂರಿನ ಜೆ.ಪಿ ಭವನದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಸರ್ಕಾರದ ಮರ್ಯಾದೆ ತೆಗೆಯುವ ಕೆಲಸ ಮಾಡಿಲ್ಲ, ಇವರೇ ಅವರ ಮರ್ಯಾದೆ ತೆಗೀತಿದ್ದಾರೆ. ಪೇಪರ್ನಲ್ಲಿ ಜಾಹೀರಾತು ಕೊಟ್ಟು ಬಡಾಯಿ ಕೊಚ್ಕೊಂಡು ಓಡಾಡ್ತಾರೆ. ಕಾವೇರಿ 5ನೇ ಹಂತದ ಲೋಕಾರ್ಪಣೆ ವೇಳೆಯೂ ನನ್ನನ್ನು ಟೀಕೆ ಮಾಡಿದ್ದಾರೆ.
ಕುಮಾರಸ್ವಾಮಿ ಏನೂ ಅಭಿವೃದ್ಧಿ ಮಾಡಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಜೆ.ಪಿ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಕೌಂಟರ್ ಮಾಡಿದ್ದಾರೆ. 110 ಹಳ್ಳಿಯನ್ನು ಪಾಲಿಕೆಗೆ ಸೇರಿಸಿದ್ದು ಬಿಟ್ಟರೆ, ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಅಂದಿದ್ದಾರೆ. ಆದರೆ ಬೆಂಗಳೂರಿಗೆ ಜೆ-ನರ್ಮ್ JNRURM ಯೋಜನೆ ಮೊದಲು ತಂದಿದ್ದು ನಾನು. 110 ಹಳ್ಳಿಗಳನ್ನು ಅಭಿವೃದ್ಧಿಗಾಗು ಬೆಂಗಳೂರಿಗೆ ಸೇರಿಸಿದ್ದು ನಾನು. ಬೆಂಗಳೂರು ಅಭಿವೃದ್ಧಿಗೆ 20 ಸಾವಿರ ಕೋಟಿ ಅನುದಾನ ಕೊಟ್ಡಿದ್ದೆ ನಾನು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಎದ್ದು ಕಾಣುತ್ತಿವೆ. ರಾಜ್ಯದಲ್ಲಿ ಜನಪರವಾದ ಆಡಳಿತವನ್ನು ನೀಡುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಹಲವರು ರೀತಿಯ ವೈಫಲ್ಯಗಳು ಪ್ರತಿನಿತ್ಯ ನೋಡ್ತಿದ್ದೇವೆ. ಇದು ಜಾಹೀರಾತು ಸರ್ಕಾರ.. ಬರೀ ಜಾಹೀರಾತು ಮಾತ್ರ ನೀಡ್ತಿದೆ. ಕಳೆದ ಎರಡ್ಮೂರು ದಿನಗಳಲ್ಲಿ ಪ್ರಳಯ ಮಾದರಿಯ ಅನಾಹುತ ಸಂಭವಿಸಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಸಾಕಷ್ಟು ಸಮಸ್ಯೆ ಉಂಟಾಗಿದೆ. ರೈತರು ಬೆಳೆದ ಬೆಳೆ ಫಸಲು ಸಿಗದೆ ನಾಶ ಆಗಿ ಹೋಗಿದೆ. ಹಿಂಗಾರು ಮಳೆ ಅನಾಹುತ ರೈತ ಸಮುದಾಯದ ಮೇಲೆ ಪರಿಣಾಮ ಬೀರಿದೆ. ಆದರೆ ಸರ್ಕಾರ ಕನಿಷ್ಠ ಸೌಜನ್ಯಕ್ಕಾದರೂ ರೈತರಿಗೆ ಧೈರ್ಯ ತುಂಬುವ ಹೇಳಿಕೆಯನ್ನು ನಾನು ನೋಡಿಲ್ಲ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಲ್ಲಿ ನೀರು ನಿಂತರೆ ಅರ್ಧ ಗಂಟೆಯಲ್ಲಿ ಖಾಲಿ ಮಾಡೋದು ಗೊತ್ತು ಅಂತ ಸಿಎಂ ಹೇಳಿದ್ರು, ಆದರೆ ಇವರಿಗೆ ಕಾವೇರಿ ಜಲಾಶಯದ ನೀರನ್ನು ತಮಿಳುನಾಡಿಗೆ ಬಿಟ್ಟು ಖಾಲಿ ಮಾಡೋದು ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ. ಜನರಿಗೆ ಊಟ ಸಿಕ್ಕಿಲ್ಲ, ಕುಡಿಯೋಕೆ ನೀರಿಲ್ಲ, ನಿದ್ದೆ ಮಾಡೋಕೂ ಜಾಗ ಇಲ್ಲ. ಈ ರೀತಿಯ ವಾತಾವರಣ ಬೆಂಗಳೂರಲ್ಲಿ ನಿರ್ಮಾಣ ಆಗಿದೆ. ಇವತ್ತು ಮಾಧ್ಯಮಗಳು, ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ರೆ ಯಾರು ಮರ್ಯಾದೆ ತೆಗಿತಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ.
ಇವರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಮುಗಿಸಿದ್ದಾರೆ. ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡ್ತೀನಿ ಅಂದ್ರು. ಬೆಂಗಳೂರು, ಕರ್ನಾಟಕದ ಮರ್ಯಾದೆಯನ್ನು ವಿಪಕ್ಷಗಳು ಹಾಳು ಮಾಡೋ ಕೆಲಸ ಮಾಡಬೇಡಿ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸರ್ಕಾರ ವಾಲ್ಮೀಕಿ ಜಯಂತಿ ದಿನ ಬಾಂಕ್ವೆಟ್ ಹಾಲ್ನಲ್ಲಿ ನಡೆಸ್ತಿದೆ. ಐದು ಜನ ಗಣ್ಯರಿಗೆ ಪ್ರಶಸ್ತಿ ಕೂಡ ನೀಡ್ತಿದೆ. ಪತ್ರಿಕೆಗಳಲ್ಲಿ ಎಸ್ಟಿ ಎಸ್ಸಿ ಸಮುದಾಯಕ್ಕೆ ಹಲವು ಯೋಜನೆಗಳು ತರೋದಾಗಿ ಪ್ರಕಟ ಮಾಡಿದ್ದಾರೆ. ಆದರೆ ಇವತ್ತಿನ ಜಾಹೀರಾತಲ್ಲಿ ಸತ್ಯಮೇವ ಜಯತೆ ಹಾಕೋದು ಮರೆತು ಬಿಟ್ಟಿದೆ ಎಂದು ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ರಾಮಾಯಣ ಮಹಾಭಾರತ ಇಂದಿಗೆ ಬಹಳ ಸೂಕ್ತ ಗ್ರಂಥ. ಇವತ್ತಿನ ಕೆಲವು ಬೆಳವಣಿಗೆಗಳಿಗೆ ಈ ಎರಡು ಗ್ರಂಥಗಳಲ್ಲಿ ನೀತಿ ಪಾಠಗಳಾಗಿವೆ. ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ವಾಲ್ಮೀಕಿ ಜಯಂತಿ ಮಾಡ್ಬೇಕು, ಕೇವಲ ಒಂದು ಜಾತಿಗೆ ಸೀಮಿತ ಮಾಡಬಾರದು ಎಂದಿದ್ದಾರೆ. ಇನ್ನು ಸರ್ಕಾರ ವಾಲ್ಮೀಕಿ ಜಯಂತಿ ದಿನ ನಡೆಸ್ತಿದೆ. ಐದು ಜನ ಗಣ್ಯರಿಗೆ ಪ್ರಶಸ್ತಿ ಕೂಡ ನೀಡ್ತಿದೆ. ಆದರೆ ಆ ಸಮುದಾಯದ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಲೂಟಿ ಮಾಡಿರೋದು ಜಗಜ್ಜಾಹೀರು ಎಂದಿದ್ದಾರೆ.