ಉತ್ತರ ಪ್ರದೇಶದಲ್ಲಿ ಭೀಕರ ಕಾಲ್ತುಳಿತಕ್ಕೆ ಬರೋಬ್ಬರಿ 120ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ದೊಡ್ಡವರ ಶವಗಳ ನಡುವೆ ಪಟ್ಟ ಪುಟ್ಟ ಮಕ್ಕಳು ಉಸಿರು ಚೆಲ್ಲಿರುವ ಘನಘೋರ ಘಟನೆ ನಡೆದಿದೆ. ಹಾದಿ ಬೀದಿಯಲ್ಲಿ ರಾಶಿ ರಾಶಿ ಶವಗಳು ಬಿದ್ದಿದ್ದು, ಬದುಕಿ ಉಳಿದವರು ಶವಗಳ ಎದುರು ರೋಧಿಸುವ ಸಂಗತಿ ಕರುಳು ಚುರ್ ಎನ್ನುವಂತಿದೆ.
![](https://pratidhvani.com/wp-content/uploads/2024/07/78974844-1024x576.jpg)
ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮ ನಡೆಯುತ್ತಿತ್ತು. ಸತ್ಸಂಗದಲ್ಲಿ ಭಾಗಿಯಾಗಲು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ರು. ಬೃಹತ್ ಟೆಂಟ್ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಸರಾಗವಾಗಿ ನಡೆದಿತ್ತು. ಆದ್ರೆ ಸತ್ಸಂಗದ ನಂತರ ಏಕಾಏಕಿ ನೂಕುನುಗ್ಗಲು ಉಂಟಾಗಿ ಅತಿದೊಡ್ಡ ದುರಂತ ನಡೆದು ಹೋಗಿದೆ. ಕಾಲ್ತುಳಿತದಲ್ಲಿ ನೂರಾರು ಭಕ್ತರು ಅಸುನೀಗಿದ್ರು.
ಮೃತಪಟ್ಟವರಲ್ಲಿ ಹತ್ರಾಸ್ ಮತ್ತು ಇಟಾಹ್ ನಗರ ನಿವಾಸಿಗಳೇ ಹೆಚ್ಚಾಗಿದ್ದಾರೆ ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ಭಕ್ತರನ್ನು ಒಂದೇ ಕಡೆ ನಿಲ್ಲಿಸಿದ್ದರಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಹೀಗಾಗಿ ಹಲವಾರು ಜನರು ನಿಂತಲ್ಲಿಯೇ ಪ್ರಜ್ಞಾಹೀನರಾಗಿದ್ರು. ಮೃತರ ಶವ ಎಲ್ಲೆಂದರಲ್ಲಿ ಬಿದ್ದಿದ್ದು, ಗೂಡ್ಸ್ ವಾಹನ, ಕಾರು ಸೇರಿದಂತೆ ಮಹಿಳೆಯರು, ಮಕ್ಕಳ ಮೃತದೇಹಗಳು ಚೆಲ್ಲಾಡಿವೆ. ಮಕ್ಕಳು ಸೇರಿ ಹಲವಾರು ಜನರು ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರ ಸಂಖ್ಯೆ ನೋಡಿದಾಗ ಕಾರ್ಯಕ್ರಮ ಆಯೋಜನೆ ಸರಿಯಾಗಿ ಇರಲಿಲ್ಲ ಎನ್ನುವುದು ಸಾಬೀತಾಗುತ್ತದೆ. ರಾಜ್ಯ ಸರ್ಕಾರ ಹಾಗು ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ಅನಿಯಂತ್ರಿತ ಜನಸಂದಣಿ ಮತ್ತು ಆಮ್ಲಜನಕ ಕೊರತೆಯೂ ಸಾವಿಗೆ ಕಾರಣ ಎನ್ನಲಾಗಿದೆ. ಜನರು ಪ್ರಾಣ ಕಳೆದುಕೊಂಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸೂಚನೆ ಕೊಟ್ಟಿದ್ದಾರೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ದುರಂತದ ಬಗ್ಗೆ ಸಂತಾಪ ಸೂಚಿಸಿದ್ದಾರೆ.
ಸತ್ಸಂಗದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಉತ್ತರ ಪ್ರದೇಶದ ಸಚಿವ ಸಂದೀಪ್ ಸಿಂಗ್ ಮಾತನಾಡಿ, ಘಟನಾ ಸ್ಥಳಕ್ಕೆ ಹೋಗಲು ಸಿಎಂ ಆದೇಶಿಸಿದ್ದಾರೆ. ಇಲ್ಲೇ ಇದ್ದು ಘಟನೆ ಬಗ್ಗೆ ಪರಿಶೀಲನೆ ಮಾಡ್ತೇವೆ. ಸರ್ಕಾರ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಸತ್ತವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದಿದ್ದಾರೆ.
ಕಾಲ್ತುಳಿತದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಸಿಎಂ ಯೋಗಿ ಆದಿತ್ಯನಾಥ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಅಂತ ಯೋಗಿ ಆದಿತ್ಯನಾಥ್ ಹಾರೈಸಿದ್ದಾರೆ. ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ವಿಚಾರ ವಿರೋಧ ಪಕ್ಷಗಳ ಪಾಲಿಗೆ ಅಸ್ತ್ರವಾಗಿ ಸಿಕ್ಕಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಹಾಗು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸುವ ಎಲ್ಲಾ ಸಾಧ್ಯತೆಗಳೂ ಇವೆ.