
ಬೆಂಗಳೂರು: ಕೊಡಗಿನ ಸಾಗು ಬಾಣೆ ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಕಡಿಯುವುದಕ್ಕಾಗಿ ತಪ್ಪಾಗಿ ಠೇವಣಿ ಇಟ್ಟಿದ್ದ ಹಣವನ್ನು ಬಡ್ಡಿ ಸಹಿತ ಭೂಮಾಲೀಕರಿಗೆ ಹಿಂದಿರುಗಿಸಲು ರಾಜ್ಯ ಹೈ ಕೋರ್ಟ್ ಅರಣ್ಯ ಇಲಾಖೆಗೆ ಆದೇಶಿಸಿದೆ.

ತಮ್ಮ ತಂದೆ ಮಡಿಕೇರಿ ತಾಲ್ಲೂಕಿನ ದಿವಂಗತ ಎನ್. ಮಹಾಬಲೇಶ್ವರ ಭಟ್ ಅವರು ತಮ್ಮ ಸಾಗು ಬಾಣೆ ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾಗ ಅಧಿಕಾರಿಗಳು ಹಣವನ್ನು ಠೇವಣಿ ಇಡುವಂತೆ ಸೂಚಿಸಿದ್ದರು. ಆದರೆ ಪರಭಾರೆ ಆಗಿದ್ದ ಸಾಗು ಬಾಣೆ ಜಮೀನಿನಲ್ಲಿ ಬೆಳೆದಿದ್ದ ಮರಗಳ ಮೇಲೆ ಭೂಮಾಲೀಕರಿಗೆ ಪೂರ್ಣ ಹಕ್ಕು ಇದ್ದು , ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಹಣ ಕಟ್ಟಿಸಿಕೊಂಡಿದ್ದಾರೆ ಎಂದು ತಪ್ಪಾಗಿ ಇಟ್ಟಿದ್ದ ಠೇವಣಿ ಹಿಂದಿರುಗಿಸಲು ಆದೇಶಿಸುವಂತೆ ಕೋರಿ ಪುತ್ರಿ ಗಾಯತ್ರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಸಾಗು ಬಾಣೆ ಜಮೀನು ಒಮ್ಮೆ ಪರಭಾರೆಗೊಂಡರೆ, ಆ ಜಮೀನಿನ ಮೇಲಾಗಲಿ ಅಥವಾ ಅದರಲ್ಲಿನ ಮರದ ಮೇಲಾಗಲಿ ಸರ್ಕಾರ ತನ್ನ ಯಾವುದೇ ಹಕ್ಕನ್ನು ಪ್ರತಿಪಾದಿಸಲಾಗದು. ಅಲ್ಲದೆ, ಈ ಜಮೀನಿನಲ್ಲಿರುವ ಮರಗಳನ್ನು ಕತ್ತರಿಸಲು ಸರ್ಕಾರಕ್ಕೆ ಯಾವುದೇ ಠೇವಣಿ ಇಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ ತಪ್ಪಾಗಿ ಮುಂಗಡವಾಗಿ ಅರ್ಜಿದಾರರಿಂದ ಠೇವಣಿ ಇರಿಸಿಕೊಂಡಿದ್ದ 4.33 ಲಕ್ಷ ಮೊತ್ತಕ್ಕೆ ಶೇ.6ರಂತೆ ವಾಷಿಕ ಬಡ್ಡಿಯೊಂದಿಗೆ ಹಿಂದಿರುಗಿಸಬೇಕು ಎಂದು ಆದೇಶಿಸಿದೆ.
ಜತೆಗೆ, ಮರಗಳನ್ನು ಕತ್ತರಿಸಲು ಅರ್ಜಿದಾರರು ಅನುಮತಿ ಕೋರಿದಾಗಲೇ ಭೂಮಿಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕಾದದ್ದು ಅರಣ್ಯಾಧಿಕಾರಿಗಳ ಕರ್ತವ್ಯವಾಗಿತ್ತು, ಈ ಪ್ರಕರಣದಲ್ಲಿ ಅರ್ಜಿದಾರರು ತಪ್ಪಾಗಿ ತಮ್ಮದು ಸಾಗು ಬಾಣೆ ಜಮೀನು ಎಂದು ತೋರಿಸಿದ್ದರು. ಇದರ ಅನುಕೂಲವನ್ನು ಸರ್ಕಾರ ಪಡೆಯಬಾರದು ಎಂದು ಪೀಠ ಸರ್ಕಾರಕ್ಕೆ ತಿಳಿಸಿದೆ.
ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಸರ್ವೇ ನಂಬರ್ 23ರಲ್ಲಿನ 25 ಎಕರೆ ಮತ್ತು ಸರ್ವೇ ನಂಬರ್ 29/7ರಲ್ಲಿನ 13.23 ಎಕರೆ ಜಮೀನನ್ನು ಎನ್. ಮಹಾಬಲೇಶ್ವರ ಭಟ್ ಖರೀದಿಸಿದ್ದರು. 1983ರಲ್ಲಿ ಈ ಜಮೀನಿನಲ್ಲಿರುವ 349 ಮರಗಳನ್ನು ಕತ್ತರಿಸಲು ಅನುಮತಿ ಕೋರಿ ಕೊಡಗು ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಅವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ 1983ರ ಫೆಬ್ರುವರಿ 1ರಂದು ಅನುಮತಿ ದೊರೆತಿತ್ತು, ಅರ್ಜಿದಾರರು ಅರಣ್ಯಾಧಿಕಾರಿಗಳ ಷರತ್ತಿನಂತೆ ಮರಗಳನ್ನು ಕತ್ತರಿಸಿ, ತೆರವು ಕಾರ್ಯದ ಮೌಲ್ಯ 4.33 ಲಕ್ಷ ರೂಪಾಯಿ ಹಣವನ್ನು ಠೇವಣಿ ಇರಿಸಿದ್ದರು.
ಮರಗಳನ್ನು ಕತ್ತರಿಸಿ ತೆರವುಗೊಳಿಸಿದ ನಂತರ ಮಹಾಬಲೇಶ್ವರ ಭಟ್ ಅವರು ”ಈ ಜಮೀನು ಪರಭಾರೆಗೊಂಡ ಸಾಗುಬಾಣೆ ಜಮೀನಾಗಿದ್ದು, ಇದನ್ನು ವಿನಾ ಕಾರಣ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಹೀಗಾಗಿ, ಈ ಜಮೀನು ನನಗೆ ಸೇರಿರುವ ಕಾರಣ ಮರಗಳನ್ನು ಕತ್ತರಿಸಲು ಹಣ ಠೇವಣಿ ಇರಿಸಬೇಕೆಂಬ ಷರತ್ತನ್ನು ವಿಧಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅವಕಾಶವಿಲ್ಲ. ಆದ್ದರಿಂದ, ಠೇವಣಿ ಹಣವನ್ನು ಹಿಂದಿರುಗಿಸಬೇಕು” ಎಂದು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ಠೇವಣಿ ಮೊತ್ತವನ್ನು ಹಿಂದಿರುಗಿಸಲು ಮಡಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರಾಕರಿಸಿದ್ದು ಸಾಗು ಬಾಣೆ ಮರಗಳ ಮೇಲೆ ಅರಣ್ಯ ಇಲಾಖೆಯ ಹಕ್ಕು ಇದೆ ಎಂದು ಪ್ರತಿಪಾದಿಸಿದ್ದರು. ಇದನ್ನು ಪ್ರಶ್ನಿಸಿ ಭಟ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು ಪ್ರಕರಣ ವಿಚಾರಣೆ ಹಂತದಲ್ಲಿ ಮೃತ ಪಟ್ಟಿದ್ದರು. (ವರದಿ ;ಕೋವರ್ ಕೊಲ್ಲಿ ಇಂದ್ರೇಶ್ )