ಸೆಲೆಬ್ರಿಟಿ ಜ್ಯೋತಿಷಿ ಎಂದೇ ಗುರುತಿಸಿಕೊಂಡಿರುವ ವೇಣುಸ್ವಾಮಿ ಆಗಾಗ ತಮ್ಮ ಭವಿಷ್ಯವಾಣಿಗಳಿಂದ ಸುದ್ದಿಯಾಗುತ್ತಾರೆ. ನಟಿ ಸಮಂತಾ ಹಾಗೂ ನಾಗಚೈತನ್ಯ ಅವರ ಸಂಬಂಧ ಸೇರಿದಂತೆ ಹಲವು ವಿಚಾರಗಳ ಕುರಿತು ಅವರು ಈ ಹಿಂದೆ ನುಡಿದಿದ್ದ ಭವಿಷ್ಯಗಳು ಚರ್ಚೆಗೆ ಗ್ರಾಸವಾಗಿದ್ದವು.ಇದೀಗ ಟಾಲಿವುಡ್ ಚಿತ್ರರಂಗಕ್ಕೆ ಸಂಬಂಧಿಸಿದ ಅವರ ಮತ್ತೊಂದು ಭವಿಷ್ಯ ಭಾರೀ ಚರ್ಚೆಗೆ ಕಾರಣವಾಗಿದೆ. 2027ರಿಂದ 2028ರ ಅವಧಿಯಲ್ಲಿ ತೆಲುಗು ಚಿತ್ರರಂಗದ ಯುವ ನಟ ಹಾಗೂ ಜನಪ್ರಿಯ ನಟಿಯೊಬ್ಬರ ಜೀವಕ್ಕೆ ಗಂಭೀರ ಅಪಾಯ ಎದುರಾಗಬಹುದು ಎಂದು ವೇಣುಸ್ವಾಮಿ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ವೇಣುಸ್ವಾಮಿ, 45 ಅಥವಾ 46 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ತೆಲುಗು ಸೆಲೆಬ್ರಿಟಿಗಳು ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಸಮಸ್ಯೆಗಳು ನಂತರ ಜೀವಕ್ಕೆ ಅಪಾಯಕಾರಿಯಾಗಬಹುದು ಎಂಬ ರೀತಿಯಲ್ಲಿ ಅವರು ಭವಿಷ್ಯ ನುಡಿದಿದ್ದಾರೆ.ಯುವ ನಟನ ವಿಚಾರವಾಗಿ ಮಾತನಾಡಿದ ಅವರು, ಆರೋಗ್ಯ ಸಮಸ್ಯೆಯಿಂದ ಅಥವಾ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಆತ್ಮಹತ್ಯೆಯಂತಹ ಘಟನೆ ಮೂಲಕ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಸೆಲೆಬ್ರಿಟಿಗಳ ಹೆಸರುಗಳನ್ನು ನೇರವಾಗಿ ಹೇಳಿದರೆ ವಿವಾದವಾಗಬಹುದು ಎಂದು ಹೇಳಿರುವ ವೇಣುಸ್ವಾಮಿ, ಮೇಷ ರಾಶಿಗೆ ಸೇರಿದ ನಾಯಕಿ ಹಾಗೂ ವೃಶ್ಚಿಕ ಅಥವಾ ಮಿಥುನ ರಾಶಿಗೆ ಸೇರಿದ ನಾಯಕನಿಗೆ 2027-28ರ ಅವಧಿಯಲ್ಲಿ ಅಪಾಯ ಎದುರಾಗಬಹುದು ಎಂಬ ಸುಳಿವು ನೀಡಿದ್ದಾರೆ.ವೇಣುಸ್ವಾಮಿ ಅವರ ಈ ಹೇಳಿಕೆಯ ವಿಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರಿಂದಾಗಿ ಅವರು ಯಾರ ಬಗ್ಗೆ ಮಾತನಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಕೆಲವರು ಇದನ್ನು ಪ್ರಚಾರಕ್ಕಾಗಿ ಮಾಡಿರುವ ಹೇಳಿಕೆ ಎಂದು ಟೀಕಿಸಿದರೆ, ಇನ್ನೂ ಕೆಲವರು ಆ ಇಬ್ಬರು ಸೆಲೆಬ್ರಿಟಿಗಳು ಯಾರಿರಬಹುದು ಎಂದು ಊಹಿಸುತ್ತಿದ್ದಾರೆ.

ವೇಣುಸ್ವಾಮಿ ಈ ಹಿಂದೆಯೂ ತಮ್ಮ ಭವಿಷ್ಯವಾಣಿಗಳಿಂದ ವಿವಾದಕ್ಕೆ ಸಿಲುಕಿದ್ದರು. ನಟಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಅವರ ದಾಂಪತ್ಯದ ಕುರಿತು ಅವರು ನೀಡಿದ್ದ ಹೇಳಿಕೆಯೂ ಇತ್ತೀಚೆಗೆ ಚರ್ಚೆಯಾಗಿತ್ತು. ಜೂನ್ 2027ರ ಬಳಿಕ ದಂಪತಿಗಳು ವೈವಾಹಿಕ ಸಮಸ್ಯೆಗಳನ್ನು ಎದುರಿಸಬಹುದು ಎಂದು ಅವರು ಹೇಳಿದ್ದರು.
ಈ ಹಿಂದೆ ಸೆಲೆಬ್ರಿಟಿಗಳ ಕುರಿತು ಭವಿಷ್ಯ ನುಡಿದ ವಿಚಾರವಾಗಿ ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಆ ಸಂದರ್ಭದಲ್ಲಿ ಇನ್ನು ಮುಂದೆ ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ಹೇಳುವುದಿಲ್ಲ ಎಂದು ವೇಣುಸ್ವಾಮಿ ಹೇಳಿಕೊಂಡಿದ್ದರು. ಇದೀಗ ಅವರ ಹೊಸ ಭವಿಷ್ಯವಾಣಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸೂಚನೆ: ಮೇಲಿನ ಮಾಹಿತಿಯು ವೇಣುಸ್ವಾಮಿ ಅವರು ಸಂದರ್ಶನದಲ್ಲಿ ನೀಡಿರುವ ಹೇಳಿಕೆಗಳ ಆಧಾರಿತವಾಗಿದ್ದು, ಭವಿಷ್ಯವಾಣಿಗಳಿಗೆ ವೈಜ್ಞಾನಿಕ ದೃಢೀಕರಣವಿಲ್ಲ.






