ಬೆಂಗಳೂರು: ಪೊಲೀಸ್ ಇಲಾಖೆಯ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಅಸಂವಿಧಾನಾತ್ಮಕ ದಲಿತ ಪದ ಬಳಸದಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ರಾಜ್ಯ ಪೊಲೀಸ್ ಇಲಾಖೆಯಿಂದ ರಾಜ್ಯದ ಎಲ್ಲಾ ಪೊಲೀಸ್ ಠಾಣೆ ಹಂತಗಳಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಹಂತದವರೆಗಿನ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಎಸ್ಸಿ, ಎಸ್ಟಿಗಳ ಕುಂದುಕೊರತೆ ಸಭೆಗಳಿಗೆ ಮತ್ತು ಪೊಲೀಸ್ ಇಲಾಖೆಯ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಅಸಂವಿಧಾನಾತ್ಮಕ ದಲಿತ ಪದ ಬಳಸಬಾರದು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಕುಂದುಕೊರತೆಗಳನ್ನು ಆಲಿಸುವ ಉದ್ದೇಶದಿಂದ “ದಲಿತರ ದಿನ” ವನ್ನಾಗಿ ಆಚರಿಸುವಂತೆ ರಾಜ್ಯ ಪೊಲೀಸ್ ಇಲಾಖೆಯು 2015ರಲ್ಲಿ ಸ್ಥಾಯಿ ಆದೇಶ ಹೊರಡಿಸಲಾಗಿದೆ. ನಂತರ ಗೌರವಾನ್ವಿತ ಮಧ್ಯಪ್ರದೇಶದ ಉಚ್ಚನ್ಯಾಯಾಲಯ, ಗ್ವಾಲಿಯರ್ ಪೀಠದ ಆದೇಶದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಗಳನ್ನು ಸೂಚಿಸಲು ಪರ್ಯಾಯವಾಗಿ ಬಳಸುತ್ತಿರುವ “ದಲಿತ” ಎಂಬುವ ಶಬ್ದವು ಸಂವಿಧಾನದಲ್ಲಾಗಲಿ ಅಥವಾ ಯಾವುದೇ ಶಾಸನದಲ್ಲಾಗಲಿ ಎಲ್ಲಿಯೂ ಉಲ್ಲೇಖಿಸದಿರುವುದರಿಂದ ಸದರಿ ಪದವು ಅಸಂವಿಧಾನಾತ್ಮಕವಾಗಿದೆ.

ಕೇಂದ್ರ & ರಾಜ್ಯ ಸರ್ಕಾರ ಈ ಪದವನ್ನು ಬಳಸುವುದರಿಂದ ದೂರವಿರುವಂತೆ ಮಾನ್ಯ ಘನ ಉಚ್ಚ ನ್ಯಾಯಾಲಯ ನೀಡಿದ ಆದೇಶದಂತೆ ಸಂವಿಧಾನದ ಅನುಚ್ಛೇದ 366(24)ರಲ್ಲಿ ವ್ಯಾಖ್ಯಾನ ನೀಡಲಾಗಿದ್ದು ಅನುಚ್ಚೇದ 341 ಪರಿಶಿಷ್ಟ ಜಾತಿ ಮತ್ತು 342ರಡಿಯಲ್ಲಿ ಪರಿಶಿಷ್ಟ ಪಂಗಡಗಳನ್ನು ಗುರುತಿಸುವ ಸಂವಿಧಾನಾತ್ಮಕ ವ್ಯವಸ್ಥೆಯಿರುವುದ್ದರಿಂದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸದರಿ “ದಲಿತ” ಪದವನ್ನು ಕೇಂದ್ರ & ರಾಜ್ಯ ಸರ್ಕಾರಗಳ ಎಲ್ಲಾ ಅಧಿಕೃತ ವ್ಯವಹಾರಗಳು, ವಿಷಯಗಳು, ವ್ಯವಹಾರಿಕ ಕ್ರಮಗಳು, ಪ್ರಮಾಣ ಪತ್ರಗಳನ್ನು ಸೇರಿದಂತೆ ಇತರೆಲ್ಲೆಡೆ ಬಳಸದಂತೆ ಸಂವಿಧಾನಾತ್ಮಕ ಪದವಾದ “ಪರಿಶಿಷ್ಟ ಜಾತಿ” ಎಂದು ಬಳಸಲು ಆದೇಶ ಹೊರಡಿಸಲಾಗಿದೆ.

ಅದರಂತೆ ಪ್ರತಿ ತಿಂಗಳ 2ನೇ ಭಾನುವಾರದಂದು ಪ್ರತಿ ಪೊಲೀಸ್ ಠಾಣೆಯಲ್ಲಿ ಎಸ್.ಸಿ ಎಸ್.ಟಿ, ದಿನವನ್ನಾಗಿ ಆಚರಿಸುವಂತೆ ಹಾಗೂ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಮಟ್ಟದಲ್ಲಿ ಎಸ್ಸಿ, ಎಸ್ಟಿಗಳ ಕುಂದುಕೊರತೆ ಸಭೆಗಳನ್ನು ನಡೆಸಿ ಸದರಿ ಸಭೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ, ಸದರಿ ಸಮುದಾಯದವರ ಅಹವಾಲುಗಳಿಗೆ ಸ್ಪಂದಿಸಿ ಮಹತ್ವದ ದಿನವನ್ನಾಗಿಸುವಂತೆ ರಾಜ್ಯ ಪೊಲೀಸ್ ಕಛೇರಿಯು ಸುತ್ತೋಲೆಯನ್ನು ಹೊರಡಿಸಲಾಗಿದ್ದರೂ ರಾಜ್ಯದ ಕೆಲವು ಪೊಲೀಸ್ ಠಾಣೆಗಳು ಮತ್ತು ಜಿಲ್ಲಾ ಎಸ್ಪಿಗಳ ಮಟ್ಟದಲ್ಲಿ ನಡೆದ/ನಡೆಯುವ ಸಭೆಗಳಲ್ಲಿ “ದಲಿತ ಕುಂದುಕೊರತೆ ಸಭೆ” “ದಲಿತ ಸಭೆ” “ದಲಿತರ ಸಭೆ” “ದಲಿತ ಸಮಿತಿ ಸಭೆ ” “ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಕುಂದುಕೊರತೆ ಸಭೆ “ಜಿಲ್ಲಾ ಮಟ್ಟದ ದಲಿತ ಕುಂದುಕೊರತೆ ಸಭೆ ” “ದಲಿತರ ಕಾಲೋನಿಗೆ ಭೇಟಿ ” ಎಂದು ಪ್ರಸ್ತುತದವರೆಗೆ ಬ್ಯಾನರ್ಗಳಲ್ಲಿ ಮುದ್ರಿಸಿ ಸಾರ್ವಜನಿಕ ಸಭೆಯಲ್ಲಿ ಹಾಕಿರುವುದು/ಹಾಕುತ್ತಿರುವುದು, ಕೆಲವು ಠಾಣಾಧಿಕಾರಿಗಳು ಈ ಹಿಂದೆ ಮುದ್ರಿಸಿದ ಬ್ಯಾನರ್ಗಳನ್ನೇ ಪ್ರಸ್ತುತದವರೆಗೆ ಮರುಬಳಸುತ್ತಿರುವುದು, ಪ್ರತಿಕಾ ಪ್ರಕಟಣೆಯಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿನ ಆಯಾ ಜಿಲ್ಲಾ ಪೊಲೀಸ್ ಕಛೇರಿಯ ಅಧಿಕೃತ ಖಾತೆಗಳಲ್ಲಿ ಸದರಿ ಅಸಂವಿಧಾನಾತ್ಮಕ “ದಲಿತ” ಪದವನ್ನು ಬಳಸಿ ಸರ್ಕಾರದ ಮತ್ತು ಇಲಾಖೆಯ ಆದೇಶ/ಸುತ್ತೋಲೆಗಳನ್ನು ಪಾಲಿಸದೇ ನಿರ್ಲಕ್ಷ್ಯ, ಕರ್ತವ್ಯಲೋಪ, ದುರ್ನಡತೆ ತೋರುತ್ತಿರುವುದು ವ್ಯಾಪಕವಾಗಿ ಕಂಡುಬಂದಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ತಿಂಗಳು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ 2ನೇ ಭಾನುವಾರ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಕೊನೆಯ ಭಾನುವಾರದಂದು ನಡೆಯುವ “ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ” ಯನ್ನು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲೋನಿಗಳಿಗೆ ಕುಂದುಕೊರತೆ ಪರಿಶೀಲನೆಗಾಗಿ ಭೇಟಿ ನೀಡುವ ಪೊಲೀಸ್ ಅಧಿಕಾರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪದಕ್ಕೆ ಪರ್ಯಾಯವಾಗಿ ನಿಷೇಧಿತ ಅಸಂವಿಧಾನಾತ್ಮಕ “ದಲಿತ” ಪದ/ಶಬ್ದವನ್ನು ಎಲ್ಲಿಯೂ ಬಳಸದೆ ಜಾಗೃತೆವಹಿಸಿ ಸಭೆಗಳಿಗೆ ” ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ” ಕಾಲೋನಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ “ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲೋನಿಗಳಿಗೆ ಭೇಟಿ” ಎಂದು ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಪೊಲೀಸ್ ಇಲಾಖೆಯ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸದರಿ “ದಲಿತ” ಎಂಬ ಪದವನ್ನು ಬಳಸದೇ ಎಚ್ಚರಿಕೆ ವಹಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆ ಮತ್ತು ಎಲ್ಲಾ ವಿಭಾಗದ ಪೊಲೀಸ್ ಘಟಕಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇ ಹೊರಡಿಸುವಂತೆ ಮೋಹನ್ ಕುಮಾರ್ ದಾನಪ್ಪ ಪತ್ರದ ಮೂಲಕ ಆಗ್ರಹಿಸಿದ್ದಾರೆ.






