ಸಹಾಯಕ ಪ್ರಾಧ್ಯಾಪಕರ(Assistant Professors) ನೇಮಕಾತಿಯ ಆದೇಶದ ಗೆಜೆಟ್(gazette) ಮತ್ತು ಸ್ಥಳ ನಿಯುಕ್ತಿಯ(Placement) ವೇಳಾಪಟ್ಟಿಯನ್ನು ಹೊರಡಿಸುವಂತೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಹೋರಾಟ(Protest)ಕ್ಕೆ ಮುಂದಾಗಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.5ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್(Freedom Park)ನಲ್ಲಿ ಅನಿರ್ದಿಷ್ಟಾವಧಿಯ ಸತ್ಯಾಗ್ರಹ ನಡೆಸಲು ಮುಂದಾಗಿದ್ದು, ಆ ಮೂಲಕ ತಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರ ನೆರವಾಗಬೇಕು ಹಾಗೂ ನೇಮಕಾತಿಯ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
2021ರಲ್ಲಿ ಸರ್ಕಾರಿ ಪ್ರಥಮ ದರ್ಜೆ(First Grade) ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ 26 ವಿಷಯಗಳ 1242 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯಾಗಿ, ದಿನಾಂಕ: 03.03.2023 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಈ ಆಯ್ಕೆ ಪಟ್ಟಿಯಲ್ಲಿ ಒಟ್ಟು 1208 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ. ಹೀಗೆ ವರ್ಷಾನುಗಟ್ಟಲೆ ನೆನಗುದಿಗೆ ಬಿದ್ದಿದ್ದ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯನ್ನು ಸರ್ಕಾರವು ದಿನಾಂಕ: 04/11/2023ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.
![](https://pratidhvani.com/wp-content/uploads/2024/03/WhatsApp-Image-2024-03-03-at-13.31.41.jpeg)
ಉನ್ನತ ಶಿಕ್ಷಣ ಇಲಾಖೆಯು ಸಹ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಸಂಬಂಧ ದಿನಾಂಕ:26-02-2024ರಂದು ಹೊರಡಿಸಿದ (ಪತ್ರ ಸಂಖ್ಯೆ: ಕಾಶಿಇ/110/ವರ್ಗಾವಣೆ/2023-2024) ಅಧಿಕೃತ ಜ್ಞಾಪನ ಪತ್ರವನ್ನೂ ಒಂದೇ ದಿನದಲ್ಲಿ ಹಿಂಪಡೆದಿದೆ. ಇಲಾಖೆಯ ಅಧಿಕೃತ ಜ್ಞಾಪನ ಪತ್ರವನ್ನು ಹಿಂಪಡೆಯಲು ಕಾರಣವೇನು? ಮರುದಿವಸ ಅಂದರೆ, ದಿನಾಂಕ 27-02-2024 ರಂದು ಪ್ರಕಟವಾದ ಇಲಾಖೆಯ ಅಧಿಕೃತ ಜ್ಞಾಪನ ಪತ್ರದಲ್ಲಿ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕರುಗಳ ಸ್ಥಳನಿಯುಕ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ವೇಳಾಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಸೂಚಿಸಲಾಗಿದೆ.
ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರು ಡಿಸೆಂಬರ್ ತಿಂಗಳ ಅಂತ್ಯಕ್ಕೆ, ನಂತರ ಜನವರಿ ತಿಂಗಳ ಅಂತ್ಯಕ್ಕೆ, ತದನಂತರವೂ ಫೆಬ್ರವರಿ ತಿಂಗಳ ಅಂತ್ಯಕ್ಕೆ ಆದೇಶ ಕೊಡಲಾಗುವುದು ಎಂಬ ಭರವಸೆಗಳನ್ನು ನಂಬಿಕೊಂಡಿದ್ದೇವು. ಹೀಗೆ ತಿಂಗಳಾಂತ್ಯಗಳು ಮುಗಿದವೇ ಹೊರೆತು ನಮಗೆ ನೇಮಕಾತಿ ಆದೇಶ ದೊರೆಯುತ್ತಿಲ್ಲ. ಇದರಿಂದಾಗಿ ನಮಗಂತೂ ಪ್ರತಿಕ್ಷಣವು ನರಕ ದರ್ಶನವಾಗುತ್ತಿದೆ.
![](https://pratidhvani.com/wp-content/uploads/2024/03/WhatsApp-Image-2024-03-03-at-13.31.42.jpeg)
ಈಗಾಗಲೇ ಅನೇಕ ಅಡೆತಡೆಗಳು ನಮ್ಮ ನೇಮಕಾತಿಯನ್ನು ಬೆಂಬಿಡದೇ ಕಾಡಿವೆ. ಈಗ 2024ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬಂದರೆ ಇದರಿಂದ ಮತ್ತೆ ನಮ್ಮ ಭವಿಷ್ಯ ಡೋಲಾಯಮಾನವಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಸನ್ಮಾನ್ಯರಾದ ಉನ್ನತ ಶಿಕ್ಷಣ ಸಚಿವರು ಕೊಟ್ಟ ಮಾತಿಗೆ ಇನ್ನೂ ಬದ್ಧವಾಗಿದ್ದರೆ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೆ, ಯಾವುದೇ ತೊಂದರೆ ಇಲ್ಲದ ಆದೇಶ ಪಡೆಯಲು ಸಿದ್ಧವಾಗಿರುವ 908 ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶದ ರಾಜ್ಯಪತ್ರವನ್ನು ಹೊರಡಿಸುವಂತಹ ಇಚ್ಛಾಶಕ್ತಿಯನ್ನು ತೋರಿಸಬೇಕೆಂದು ಪ್ರಾರ್ಥಿಸುತ್ತೇವೆ.
ಆದ್ದರಿಂದಾಗಿ 2021ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶದ ಗೆಜೆಟ್ ಮತ್ತು ಸ್ಥಳ ನಿಯುಕ್ತಿಯ ವೇಳಾಪಟ್ಟಿಯನ್ನು ಹೊರಡಿಸುವಂತೆ ಆಯ್ಕೆಯಾದ ಅಭ್ಯರ್ಥಿಗಳು ದಿನಾಂಕ: 05-03-2024ರ ಬೆಳಿಗ್ಗೆ 11 ಗಂಟೆಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿಯ ಪ್ರಜಾಸತ್ತಾತ್ಮಕವಾದ ಸತ್ಯಾಗ್ರಹವನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.
#AssistantProfessors #candidates #campaigning #Recruitment #gazette #placement #schedule.