ಚಿತ್ರ: ಬಾಸ್
ನಿರ್ದೇಶನ: ವಿ.ಲವ
ನಿರ್ಮಾಣ: ಸಿರಿ ಪ್ರೊಡಕ್ಷನ್
ತಾರಾಗಣ: ತನುಷ್ ಶಿವಣ್ಣ, ವಂದಿತಾ ಗೌಡ, ಪಾಯಲ್ ಚೆಂಗಪ್ಪ, ಸಂದೀಪ್ ನಿನಾಸಂ, ಭಾವನಾ ಸತ್ಯ ಇತರರು.
“ನೋಡು ನಾನ್ ಸಾಯೋವರೆಗೂ ನಿನ್ನನ್ನು ಮಗು ಥರ ನೋಡ್ಕೋತೀನಿ. ಹೇಗಾದರೂ ಮಾಡಿ ಬಚಾವ್ ಮಾಡು…”
ಆಕೆ ತನ್ನ ಪ್ರಿಯಕರನ ಮುಂದೆ ಗೋಳಾಡುತ್ತಲೇ ಈ ಡೈಲಾಗ್ ಹೇಳುವ ಹೊತ್ತಿಗೆ, ಅಲ್ಲೊಂದು ಮರ್ಡರ್ ಆಗಿರುತ್ತೆ. ಆ ಕೊಲೆಯ ಹಿಂದೆ ಅವಳಿಗೆ ಹಾಗು ಅವನಿಗೆ ಗೊತ್ತಿರುವ ಗ್ಯಾಂಗ್ ಕೈವಾಡ ಇರುತ್ತೆ. ಒಬ್ಬ ಜನಪ್ರಿಯ ವ್ಯಕ್ತಿಯ ಪ್ರೇಯಸಿಗೆ ಅಸಹ್ಯ ಮೆಸೇಜ್ ಮಾಡಿದ ಅನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಆ ಗ್ಯಾಂಗ್ ಕಿಡ್ನಾಪ್ ಮಾಡಿ ಥಳಿಸಿ, ಸಾಯಿಸಿದ ಘಟನೆ ಕುರಿತಾದ ಸಿನಿಮಾ ಕಥೆ ಇದು.

ಇಷ್ಟು ಹೇಳಿದ ಮೇಲೆ ಕಥೆ ಯಾವುದು ಅಂತ ಸುಲಭವಾಗಿ ಅರ್ಥವಾದೀತು. ಯೆಸ್, ಇದು ನಟ ದರ್ಶನ್ ಅವರು ಜೈಲಿಗೆ ಸೇರಲು ಕಾರಣವಾದ ಒಂದು ಕೊಲೆಯ ಸುತ್ತ ನಡೆದ ಸಿನಿಮಾನಾ ಅನ್ನುವ ಪ್ರಶ್ನೆಗಳು ಅನೇಕರಿಗೆ ಇದ್ದವು. ದರ್ಶನ್ ವಿರುದ್ಧ ಮಾಡಿರುವ ಚಿತ್ರ ಇರಬಹುದಾ? ಅದು ಹಾಗಂತೆ, ಹೀಗಂತೆ ಅನ್ನುವ ಒಂದಷ್ಟು ಪ್ರಶ್ನೆಗಳಿದ್ದವು. ಆ ಚಿತ್ರ ಹೇಗೆಲ್ಲಾ ಮೂಡಿಬಂದಿರುತ್ತೆ ಎನ್ನುವ ಕುತೂಹಲವೂ ಇತ್ತು.

ಅಂತಹ ಪ್ರಶ್ನೆಗೆ ಈ “ಬಾಸ್” ಉತ್ತರ ಕೊಟ್ಟಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ದರ್ಶನ್ ಸಿಲುಕಿದ್ದು ಹೇಗೆ? ಅವರನ್ನು ಕಿಡ್ನಾಪ್ ಮಾಡಿ ಬೆಂಗಳೂರಿನವರೆಗೆ ಕರೆತಂದಿದ್ದು ಯಾರು? ಈ ಪ್ರಕರಣದ ಮೂಲ ರೂವಾರಿ ಯಾರು? ಆ ಸ್ಟಾರ್ ಸಿಲುಕಿದ್ದ ಹೇಗೆ? ಅನ್ನುವ ಸ್ಟೋರಿ ಎಲ್ಲರಿಗೂ ಗೊತ್ತಿದೆ. ಆದರೆ, ಅದೇ ಕಥೆಗೆ ದೃಶ್ಯ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಸಾರ್ಥಕ. ವಿಶೇಷವೆಂದರೆ ಇಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ! ಅಲ್ಲೂ ಒಂದಷ್ಟು ತಪ್ಪು ಒಪ್ಪುಗಳಿವೆ. ಅದನ್ನಿಲ್ಲಿ ನೀಟ್ ಆಗಿ ಪ್ರೆಸೆಂಟ್ ಮಾಡಲಾಗಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ಒಂದೇ ಮಾತಲ್ಲಿ ಹೇಳುವುದಾದರೆ, ಈ ಚಿತ್ರದಲ್ಲಿ ದರ್ಶನ್ ಅವರ ನಿಜಗುಣವನ್ನು ಚಿತ್ರಿಸಲಾಗಿದೆ. ದರ್ಶನ್ ಮಾಡಿದ್ದೇನು ಅನ್ನುವುದನ್ನೂ ಇಲ್ಲಿ ಎಳೆಎಳೆಯಾಗಿ ಬಿಂಬಿಸಲಾಗಿದೆ. ಒಂದು ಹೆಣ್ಣಿನಿಂದ ಏನೆಲ್ಲಾ ಆಯ್ತು ಅನ್ನುವುದನ್ನು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ಇಲ್ಲಿ ಸಾರ್ಥಕ.

ಬಹುತೇಕ ಜನರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆಯ ಘಟನೆ ಬಗ್ಗೆ ಗೊತ್ತು. ಅದಕ್ಕೂ ಈ ಚಿತ್ರದ ಕಥೆಗೂ ಸಾಮ್ಯತೆ ಇದೆ. ಆದರೆ, ಚಿತ್ರತಂಡ ಆರಂಭದಿಂದಲೂ ಇದು ಅದಲ್ಲ, ಅದು ಇಲ್ಲಿರಲ್ಲ ಅಂದುಕೊಂಡೇ ಸಿನಿಮಾ ಮಾಡಿತ್ತು. ಕೊನೆಗೂ ಬಾಸ್ ದರ್ಶನವಾಗಿದೆ. ಇಲ್ಲಿ ಕೆಲವು ಸೂಕ್ಷ್ಮ ವಿಷಯಗಳಿವೆ. ಅದನ್ನು ತೆರೆಯ ಮೇಲೆ ನೋಡಬೇಕು. ಅಷ್ಟಕ್ಕೂ ಸಿನಿಮಾದ ಹೀರೋ ಪ್ರೇಯಸಿಗೆ ವ್ಯಕ್ತಿಯೊಬ್ಬ ಮೆಸೇಜ್ ಕಳಿಸಿ ಅಶ್ಲೀಲವಾಗಿ ಮಾತಾಡಿದ್ದು, ಕೆಟ್ಟದ್ದಾಗಿ ವರ್ತಿಸಿದ್ದು, ಆ ವ್ಯಕ್ತಿಯನ್ನು ಹುಡುಕಿ, ಸ್ಕೆಚ್ ಹಾಕಿ ಕಿಡ್ನಾಪ್ ಮಾಡಿಕೊಂಡು ಬಂದು, ಥಳಿಸಿದ್ದು, ನಂತರ ಆತ ಆ ಹೊಡೆತಕ್ಕೆ ಸತ್ತಿದ್ದು ಎಲ್ಲವನ್ನೂ ರೋಚಕವಾಗಿ ಇಲ್ಲಿ ತೋರಿಸಲಾಗಿದೆ.

ಇಲ್ಲಿ ಮೊದಲರ್ಧಕ್ಕಿಂತ ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತೆ. ದ್ವಿತಿಯಾರ್ಧ ಮುಂದೇನಾಗುತ್ತೆ ಎಂಬ ಕುತೂಹಲಕ್ಕೆ ಕರೆದೊಯ್ಯುತ್ತೆ. ಚಿತ್ರಕಥೆ ಇನ್ನಷ್ಟು ವೇಗ ಪಡೆದುಕೊಳ್ಳಬೇಕಿತ್ತು. ಕೆಲವು ಸಣ್ಣಪುಟ್ಟ ಕಂಟಿನ್ಯುಟಿ ಮಿಸ್ ಆಗಿದೆಯಾದರೂ, ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಒಂದು ಕ್ರೈಮ್ ಥ್ರಿಲ್ಲರ್ ಕಥೆಯಲ್ಲಿ ಏನಿರಬೇಕು, ಹೇಗಿರಬೇಕು ಎಂಬ ಅರಿವು ನಿರ್ದೇಶಕರಿಗಿದೆ. ಹಾಗಾಗಿ ಬಾಸ್ ಒಂದು ಕುತೂಹಲದ ಸಿನಿಮಾವಾಗಿ ಮೂಡಿಬಂದಿದೆ. ಇಲ್ಲಿ ಆಕ್ಷನ್ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ. ಅಂತಹ ಸಂದರ್ಭವೇ ಇಲ್ಲಿಲ್ಲ. ಕಾರಣ, ಕಥೆಯಲ್ಲಿ ಒಂದಷ್ಟು ತಿರುವುಗಳಿವೆ. ಮುಖ್ಯವಾಗಿ ಇಲ್ಲಿ ಅಚ್ಚರಿ ಎನ್ನುವ ಸಂಗತಿಗಳಿವೆ. ಅದೇ ಸಿನಿಮಾದ ಹೈಲೆಟ್. ಆ ಸಂಗತಿ ಏನೆಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲು ಅಡ್ಡಿ ಇಲ್ಲ.

ಇದು ನಾವು-ನೀವೆಲ್ಲ ಕೇಳಿದ ಕಥೆಯಾದರೂ, ಸ್ವಲ್ಪ ಬದಲಾವಣೆಗಳು ಇಲ್ಲಿವೆ. ಇನ್ನು, ಸಿನಿಮಾದ ಆರಂಭ ಕೊಂಚ ವೇಗಮಿತಿ ಕಮ್ಮಿ ಎನಿಸುತ್ತೆ. ಇಲ್ಲಿ ಸಂಗೀತ ವೇಗವನ್ನು ಎತ್ತಿ ಹಿಡಿದಿದೆ. ಕ್ಯಾಮೆರಾ ಕೈಚಳಕದಲ್ಲೂ ಬಾಸ್ ಅಂದ-ಚೆಂದವಿದೆ. ತನುಷ್ ಶಿವಣ್ಣ ಇಲ್ಲಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅನುಕಂಪ, ಪಶ್ಚಾತ್ತಾಪ ಸಂದರ್ಭದ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ವಂದಿತಾ ಪ್ರೇಯಸಿ ಪಾತ್ರಕ್ಕೆ ಸರಿಹೊಂದಿದ್ದಾರೆ. ಪಾಯಲ್ ಚೆಂಗಪ್ಪ ಕೂಡ ಗಮನಸೆಳೆಯುತ್ತಾರೆ. ಸಂದೀಪ್ ಅಮಾಯಕನಂತಿದ್ದರೂ, ರೊಚ್ಚಿಗೇಳಿಸುವ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ಬರುವ ಪೊಲೀಸ್ ಅಧಿಕಾರಿ ಪಾತ್ರಗಳು ಸೈ ಎನಿಸಿಕೊಂಡರೆ, ಗ್ಯಾಂಗ್ನಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ನ್ಯಾಯ ಸಲ್ಲಿಸಿವೆ. ಮುಖ್ಯವಾಗಿ ಇಡೀ ಸಿನಿಮಾ ಥ್ರಿಲ್ ಎನಿಸುತ್ತೆ. ಕಾರಣ, ಮರ್ಡರ್ ಸ್ಟೋರಿ. ಒಟ್ಟಾರೆ ಕೇಳಿದ್ದ ಕಥೆಯನ್ನು, ನೋಡುವ ಮಜಾನೇ ಬೇರೆ.






