ಬೆಂಗಳೂರು : ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಆಡಳಿತದ ಅವಧಿಗಿಂತಲೂ ಅದರ ಆಶಯಗಳು ಮಹತ್ವದ ಗುರುತನ್ನು ಮೂಡಿಸುತ್ತವೆ. ಆ ಅರ್ಥದಲ್ಲಿ ನೋಡಿದರೆ ದೇವರಾಜ್ ಅರಸು ಅವರು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ರಾಜಕೀಯಕ್ಕೆ ದಿಕ್ಕು ತೋರಿಸಿದವರು. ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳನ್ನು ರಾಜಕೀಯದ ಕೇಂದ್ರಬಿಂದುವಿಗೆ ತರುವ ಮೂಲಕ ಅವರು ರಾಜ್ಯದ ಆಡಳಿತದ ಸ್ವರೂಪವನ್ನೇ ಬದಲಿಸಿದರು ಎಂದು ಚಿಂತಕ ರಾ. ಚಿಂತನ್ ಅಭಿಪ್ರಾಯಪಟ್ಟಿದ್ದಾರೆ.
ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ ಸಾಧನೆಗಳ ಕುರಿತು ಅವರು ಲೇಖನದ ಮೂಲಕ ಸಿಎಂ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಅರಸು ಅವರ ಕಾಲಘಟ್ಟದ ಬೇಡಿಕೆಗಳು ಬೇರೆ; ಸಿದ್ದರಾಮಯ್ಯ ಅವಧಿಯ ಬಯಕೆಗಳು ಬೇರೆ! ಆದರೆ ಅರಸು ಅವರು ಬಿತ್ತಿದ ಆ ಸಮಾಜವಾದದ ಬೀಜ ಇಂದು ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಜೀವಂತವಾಗಿರುವುದು ವಿಚಾರಧಾರೆಯ ನಿರಂತರತೆಯಾಗಿದೆ. ಅಹಿಂದ ಚಳವಳಿಯ ರಾಜಕೀಯ ಅರ್ಥವನ್ನು ಸ್ಪಷ್ಟವಾಗಿ ಗ್ರಹಿಸಿ, ಅದನ್ನು ಆಡಳಿತಾತ್ಮಕ ನೀತಿಗಳ ಮೂಲಕ ಕಾರ್ಯರೂಪಕ್ಕೆ ತರಲು ಶ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ
ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಅತಿಹೆಚ್ಚು ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿಗಳಲ್ಲಿ ಮೊದಲ ಸ್ಥಾನಕ್ಕೇರಿರುವುದು ಸಂಖ್ಯಾತ್ಮಕ ದಾಖಲೆ ಮಾತ್ರವಲ್ಲ. ಅದು ಜನಸಾಮಾನ್ಯರು ಒಪ್ಪಿಕೊಂಡ ಆಡಳಿತ ಮಾದರಿಯ ಮಾನ್ಯತೆ. ಅನ್ನಭಾಗ್ಯದಿಂದ ಹಿಡಿದು ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣದವರೆಗೆ ಅವರ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳು ಕಲ್ಯಾಣರಾಜ್ಯದ ತತ್ವಕ್ಕೆ ನೈಜ ಅರ್ಥ ನೀಡಿವೆ. ಇವುಗಳನ್ನು “ಉಚಿತ ಯೋಜನೆಗಳು” ಎಂದು ತಳ್ಳಿಹಾಕುವುದು ಸುಲಭ; ಆದರೆ ಅವುಗಳ ಹಿಂದಿರುವ ಸಾಮಾಜಿಕ ಸಮತೋಲನದ ಆಶಯವನ್ನು ನಿರ್ಲಕ್ಷ್ಯ ಮಾಡಲಾಗದು ಎಂದು ಹೇಳಿದ್ದಾರೆ.
ಇಂದಿನ ರಾಜಕೀಯ ವಾತಾವರಣದಲ್ಲಿ ಜನನಾಯಕರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಸಿದ್ದರಾಮಯ್ಯ ಅವರು ಜನರೊಂದಿಗೆ ನೇರ ಸಂಪರ್ಕ ಉಳಿಸಿಕೊಂಡಿರುವುದು ಗಮನಾರ್ಹ. ಬಹುತೇಕ ದೇವರಾಜ್ ಅರಸು ಮತ್ತು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸುವ ನಾಡಿ ಒಂದೇ—ಸಾಮಾಜಿಕ ನ್ಯಾಯ. ಈ ನಾಡಿ ಜೀವಂತವಾಗಿರುವವರೆಗೆ ಕರ್ನಾಟಕದ ರಾಜಕೀಯದಲ್ಲಿ ಸಮಾಜವಾದ ಕೇವಲ ಘೋಷಣೆಯಾಗಿ ಉಳಿಯದು; ಅದು ಆಡಳಿತದ ದಾರಿದೀಪವಾಗಿಯೇ ಮುಂದುವರಿಯುತ್ತದೆ. ಅದೇ ಈ ರಾಜ್ಯದ ಪ್ರಜಾಪ್ರಭುತ್ವದ ಬಲವಾಗಿದೆ ಎಂದು ಪ್ರತಿಪಾದಿಸಿದ್ದಾರೆ.






