ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು 2018ರ ಐ.ಪಿ.ಎಸ್. ಬ್ಯಾಚನ್ನು ಉದ್ದೇಶಿಸಿ ಮಾತನಾಡುವಾಗ ಹೀಗೆ ಹೇಳಿದ್ದರು, “ಈ ‘ಸಿಂಘಮ್’ ಎಂಬ ನಂಬಿಕೆಗೆ ಬಲಿಯಾಗಬೇಡಿ. ಪೋಲೀಸ್ ಸಮವಸ್ತ್ರ ಎಂದರೆ ಅಧಿಕಾರ ಅಲ್ಲ. ಅದು ಹೆಮ್ಮೆ ಮೂಡಿಸುವಂತದ್ದು, ಸ್ಪೂರ್ಥಿ ತುಂಬುವಂತದ್ದು. ಕೆಲವು ಪೋಲೀಸರು ಸೇವೆಯನ್ನು ಸೇರುವಾಗ ಸಾರ್ವಜನಿಕರು ಅವರ ಹೆಸರು ಕೇಳುತ್ತಾ ಭಯ ಬೀಳಬೇಕು, ಸಮಾಜಘಾತುಕರು ನಡುಗಿಹೋಗಬೇಕು ಎಂದೆಲ್ಲ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ‘ಸಿಂಘಮ್’ ನಂತಹ ಚಲನಚಿತ್ರಗಳನ್ನು ನೋಡುತ್ತಾ ಬೆಳೆದವರಲ್ಲಿ ಈ ಆಸೆ ಸರ್ವೇಸಾಮಾನ್ಯ. ಜನರ ಮನಸ್ಸಿನಲ್ಲಿ ಭಯವನ್ನು ಮೂಡಿಸಬೇಕೋ ಅಥವಾ ನಿರಂತರ ಅನುಕಂಪವನ್ನು ಮೂಡಿಸಬೇಕೋ ಎಂಬುದನ್ನು ನೀವೇ ನಿರ್ಧರಿಸಿ.”
ಜೊತೆಗೆ ನಾಗರೀಕ ಸಮಾಜದೊಡನೆ ಸ್ನೇಹ ಬೆಳೆಸಿ ನಾಗರೀಕರನ್ನು ಆಡಳಿತದ ಭಾಗವನ್ನಾಗಿ ಮಾರ್ಪಡಿಸುವುದರ ಮಹತ್ವವನ್ನು ಹಂಚಿಕೊಂಡಿದ್ದರು.
ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಡೆದ ಕೆ.ಡಿ.ಇ.ಎಮ್. ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಾನು ಪ್ರಧಾನಿಗಳ ಈ ಅನಿಸಿಕೆಗೆ ದನಿ ನೀಡಿದೆ. ಈ ಅನೈಜ ಚಿತ್ರಣಗಳನ್ನು ಪ್ರೋತ್ಸಾಹಿಸುವುದನ್ನು ಕೇವಲ ಐ.ಪಿ.ಎಸ್. ನಿಂದ ಅಲ್ಲ, ಐ.ಎ.ಎಸ್. ನಿಂದಲೂ ಹೊರದೂಡಬೇಕು.
ಸಮಾರಂಭದ ಪತ್ರಿಕಾಗೋಷ್ಠಿಯಲ್ಲೂ ನಾನು ಇದೇ ಅಭಿಪ್ರಾಯವನ್ನು ಹಂಚಿಕೊಂಡೆ. ಕೆಲವು ಐ.ಪಿ.ಎಸ್. ಮತ್ತು ಐ.ಎ.ಎಸ್. ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ಅನೈಜ ಕಾರಣಗಳಿಗಾಗಿ ಪ್ರಚಾರ ಮಾಡಿಕೊಳ್ಳಲು ಫ್ಯಾನ್ ಪೇಜ್ ಗಳನ್ನು ನಡೆಸವುದು ತಪ್ಪಾಗುತ್ತದೆ ಎಂಬುದು ನನ್ನ ಅನಿಸಿಕೆ.

ಕೆಲವು ಫ್ಯಾನ್ ಪೇಜ್ ಗಳನ್ನು ಸುಳ್ಳು ಸುದ್ದಿಗಳನ್ನು ಹರಡಲು ಮತ್ತು ಆನ್ಲೈನ್ ಕಿರುಕುಳ ನೀಡಲು ಬಳಸಲಾಗುತ್ತಿದೆ. ಬಹುತೇಕ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಕಂಡಂತಹ ಕೆಲವು ವಿಷಯಗಳನ್ನು ಆಧರಿಸಿ ರಾಜಕೀಯ ಅಥವಾ ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳುತ್ತಾರೆ. ಇಂತಹ ಅನೈಜ ಪ್ರಚಾರಗಳನ್ನು ಮಾಡಿಕೊಳ್ಳುವುದನ್ನು ತಡೆಯಲು ಸರಕಾರ ಒಂದು ವ್ಯವಸ್ಥೆಯನ್ನು ಸೃಷ್ಟಿಸಬೇಕು ಎಂಬುದು ನನ್ನ ಅಭಿಪ್ರಾಯ.
ಬಹುತೇಕರು ನನ್ನ ಅನಿಸಿಕೆಗೆ ಸಮ್ಮತಿ ಸೂಚಿಸಿದರೆ, ಕೆಲವರು ನನ್ನ ಉದ್ದೇಶಗಳನ್ನು ಪ್ರಶ್ನಿಸಿಯೂ ಇದ್ದಾರೆ. ನನ್ನಂತಹ ರಾಜಕಾರಣಿಗಳಿಗೂ ಅಂತಹ ನಿಯಮಗಳು ಅನ್ವಯಿಸಬೇಕು ಎಂದೂ ವಾದಿಸಿದ್ದಾರೆ. ಆದರೆ, ಅಂತಹವರಿಗೆ ಚುನಾಯಿತ ಪ್ರತಿನಿಧಿಗಳ ಹಾಗು ನಾಗರೀಕ ಸೇವಕರ (ಐ.ಎ.ಎಸ್, ಐ.ಪಿ.ಎಸ್, ಇತ್ಯಾದಿ) ನಡುವಿನ ವ್ಯತ್ಯಾಸ ತಿಳಿದಿಲ್ಲ.
ತಮ್ಮ ಪರ ಪ್ರಚಾರಕ್ಕೆ ಟ್ರೋಲ್ ಪಡೆ ಇಟ್ಟುಕೊಂಡಿದ್ದಾರೆಯೇ ರೋಹಿಣಿ ಸಿಂಧೂರಿ?
ರಾಜಕಾರಣಿಗಳು ತಮ್ಮ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವುದಕ್ಕೆ ತಮ್ಮ ಹಣವನ್ನೇ ಬಳಸುತ್ತಾರೆ. ಕೆಲವರು ನಾವೇ ನಮ್ಮ ಪ್ರೊಫೈಲ್ ಗಳನ್ನು ನಿರ್ವಹಿಸಿಕೊಳ್ಳುತ್ತೇವೆ. ತಮ್ಮ ಕೆಲಸಗಳನ್ನು ಪ್ರಚಾರ ಪಡಿಸಲು ಎಲ್ಲರಿಗೂ ಪಿ.ಆರ್. ಏಜನ್ಸಿಗಳು ಇರುವುದಿಲ್ಲ.
ನಾವು ಐದು ವರ್ಷಗಳ ಕಾಲಾವಧಿಗೆ ಜನರಿಂದ ಚುನಾಯಿತರಾಗಿರುತ್ತೇವೆ. ಹಾಗಾಗಿ ಪಾರದರ್ಶಕತೆಯನ್ನು ತೋರಿಸುವುದು, ನಮ್ಮ ಕೆಲಸಗಳ ಬಗ್ಗೆ ಪ್ರಚಾರ ಮಾಡುವುದು ಮತ್ತು ನಮ್ಮ ಸಾರ್ವಜನಿಕ ಚಿತ್ರಣವನ್ನು ಬೆಳೆಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಆದರೆ ಒಬ್ಬ ನಾಗರೀಕ ಸೇವೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ನಿವೃತ್ತಿಯ ವರೆಗು ಸಂಬಳಕ್ಕಾಗಿ ಕೆಲಸ ಮಾಡುತ್ತಿರುತ್ತಾನೆ. ಚುನಾಯಿತ ಪ್ರತಿನಿಧಿಗಳಿಗೂ ವೇತನ ಪಡೆಯುವ ಅಧಿಕಾರಿಗೂ ಯಾವುದೇ ರೀತಿಯ ಹೋಲಿಕೆಯಿಲ್ಲ. ಜಾಗತೀಕರಣದ ಈ ಕಾಲಘಟ್ಟದಲ್ಲಿ, ಸಂಪರ್ಕ ಸಾಧನವೇ ಪ್ರಮುಖವಾದದ್ದು.
ಫೇಸ್ಬುಕ್, ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳು ಜನರನ್ನು ಸಂಪರ್ಕಿಸುವುದರಲ್ಲಿ ಮತ್ತು ಮಹತ್ವಪೂರ್ಣ ಮಾಹಿತಿಯನ್ನು ತಲುಪಿಸುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಇದೇ ಕಾರಣಕ್ಕಾಗಿ ಬಹುತೇಕ ಸರಕಾರೀ ವಿಭಾಗಗಳು ಸಾರ್ವಜನಿಕ ಸಂಪರ್ಕಕ್ಕಾಗಿ ಅಧೀಕೃತ ಸಾಮಾಜಿಕ ಜಾಲತಾಣಗಳ ಪ್ರೊಫೈಲೊಂದನ್ನು ಹೊಂದಿರುತ್ತವೆ. ಪ್ರತೀ ಜಿಲ್ಲಾ ಎಸ್.ಪಿ. ಅಥವಾ ಡಿ.ಸಿ.ಯ ಕಛೇರಿಯೂ ಸಹ ಅಧಿಕೃತ ಖಾತೆಯೊಂದನ್ನು ನಿರ್ವಹಿಸುತ್ತಿರುತ್ತದೆ. ಈ ನಡೆಯನ್ನು ಸ್ವಾಗತಿಸಿ ಇದಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು.

ಅವರ ವೈಯಕ್ತಿಕ ಖಾತೆಗಳ ಹಾಗು ಫ್ಯಾನ್ ಪೇಜ್ ಗಳ ಬಗ್ಗೆ ನನಗಿರುವ ಏಕೈಕ ಸಮಸ್ಯೆಯೆಂದರೆ ಕೆಲವು ಅತಿಯಾದ ಮಹತ್ವಾಕಾಂಕ್ಷೆ ಉಳ್ಳುವ ಅಧಿಕಾರಿಗಳು ಅವುಗಳನ್ನು ತಮ್ಮ ಅನೈಜ ವೈಯಕ್ತಿಕ ಚಿತ್ರಣವನ್ನು ಬೆಳೆಸುವುದಕ್ಕಾಗಿ ಬಳಸುತ್ತಿದ್ದಾರೆ. ಕೆಲವರಂತೂ ತಮ್ಮ ಬಗ್ಗೆ ಕತೆಗಳನ್ನೇ ಹೆಣೆಯುತ್ತಾ ಅಧಿಕಾರಿಗಳೆಲ್ಲರೂ ಒಳ್ಳೆಯವರು ಮತ್ತು ರಾಜಕಾರಣಿಗಳೆಲ್ಲರೂ ಕೆಟ್ಟವರು ಎಂದು ಮುಗ್ಧ ಜನರನ್ನು ನಂಬಿಸುತ್ತಿದ್ದಾರೆ.
ಸಾರ್ವಜನಿಕರ ಕಣ್ಣಿನಲ್ಲಿ ಬಲಿಷ್ಠ ವ್ಯಕ್ತಿ ಚಿತ್ರಣವನ್ನು ಹೊಂದಿರುವ ಅತೀ ಭ್ರಷ್ಟ ಮತ್ತು ಅಯೋಗ್ಯ ಅಧಿಕಾರಿಗಳನ್ನು ನಾನೇ ನನ್ನ ಅನುಭವದಲ್ಲಿ ನೋಡಿದ್ದೇನೆ. ಈ ಅನೈಜ ಚಿತ್ರಣಕ್ಕೆ ಕಾರಣ ಸಾಮಾಜಿಕ ಮಾಧ್ಯಮ. ಈ ಅಧಿಕಾರಿಗಳಿಗೆ ಜನತೆಯ ಸೇವೆ ಮಾಡುವುದರ ಕುರಿತು ಆಸಕ್ತಿಯೇ ಇಲ್ಲ. ಇವರಿಗೆ ಎಲ್ಲವೂ ತಮ್ಮ ವ್ಯಕ್ತಿಚಿತ್ರಣವನ್ನು ಬೆಳೆಸಿಕೊಳ್ಳುವ ಅವಕಾಶವೇ ಆಗಿ ಕಾಣುತ್ತದೆ. ಈ ಮೂಲಕ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಒಂದಲ್ಲಾ ಒಂದು ದಿನ ರಾಜಕೀಯಕ್ಕೆ ಇಳಿಯುವ ಮಾರ್ಗವಿದು. ಇವರಲ್ಲಿ ಕೆಲವರು ವೈಯಕ್ತಿಕವಾಗಿ ಅಹಂಕಾರಿಗಳು, ಭ್ರಷ್ಟರು ಮತ್ತು ಅಸಡ್ಡೆಯ ಮನೋಭಾವದವರು. ಕೆಲವರು ಅನೈಜ ‘ಪರಿಶುದ್ಧ’ ಚಿತ್ರಣವನ್ನು ಬಳಸಿ ತಮ್ಮೆಲ್ಲಾ ಪಾಪಕಾರ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಪ್ರಯತ್ನಿಸುತ್ತಾರೆ. ನನ್ನಂತಹ ರಾಜಕಾರಣಿ ಅಥವಾ ಜವಾಬ್ದಾರಿಯುತ ನಾಗರೀಕರು ಯಾರಾದರು ಅವರನ್ನು ಪ್ರಶ್ನಿಸಿದರೆ, ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಅಂತವರ ಮೇಲೆ ಆಪಾದನೆಗಳನ್ನು ಹೊರೆಸಿ ತಾವು ಮಾತ್ರ ರಾಜಕಾರಣಿಗಳಿಗೆ ಬಲಿಯಾಗುತ್ತಿರುವ ಮುಗ್ಧ ಪ್ರಮಾಣಿಕರು ಎಂದು ಬಿಂಬಿಸಿಕೊಳ್ಳಲು ಮುಂದಾಗುತ್ತಾರೆ.
ದುರಾದೃಷ್ಟವಶಾತ್ ಮುಗ್ಧ ಜನತೆ ಇಂತವನ್ನು ನಂಬಿಕೊಳ್ಳುತ್ತಾರೆ. ಈ ಅಧಿಕಾರಿಗಳು ತಮ್ಮ ವ್ಯಕ್ತಿಚಿತ್ರಣವನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ. ಒಬ್ಬರು ಅಧಿಕಾರಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದು ಒಂದು ಶ್ರೇಷ್ಠ ಸಾಧನೆಯೇನಲ್ಲ. ತಮ್ಮ ವೇತನದ ಮತ್ತು ಎಲ್ಲಾ ಸವಲತ್ತುಗಳ ಹೊರೆಯನ್ನು ಹೊತ್ತಿರುವ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಅವರ ಕರ್ತವ್ಯ.
ಈ ರೀತಿಯ ಕೆಲವು ಪ್ರಚಾರಪ್ರಿಯ ಅಧಿಕಾರಿಗಳು ತಮ್ಮನ್ನು ತಾವು ‘ಸಿಂಘಮ್’ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ ಆ ರೀತಿಯಲ್ಲಿ ಕರೆಸಿಕೊಳ್ಳಲು ಅವರೇನು ಮಾಡಿರುವುದಿಲ್ಲ. ಅವರು ಹೆಸರು ಮಾಡುವುದಕ್ಕಷ್ಟೇ ಹೆಸರುವಾಸಿಯಾಗಿರುತ್ತಾರೆ.
ಸಮಾಜವನ್ನು ಬದಲಿಸಲು ನಿಶಬ್ದವಾಗಿ ಶ್ರಮಿಸುತ್ತಿರುವ ಅಧಿಕಾರಿಗಳೂ ಇದ್ದಾರೆ ಎಂಬುದು ನನಗೆ ತಿಳಿದಿದೆ. ಯಾರೂ ಅಂತವರನ್ನು ‘ಸಿಂಘಮ್’ ಗಳೆಂದು ಕರೆಯುವುದಿಲ್ಲ. ಯಾಕೆಂದರೆ ಅವರು ಅವರ ಕೆಲಸವನ್ನಷ್ಟೇ ಮಾಡುತ್ತಿರುತ್ತಾರೆ. ಅದಕ್ಕೆ ವಿರುದ್ಧವಾಗಿ, ಪ್ರಚಾರಪ್ರಿಯ ಬಾಬುಗಳು ತಮ್ಮ ಮೂಲ ಕರ್ತವ್ಯವನ್ನು ನಿರ್ಲ್ಯಕ್ಷಿಸಿ, ತಮ್ಮ ಎಲ್ಲಾ ಸಮಯವನ್ನು ಪ್ರಚಾರಕ್ಕಾಗಿಯೇ ಬಳಸಿಕೊಳ್ಳುತ್ತಾರೆ.
ಕೆಲವರಂತೂ ವೃತ್ತಿಪರ ಪಬ್ಲಿಸಿಟಿ ಏಜನ್ಸಿ ಗಳನ್ನೇ ಕೆಲಸಕ್ಕಿಟ್ಟುಕೊಂಡಿದ್ದಾರೆ. ಇದರ ಖರ್ಚೆಲ್ಲಾ ಯಾರದು? ಅವರಿಗೆ ಎಲ್ಲಿಂದ ಈ ಹಣ ಬರುತ್ತದೆ? ಕೆಲವರಿಗಂತೂ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳ ಮೂಲಕ ಶಾಸಕರ ಹಾಗು ಸಂಸದರ ಮೇಲೆ ಹಲ್ಲೆ ನಡೆಸುವ ದೌಲತ್ತು ಇದೆ. ಗಿಡ ಮರವಾಗುವ ಮುನ್ನವೆ ವಿಚಾರಣೆಗಳನ್ನು ನಡೆಸಿ ಇಂತಹ ಸಂಸ್ಕೃತಿ ಸಂಪೂರ್ಣ ನಾಗರೀಕಾ ಸೇವೆಯನ್ನು ಆವರಿಸುವ ಮುನ್ನ ತಡೆಯಬೇಕು. ಸಾಮಾಜಿಕ ಮಾಧ್ಯಮಗಳನ್ನು ತಮ್ಮ ವ್ಯಕ್ತಿ ಚಿತ್ರಣವನ್ನು ಬೆಳೆಸಿಕೊಳ್ಳುವುದಕ್ಕಾಗಲೀ ಅಥವಾ ಸಹ ಅಧಿಕಾರಿಗಳನ್ನು ಗುರಿಯಾಗಿಸಲಾಗಲೀ ಬಳಸಿಕೊಳ್ಳುವುದನ್ನು ಯಾವುದೇ ಸರಕಾರ ಸಹಿಸಕೂಡದು. ಇಂದು ಕ್ರಮ ವಹಿಸದಿದ್ದರೆ ಒಂದಲ್ಲಾ ಒಂದು ದಿನ ಎಲ್ಲರೂ ಹೀಗೆ ಮಾಡಲು ಮುಂದಾಗುತ್ತಾರೆ.
ಕೇವಲ ಪ್ರಚಾರಪ್ರಿಯ ಅಧಿಕಾರಿಗಳಿಂದ ಸಮಾಜಕ್ಕೆ ಏನೂ ಉಪಯೋಗವಿಲ್ಲ. ನಮ್ಮ ಮಾಧ್ಯಮ ಮತ್ತು ನಾಗರೀಕ ಸಮಾಜವೂ ಸಹ ಇಂತಹ ಅಧಿಕಾರಿಗಳನ್ನು ತಲೆಯ ಮೇಲೆ ಕೂರಿಸಿಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಬೇಕು. ಇಂತಹವರ ಪ್ರೋತ್ಸಾಹ ಸಮಾಜಕ್ಕೆ ಹಾನಿಕರ. ಇದು ಕ್ರಮ ತೆಗೆದುಕೊಳ್ಳುವ ಹೊತ್ತಾಗಿದೆ.
ಲೇಖನ: ಪ್ರತಾಪ ಸಿಂಹ
ಅನುವಾದ: ಸೂರ್ಯ ಸಾಥಿ
( ಇದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ ಅವರ ವೈಯಕ್ತಿಕ ಅಭಿಪ್ರಾಯ. ಈ ಲೇಖನದಲ್ಲಿ ಪ್ರಸ್ತಾಪವಾಗಿರುವ ನಿಲುವುಗಳೆಲ್ಲವೂ ಲೇಖಕರದ್ದಾಗಿದ್ದು, ಇದು ಪ್ರತಿಧ್ವನಿಯ ನಿಲುವು ಎಂದಲ್ಲ.)






