ಚಿತ್ರರಂಗದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಪಾರ ಖ್ಯಾತಿ ಗಳಿಸಿದ ನಟಿಯರಲ್ಲಿ ಸೌಂದರ್ಯ ಪ್ರಮುಖರು. ತಮ್ಮ ಸಹಜ ಸೌಂದರ್ಯ, ಮೃದು ಅಭಿನಯ ಮತ್ತು ಪಾತ್ರಗಳಿಗೆ ಜೀವ ತುಂಬುವ ಸಾಮರ್ಥ್ಯದಿಂದ ಅವರು ಸ್ಟಾರ್ ಹೀರೋಗಳಿಗೂ ಸಾಟಿಯಾದ ಜನಪ್ರಿಯತೆ ಗಳಿಸಿದ್ದರು. ಆದರೆ ಕೇವಲ 32ನೇ ವಯಸ್ಸಿನಲ್ಲೇ ಅವರು ಅಗಲಿದುದು ಸಿನಿರಂಗಕ್ಕೆ ತುಂಬಲಾರದ ನಷ್ಟವಾಯಿತು.

ಒಂದು ದಶಕಕ್ಕೂ ಹೆಚ್ಚು ಕಾಲ ಬೆಳ್ಳಿತೆರೆಯನ್ನು ಆಳಿದ ಸೌಂದರ್ಯ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದರು. ಆ ಕಾಲದಲ್ಲಿ ಸ್ಟಾರ್ ನಟರೂ ಸಹ ಅವರ ದಿನಾಂಕಗಳಿಗಾಗಿ ಕಾಯುತ್ತಿದ್ದರೆಂಬುದು ಅವರ ಬೇಡಿಕೆಯನ್ನು ತೋರಿಸುತ್ತದೆ.

ವಿಶೇಷವಾಗಿ ಟಾಲಿವುಡ್ನಲ್ಲಿ ಜಗಪತಿ ಬಾಬು ಹಾಗೂ ಸೌಂದರ್ಯ ಜೋಡಿ ಅಪಾರ ಜನಪ್ರಿಯತೆ ಪಡೆದಿತ್ತು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ “ಯಶಸ್ವಿ ಜೋಡಿ” ಎಂದು ಖ್ಯಾತಿ ಗಳಿಸಿತ್ತು. ಆದರೆ ಅವರಿಬ್ಬರ ಸ್ನೇಹದ ಬಗ್ಗೆ ಕೆಲ ವದಂತಿಗಳು ಕೂಡ ಹರಿದಾಡಿದ್ದವು. ಜಗಪತಿ ಬಾಬು ಸೌಂದರ್ಯ ಅವರಿಗೆ ಪ್ರೇಮಪತ್ರ ಬರೆದಿದ್ದಾರೆ ಎಂಬ ಮಾತು ಆ ಕಾಲದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಜಗಪತಿ ಬಾಬು, “ಅದು ಸಂಪೂರ್ಣ ಅಸಂಬದ್ಧ. ಅಂತಹ ಕೆಲಸಗಳನ್ನು ಮಾಡುವುದು ತುಂಬಾ ಚೀಪ್ ಅನಿಸುತ್ತದೆ. ಇವೆಲ್ಲಾ ಕಟ್ಟುಕಥೆಗಳು” ಎಂದು ಸ್ಪಷ್ಟವಾಗಿ ತಳ್ಳಿಹಾಕಿದರು. “ನಾನು ಮೂವತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದೇನೆ. ಅಂತಹ ವರ್ತನೆ ನನ್ನಿಂದ ಸಾಧ್ಯವೇ ಇಲ್ಲ” ಎಂದು ಹೇಳಿದರು.ಸೌಂದರ್ಯ ಬಗ್ಗೆ ಮಾತನಾಡುವಾಗ ಅವರು ಭಾವುಕರಾಗಿ, “ನಾನು ಇನ್ನೂ ಸೌಂದರ್ಯ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ಮಾತ್ರವಲ್ಲ, ಇಡೀ ಚಿತ್ರರಂಗವೇ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಅವರು ಚಿನ್ನದ ಹೃದಯ ಹೊಂದಿದ್ದ ಅದ್ಭುತ ನಟಿ ಮತ್ತು ಒಳ್ಳೆಯ ವ್ಯಕ್ತಿ” ಎಂದು ನೆನಪಿಸಿಕೊಂಡರು.

ಅವರಿಬ್ಬರ ಸ್ನೇಹ ಪವಿತ್ರವಾಗಿದ್ದು, ವದಂತಿಗಳಿಂದ ಅದನ್ನು ಕಳಂಕಿತಗೊಳಿಸುವುದು ಸರಿಯಲ್ಲ ಎಂದು ಅವರು ಹೇಳಿದರು.ಸೌಂದರ್ಯ 2004ರಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಈ ದುರಂತದಲ್ಲಿ ಅವರ ಸಹೋದರರೂ ಪ್ರಾಣ ಕಳೆದುಕೊಂಡರು.

‘ಮನವರಲಿ ಪೆಳ್ಳಿ’ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ಅವರು, ‘ರಾಜೇಂದ್ರದು ಗಜೇಂದ್ರಡು’ ಮೂಲಕ ದೊಡ್ಡ ಯಶಸ್ಸು ಕಂಡರು. ಕನ್ನಡದಲ್ಲಿ ‘ಆಪ್ತಮಿತ್ರ’ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿದರು. ಸೌಂದರ್ಯ ಅವರ ಬದುಕು ಕಡಿಮೆ ಅವಧಿಯದ್ದಾಗಿದ್ದರೂ, ಅವರ ಸಾಧನೆ ಮತ್ತು ವ್ಯಕ್ತಿತ್ವ ಇಂದಿಗೂ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.





