ಕಳೆದ ಕೆ.ಆರ್ ಪೇಟೆ ಮತ್ತು ಶಿರಾ ಉಪಚುನಾವಣೆಯಲ್ಲಿ ‘ಸ್ಟ್ರಾಟಜಿ ಮೇಕರ್’ ಆಗಿ ಸದ್ದು ಮಾಡಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ರಾಜಕೀಯ ಭವಿಷ್ಯದ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಸದ್ಯ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಯಾವ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೀಗ, ಈ ಕುತೂಹಲಕ್ಕೆ ತೆರೆಬಿದ್ದಿದೆ. ಬಿ.ವೈ ವಿಜಯೇಂದ್ರ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ವರ್ಷಗಳ ಹಿಂದೆಯೇ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಅಖಾಡಕ್ಕಿಳಿಯಲು ವಿಜಯೇಂದ್ರ ತಯಾರಿ ನಡೆಸಿಕೊಂಡಿದ್ದರು. ಇದಕ್ಕಾಗಿ ಭೂಮಿಕೆಯನ್ನು ರೆಡಿ ಮಾಡಿಕೊಂಡಿದ್ದರು. ಪುತ್ರನ ಪರವಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೈಕಮಾಂಡ್ ಬಳಿ ಟಿಕೆಟ್ ಕೇಳಿದ್ದರು. ಆದರೆ, ಬಿಜೆಪಿ ಕೆಲವು ಹಿರಿಯ ನಾಯಕರ ಕುತಂತ್ರಗಳಿಂದ ಬಿ.ವೈ ವಿಜಯೇಂದ್ರಗೆ ಟಿಕೆಟ್ ನೀಡಲು ಹೈಕಮಾಂಡ್ ನಿರಾಕರಣೆ ಮಾಡಿತ್ತು. ಇದು ಬಿಎಸ್ವೈಗೂ ಮುಜುಗರ ಉಂಟು ಮಾಡಿತ್ತು. ಆದರೀಗ, ಹೇಗಾದರೂ ಮಾಡಿ ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಕೊಡಿಸಲು ಬಿಎಸ್ವೈ ಮುಂದಾಗಿದ್ದಾರೆ.
ಇತ್ತೀಚೆಗೆ ನಡೆದ ಬಸವಕಲ್ಯಾಣ ಕ್ಷೇತ್ರದಲ್ಲಿ ಕೂಡ ವಿಜಯೇಂದ್ರ ಹೆಸರು ಕೇಳಿ ಬಂದಿತ್ತು. ಬಿಜೆಪಿಯ ಒಂದು ಬಣ ಬಸವಕಲ್ಯಾಣದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒತ್ತಡ ಹೇರುತ್ತಿದ್ದರೆ, ಇನ್ನೊಂದೆಡೆ ಪಕ್ಷದ ಹಿರಿಯ ನಾಯಕರು ಇದಕ್ಕೆ ಖ್ಯಾತೆ ತೆಗೆದಿದ್ದರು. ಈ ಎಲ್ಲದಕ್ಕೂ ತೆರೆ ಎಳೆಯಲು ಮುಂದಾದ ಬಿಎಸ್ವೈ ಪುತ್ರನನ್ನು ಹಾನಗಲ್ ಕ್ಷೇತ್ರದಿಂದ ಸದ್ಯದಲ್ಲೇ ಎದುರಾಗಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ನಿಲ್ಲಿಸೋದು ಪಕ್ಕಾ ಎನ್ನುತ್ತಿವೆ ಮೂಲಗಳು.
ಯಾರೇ ವಿರೋಧ ಮಾಡಿದರೂ ಈ ಬಾರಿ ಪುತ್ರನಿಗೆ ಟಿಕೆಟ್ ಕೇಳಿಯೇ ತೀರುತ್ತೇನೆ. ವಿಜಯೇಂದ್ರ ಮುಂದಿನ ರಾಜಕೀಯ ಭವಿಷ್ಯ ಹಾನಗಲ್ ಕ್ಷೇತ್ರದಿಂದಲೇ ಶುರುವಾಗಲಿದೆ. ಇದಕ್ಕಾಗಿ ಬೇಕಾದ ತಯಾರಿ ಆರಂಭಿಸುವಂತೆ ವಿಜಯೇಂದ್ರಗೆ ಸೂಚಿಸಿದ್ದಾರೆ ಬಿಎಸ್ವೈ.
ಇತ್ತೀಚೆಗೆ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಿದ ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಜಿಲ್ಲೆ ಹಾವೇರಿ. ಈ ಜಿಲ್ಲೆಯ ರಾಜಕಾರಣಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಎಂಟ್ರಿ ಕೊಡೋದು ಬಹುತೇಕ ಫೈನಲ್. ಇದರಿಂದ ತನ್ನ ರಾಜಕೀಯಕ್ಕೆ ತೊಂದರೆಯಾಗಬಹುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿಗೆ ಆತಂಕ ಶುರುವಾಗಿದೆ ಎನ್ನಲಾಗುತ್ತಿದೆ.
ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಸಿ.ಎಂ ಉದಾಸಿಯವರು ಇತ್ತೀಚೆಗೆ ನಿಧನರಾಗಿದ್ದರು. ಇವರ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ. ಲಿಂಗಾಯತ ಮತಗಳೇ ನಿರ್ಣಾಯಕ ಈ ಕ್ಷೇತ್ರದಲ್ಲಿ ಬಿ.ವೈ ವಿಜಯೇಂದ್ರಗೆ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ.
ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಉತ್ತರ ಕರ್ನಾಟಕದ ಪ್ರಬಲ ಸಮುದಾಯವಾದ ವೀರಶೈವ- ಲಿಂಗಾಯತ ಮತಗಳೇ ಪ್ರಮುಖ ವೋಟ್ ಬ್ಯಾಂಕ್. ಬಿಎಸ್ವೈ ಪುತ್ರ ಬಿ.ವೈ ವಿಜಯೇಂದ್ರ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರು.
ಬಿ.ವೈ ವಿಜಯೇಂದ್ರ ರಾಜಕೀಯ ಪ್ರವೇಶ ಮಾಡಬೇಕು. ತಮ್ಮ ಕ್ಷೇತ್ರ ಮಾತ್ರವಲ್ಲದೇ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಬೇಕು. ಈ ಮೂಲಕ ವಿಜಯೇಂದ್ರ ಲಿಂಗಾಯತ ಸಮುದಾಯದ ನಾಯಕರಾಗಿ ಹೊರಹೊಮ್ಮಬೇಕು ಎಂಬುದು ಬಿಎಸ್ವೈ ಪ್ಲಾನ್.
ಇನ್ನು, ನೀವು ಹೇಳಿದಂತೆ ನಾನು ಕೇಳುತ್ತೇನೆ. ನಿಮ್ಮ ನಿರ್ಧಾರವೇ ಅಂತಿಮ. ನಿಮ್ಮ ಮಾರ್ಗದರ್ಶನದಲ್ಲೇ ರಾಜಕೀಯದಲ್ಲಿ ಮುನ್ನಡೆಯುತ್ತೇನೆ ಎಂದು ಯಡಿಯೂರಪ್ಪಗೆ ವಿಜಯೇಂದ್ರ ಮಾತು ಕೊಟ್ಟಿದ್ದಾರಂತೆ. ಹೀಗಾಗಿ ಬಿ.ವೈ ವಿಜಯೇಂದ್ರ ಹಾವೇರಿ ಜಿಲ್ಲೆ ರಾಜಕಾರಣಕ್ಕೆ ಪ್ರವೇಶ ಮಾಡಿದರೆ ಬೊಮ್ಮಾಯಿಗೆ ಸಣ್ಣ ನಡುಕ ಗ್ಯಾರಂಟಿ.