ಶಿವಮೊಗ್ಗ: ಶಂಕಿತ ಉಗ್ರ ಶಾರೀಕ್ ಬಂಧನದ ಬೆನ್ನಲ್ಲೇ ಆತನ ಹಿನ್ನೆಲೆ ಸೇರಿ ಆದಾಯದ ಮೂಲಗಳ ಹುಡುಕಾಟದಲ್ಲಿ ತೊಡಗಿರುವ ಇಡಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ತೀರ್ಥಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದು, ಬಂಧಿತ ಶಾರೀಕ್ನ ಇಂಚಿಂಚು ಮಾಹಿತಿಗಳನ್ನ ಕಲೆಹಾಕಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿ ಇರುವ ಕಟ್ಟಡದ ಮೇಲೂ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕಾಂಗ್ರೆಸ್ ಕಟ್ಟಡ ಶಂಕಿತ ಉಗ್ರ ಶಾರೀಕ್ ಅಜ್ಜನ ಒಡೆತನದಲ್ಲಿದೆ.
ತೀರ್ಥಹಳ್ಳಿ ಕಾಂಗ್ರೆಸ್ ಹಾಗೂ ಕಿಮ್ಮನೆ ರತ್ನಾಕರ್ ಕಚೇರಿ ಇರುವ ಬಿಲ್ಡಿಂಗ್ ಸೇರಿ ಹಲವು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಶಾರೀಕ್ ಅಜ್ಜನ ಒಡೆತನದ ಕಟ್ಟಡದ ದಾಖಲಾತಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬಂಧಿತ ಶಾರೀಕ್ನ ಹಣದ ವಹಿವಾಟಿನ ತನಿಖೆ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ತೀರ್ಥಹಳ್ಳಿಯ ವಿವಿಧ ಭಾಗದಲ್ಲಿ ಇಡಿ ಅಧಿಕಾರಿಗಳು ಇಂದು ಶೋಧ ನಡೆಸುತ್ತಿದ್ದಾರೆ.
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ಇಡಿ ಕಾರ್ಯಾಚರಣೆ ನಡೆಸಿದ್ದು, ಶಂಕಿತ ಉಗ್ರರಾದ ಮಾಜ್ ಮುನೀರ್, ಶಾರಿಕ್, ಮತೀನ್ ಮನೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಐದು ಕಾರುಗಳಲ್ಲಿ ಬಂದಿರುವ 15ಕ್ಕೂ ಹೆಚ್ಚು ಇಡಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಮಾಜ್ ಮುನೀರ್, ಶಾರಿಕ್ ಮನೆ ಸೇರಿದಂತೆ ಅಕ್ಕಪಕ್ಕದ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.
ಪ್ರತಿ ಮನೆಗೂ ತೆರಳಿ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಹೇಳಿದ್ದಲ್ಲದೆ ಯಾರೂ ಫೋಟೋ ತೆಗೆಯದಂತೆ ಇಡಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಊರಿನಿಂದ ಪೊಲೀಸರನ್ನು ತಮ್ಮ ಬೆಂಗಾವಲಿಗೆ ಕರೆತಂದಿರುವ ಇಡಿ ಅಧಿಕಾರಿಗಳು, ಮೊದಲ ಬಾರಿಗೆ ಶಸ್ತ್ರ ಸಜ್ಜಿತ ಪೊಲೀಸರ ತಂಡದೊಂದಿಗೆ ಕಾರ್ಯಾಚರಣೆಗೆ ಬಂದಿದ್ದಾರೆ.