‘ಹೆರಾತ್ನ ಸಿಂಹ’ ಇಸ್ಮಾಯಿಲ್ ಖಾನ್ರನ್ನು ವಶಕ್ಕೆ ಪಡೆದ ತಾಲಿಬಾನ್ತಾಲಿಬಾನ್ ದಂಗೆಕೋರರು ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ನಗರವಾದ ಹೆರಾತ್ನ ಹೆಚ್ಚಿನ ಭಾಗವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅಲ್ಲಿನ ಮಿಲಿಟರಿ ಪ್ರತಿರೋಧವನ್ನು ಮುನ್ನಡೆಸುತ್ತಿರುವ ಹಿರಿಯ ಕಮಾಂಡರ್ ಇಸ್ಮಾಯಿಲ್ ಖಾನ್ ಅವರನ್ನು ವಶಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಕಳೆದ ಕೆಲವು ದಿನಗಳಲ್ಲಿ ತಾಲಿಬಾನ್ ವಶಪಡಿಸಿಕೊಂಡ ಪ್ರಮುಖ ಪ್ರಾಂತೀಯ ನಗರಗಳಲ್ಲಿ ಹೆರಾತ್ನ್ನು ವಶಪಡಿಸಿಕೊಂಡಿರುವುದು ಅವರಿಗೆ ಸಂದ ಅತ್ಯಂತ ಪ್ರಮುಖ ಗೆಲುವಾಗಿದೆ.
ಅಫಘಾನ್ ಸರ್ಕಾರಿ ಪಡೆಗಳು ನಗರದಿಂದ 15 ಕಿಮೀ (ಒಂಬತ್ತು ಮೈಲಿ) ದೂರದಲ್ಲಿರುವ ಹೆರಾತ್ ವಿಮಾನ ನಿಲ್ದಾಣ ಮತ್ತು ತಮ್ಮ ನಿಯಂತ್ರಣದಲ್ಲಿದ್ದ ಕೊನೆಯ ಕೇಂದ್ರಗಳಾದ ಸೇನಾ ದಳದ ಕಮಾಂಡರ್ರ ಪ್ರಧಾನ ಕಚೇರಿಯನ್ನು ತಾಲಿಬಾನ್ಗೆ ಒಪ್ಪಿಸಲು ಒಪ್ಪಿಕೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇತರ ಕೆಲವು ಮೂಲಗಳು ಅಫಘಾನ್ ಪಡೆಗಳು ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಯವರೆಗೂ ವಿಮಾನ ನಿಲ್ದಾಣದಲ್ಲಿಯೇ ಇದ್ದವು ಎಂದು ಹೇಳಿವೆ.
“ತಮಗೆ ಶರಣಾದ ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಬೆದರಿಕೆ ಅಥವಾ ಹಾನಿ ಮಾಡುವುದಿಲ್ಲ ಎಂದು ತಾಲಿಬಾನ್ ಒಪ್ಪಿಕೊಂಡಿದೆ” ಎಂದು ಪ್ರಾಂತೀಯ ಕೌನ್ಸಿಲ್ ಸದಸ್ಯ ಗುಲಾಂ ಹಬೀಬ್ ಹಾಶಿಮಿ ರಾಯಿಟರ್ಸ್ ಜೊತೆ ಮಾತಾಡುತ್ತಾ ಹೇಳಿದ್ದಾರೆ.
ಶತಮಾನಗಳಿಂದ ಪರ್ಷಿಯನ್ ಸಂಸ್ಕೃತಿಯ ಐತಿಹಾಸಿಕ ಕೇಂದ್ರಗಳಲ್ಲಿ ಒಂದಾಗಿರುವ, ಇರಾನ್ನ ಗಡಿಗೆ ಹತ್ತಿರವಿರುವ ಪ್ರಮುಖ ಆರ್ಥಿಕ ಕೇಂದ್ರವಾಗಿರುವ ಸುಮಾರು 6,00,000 ಜನರು ವಾಸಿಸುವ ಹೆರಾತ್ನ ಬೀದಿಗಳು ಮೌನವಾಗಿವೆ. ಹೆರಾತ್ನ ಸದ್ಯದ ಬೆಳವಣಿಗೆಯನ್ನು ಗಮನಿಸಿ ಆ ನಗರವನ್ನು ‘ಪ್ರೇತಪಟ್ಟಣ’ ಎಂದು ಕರೆದಿರುವ ಹಾಶಿಮಿ “ಹಲವು ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿವೆ ಅಥವಾ ಅಡಗಿಕೊಂಡಿದ್ದಾರೆ” ಎಂದು ಹೇಳಿದ್ದಾರೆ. ಅಮೆರಿಕ ತನ್ನ ಸೈನ್ಯ ಹಿಂದೆಗೆಯುವ ನಿರ್ಧಾರ ಪ್ರಕಟಿಸಿದ ನಂತರ ಈ ನಗರದ ಮೇಲೆ ತಾಲಿಬಾನ್ ಒತ್ತಡ ಹೆಚ್ಚಾಗಿತ್ತು.

ಇಸ್ಮಾಯಿಲ್ ಖಾನ್ ಅವರು ಈ ನಗರದ ಅತ್ಯಂತ ಪ್ರಮುಖ ಮಿಲಿಟಿಯಾ ಕಮಾಂಡರ್ ಆಗಿದ್ದು ತನ್ನ 70 ರ ಹರೆಯದಲ್ಲಿದ್ದಾರೆ ಎಂದು ನಂಬಲಾಗಿದೆ. ಪ್ರಾಂತೀಯ ಗವರ್ನರ್ ಮತ್ತು ಭದ್ರತಾ ಅಧಿಕಾರಿಗಳು ಒಪ್ಪಂದದ ಅಡಿಯಲ್ಲಿ ಅವರನ್ನು ತಾಲಿಬಾನ್ಗೆ ಹಸ್ತಾಂತರಿಸಿದರು ಎಂದು ಹಾಶಿಮಿ ರಾಯಿಟರ್ಸ್ಗೆ ತಿಳಿಸಿದ್ದಾರೆ.
ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಇಸ್ಮಾಯಿಲ್ ಖಾನ್ರನ್ನು ಸೆರೆಹಿಡಿದಿರುವುದನ್ನು ದೃಢೀಕರಿಸಿದ್ದು, ಇದು ನಗರದಲ್ಲಿ ಪ್ರತಿರೋಧದ ಕುಸಿಯುವಿಕೆಯ ಅತ್ಯಂತ ಪ್ರಬಲವಾದ ಸಂಕೇತವನ್ನು ಒದಗಿಸುತ್ತದೆ. ಬಂಡುಕೋರರ ಒತ್ತೆಯಲ್ಲಿರುವ ಕಮಾಂಡರ್ರನ್ನು ಸ್ಪಷ್ಟವಾಗಿ ತೋರಿಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದರೂ ಅವುಗಳ ಪರಿಶೀಲನೆ ನಡೆಸಲಾಗಿಲ್ಲ.
ಖಾನ್ರನ್ನು ‘ಹೆರಾತ್ನ ಸಿಂಹ’ ಎಂದು ಕರೆಯಲಾಗುತ್ತಿದ್ದು, ಇಸ್ಲಾಮಿಕ್ ತೀವ್ರವಾದಿ ಗುಂಪು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಖಾನರ ಸೈನ್ಯವು ತಾಲಿಬಾನ್ ವಿರುದ್ಧ ಸರಣಿ ಯಶಸ್ಸನ್ನು ಕಂಡಿತು. ಆದರೆ 1995 ರಲ್ಲಿ ಅವರ ಮಿತ್ರರೇ ದಂಗೆಕೋರರಿಗೆ ಸಹಾಯ ಮಾಡಿದ ನಂತರ ಅವರು ತನ್ನ ಸಾವಿರಾರು ಬೆಂಬಲಿಗರೊಂದಿಗೆ ಇರಾನ್ಗೆ ಪಲಾಯನ ಮಾಡಬೇಕಾಯಿತು. 1997 ರಲ್ಲಿ ಅವರು ದಂಗೆಯನ್ನು ಸಂಘಟಿಸಲು ಅಫ್ಘಾನ್ಗೆ ಹಿಂದಿರುಗಿದಾಗ ತಾಲಿಬಾನ್ನಿಂದ ಸೆರೆಹಿಡಿಯಲ್ಪಟ್ಟರು, ಆದರೆ ಎರಡು ವರ್ಷಗಳ ನಂತರ ಮತ್ತೆ ಜೈಲಿನಿಂದ ತಪ್ಪಿಸಿಕೊಂಡರು.
ಇಸ್ಮಾಯಿಲ್ ಖಾನ್ ಭಾರತದ ಉತ್ತಮ ಸ್ನೇಹಿತರಾಗಿದ್ದರು ಮತ್ತು ಸಲ್ಮಾ ಅಣೆಕಟ್ಟು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೊದಲು ಸಲ್ಮಾ ಅಣೆಕಟ್ಟಿನ ಮೇಲೆ ತಾಲಿಬಾನ್ ದಾಳಿ ಮಾಡಿತ್ತು ಆದರೆ ಅದನ್ನು ಅಫಘಾನ್ ಸೇನೆಯು ವಿಫಲಗೊಳಿಸಿತ್ತು. ಈ ಅಣೆಕಟ್ಟನ್ನು ಭಾರತ ನಿರ್ಮಿಸಿದ್ದು ಇಸ್ಮಾಯಿಲ್ ಖಾನ್ ಏಪ್ರಿಲ್ ನಲ್ಲಿ ಭಾರತಕ್ಕೆ ಬಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾಗಿದ್ದರು. ಅವರ ಬಂಧನದೊಂದಿಗೆ ಭಾರತ ಅಫ್ಘಾನಿಸ್ತಾನ ಸಂಬಂಧಕ್ಕೆ ಕಂಟಕ ಎದುರಾಗಿದ್ದು ಭಾರತ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಬೇಕಿದೆ.