ಬೆಂಗಳೂರು : ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹಲವು ವರ್ಷಗ:ಳಿಂದಲೂ ತಮ್ಮ ಕೋರಿಕೆಗಳ ಈಡೇರಬೇಕು. ಸರ್ಕಾರ ನೌಕರರನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಸಾರಿಗೆ ನೌಕರರು ತಮ್ಮ ಮನವಿಗಳನ್ನು ಸರ್ಕಾರದ ಮುಂದೆ ಮಂಡಿಸುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಯಾವುದೇ ಸರ್ಕಾರಗಳು ಸಾರಿಗೆ ನೌಕರರತ್ತ ತಿರುಗಿಯೂ ನೋಡುತ್ತಿಲ್ಲ. ಇದರಿಂದ ಆಕ್ರೋಶಗೊಂಡಿರುವ ಚಾಲಕ, ನಿರ್ವಾಹಕ, ಮೆಕ್ಯಾನಿಕ್ಗಳು ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿಯುವ ನಿರ್ಧಾರ ಮಾಡಿದ್ದಾರೆ.

ಕಳೆದ ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆಯೇ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದ ನೌಕರರು, ಸರ್ಕಾರದ ಭರವಸೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರು. ಅಲ್ಲದೆ ಹೈಕೋರ್ಟ್ ಕೂಡ ಆಗ ಮುಷ್ಕರ ನಡೆಸಬಾರದು ಎಂದು ಹೇಳಿತ್ತು. ಹೀಗಾಗಿ ಸರ್ಕಾರ ಪ್ರತಿಭಟನೆಯ ಕಾವಿನಿಂದ ಬಚಾವಾಗಿತ್ತು. ಆದರೆ ಫೆ.19ರಿಂದ ಮತ್ತೆ ಹೋರಾಟ ಮಾಡುವುದಾಗಿ ಸಾರಿಗೆ ಮುಖಂಡರು ಘೋಷಿಸಿದ್ದಾರೆ.
ಇನ್ನೂ ಈಗಾಗಲೇ ಎಲ್ಲ ಡಿಪೋಗಳಿಗೆ ತೆರಳಿ ಮುಷ್ಕರದಲ್ಲಿ ತಪ್ಪದೇ ಭಾಗವಹಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳಿಗೆ ಪಾಲ್ಗೊಳ್ಳುವಂತೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ : CM CUP : ಪತ್ರಕರ್ತನಾಗಿದ್ದ ಲಿಂಗರಾಜು ಯಶಸ್ವಿ ಉದ್ಯಮಿಯಾಗಿ ರೂಪುಗೊಂಡ ಸ್ಪೂರ್ತಿ ಕಥೆ..!
ಸಾರಿಗೆ ನೌಕರರ ಹೋರಾಟದಿಂದ ರಾಜ್ಯಾದ್ಯಂತ ನಾಲ್ಕು ನಿಗಮಗಳ ಬಸ್ ಸಂಚಾರ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯೂ ದಟ್ಟವಾಗಿದೆ. ಯಾಕೆಂದರೆ “ಬೆಂಗಳೂರು ಚಲೋ” ಹೆಸರಿನಲ್ಲಿ ನಡೆಯುತ್ತಿರುವ ಈ ಮುಷ್ಕರದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಗಳ ನೌಕರರು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ. ಹೀಗಾಗಿ ನಾಳೆ ಬೆಳಿಗ್ಗೆ 11 ಗಂಟೆಗೆ ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿ ಸರ್ಕಾರದ ನಡೆಯನ್ನು ಖಂಡಿಸಲು ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯ ಸಿಬ್ಬಂದಿಗಳು ಸಿದ್ಧರಾಗಿದ್ದಾರೆ.
ನೌಕರರ ಬೇಡಿಕೆಗಳೇನು..?
ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ 01.01.2020 ರಿಂದ 28.02.2023ರ ವರೆಗಿನ 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡಬೇಕು. 01.01.2024 ರಿಂದ ನೂತನ ವೇತನ ಪರಿಷ್ಕರಣೆ ಆಗಬೇಕಿತ್ತು, ಆದರೆ 2026 ಜನವರಿ ಬಂದ್ರು ವೇತನ ಪರಿಷ್ಕರಣೆಯೂ ಆಗಿಲ್ಲ. 38 ತಿಂಗಳ ವೇತನ ಹಿಂಬಾಕಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ. ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು, ಮುಖ್ಯವಾಗಿ ಮೇಲಧಿಕಾರಿಗಳಿಂದ ಕಾರ್ಮಿಕರ ಕಿರುಕುಳ ನಿಲ್ಲಬೇಕು ಎಂದು ಸರ್ಕಾರದ ವಿರುದ್ಧ ಸಮರಕ್ಕೆ ಸಿದ್ಧರಾಗಿದ್ದಾರೆ.

ಪ್ರತಿಭಟನೆ ಹತ್ತಿಕ್ಕೋಕೆ ಮುಂದಾಯ್ತಾ ಸರ್ಕಾರ..?
ಆದರೆ ನೌಕರರ ಬೇಡಿಕೆಗೆ ಪ್ರತಿಯಾಗಿ ಸರ್ಕಾರವು, 2024ರ ಬದಲು 2026ರ ಜನವರಿ 1ಕ್ಕೆ ಅನ್ವಯವಾಗುವಂತೆ ವೇತನವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದ್ದು, 38 ತಿಂಗಳ ಬದಲು 18/20 ತಿಂಗಳ ಹಿಂಬಾಕಿ ಕೊಡುತ್ತೇವೆ ಎಂದಿದೆ. ಆದರೆ ನೌಕರರು ಸರ್ಕಾರ ಕೇವಲ ಭರವಸೆ ನೀಡುತ್ತದೆ. ಆದರೆ ಅದನ್ನು ಯಾವುದೂ ಈಡೇರಿಸಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎನ್ನುವುದು ನೌಕರರ ಅಳಲಾಗಿದೆ.
ಇನ್ನೂ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಕೆಎಸ್ಆರ್ಟಿಸಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ. ಕೆಲಸಕ್ಕೆ ಹಾಜರಾಗದಿದ್ದರೆ ನೋ ಪೇಮೆಂಟ್. ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ, ಪ್ರತಿಭಟನೆಯಲ್ಲಿ ಭಾಗಿಯದರೆ ಸೇವಾ ನಿಯಮದ ಅನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೆಎಸ್ಆರ್ಟಿಸಿ ಎಂಡಿ ಅಕ್ರಮ್ ಪಾಷಾ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಸಾರಿಗೆ ನೌಕರರ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಮುಂದಾಗಿದೆ ಎಂಬ ಆರೋಪವನ್ನು ಹೋರಾಟಗಾರರು ಮಾಡುತ್ತಿದ್ದಾರೆ.

ಫೆ. 20ರಿಂದ ಬಸ್ ಓಡಾಡುತ್ತಾ..? ಇಲ್ವಾ..?
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಸಾರ್ವಜನಿಕರ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ಎಲ್ಲ ನಿಗಮದ ಅಧಿಕಾರಿಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಟ್ಟುನಿಟ್ಟನ ಸೂಚನೆ ನೀಡಿದ್ದಾರೆ. ಹೀಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ನೌಕರರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ನಾಳೆ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಪ್ರತಿಭಟನೆಗೆ ಈಗಾಗಲೇ ನೌಕರರು ಗಟ್ಟಿಯಾಗಿದ್ದಾರೆ.
ಸಂಜೆ 4 ಗಂಟೆಯವರೆಗೆ ಸರ್ಕಾರ ತನ್ನ ನಿರ್ಧಾರ ತಿಳಿಸದಿದ್ದರೆ, ಶುಕ್ರವಾರದಿಂದ ಬಸ್ಗಳು ಓಡಾಡುವುದು ಅನುಮಾನ ಎನ್ನಲಾಗುತ್ತಿದೆ. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಗಳೂ ಸಮೀಪಿಸುತ್ತಿದ್ದು, ಈ ಸಮಯದಲ್ಲಿ ಸರ್ಕಾರ ಇಷ್ಟು ದಿನಗಳ ಕಾಲ ಸಾರಿಗೆ ನೌಕರರ ಬೇಡಿಕೆಗಳನ್ನು ಕಡೆಗಣಿಸುತ್ತ ಬಂದಿದೆ. ಆದರೆ ಈಗ ನೌಕರರು ಆಕ್ರೋಶಗೊಂಡು ತಮ್ಮ ಬೇಡಿಕೆಗಳಿಗಾಗಿ ಬೀದಿಗಿಳಿದು ಹೋರಾಡಲು ಮುಂದಾಗಿರುವುದು ಸಿದ್ದರಾಮಯ್ಯ ಸರ್ಕಾರ ಈ ಹೋರಾಟವನ್ನು ತಿಳಿಗೊಳಿಸುತ್ತಾ? ಅಥವಾ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಹಬ್ಬಲು ಕಾರಣವಾಗುತ್ತಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.






