
ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ ಕರ್ನಾಟಕದ ಇಬ್ಬರು ಬಲಿಯಾಗಿದ್ದಾರೆ. ಒಬ್ಬರು ಶಿವಮೊಗ್ಗದ ಮಂಜುನಾಥ್ ರಾವ್ ಆದರೆ ಮತ್ತೊಬ್ಬರು ಹಾವೇರಿ ಮೂಲದ ಬೆಂಗಳೂರಿನ ನಿವಾಸಿ. ಮತ್ತಿಕೆರೆಯಲ್ಲಿ ವಾಸವಿರುವ ಭರತ್ ಭೂಷಣ್ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ ಅನ್ನೋದು ಗೊತ್ತಾಗಿದೆ. ಇನ್ನೂ ಕೆಲವು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಶಿವಮೊಗ್ಗದ ಮಂಜುನಾಥ್ ರಾವ್ ಹಾಗು ಹಾವೇರಿಯ ಭರತ್ ಭೂಷಣ್ ಪಾಪಿಗಳ ಗುಂಡೇಟಿಗೆ ಜೀವಬಿಟ್ಟಿದ್ದಾರೆ.. ಉಗ್ರರ ಅಟ್ಟಹಾಸದ ಕರಾಳತೆಯನ್ನ ಮೃತ ಮಂಜುನಾಥ್ ಪತ್ನಿ ಪಲ್ಲವಿ ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ. ಮಗ ದ್ವಿತೀಯ ಪಿಯುಸಿಯಲ್ಲಿ ಶೇಕಡ 98ರಷ್ಟುಬಅಂಕ ಗಳಿಸಿದ್ರಿಂದ ಮಗನನ್ನು ಖುಷಿ ಪಡಿಸಲು ಪ್ರವಾಸ ಕೈಗೊಂಡಿದ್ರಂತೆ. ಮೊದಲಿಗೆ ರಾಜಸ್ಥಾನಕ್ಕೆ ಹೋಗುವ ನಿರ್ಧಾರ ಮಾಡಿದ್ದ ಕುಟುಂಬ ಸ್ನೇಹಿತರ ಸಲಹೆಯಂತೆ ಪ್ರವಾಸವನ್ನು ಜಮ್ಮು ಕಾಶ್ಮೀರಕ್ಕೆ ಬದಲಿಸಿಕೊಂಡಿದ್ದರಂತೆ.

ಉಗ್ರರ ದಾಳಿಯಿಂದ ಗಂಡನನ್ನು ಕಳೆದುಕೊಂಡ ಪಲ್ಲವಿ, ಉಗ್ರರ ಅಟ್ಟಹಾಸದ ಭೀಕರತೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಂಜನಾಥ್ ರಾವ್ ಕುಟುಂಬ ತೆರಳಿದ ಎರಡೇ ನಿಮಿಷದಲ್ಲಿ ಗುಂಡಿನ ಮೊರೆತ ಕೇಳೋದಕ್ಕೆ ಶುರುವಾಗಿದೆ. ಸೇನಾ ತರಬೇತಿ ಇರಬಹುದು ಅಂದುಕೊಂಡು ಸ್ನ್ಯಾಕ್ಸ್ ತರಲು ಅಂಗಡಿಗೆ ತೆರಳಿದ್ದಾರೆ. ಈ ವೇಳೆ ಏಕಾಏಕಿ ನುಗ್ಗಿದ್ದ ಉಗ್ರರು ಮೊದಲಿಗೆ ಹೆಸರು ಮತ್ತು ಧರ್ಮ ಕೇಳಿದ್ದಾರೆ. ಯಾವಾಗ ಹಿಂದೂ ಅಂತ ಹೇಳಿದ್ರೋ ಕ್ಷಣಾರ್ಧದಲ್ಲೇ ಮಂಜುನಾಥ್ ತಲೆಗೆ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದಾರೆ..

ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಅಬಿಜಾನ್ ರಾವ್, ಅಭಿಜ್ಞಾನ್ ರಾವ್ ಎಂದು ಗುರ್ತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಉಗ್ರರ ದಾಳಿಗೂ ಮುನ್ನ ಪಹಲ್ಗಾಮ್ನಲ್ಲಿದ್ದ 40 ಮಂದಿ ಕರ್ನಾಟಕದ ಪ್ರವಾಸಿಗರು ಪಹಲ್ಗಾಮ್ನಿಂದ ಶ್ರೀನಗರದ ಹೋಟೆಲ್ಗೆ ಬಂದಿದ್ರಿಂದ ಜೀವ ಉಳಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ತರ್ತು ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕನ್ನಡಿಗರ ರಕ್ಷಣೆಗೆ ಸೂಚಿಸಿದ್ದು, ಈಗಾಗ್ಲೇ ಅಧಿಕಾರಿಗಳ ಎರಡು ತಂಡ ಕಾಶ್ಮೀರಕ್ಕೆ ಕಳುಹಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದು, ಕರ್ನಾಟಕದಿಂದ ಪ್ರವಾಸ ತೆರಳಿದ್ದವರನ್ನು ವಾಪಸ್ ಕರೆ ತರುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿದೆ. ಎರಡು ಅಧಿಕಾರಿಗಳ ತಂಡದ ಜೊತೆಗೆ ಸಚಿವರ ನೇತೃತ್ವದ ತಂಡವೂ ಕೂಡ ಕನ್ನಡಿಗರ ರಕ್ಷಣೆಗೆ ಕೆಲಸ ಮಾಡಲಿದೆ. ಕರ್ನಾಟಕ ಸರ್ಕಾರ ತುರ್ತು ಸಂದರ್ಭದಲ್ಲಿ ಕನ್ನಡಿಗರ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುವ ಕೆಲಸ ಮಾಡಿದೆ.