‘ಶ್ರೇಣಿಕೃತ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಮನುವಾದಿ ಬಿಜೆಪಿ ದೇಶದ ಶಿಕ್ಷಣವನ್ನು ಕೇಸರಿಕರಣ ಮಾಡುವುದರ ಜತೆಗೆ ಖಾಸಗೀಕರಣ ಮಾಡಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆತುರದಲ್ಲಿ ಜಾರಿಗೆ ತರಲು ಮುಂದಾಗಿದೆ. ಇದು ರಾಜ್ಯದ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧೃವನಾರಾಯಣ್ ಅವರು ರಾಜ್ಯ ಹಾಗು ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಧೃವನಾರಾಯಣ್ ಅವರು, ‘ಬಿಜೆಪಿ ಸರ್ಕಾರದ ನೂತನ ಶಿಕ್ಷಣ ನೀತಿ ನಗರ ಹಾಗೂ ಗ್ರಾಮಾಂತರ, ಬಡವ ಹಾಗೂ ಶ್ರೀಮಂತ ವಿದ್ಯಾರ್ಥಿಗಳ ನಡುವೆ ಕಂದಕ ನಿರ್ಮಾಣ ಮಾಡಲಿದೆʼ ಎಂದಿದ್ದಾರೆ.
‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದರೆ ರಾಜ್ಯಕ್ಕೆ ಮಾರಕ. ಈ ನೀತಿಯ ಬಗ್ಗೆ ಚರ್ಚೆ, ಸಂಶೋಧನೆ, ಸಂಸತ್, ಸದನದಲ್ಲಿ ಸಾಧಕ ಬಾದಕ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಈ ಚರ್ಚೆಯಾಗದೇ ಈ ನೀತಿ ಜಾರಿಯಾಗುತ್ತಿರುವುದು ದುರಾದೃಷ್ಠಕರವಾದುದು. ಎನ್ಇಪಿಯಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ. ಯಾವುದೇ ಶಿಕ್ಷಣ ನೀತಿ ಜಾರಿಗೆ ತರುವಾಗ ಅದಕ್ಕೆ ಮುನ್ನೋಟ, ದೂರದೃಷ್ಟಿ ಇರಬೇಕು, ಈ ಶಿಕ್ಷಣ ನೀತಿ ಅವೈಜ್ಞಾನಿಕವಾದುದು. ಈ ನೀತಿಯ ಕನ್ನಡ ಅವತರಣಿಕೆಯಲ್ಲಿ 11.1ರಲ್ಲಿ 7ನೇ ಶತಮಾನದಲ್ಲಿ ಬಾಣ ಭಟ್ಟ ಬರೆದ ಕೃತಿ ಕಾದಂಬರಿ ಆಧಾರಿತ 64 ವಿದ್ಯೆ ಕಲಿಸಿಕೊಡಲಾಗುವುದು ಎಂದು ಹೇಳಲಾಗಿದೆ. ಅಂದರೆ ಈ ಶಿಕ್ಷಣ ನೀತಿ ಕೇವಲ ಕಾಲ್ಪನಿಕ ಶಿಕ್ಷಣ ನೀತಿಯಾಗಿದ್ದು, ಇದು ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದಾರೆ.
‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1968ರಲ್ಲಿ ಇಂದಿರಾ ಗಾಂಧಿ ಅವರು, 1986ರಲ್ಲಿ ರಾಜೀವ್ ಗಾಂಧಿ, 1992ರಲ್ಲಿ ಪಿ.ವಿ ನರಸಿಂಹರಾವ್ ಅವರು ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ. 1992ರ ಸಮಯದಲ್ಲಿ ಪ್ರೋ.ಕೊಠಾರಿಯಾ ಅವರ ನೇತೃತ್ವದ ಸಮಿತಿ ಮಾಡಿ ಅದರಲ್ಲಿ 7 ವಿದೇಶಿ ಶಿಕ್ಷಣ ತಜ್ಞರು ಸೇರಿದಂತೆ ಒಟ್ಟು 17 ತಜ್ಞರ ಸದಸ್ಯರನ್ನು ಒಳಗೊಂಡಿತ್ತು. ಈ ಶಿಕ್ಷಣ ನೀತಿಯನ್ನು ಡಾ.ಕಸ್ತೂರಿರಂಗನ್ ಅವರ ಸಮಿತಿ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದೆ. ಅವರು ಇಸ್ರೋ, ಹಾಗೂ ಎಜುಸ್ಯಾಟ್ ಶಿಕ್ಷಣ ವಿಚಾರವಾಗಿ ಸಾಕಷ್ಟು ಕೆಲಸ ಮಾಡಿದ್ದು, ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಈ ಸಮಿತಿಯಲ್ಲಿ ಬಹುತೇಕ ಸದಸ್ಯರು ಆರ್ ಎಸ್ ಎಸ್ ಮೂಲದವರು. ಶ್ರೀಧರನ್ ಎಂಬುವವರು ಆರ್ ಎಸ್ಎಸ್ ಸಂಚಾಲಕರು. ಇನ್ನು ನಡ್ಡಾ ಅವರ ಜತೆ ಕೆಲಸ ಮಾಡಿದ್ದ ರಾಜೇಂದ್ರ ಪ್ರತಾಪ್ ಗುಪ್ತಾ ಅವರು ಸದಸ್ಯರಾಗಿದ್ದರು. ಆ ಮೂಲಕ ಶಿಕ್ಷಣವನ್ನು ಕೇಸರಿಕರಣ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ನೀತಿ ನಮ್ಮ ರಾಜ್ಯಗಳ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಭಂಗ ಉಂಟು ಮಾಡುವ ಶಿಕ್ಷಣ ನೀತಿಯಾಗಿದೆ. ತ್ರಿಭಾಷಾ ನೀತಿ ಮೂಲಕ ಹಿಂದಿ ಹಾಗೂ ಸಂಸ್ಕೃತ ಭಾಷೆ ಹೇರುವ ಪ್ರಯತ್ನ ಈ ನೀತಿ ಮೂಲಕ ನಡೆಯುತ್ತಿದೆ. ಈ ಶಿಕ್ಷಣ ನೀತಿಯನ್ನು ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.
ಈ ನೀತಿಯಲ್ಲಿ ಮೂರನೇ ವಯಸ್ಸಿಗೆ ಶಾಲೆಗೆ ಸೇರಿಸಬೇಕಿದೆ. ಅಂದರೆ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ಮಾಡಿಕೊಳ್ಳಬೇಕು. ಗ್ರಾಮಾಂತರ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳು ಈ ವಯಸ್ಸಿನ ಮಕ್ಕಳ ಶಿಕ್ಷಣ ಕೇಂದ್ರವಾಗಿದೆ. ದೇಶದಲ್ಲಿ 3.62 ಲಕ್ಷ ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ ಶೇ.50ರಷ್ಟು ಬಾಡಿಗೆ ಕಟ್ಟಡದಲ್ಲಿದ್ದು, ನೀರು ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಬದಲು ಕೇವಲ 4,500 ಗೌರವ ಧನ ನೀಡಲಾಗುತ್ತಿದೆ. ಇವರಿಗೆ ಯಾವುದೇ ತರಭೇತಿ ಇಲ್ಲ. ಆದರೆ ಸರ್ಕಾರ ಈಗ ಇವರಿಗೆ 6 ತಿಂಗಳು ತರಭೇತಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ.
ದೇಶದಲ್ಲಿ ಸುಮಾರು 10 ಲಕ್ಷ ಸರ್ಕಾರಿ ಶಾಲೆ ಶಿಕ್ಷಕರ ಕೊರತೆ ಇದೆ. ಅದು ನೇಮಕವಾಗಬೇಕು, ಶಾಲೆ, ಮೂಲಭೂತ ಸೌಕರ್ಯ ಇಲ್ಲದೇ, ತರಾತುರಿಯಲ್ಲಿ ಈ ವರ್ಷವೇ ಈ ನೀತಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ನೀತಿ ಜಾರಿಗೆ ತರಲು ಯಾವುದೇ ರಾಜ್ಯವೂ ಮುಂದೆ ಬಂದಿಲ್ಲ. ಆದರೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗಿದೆ ಎಂದು ಕೀರ್ತಿ ಪಡೆಯಲು ಈ ರೀತಿ ಆತುರ ಮಾಡಲಾಗುತ್ತಿದೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯದಲ್ಲಿ ಶಿಕ್ಷಕರ ಕೊರತೆ, ಅಂಗನವಾಡಿ ಸೌಲಭ್ಯಗಳ ಕೊರತೆ ಇರುವಾಗ ಜಾರಿಗೆ ತರಲು ಮುಂದಾಗಿದೆ.
ಈ ಹಿಂದೆ ವಾಜಪೇಯಿ ಅವರು ಸರ್ವ ಶಿಕ್ಷಣ ಅಭಿಯಾನ ಯೋಜನೆ ಜಾರಿ ಮಾಡಿದಾಗ ದೇಶದೆಲ್ಲೆಡೆ ಯಾವ ಗ್ರಾಮದಲ್ಲಿ ಶಾಲೆ ಇರಲಿಲ್ಲವೋ ಆ ಗ್ರಾಮದಲ್ಲಿ ಶಾಲೆ ಆರಂಭವಾದವು. ಆಮೂಲಕ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಯಿತು. ನಂತರ ಈ ಯೋಜನೆ ಜಾರಿಗೆ ತರಲಾಯಿತು. ಮನಮೋಹನ್ ಸಿಂಗ್ ಅವರು ಇದಕ್ಕೆ ಹೆಚ್ಚಿನ ಅನುದಾನ ನೀಡಿ ಅದನ್ನು ಮುಂದುವರಿಸಿಕೊಂಡು ಬಂದರು.

ಮೋದಿ ಸರ್ಕಾರ ಬಂದ ನಂತರ 7 ವರ್ಷಗಳಿಂದ ಸರ್ವ ಶಿಕ್ಷಣ ಅಭಿಯಾನಕ್ಕೂ ಅನುದಾನ ಬಿಡುಗಡೆ ಮಾಡಿಲ್ಲ. ಆ ಸಂದರ್ಭದಲ್ಲಿ ಈ ನೀತಿಯಿಂದ ಬಡವ ಹಾಗೂ ಶ್ರೀಮಂತ, ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಡುವೆ ಕಂದಕ ನಿರ್ಮಾಣವಾಗಲಿದೆ. ಈ ನೀತಿಯಲ್ಲಿ ಆನ್ ಲೈನ್ ಶಿಕ್ಷಣವನ್ನು ಶೇ.20ರಿಂದ ಶೇ.50ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಈಗ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್, ಕಂಪ್ಯೂಟರ್ ತರಬೇತಿ ಇರುವ ಶಿಕ್ಷಕರು, ಅಂತರ್ಜಾಲ ವ್ಯವಸ್ಥೆ ಕೊರತೆ ಹೆಚ್ಚಾಗಿದೆ. ಒಂದು ವರದಿ ಪ್ರಕಾರ ದೇಶದ ಸರ್ಕಾರಿ ಶಾಲೆಗಳಲ್ಲಿ ಶೇ. 9.87 ರಷ್ಟು ಶಾಲೆಗಳಲ್ಲಿ ಮಾತ್ರ ಕಂಪ್ಯೂಟರ್ ಸೌಲಭ್ಯವಿದೆ. ದೇಶದಲ್ಲಿ ಕೇವಲ 4.09 ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ಇಂಟರ್ ನೆಟ್ ಸೌಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಕಂದಕ ನಿರ್ಮಾಣವಾಗಲಿದೆ’ ಎಂದು ತಿಳಿಸಿದ್ದಾರೆ.
‘ಈ ನೀತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರಿಗೆ ಎಲ್ಲಿಯೂ ಮೀಸಲಾತಿ, ವಿದ್ಯಾರ್ಥಿ ವೇತನ ವಿಚಾರವಾಗಿ ಉಲ್ಲೇಖ ಮಾಡಿಲ್ಲ. ಹೀಗಾಗಿ ಈ ವರ್ಗದ ವಿದ್ಯಾರ್ಥಿಗಳಿಗೆ ಮುಂದೆ ಯಾವ ರೀತಿ ಅನುಕೂಲವಾಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ. ಈ ನೀತಿಯಿಂದ ಖಾಸಗಿ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ಹಾಗೂ ಆಡಳಿತ ವಿಚಾರವಾಗಿ ಸ್ವಾಯತ್ತತೆ ನೀಡಲಾಗುವುದು. ಖಾಸಗಿ ಸಂಸ್ಥೆಗಳಿಗೆ ಈ ಅಧಿಕಾರ ನೀಡಿದರೆ, ಈಗಾಗಲೇ ಡೊನೆಷನ್ ಹಾವಳಿ ಹೆಚ್ಚಾಗಿರುವಾಗ ಇದು ಬಡವರನ್ನು ಶಿಕ್ಷಣ ಹೆಸರಿನಲ್ಲಿ ಸುಲಿಗೆ ಮಾಡಲು ಮುಂದಾಗುತ್ತಾರೆ. ಆಗ ಸರ್ಕಾರ ಶುಲ್ಕ ನಿಯಂತ್ರಣ ಮಾಡಲು ಸಾಧ್ಯವಿರುವುದಿಲ್ಲ.’ ಎಂದರು.
‘ಎನ್ ಡಿಎ ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿ ಶಿಕ್ಷಣಕ್ಕೆ ದೇಶದ ಜಿಡಿಪಿಯಲ್ಲಿ ಶೇ.4.5 ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಕಳೆದ ಏಳು ವರ್ಷದಲ್ಲಿ ಕೇವಲ ಶೇ.3.5ಕ್ಕಿಂತ ಹೆಚ್ಚಿನ ಅನುದಾನ ನೀಡಿಲ್ಲ. ಈ ನೂತನ ಶಿಕ್ಷಣ ನೀತಿಯಲ್ಲಿ ಜಿಡಿಪಿಯ ಶೇ.6 ರಷ್ಟು ಹಣಕಾಸು ಅನುದಾನವನ್ನು ಶಿಕ್ಷಣಕ್ಕೆ ನೀಡಬೇಕು ಎಂದು ಹೇಳಿದೆ. ಆದರೆ ಬಿಜೆಪಿ ಸರ್ಕಾರ ಇದುವರೆಗೂ ಶೇ.3.5ಕ್ಕಿಂತ ಹೆಚ್ಚು ನೀಡದಿರುವಾಗ ಇದು ಹೇಗೆ ಸಾಧ್ಯವಾಗುತ್ತದೆ?’ ಎಂದು ಪ್ರಶ್ನಿಸಿದ್ದಾರೆ.
‘ನೂತನ ಶಿಕ್ಷಣ ನೀತಿಯ ಪ್ರಕಾರ ಪಠ್ಯಕ್ರಮ ಅಂತಿಮವಾಗಿಲ್ಲ, ಪಠ್ಯಪುಸ್ತಕ ಮುದ್ರಣವಾಗಿಲ್ಲ. ಈಗ ಆತುರದಲ್ಲಿ ಇದನ್ನು ಜಾರಿಗೊಳಿಸಲು ತಯಾರಿ ನಡೆಸುತ್ತಿದ್ದಾರೆ. ಈ ನೀತಿ ಶಿಕ್ಷಣವನ್ನು ಖಾಸಗಿಕರಣಗೊಳಿಸುವ ಹುನ್ನಾರವಾಗಿದೆ. ಈ ನೀತಿ ವ್ಯಾಪಕವಾಗಿ ಚರ್ಚೆ ಆಗಬೇಕು. ಲಾರ್ಡ್ ಮೆಕಾಲೆ ಅವರು ಜಾಗತಿಕ ಹಾಗೂ ಸಮಾನ ಶಿಕ್ಷಣ ನೀತಿಯನ್ನು ಈ ದೇಶಕ್ಕೆ ಕೊಟ್ಟಿದ್ದು, ಶ್ರೇಣಿ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಮನುವಾದಿ ಬಿಜೆಪಿಗರು ಈ ಶಿಕ್ಷಣ ನೀತಿಯನ್ನು ವಿರೋಧಿಸುತ್ತಾರೆ. ಈ ಶಿಕ್ಷಣ ನೀತಿ ವಿರುದ್ಧ ನಮ್ಮ ಎನ್ಎಸ್ ಯುಐ ವಿಚಾರ ಸಂಕೀರ್ಣ, ಪ್ರತಿಭಟನೆ ಆಯೋಜಿಸಲಿದೆ ಎಂದು ಹೇಳಿದ್ದಾರೆ.
ಸರ್ಕಾರ ತಮ್ಮ ನಿರ್ಧಾರ ಕೈಬಿಟ್ಟು, ಈ ನೀತಿ ಬಗ್ಗೆ ಚರ್ಚೆಗೆ ಅವಕಾಶ ನೀಡಿ, ಇದಕ್ಕೆ ಬೇಕಾದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ ನಂತರ ಇದನ್ನು ಜಾರಿಗೆ ತರಲು ಮುಂದಾಗಬೇಕು. ಇಲ್ಲದಿದ್ದರೆ ಇದು ಬಿಜೆಪಿ ಸರ್ಕಾರದ ಮತ್ತೊಂದು ದುರಂತವಾಗಲಿದೆ. ಈಗಾಗಲೇ ನೋಟು ರದ್ದತಿ ಸೇರಿದಂತೆ ಅನೇಕ ದುರಂತಗಳಿಂದ ದೇಶ ನಲುಗುವಂತಾಗಿದೆ’ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲ ಶಾಲಾ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳಲ್ಲಿ ಜಾಗೃತಿ:
ನಂತರ ಮಾತನಾಡಿದ ಎನ್ ಎಸ್ ಯುಐ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಅವರು, ‘ಈ ಶಿಕ್ಷಣ ನೀತಿ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿದೆ. ಇದರಲ್ಲಿ ಶಾಲೆ ನೋಂದಣಿ, ವಿದ್ಯಾರ್ಥಿ ವೇತನ, ಮೀಸಲಾತಿ ವಿಚಾರವಾಗಿ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಖಾಸಗಿ ಸಂಸ್ಥೆಯವರಿಗೆ ಸಂಪೂರ್ಣ ಅಧಿಕಾರ ನೀಡಿರುವುದು ಅಪಾಯಕಾರಿ ಬೆಳವಣಿಗೆ. 10ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು ಮಾಡಲು ಮುಂದಾಗಿದ್ದಾರೆ. ಇದರಿಂದ ಮುಂದಿನ ಹಂತಕ್ಕೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಆಯಾ ಶಿಕ್ಷಣ ಸಂಸ್ಥೆಗಳೇ ಪ್ರವೇಶ ಪರೀಕ್ಷೆ ನಡೆಸುವಂತಾಗುತ್ತದೆ. ಆಗ ಆಯಾ ಶಿಕ್ಷಣ ಸಂಸ್ಥೆಗಳಲ್ಲೇ ಹಣ ಕೊಟ್ಟು ಸರ್ಟಿಫಿಕೇಟ್ ಪಡೆಯುವ ಪರಿಸ್ಥಿತಿ ನಿರ್ಮಾಣವಾದರೆ ಅಚ್ಚರಿ ಇಲ್ಲ. ಇನ್ನು ಡೊನೆಷನ್ ಹಾವಳಿ ಹೆಚ್ಚಾಗುತ್ತದೆ. ಈಗ ಗ್ರಾಮಾಂತರ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಮೇಲೆ ಅವಲಂಬಿತವಾಗಿದ್ದು, ಈ ನೀತಿಯಿಂದ ಈ ವಿದ್ಯಾರ್ಥಿಗಳು ಶಿಕ್ಷಣದಿಂದ ವಿಮುಖರಾಗುವ ಸಾಧ್ಯತೆ ಹೆಚ್ಚಾಗಲಿದೆ. ಇನ್ನು ಈ ಶಿಕ್ಷಣ ನೀತಿ ಡ್ರಾಪ್ಔಟ್ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದ ಬಹಳಷ್ಟು ಮಂದಿ ಅವಿದ್ಯಾವಂತರಾಗಲಿದ್ದಾರೆ ಎಂದು ಹೇಳಿದ್ದಾರೆ.

ಇವರು ರೈತರಿಗೆ ಮಾರಕವಾಗುವ ಕೃಷಿ ಕರಾಳ ಕಾಯ್ದೆ ತಂದಿರುವಂತೆ ಶಿಕ್ಷಣ ಕ್ಷೇತ್ರ ಖಾಸಗೀಕರಣ ಮಾಡಿ ನಾಶ ಮಾಡಲು ಈ ನೂತನ ಶಿಕ್ಷಣ ನೀತಿ ಜಾರಿಗೆ ತರುತ್ತಿದ್ದಾರೆ. ಹೀಗಾಗಿ ಎನ್ ಎಸ್ ಯುಐ ಕಡೆಯಿಂದ ರಾಜ್ಯದ ಎಲ್ಲಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ಹೋಗಿ ಈ ಶಿಕ್ಷಣ ನೀತಿ ವಿಚಾರವಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಅವರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಜತೆಗೆ ನಾಲ್ಕು ಜಿಲ್ಲೆಗಳನ್ನು ಸೇರಿಸಿ ಒಂದು ವಿಭಾಗ ಮಟ್ಟದಲ್ಲಿ ವಿಚಾರ ಸಂಕೀರ್ಣಗಳನ್ನು ನಡೆಸಿ ಬೋಧಕರು ಹಾಗೂ ವಿದ್ಯಾರ್ಥಿಗಲು ಹಾಗೂ ತಜ್ಞರನ್ನು ಒಳಗೊಂಡಂತೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ಹೇಳಿದ್ದಾರೆ .
ಕೋಮುವಾದವೂ ತಾಲಿಬಾನ್ ಸಂಸ್ಕೃತಿಯೇ:
ಬಿಜೆಪಿಯವರು ತಾಲಿಬಾನ್ ನವರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಉತ್ತರಿಸಿದ ಧೃವನಾರಾಯಣ್ ಅವರು, ‘ಹೇಳಿಕೆ ಮೊದಲು ಬಂದಿದ್ದೇ ನನ್ನಿಂದ. ತಾಲಿಬಾನ್ ಸಂಸ್ಕೃತಿ ಎಂದರೆ ಬಂದೂಕ ಹಿಡಿಯಲೇಬೇಕಿಲ್ಲ. ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಕಂದಕ ಮೂಡಿಸುವ ಕೋಮುವಾದವೂ ತಾಲಿಬಾನ್ ಸಂಸ್ಕೃತಿಯೇ. ಆರ್ ಎಸ್ ಎಸ್ ನಿಂದ ಸಾಮರಸ್ಯ ಮೂಡಿಸುವ ಪ್ರಯತ್ನ ಎಲ್ಲಿ ಆಗಿದೆ? ಈ ವಿಚಾರದಲ್ಲಿ ಅವರ ಕೊಡುಗೆ ಏನಿದೆ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ನಂತರದ ದಿನಗಳಲ್ಲಿ ದೇಶಕ್ಕೆ ಅವರ ಕೊಡುಗೆ ಏನು? ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಈ ಹೇಳಿಕೆ ಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ.
ದೇಶಕ್ಕೆ ಆರ್ ಎಸ್ಎಸ್ ಕೊಡುಗೆ ಏನು?:
ಇನ್ನು ಚೀನಾ, ಪಾಕಿಸ್ತಾನ ಯುದ್ಧದಲ್ಲಿ ಆರ್ ಎಸ್ ಎಸ್ ಹೋರಾಡಿದ್ದರು ಎಂಬ ಸಿ.ಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ‘ಬಿಜೆಪಿಯವರ ಹೇಳಿಕೆ, ಚರ್ಚೆ ಕೇವಲ ಕಾದಂಬರಿ ಹಾಗೂ ಕಾಲ್ಪನಿಕ ಆಧಾರಿತವಾದುದು. ಅವರು ವೈಜ್ಞಾನಿಕವಾಗಿ ಯಾವ ವಿಚಾರದಲ್ಲೂ ಮಾತನಾಡುವುದಿಲ್ಲ. ಸಿ.ಟಿ ರವಿ ಅವರಿಗೆ ಜ್ಞಾನ ಇದೆಯೋ, ಇಲ್ಲವೋ ಗೊತ್ತಿಲ್ಲ. ಯುದ್ಧದಲ್ಲಿ ಹೋರಾಡುವುದು ಮಿಲಿಟರಿ ಯೋಧರು. ಅವರಿಗೆ ಸುದೀರ್ಘ ತರಬೇತಿ ನೀಡಲಾಗಿರುತ್ತದೆ. ಈ ವಿಚಾರದಲ್ಲಿ ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಸ್ಮರಿಸಬೇಕು. ಪಾಕಿಸ್ತಾನಕ್ಕೆ ನುಗ್ಗಿ ಅವರ ದೇಶವನ್ನು ಇಬ್ಬಾಗ ಮಾಡಿದ್ದರು. ಕರಾಚಿವರೆಗೂ ನಮ್ಮ ಸೈನಿಕರು ಹೋಗಿದ್ದರು. ಅಂತಹ ಧೈರ್ಯ ಇವರಿಗೆ ಇದೆಯಾ? ಅಂತಹವರ ಹೆಸರಲ್ಲಿ ಇಂದಿರಾ ಕ್ಯಾಂಟೀನ್ ಮಾಡಿದರೆ, ಅದನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಅಂತಾ ಹೆಸರು ಬದಲಿಸಬೇಕು ಅಂತಾರೆ. ಇದಕ್ಕೆ ಇಂದಿರಾ ಅವರ ಹೆಸರು ಇಟ್ಟಿದ್ದು ಯಾಕೆ ಗೊತ್ತಾ? ದೇಶ ಸ್ವಾತಂತ್ರ್ಯವಾದಗ ನಮ್ಮ ಆಹಾರ ಉತ್ಪಾದನೆ ಕೇವಲ 50 ಮಿಲಿಯನ್ ಟನ್ ಮಾತ್ರ ಇತ್ತು. ಆದರೆ ಈಗ ಅದು 300 ಮಿಲಿಯನ್ ಟನ್ ನಷ್ಟು ಏರಿಕೆಯಾಗಿದೆ. ಅವರ ಕಾಲದಲ್ಲಿ ಹಸಿರು ಕ್ರಾಂತಿಗೆ ಅವಕಾಶ ಮಾಡಿಕೊಟ್ಟರು. ಅವರಿಂದಾಗಿ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಯಿತು. ದೇಶಕ್ಕೆ ನಿಜವಾದ ಅನ್ನಪೂರ್ಣೇಶ್ವರಿ ಎಂದರೆ ಅದು ಇಂದಿರಾ ಗಾಂಧಿ ಎಂಬುದನ್ನು ಬಿಜೆಪಿ ನಾಯಕರು ನೆನೆಸಿಕೊಳ್ಳಬೇಕು. ಬಿಜೆಪಿ 7 ವರ್ಷದ ಅಧಿಕಾರದಲ್ಲಿ ಅವರು ಮಾಡಿರುವ ಸುಧಾರಣೆ ಏನು? ಒಂದು ಸರ್ಕಾರದ ಕೆಲಸ ಅಳೆಯಲು ಮಾನದಂಡ ಬಿಗಿ ಆಡಳಿತ, ಜನಜೀವನ ಉತ್ತಮಗೊಳಿಸುವುದು, ದೇಶದ ತಲಾದಾಯ ಹೆಚ್ಚಿಸುವುದು. ಕೇವಲ ಇಬ್ಬರು ಶ್ರೀಮಂತ ಉದ್ಯಮಿ ಅದಾನಿ ಹಾಗೂ ಅಂಬಾನಿ ಆದಾಯ ಹೆಚ್ಚಿಸುವುದಲ್ಲ. ಬಡವರ ಆದಾಯ ಹೆಚ್ಚಿಸುವುದು. ಹಸಿವು ನೀಗಿಸುವುದು. ಮನಮೋಹನ್ ಸಿಂಗ್ ಅವರು ದೇಶದ 30 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ಎತ್ತಿದ್ದಾರೆ, ಬಿಜೆಪಿ ಸರ್ಕಾರ ಅವರನ್ನು ಮತ್ತೆ ಬಡತನಕ್ಕೆ ನೂಕಿದೆ. ಬಿಜೆಪಿ ನಾಯಕರು ತಮ್ಮ ಸಾಧನೆ ಬಗ್ಗೆ ಮಾತನಾಡುವ ಬದಲು ಇಂತಹ ವಿಚಾರದ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಅವರೇ ಅಧಿಕಾರದಲ್ಲಿದ್ದಾರೆ. ಅವರು ಸುಧಾರಣೆ ತರಲಿ, ವಾಜಪೇಯಿ ಅವರ ಉತ್ತಮ ಕಾರ್ಯವನ್ನು ನಾವು ಸ್ವಾಗತಿಸಿ ಮಾತನಾಡುವುದಿಲ್ಲವೇ? ಕೇವಲ ಪ್ರಚಾರ, ಧರ್ಮದ ವಿಚಾರ ಮಾತನಾಡುವುದಲ್ಲ. ಸಂಸತ್ ಮೇಲೆ ಚೀನಾ ಅತಿಕ್ರಮಣ ಮಾಡಿದರಲ್ಲಾ ಆ ಬಗ್ಗೆ ನಾವು ಹೇಳಬಹುದಲ್ಲವೇ? ಅಧಿಕಾರಕ್ಕೆ ಬಂದಾಗ ಉತ್ತಮ ಕೆಲಸ ಮಾಡಿ ಶಹಬ್ಬಾಶ್ಗಿರಿ ಪಡೆಯಲಿ. ಅದನ್ನು ಬಿಟ್ಟು ಇಂತಹ ಮಾತುಗಳನ್ನು ಆಡುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ನಂತಹ ದೊಡ್ಡ ಕುಟುಂಬದಲ್ಲಿ ಆಕಾಂಕ್ಷಿಗಳು ಹೆಚ್ಚು:
ಉಪಚುನಾವಣೆ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ‘ಕಾಂಗ್ರೆಸ್ ದೊಡ್ಡ ಪಕ್ಷ ಸಹಜವಾಗಿ ಆಕಾಂಕ್ಷಿಗಳು ಹೆಚ್ಚಾಗಿರುತ್ತಾರೆ. ಅಂತಿಮವಾಗಿ ಹೈಕಮಾಂಡ್ ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಮನೋಹರ್ ತಹಶೀಲ್ದಾರ್ ಅವರು ಹಿರಿಯರು ಹಿಂದೆ ಶಾಸಕರಾಗಿ, ಮಂತ್ರಿಯಾಗಿ ಕಲಸ ಮಾಡಿದ್ದಾರೆ. ಅವರು ನಾನು ಕೂಡ ಸ್ಪರ್ಧೆ ಮಾಡುತ್ತೀನಿ ಎನ್ನುವುದರಲ್ಲಿ ತಪ್ಪಿಲ್ಲ. ಎಲ್ಲರ ಜತೆ ಚರ್ಚಿಸಿ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಎರಡು ಕ್ಷೇತ್ರಗಳಲ್ಲಿ ವಾತಾವರಣ ನಮ್ಮ ಪರವಾಗಿದೆ ಸರ್ಕಾರದ ವೈಫಲ್ಯಗಳಿಂದ ನಮಗೆ ಅನುಕೂಲವಾಗಲಿದೆ. ಹೀಗಾಗಿ ಚುನಾವಣೆ ಸಮಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಕಾಂಗ್ರೆಸ್ ಮನೆ ವಿಚಾರ ನಾವು ಇತ್ಯರ್ಥ ಮಾಡಿಕೊಳ್ಳುತ್ತೇವೆʼ ಎಂದು ಹೇಳಿದ್ದಾರೆ.







