ಮನುಜ ಪ್ರೀತಿ, ಸಹಿಷ್ಣುತೆ, ಸಂಯಮ ಮತ್ತು ಸಂವೇದನೆ ಇವೆಲ್ಲವೂ ಸಮಾಜದ ಗರ್ಭದಲ್ಲೇ ಮೊಳಕೆಯೊಡೆಯುವಂತಹ ಉದಾತ್ತ ಅಭಿವ್ಯಕ್ತಿ ಧಾರೆಗಳು. ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಶತಮಾನಗಳ ಕಾಲದ ದ್ವೇಷಾಸೂಯೆಗಳ ಹೊರತಾಗಿಯೂ ಇಂದಿಗೂ ಮಾನವೀಯ ಮೌಲ್ಯದ ನೆಲೆಗಳು, ಶಿಥಿಲಾವಸ್ಥೆಯಲ್ಲಾದರೂ ಉಳಿದುಕೊಂಡು ಬಂದಿರುವುದು ಈ ಧಾರೆಗಳ ಮುಖಾಂತರವೇ. ಇತಿಹಾಸದುದ್ದಕ್ಕೂ ನಡೆದಿರುವ ನೂರಾರು ಘೋರ ಯುದ್ಧಗಳ ಹೊರತಾಗಿಯೂ, ಹಿಂಸಾತ್ಮಕ ಆಳ್ವಿಕೆಯ ಹೊರತಾಗಿಯೂ ಇಂದಿಗೂ ಯುದ್ಧವಿರೋಧಿ ಮನಸುಗಳು, ಶಾಂತಿಪ್ರಿಯ ಹೃದಯಗಳು ಜೀವಂತಿಕೆಯಿಂದಿವೆ ಎಂದಾದರೆ ಅದಕ್ಕೆ ಕಾರಣವೇ ಈ ಮುಖ್ಯ ಧಾರೆಗಳು. ಶಾಂತಿ ಬಯಸುವವರಲ್ಲಿರುವ ಮನುಜ ಪ್ರೀತಿಯನ್ನು ದೇಶ ವಿರೋಧಿ ಎಂತಲೋ, ಪ್ರಭುತ್ವ ಭಂಜಕ ಎಂತಲೋ ಭಾವಿಸುವ ಒಂದು ಪರಂಪರೆಯ ನಡುವೆಯೇ ಈ ಧಾರೆಗಳು ಪ್ರವಹಿಸುತ್ತಾ ಬಂದಿವೆ.
ಭೌಗೋಳಿಕ ರಾಷ್ಟ್ರಗಳ ಪರಿಕಲ್ಪನೆ ಮತ್ತು ಇದರಿಂದಲೇ ಉದ್ಭವಿಸುವ ರಾಷ್ಟ್ರ-ರಾಷ್ಟ್ರೀಯತೆಯ ಪರಿಕಲ್ಪನೆಗಳು ಭೂ ಖಂಡವನ್ನು ವಿಭಜಿಸುತ್ತಲೇ ಬಂದಿದೆಯಲ್ಲದೆ ಭೌಗೋಳಿಕ ಗಡಿ ರಕ್ಷಣೆಗಾಗಿ ಲಕ್ಷಾಂತರ ಅಮಾಯಕ ಜೀವಗಳನ್ನೂ ಬಲಿಪಡೆದಿದೆ. ಇಂದಿಗೂ ಈ ಭೌಗೋಳಿಕ ವ್ಯಾಪ್ತಿಯನ್ನು ಹಿಗ್ಗಿಸುವ ಅಧಿಕಾರಸ್ಥರ ಹಪಹಪಿಯೇ ಜೀವ ಹರಣದ ಕೂಪಗಳಾಗಿ ಎಲ್ಲ ದೇಶಗಳನ್ನೂ ಕಾಡುತ್ತಿದೆ. ಇದಕ್ಕೆ ಪ್ರತಿಯಾಗಿ ವಿಶ್ವ ಇತಿಹಾಸದಲ್ಲಿ ಮಾನವ ಪ್ರೇಮಿ ಮನಸುಗಳೂ ಸಕ್ರಿಯವಾಗಿವೆ. ದೇಶಭಾಷೆಗಳ ಎಲ್ಲೆಗಳನ್ನು ಮೀರಿ ಮನುಷ್ಯರನ್ನು ಮನುಷ್ಯರನ್ನಾಗಿ ಮಾತ್ರವೇ ಕಾಣುವ ಮನಸುಗಳಿಗೆ ಚೈತನ್ಯ ತುಂಬುವ ದಾರ್ಶನಿಕರು ಶತಮಾನಗಳಿಂದಲೂ ಉದಯಿಸಿ ಮರೆಯಾಗಿದ್ದಾರೆ. ಈ ದಾರ್ಶನಿಕರು ತೋರಿದ ಹಾದಿಯಲ್ಲೇ ನಡೆಯುವುದಾದರೆ ಬಹುಶಃ ಇಡೀ ವಿಶ್ವವೇ “ ಸರ್ವ ಜನಾಂಗದ ಶಾಂತಿಯ ತೋಟ ” ಎನಿಸಿಕೊಳ್ಳಬಹುದು.
ಆದರೆ ನಾವೇ ಸೃಷ್ಟಿಸಿಕೊಂಡಿರುವ ಜಾತಿ, ಮತ, ಧರ್ಮ, ಭಾಷೆ ಮತ್ತು ಭೌಗೋಳಿಕ ರಾಷ್ಟ್ರಪ್ರೇಮ ಈ ತೋಟಗಳಿಗೆ ಮುಳ್ಳು ಬೇಲಿಗಳನ್ನು ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿವೆ. ಭಾರತದಲ್ಲಿ ವೈದಿಕಶಾಹಿ ಮೂಲದ ಜಾತಿಯ ನೆಲೆಗಳು ಮನುಷ್ಯನನ್ನು ನಿಕೃಷ್ಠವಾಗಿ ಕಾಣುವ ಶ್ರೇಷ್ಠತೆಯ-ಮೇಲರಿಮೆಯ ಪರಿಕಲ್ಪನೆಗಳನ್ನು ಉತ್ತೇಜಿಸುತ್ತಾ ಬಂದಿದ್ದರೆ, ಇದೇ ಪರಂಪರೆಯಲ್ಲೇ ಬೆಳೆದುಬಂದಿರುವ ಧಾರ್ಮಿಕ ಚಿಂತನೆಗಳು ಮತ್ತು ಮತಾಧಾರಿತ ಧೋರಣೆಗಳು ಜನಸಮುದಾಯಗಳ ನಡುವೆ ಗೋಡೆಗಳನ್ನು ಕಟ್ಟುತ್ತಲೇ ಬಂದಿವೆ. ಜನಾಂಗಗಳನ್ನು, ಜನಸಮುದಾಯಗಳನ್ನು ತಮ್ಮ ಲಕ್ಷ್ಮಣರೇಖೆಗಳ ಮೂಲಕ ವಿಭಜಿಸಲು ಸದಾ ಉತ್ಸುಕವಾಗಿರುವ ಮತಗಳು ಮತ್ತು ಧಾರ್ಮಿಕ ನೆಲೆಗಳು ಮನಸುಗಳ ನಡುವೆಯೇ ಬೇಲಿಗಳನ್ನು ನಿರ್ಮಿಸಲು ತಮ್ಮದೇ ಆದ ಸಾಧನಗಳನ್ನು, ಅಸ್ತ್ರಗಳನ್ನು ಸೃಷ್ಟಿಸಿಕೊಂಡಿವೆ.

ಕೋಮುವಾದ ಇಂತಹ ಒಂದು ಸಾಧನವಾದರೆ, ಮತಾಂಧತೆ ಈ ಮಾರ್ಗದ ಯಶಸ್ಸಿಗೆ ಪರಿಣಾಮಕಾರಿ ಎನಿಸುವ ಅಸ್ತ್ರವಾಗಿ ಪರಿಣಮಿಸುತ್ತದೆ. ಭಾರತದ ಸಂದರ್ಭದಲ್ಲಿ ಜಾತಿ ವ್ಯವಸ್ಥೆ ಈ ವಿಘಟನೆಯ ಅಸ್ತ್ರಗಳಿಗೆ ಪೂರಕವಾಗಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡುಬರುತ್ತದೆ. ಭಾರತವನ್ನು ಶತಮಾನಕ್ಕೂ ಹೆಚ್ಚು ಕಾಲದಿಂದ ಕಾಡುತ್ತಿರುವ ಕೋಮುವಾದವನ್ನು ಹಿಂದೂ, ಮುಸ್ಲಿಂ ಅಥವಾ ಮತ್ತಾವುದೇ ಮತೀಯ ನೆಲೆಯಲ್ಲಿ ಕಾಣವುದಕ್ಕಿಂತಲೂ ಹೆಚ್ಚಾಗಿ ಈ ಕೋಮುವಾದದ ನೆಲೆಗಳು ಬಳಸಿಕೊಳ್ಳುವ ಸಾಮಾನ್ಯ ಜನರ ಮನಸ್ಥಿತಿಯ ನೆಲೆಯಲ್ಲಿ ಕಾಣಲೆತ್ನಿಸಿದಾಗ, ಈ ಸೌಹಾರ್ದಭಂಜಕ ಅಸ್ತ್ರಗಳನ್ನು ವಸ್ತುನಿಷ್ಠವಾಗಿ ಕಾಣುವುದೂ ಸಾಧ್ಯ. ಶತಮಾನದ ಹಿಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಐಕ್ಯತೆಯ ದನಿಯ ನಡುವೆ ಕಾಣಿಸಿಕೊಂಡ ಕೋಮುವಾದದ ವಿಷಬೀಜ ಸಂಸದೀಯ ಪ್ರಜಾಪ್ರಭುತ್ವದ ಎಲ್ಲ ಹಾದಿಗಳನ್ನೂ ಆವರಿಸಿಕೊಂಡು ಇದೀಗ ಎಳೆಯ ಮಕ್ಕಳ ಶಾಲೆಯ ಹೊಸ್ತಿಲಲ್ಲಿ ಬಂದು ನಿಂತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಹಿಂದೂ ಮತ್ತು ಮುಸ್ಲಿಂ ಮತದ ಪ್ರತಿಪಾದಕರು, ಪರಿಚಾರಕರು ಮತ್ತು ಪ್ರಚಾರಕರು ತಮ್ಮೊಳಗಿನ ಕೋಮುವಾದದ ವಿಷಬೀಜಗಳನ್ನು ಮೊಳೆಯುವ ಮುನ್ನವೇ ಕಿತ್ತೊಗೆದಿದ್ದರೆ ಮತಾಂಧತೆಯ ನೆರಳು ಶಾಲೆಯ ಹೊಸ್ತಿಲನ್ನು ತಲುಪುತ್ತಿರಲಿಲ್ಲ. ಸಮಾಜದ ಗರ್ಭದಲ್ಲೇ ಉದಯಿಸುವ ಈ ವೀಷಬೀಜಗಳಿಗೆ ಸಾಂಸ್ಕೃತಿಕ ನೀರೆರೆದು, ರಾಜಕೀಯ ಗೊಬ್ಬರ ಹಾಕಿ ಹೆಮ್ಮರವಾಗಿ ಬೆಳೆಸಿದ ಕೋಮುವಾದಿ-ಮತಾಂಧ ಶಕ್ತಿಗಳ ಸೌಹಾರ್ದಭಂಜಕ ಪ್ರವೃತ್ತಿಗೆ ಇಂದು ಮಕ್ಕಳು ಬಲಿಯಾಗುವ ಸಂದರ್ಭ ಎದುರಾಗಿದೆ. ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ಹೆಣ್ಣುಮಕ್ಕಳಿಗೆ ಪ್ರವೇಶ ನಿರಾಕರಿಸುವ ಮೂಲಕ ಕಾಲೇಜಿನ ಆಡಳಿತ ಮಂಡಲಿ ಶಾಲಾ ಮಕ್ಕಳ ನಡುವೆಯೂ ಧಾರ್ಮಿಕ ಚಿಹ್ನೆಗಳನ್ನು ಗುರುತಿಸುವ ಹೊಸ ಪರಂಪರೆಗೆ ನಾಂದಿ ಹಾಡಿದೆ. ಹಿಜಾಬ್ ಧರಿಸುವುದು ಇಸ್ಲಾಂ ಮತದ ಧಾರ್ಮಿಕ ಆಚರಣೆಗಳಲ್ಲೊಂದು ಎಂಬ ವಾದವನ್ನು ಬದಿಗಿಟ್ಟು ನೋಡಿದಾಗ, ಎಲ್ಲರೊಡನೆ ಸಮಾನತೆಯಿಂದ ಬೆರೆತು ಆಟೋಟಗಳ ನಡುವೆ ಪಾಠ ಕಲಿಯುವ ಶಾಲಾ ಮಕ್ಕಳಲ್ಲಿ ಈ ಆಚರಣೆಗಳು ಅವಶ್ಯವೇ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.
ಹಿಜಾಬ್ ಧರಿಸಿದ ಮಾತ್ರಕ್ಕೆ ಹೆಣ್ಣುಮಕ್ಕಳಿಗೆ ಪ್ರವೇಶ ನಿರಾಕರಿಸುವ ಶಾಲಾ ಮುಖ್ಯಸ್ಥರಲ್ಲಿರುವ ಮನಸ್ಥಿತಿಗೆ ಕಾರಣವಾಗಿರುವ ಮತೀಯವಾದದ ಬೀಜಗಳೇ, ಶಾಲಾ ಮಕ್ಕಳಿಗೂ ಕಡ್ಡಾಯವಾಗಿ ಹಿಜಾಬ್ ತೊಡಿಸುವ ಮುಸ್ಲಿಂ ಮತದ ಪ್ರತಿಪಾದಕರ ಮನಸ್ಥಿತಿಗೂ ಕಾರಣವಾಗಿದೆ. ಯಾವುದೇ ಒಂದು ಮತಕ್ಕೆ ಸೇರಿದವರಿಗೆ ತಮ್ಮ ಅಸ್ಮಿತೆಗಳನ್ನು ಕಾಪಾಡಿಕೊಳ್ಳಲು ಒಂದು ಚಿಹ್ನೆ ಇದ್ದೇ ಇರುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ ಧರ್ಮಗಳನ್ನು ಅನುಸರಿಸುವವರು ಈ ಚಿಹ್ನೆಗಳ ಮೂಲಕವೇ ತಮ್ಮ ಮತೀಯ ಅಸ್ಮಿತೆಯನ್ನು ಪ್ರತಿಪಾದಿಸುತ್ತಾರೆ. ಆದರೆ ಈ ಚಿಹ್ನೆಯನ್ನು ಪ್ರಾತಿನಿಧಿಕವಾಗಿ ಬಳಸದೆ ಇರುವವರನ್ನು ಬಹಿಷ್ಕೃತರನ್ನಾಗಿ ಕಾಣುವ ಮನಸ್ಥಿತಿ ಮತಾಂಧತೆಗೆ ಕಾರಣವಾಗುತ್ತದೆ. ಮುಸಲ್ಮಾನರಲ್ಲಿ ಮತ್ತು ಹಿಂದುತ್ವದ ನೆರಳಲ್ಲಿ ಹಿಂದೂಗಳಲ್ಲೂ ಈ ಧೋರಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದನ್ನು ಗಮನಿಸಬಹುದು.
ಈ ಹೆಚ್ಚಳಕ್ಕೆ ಕಾರಣಗಳೂ ಇಲ್ಲದಿಲ್ಲ. ಹಿಂದುತ್ವವಾದಿಗಳ ಆಕ್ರಮಣಕಾರಿ ಮತೀಯವಾದಕ್ಕೆ ಪ್ರತಿಯಾಗಿ ತಮ್ಮ ಮತೀಯ ಅಸ್ಮಿತೆಯನ್ನು ಗುರುತಿಸಿಕೊಂಡು, ಸಂರಕ್ಷಿಸುವ ಸಲುವಾಗಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಈ ಧಾರ್ಮಿಕ ಚಿಹ್ನೆಗಳು ಗುರಾಣಿಯಾಗಿ ಬಳಕೆಯಾಗಬಹುದು. ಅಲ್ಪಸಂಖ್ಯಾತ ಸಮುದಾಯಗಳು ಈ ಚಿಹ್ನೆಗಳ ಮೂಲಕವೇ ತಮ್ಮ ಧರ್ಮನಿಷ್ಠೆಯನ್ನು, ಮತೀಯ ಅಸ್ಮಿತೆಯನ್ನು ಪ್ರತಿಪಾದಿಸಬೇಕಾದ ಅನಿವಾರ್ಯತೆಯನ್ನು ಹಿಂದುತ್ವದ ಕಾಲಾಳುಗಳು ಸೃಷ್ಟಿಸಿರುವುದೂ ವಾಸ್ತವ. ಒಂದು ಹಿಜಾಬ್, ಒಂದು ಬಿಳಿ ಟೊಪ್ಪಿ ಅಥವಾ ದಾಡಿ ವ್ಯಕ್ತಿಗತ ನೆಲೆಯ ನಂಬಿಕೆ ಮತ್ತು ಬದ್ಧತೆಯನ್ನಾಧರಿಸಿರುತ್ತವೆ. ಈ ಚಿಹ್ನೆಗಳನ್ನು ಧರಿಸಲು ಧಿಕ್ಕರಿಸುವ ಅಥವಾ ನಿರಾಕರಿಸುವ ವ್ಯಕ್ತಿಗಳ ನಿಷ್ಠೆಯನ್ನು ಪ್ರಶ್ನಿಸುವುದು ಮತ್ತು ಧರಿಸುವಂತೆ ಒತ್ತಡ ಹೇರುವುದು ಮತೀಯ ನೆಲೆಗಳನ್ನು ಮತ್ತಷ್ಟು ಸಂಕುಚಿತಗೊಳಿಸುವ, ಸಂಕೀರ್ಣಗೊಳಿಸುವ ಪ್ರಕ್ರಿಯೆಯಾಗುತ್ತದೆ.