ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಭ್ರಷ್ಟಾಚಾರ ನಿಯಂತ್ರಣ ಮಾಡುವ ಮಾತನ್ನಾಡುತ್ತಿದೆ. ಆದರೆ ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಓರ್ವ ತಹಶೀಲ್ದಾರ್ 500 ಕೋಟಿ ರೂಪಾಯಿ ಆಸ್ತಿಯ ಒಡೆಯ ಅಂದ್ರೆ ನೀವು ನಂಬಲೇ ಬೇಕು. ಇತ್ತೀಚಿಗೆ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದ ಕೆ.ಆರ್ ಪುರ ತಹಶೀಲ್ದಾರ್ ಆಗಿದ್ದ ಅಜಿತ್ ರೈ, ದೇವನಹಳ್ಳಿ ಸುತ್ತಮುತ್ತ 150ಕ್ಕೂ ಹೆಚ್ಚು ಎಕರೆ ಭೂಮಿಯ ಮಾಲೀಕ. ಬರೋಬ್ಬರಿ 500 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಅಜಿತ್ ರೈ, ದೇವನಹಳ್ಳಿ ಬಳಿ F-1 ರೇಸ್ ಟ್ರ್ಯಾಕ್ ನಿರ್ಮಾಣ ಮಾಡುವ ಚಿಂತನೆಯಲ್ಲಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ. ಲೋಕಾಯುಕ್ತರು ಬಂಧಿಸಿದ ಬಳಿಕ ಅಜಿತ್ ರೈನನ್ನು ಅಮಾನತು ಮಾಡಿದ್ದು, ತಹಶೀಲ್ದಾರ್ ಗ್ರೇಡ್-1 ಹುದ್ದೆಯಿಂದ ಗ್ರೇಡ್-2 ಹುದ್ದೆಗೆ ಹಿಂಬಡ್ತಿ ಜೊತೆಗೆ ರಾಯಚೂರಿನ ಸಿರವಾರಕ್ಕೆ ವರ್ಗಾವಣೆ ಮಾಡಲಾಗಿದೆ.
ಭಕ್ತಿ, ಭವಿಷ್ಯ, ಸಂಖ್ಯಾ ಶಾಸ್ತ್ರದ ಮೇಲೆ ಅಜಿತ್ ರೈ ಕೆಲಸ..!?
ಅಜಿತ್ ರೈ ಮನೆಯಲ್ಲಿ ಬಂಗಾರ ಸೇರಿದಂತೆ ಚಿನ್ನಾಭರಣ, ಕಾಸ್ಟ್ಲಿ ವಾಚ್ಗಳು, ಮದ್ಯದ ಬಾಟಲ್ಗಳು ಸೇರಿದಂತೆ ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಸಿಕ್ಕಿದ್ದು, ಎಲ್ಲವೂ ಉಡುಗೊರೆ ಮೂಲಕ ಬಂದಿರುವುದು ಎಂದು ಪೊಲೀಸರ ಎದುರು ಅಜಿತ್ ರೈ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಭವಿಷ್ಯ, ಸಂಖ್ಯಾಶಾಸ್ತ್ರದಲ್ಲಿ ಭಾರೀ ನಂಬಿಕೆ ಹೊಂದಿದ್ದ ಅಜಿತ್ ರೈ, ತನ್ನ ಎಲ್ಲಾ ಐಷಾರಾಮಿ ಕಾರು, ಬೈಕ್ಗಳಿಗೂ ‘1368’ ಸೀರಿಸ್ ನಂಬರ್ ತೆಗೆದುಕೊಂಡಿದ್ದ ಅನ್ನೋ ಮಾಹಿತಿಯೂ ಹೊರ ಬಿದ್ದಿದೆ. ಇನ್ನು ಅಜಿತ್ ರೈ ಬಳಿ 15 ಸಿಮ್ ಕಾರ್ಡ್ಗಳು ಪತ್ತೆಯಾಗಿದ್ದು, ಅದರಲ್ಲಿ 10 ಸಿಮ್ಗಳ ನಂಬರ್ ಕೂಡ ಕೊನೆಯಲ್ಲಿ 1368 ಆಗಿದೆ. 1+3+6+8 ಕೂಡಿದಾಗ 18 ಆಗುತ್ತೆ , 1+8 ಮತ್ತೆ ಕೂಡಿದರೆ ಕೊನೆಗೆ 9 ನಂಬರ್ ಬರಲಿದೆ.. ನಂಬರ್ 9 ಲಕ್ಕಿ ಅನ್ನೋದು ಅಜಿತ್ ರೈ ನಂಬಿಕೆ. ಆದರೆ ಈಗ ಅದೇ ಸಂಖ್ಯಾ ಶಾಸ್ತ್ರ ಉಲ್ಟಾ ಹೊಡೆದಿದೆ.
DySP ಪ್ರಮೋದ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ..!
ಇಡೀ ಸರ್ಕಾರವೇ ಬೆಚ್ಚಿ ಬೀಳುವಷ್ಟು ಆಸ್ತಿ ಮಾಡಿರುವ ಅಜಿತ್ ರೈ ಅಸಲಿಗೆ ಕೆಎಎಸ್ ಪರೀಕ್ಷೆ ಪಾಸ್ ಮಾಡಿಕೊಂಡು ತಹಶೀಲ್ದಾರ್ ಆಗಿ ಕೆಲಸ ಗಿಟ್ಟಿಸಿಲ್ಲ. ಬಸಲಿಗೆ ತನ್ನ ತಂದೆ ಕೆಲಸ ಮಾಡುತ್ತಿದ್ದಾಗ ನಿಧನ ಹೊಂದಿದ ಪರಿಣಾಮ, ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಎನ್ನಲಾಗಿದೆ. ಮೊದಲಿಗೆ RI (Revenue Inspector) ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಆ ಬಳಿಕ ಪ್ರಮೋಷನ್ಗಳನ್ನು ಗಿಟ್ಟಿಸಿಕೊಂಡು, ಹಿರಿಯ ಅಧಿಕಾರಿಗಳ ಎದುರು ನಯನಾಜುಕು ತೋರಿಸಿ, ಹುದ್ದೆ ಪಡೆದುಕೊಂಡಿದ್ದ ಅನ್ನೋ ಮಾಹಿತಿಯೂ ಇದೆ. ಇನ್ನು ಕಳೆದ ಮಳೆಗಾಲದಲ್ಲಿ ಅಕ್ರಮ ಕಟ್ಟಡಗಳನ್ನು ತೆರವು ಮಾಡುವ ವಿಚಾರದಲ್ಲಿ ಧಿಮಾಕು ಪ್ರದರ್ಶನ ಮಾಡಿದ್ದ ಅಜಿತ್ ರೈ, ಒತ್ತುವರಿದಾರರಿಗೆ ಸಹಕರಿಸಿದ್ದರು ಎನ್ನುವ ವಿಚಾರದಲ್ಲಿ ಅಮಾನತು ಮಾಡಲಾಗಿತ್ತು. ಇನ್ನು ಕೋರ್ಟ್ನಲ್ಲಿ ಸರ್ಕಾರಕ್ಕೆ ಹಿನ್ನಡೆ ಆಗುವಂತೆಯೂ ನಡೆದುಕೊಂಡಿದ್ದರು ಎನ್ನುವ ವಿಚಾರ ಬಿಬಿಎಂಪಿ ಅಧಿಕಾರಿಗಳೇ ಸರ್ಕಾರಕ್ಕೆ ಮಾಹಿತಿ ನೀಡಿದ್ದರು.
ಅಜಿತ್ ಕುಮಾರ್ ರೈ ಮಾತ್ರವಲ್ಲ.. ಈಗಲೂ ನಡೆದಿದೆ ಸ್ಕೆಚ್..!
ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈ, ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದವರಿಗೆ ಸಹಕರಿಸುತ್ತಿದ್ದರು ಎನ್ನುವುದು ಸರಿ. ಆದರೆ ಇದೀಗ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್, ಒತ್ತುವರಿಯನ್ನು ತೆರವು ಮಾಡಲಾಗುವುದು. ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡಲಾಗುವುದು ಎಂದು ಘಂಟಾಘೋಷವಾಗಿ ಹೇಳಿದರೂ ರಾಜಕಾಲುವೆ ತೆರವು ಮಾಡದೆ ಬದಲಿ ಮಾರ್ಗದಲ್ಲಿ ರಾಜಕಾಲುವೆ ನಿರ್ಮಿಸುತ್ತೇವೆ ಎಂದು ಬಿಬಿಎಂಪಿ ಹೇಳುತ್ತಿದೆ. ಅಂದರೆ ಶ್ರೀಮಂತರ ಜೊತೆಗೆ ಶಾಮೀಲಾಗಿರುವುದು ಬಿಬಿಎಂಪಿ ಅಧಿಕಾರಿಗಳಾ..? ಅಥವಾ ಕರ್ನಾಟಕ ಸರ್ಕಾರವಾ..? ಅನ್ನೋದನ್ನು ಸಂಬಂಧ ಪಟ್ಟ ಅಧಿಕಾರಿಗಳು ಹೇಳಬೇಕು. ಇಲ್ಲದಿದ್ರೆ ಮುಂದಿನ ದಿನಗಳಲ್ಲಿ ಅಜಿತ್ ಕುಮಾರ್ ರೈ ರೀತಿಯಲ್ಲಿ ಈಗಿನ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕೃಷ್ಣಮಣಿ