ಶ್ರೀಧೃತಿ ಪ್ರೊಡಕ್ಷನ್ ಲಾಂಛನದಲ್ಲಿ ಡಾ.ಕೊಡ್ಲಾಡಿ ಸುರೇಂದ್ರಶೆಟ್ಟಿ ಅವರು ಅರ್ಪಿಸಿ, ಶ್ರೀನಿವಾಸ್ಪ್ರಭು, ಕೆ.ಮಾದೇಶ್ (ಕೊಡಿಹಳ್ಳಿ), ನಟರಾಜ್ ಸಿ.ಎಸ್.(ಚನ್ನಸಂದ್ರ) ಸೇರಿ ನಿರ್ಮಿಸುತ್ತಿರುವ “ಎವಿಡೆನ್ಸ್” ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ. ಅಲ್ಲದೆ ಚಿತ್ರವನ್ನು ಆಗಸ್ಟ್ ವೇಳೆಗೆ ರಿಲೀಸ್ ಮಾಡುವ ಪ್ಲಾನ್ ಕೂಡ ಇದೆ.

ಅರವಿಂದ್ ಅಚ್ಚು, ಎಂ.ಎನ್.ರವೀಂದ್ರ ರಾವ್ (ದೂರದರ್ಶನ), ಪ್ರಶಾಂತ್ ಸಿ.ಪಿ. ರಮೇಶ್ ಕೆ, ಕಿಶೋರ್ಬಾಬು ಮತ್ತು ನರಸಿಂಹಮೂರ್ತಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಸದ್ಯದಲ್ಲೇ ಸೆನ್ಸಾರ್ ಮನೆಗೆ ಹೋಗಲು ಅಣಿಯಾಗುತ್ತಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ನೆಲಮಂಗಲ ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಕೊಲೆಯೊಂದು ನಡೆದಾಗ ಅದರ ಸಾಕ್ಷಾಧಾರಗಳನ್ನು ಹುಡುಕುವ ಪ್ರಕ್ರಿಯೆ ಸುತ್ತ ನಡೆಯುವ ಕ್ರೈಮ್, ಸಸ್ಪೆನ್ಸ್ , ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕ್ಷಣ ಕ್ಷಣಕ್ಕೈ ಕುತೂಹಲ ಕೆರಳಿಸುವಂಥ, ಕೊನೆಯವರೆಗೂ ಸಸ್ಲೆನ್ಸ್ ಓಪನ್ ಆಗದಂಥ ಗಟ್ಟಿ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

ಜೋಶ್ ಖ್ಯಾತಿಯ ರೋಬೊ ಗಣೇಶನ್ ಚಿತ್ರದ ನಾಯಕನಾಗಿ ನಟಿಸಿದ್ದು, ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ಮಾನಸ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದ ಪಾತ್ರಗಳಲ್ಲಿ ಆಕರ್ಷ್ ಆದಿತ್ಯ, ರಚಿತಾ, ಪೂಜಿತ ಬೋಬೆಗೌಡ, ಚಮಕ್ಚಂದ್ರ, ಪವನ್ಸುರೇಶ್, ಶಶಿಧರಕೋಟೆ, ಕಾರ್ತಿಕ್ ವರ್ಣೇಕರ್, ಮನಮೋಹನ್ ರೈ, ರೇಣು ಶಿಕಾರಿ, ಆರಾಧ್ಯ ಶಿವಕುಮಾರ್ ಮುಂತಾದವರು ನಟಿಸಿದ್ದಾರೆ.
ಇನ್ನು ಚಿತ್ರದಲ್ಲಿ ೪ ಹಾಡುಗಳಿದ್ದು, ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಸಿ.ಜೆ. ಮಾಡಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್ ಮತ್ತು ಪ್ರವೀಣ್ ರಾಮಕೃಷ್ಣ ಹಾಗೂ ಕಾರ್ತೀಕ್ ಸಾಹಿತ್ಯ ರಚಿಸಿದ್ದಾರೆ. ಹನುಮಯ್ಯ ಬಂಡಾರು ಮತ್ತು ಆರ್. ಚಂದ್ರಶೇಖರ ಪ್ರಸಾದ್ ಅವರ ಸಂಭಾಷಣೆ, ರವಿ ಸುವರ್ಣ ಅವರ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಅವರ ಸಂಕಲನ, ಕರಿಯ ನಂದ ಮತ್ತು ರಘು ಆರ್.ಜೆ. ನೃತ್ಯ ನಿರ್ದೇಶನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.






